04/06/2026
👉🏽 👉🏽 👉🏽 ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಹಿರಿಯ ಮಗನಾಗಿ ಜನಿಸಿದ ಆ ಹುಡುಗನಿಗೆ ಹೆತ್ತವರು ಇಟ್ಟ ಹೆಸರು ಶಿವಕುಮಾರ್. ಹಳ್ಳಿಯ ಮಣ್ಣಿನಲ್ಲಿ ಬೆಳೆದರೂ ಆತನ ಕಣ್ಣುಗಳಲ್ಲಿ ಏನನ್ನೋ ಸಾಧಿಸುವ ಹಪಾಹಪಿ ಇತ್ತು. ಕಾಲೇಜು ದಿನಗಳಿಗೆ ಬರುವಷ್ಟರಲ್ಲಿ ಆತ ಸಾಮಾನ್ಯ ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡಿದ್ದ. ಆದರೆ ಆತನ ಅಸಲಿ ಆಟ ಆರಂಭವಾಗಿದ್ದು ಕೇವಲ 23ನೇ ವಯಸ್ಸಿಗೆ, ರಾಜಕೀಯದ ಅಖಾಡಕ್ಕೆ ಧುಮುಕಿದಾಗ.
ವರ್ಷ 1985. ಇಡೀ ಕರ್ನಾಟಕ ರಾಜಕಾರಣದಲ್ಲಿ ಜನತಾ ಪಕ್ಷದ ಘಟಾನುಘಟಿ ನಾಯಕ ಹೆಚ್.ಡಿ. ದೇವೇಗೌಡರದ್ದೇ ಹವಾ ಜೋರಾಗಿತ್ತು. ಅಂಥವರ ಎದುರು ಸಾತನೂರು ಕ್ಷೇತ್ರದಿಂದ ಕಣಕ್ಕಿಳಿಯಲು ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಧೈರ್ಯವಂತ ಯುವಕನ ಅಗತ್ಯವಿತ್ತು. ಆಗ ಅಖಾಡಕ್ಕಿಳಿದಿದ್ದೇ ಈ 23 ವರ್ಷದ ಬಿಸಿರಕ್ತದ ಯುವಕ ಡಿ.ಕೆ. ಶಿವಕುಮಾರ್. ಆ ಚುನಾವಣೆಯಲ್ಲಿ ಶಿವಕುಮಾರ್ ದೇವೇಗೌಡರ ಎದುರು ಸೋತರು. ಆದರೆ, ಸೋತರೂ ಅವರು ಶೇಕಡಾ 38 ಕ್ಕೂ ಅಧಿಕ ವೋಟ್ ಶೇರ್ ಪಡೆದು ಇಡೀ ರಾಜ್ಯವೇ ಬೆರಗಾಗುವಂತೆ ಮಾಡಿದ್ದರು. ಆ ಸೋಲು ಅವರನ್ನ ಕುಗ್ಗಿಸಲಿಲ್ಲ, ಬದಲಿಗೆ ಅವರಲ್ಲಿದ್ದ ಹಠವನ್ನು ಮತ್ತಷ್ಟು ಹೆಚ್ಚಿಸಿತು. ಕೇವಲ ನಾಲ್ಕೇ ವರ್ಷಗಳಲ್ಲಿ, ಅಂದರೆ 1989 ರಲ್ಲಿ ಅದೇ ಸಾತನೂರು ಕ್ಷೇತ್ರದಲ್ಲಿ ಮತ್ತೆ ದೇವೇಗೌಡರ ಎದುರು ನಿಂತ ಶಿವಕುಮಾರ್, ಈ ಬಾರಿ ಅವರನ್ನು ಭರ್ಜರಿಯಾಗಿ ಸೋಲಿಸಿ 'ಜೈಂಟ್ ಕಿಲ್ಲರ್' ಆಗಿ ಹೊರಹೊಮ್ಮಿದರು! ಕೇವಲ 29ನೇ ವಯಸ್ಸಿಗೆ ಬಂದಿಖಾನೆ ಮಂತ್ರಿಯಾಗಿ ವಿಧಾನಸೌಧದ ಮೆಟ್ಟಿಲೇರಿದರು.
