18/05/2026
ಅರಸೀಕೆರೆ: ತಾಲ್ಲೂಕಿನ ಜೆ.ಸಿ.ಪುರ – ಅರಸೀಕೆರೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಭಾನುವಾರ ರಾತ್ರಿ ಚಿರತೆ ಕಾಣಿಸಿಕೊಂಡ ಘಟನೆ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಪಡುವನಹಳ್ಳಿ ಸಮೀಪದ 8ನೇ ಮೈಲು ಕಲ್ಲು ಬಳಿ ರಸ್ತೆ ಬದಿಯ ಪೊದೆಯೊಳಗಿಂದ ಚಿರತೆಯೊಂದು ರಸ್ತೆಯತ್ತ ಬರುತ್ತಿರುವ ದೃಶ್ಯವನ್ನು ಸಂಚರಿಸುತ್ತಿದ್ದ ಕೆಲವರು ಗಮನಿಸಿದ್ದು, ತಕ್ಷಣವೇ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ರಾತ್ರಿ ಸಮಯದಲ್ಲಿ ಈ ಮಾರ್ಗದಲ್ಲಿ ಬೈಕ್ ಹಾಗೂ ಕಾರುಗಳಲ್ಲಿ ಸಂಚರಿಸುವವರು ಆತಂಕದಲ್ಲಿದ್ದು, “ಕತ್ತಲಾಗುತ್ತಿದ್ದಂತೆ ವನ್ಯಜೀವಿಗಳು ರಸ್ತೆ ಬದಿಗೆ ಬರುತ್ತಿರುವುದು ಸಾಮಾನ್ಯವಾಗುತ್ತಿದೆ. ಈ ಭಾಗದಲ್ಲಿ ಒಂಟಿಯಾಗಿ ಓಡಾಡಲು ಭಯವಾಗುತ್ತಿದೆ” ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿ ಕಾಡುಪ್ರಾಣಿಗಳ ಓಡಾಟ ಹೆಚ್ಚಾಗುತ್ತಿರುವ ಹಿನ್ನೆಲೆ, ಅರಣ್ಯ ಇಲಾಖೆ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.