ರಾಜಕೀಯದಲ್ಲಿ ವೇಗವಾಗಿ ಬೆಳೆಯುತ್ತಿದ್ದ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣಾರ ಮಾರ್ಗದರ್ಶನ ಸಿಕ್ಕಿತು. ಕೃಷ್ಣ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಮಂತ್ರಿಯಾಗಿ ಇಡೀ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ಲೀಡರ್ ಆಗಿ ಶಿವಕುಮಾರ್ ಬೆಳೆದರು. ಅವರ ರಣತಂತ್ರ ಎಷ್ಟು ತೀಕ್ಷ್ಣವಾಗಿತ್ತೆಂದರೆ, 2004 ರ ಕನಕಪುರ ಲೋಕಸಭಾ ಚುನಾವಣೆಯಲ್ಲಿ ಸಾಕ್ಷಾತ್ ದೇವೇಗೌಡರನ್ನು ಸೋಲಿಸಲು ಶಿವಕುಮಾರ್ ಹೂಡಿದ ತಂತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಕೊನೆಯ ಕ್ಷಣದಲ್ಲಿ ತೇಜಸ್ವಿನಿ ಗೌಡ ಎಂಬ ಮಹಿಳಾ ಪತ್ರಕರ್ತೆಯನ್ನು ತಂದು ಕಾಂಗ್ರೆಸ್ ಅಭ್ಯರ್ಥಿ ಮಾಡಿ ನಿಲ್ಲಿಸಿದರು. ಫಲಿತಾಂಶ ಬಂದಾಗ ದೇವೇಗೌಡರು ಸೋತು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು! ಈ ಒಂದು ಘಟನೆ ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಶಕ್ತಿಯನ್ನು ಇಡೀ ದೇಶಕ್ಕೆ ಸಾರಿತು.
ಆದರೆ ಅಧಿಕಾರ ಅನ್ನೋದು ಯಾವಾಗಲೂ ಒಂದೇ ತರ ಇರಲ್ಲ. 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆದಾಗ, ಕೆಲವು ರಾಜಕೀಯ ಕಾರಣಗಳಿಂದಾಗಿ ಶಿವಕುಮಾರ್ ಅವರನ್ನು ಸಂಪುಟದಿಂದ ದೂರವಿಡಲಾಯಿತು. ಆದರೆ ಹಠ ಬಿಡದ ಅವರು ಹೈಕಮಾಂಡ್ ಮಟ್ಟದಲ್ಲಿ ಹೋರಾಡಿ, ಒಂದು ವರ್ಷದ ನಂತರ ಇಂಧನ ಮಂತ್ರಿಯಾಗಿ ಮತ್ತೆ ಸಂಪುಟಕ್ಕೆ ಮಾಸ್ ಎಂಟ್ರಿ ಕೊಟ್ಟರು. ಇಂಧನ ಮಂತ್ರಿಯಾದ ತಕ್ಷಣ ಅವರು ಸುಮ್ಮನೆ ಕೂರಲಿಲ್ಲ. ತುಮಕೂರಿನ ಪಾವಗಡದಲ್ಲಿ ಬರೋಬ್ಬರಿ 13,000 ಎಕರೆ ಜಾಗದಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಿಸಿ ತಾನೊಬ್ಬ ಶ್ರೇಷ್ಠ ಆಡಳಿತಗಾರ ಎಂಬುದನ್ನು ಸಾಬೀತುಪಡಿಸಿದರು.
ಮುಂದೆ ಕಾಂಗ್ರೆಸ್ ಪಕ್ಷಕ್ಕೆ ದೇಶದ ಯಾವುದೇ ಮೂಲೆಯಲ್ಲಿ ಬಿಕ್ಕಟ್ಟು ಎದುರಾದರೂ ನೆನಪಾಗುತ್ತಿದ್ದ ಏಕೈಕ ಹೆಸರು ಡಿ.ಕೆ. ಶಿವಕುಮಾರ್. 2002 ರಲ್ಲಿ ಮಹಾರಾಷ್ಟ್ರದ ವಿಲಾಸ್ರಾವ್ ದೇಶ್ಮುಖ್ ಸರ್ಕಾರ ಬೀಳುವ ಹಂತಕ್ಕೆ ಬಂದಾಗ ಶಾಸಕರನ್ನು ಬೆಂಗಳೂರಿಗೆ ತಂದು ರಕ್ಷಿಸಿದ್ದು ಇದೇ ಶಿವಕುಮಾರ್. 2017 ರಲ್ಲಿ ಗುಜರಾತ್ನ ಅಹ್ಮದ್ ಪಟೇಲ್ ಅವರ ರಾಜ್ಯಸಭಾ ಚುನಾವಣೆ ವೇಳೆ 44 ಶಾಸಕರನ್ನು ಬೆಂಗಳೂರಿನ ರೆಸಾರ್ಟ್ನಲ್ಲಿ ಹಗಲಿರುಳು ಕಾವಲು ಕಾಯ್ದು ಪಕ್ಷದ ಮರ್ಯಾದೆ ಉಳಿಸಿದರು. ಈ ಕಾರ್ಯಾಚರಣೆಗಳ ಬೆನ್ನಲ್ಲೇ ಅವರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ಕಣ್ಣು ಬಿತ್ತು. ಇಡಿ, ಐಟಿ, ಸಿಬಿಐ ದಾಳಿಗಳು ನಡೆದವು. ಬರೋಬ್ಬರಿ 60 ಕ್ಕೂ ಹೆಚ್ಚು ಕಡೆ ರೈಡ್ ನಡೆಸಿ, ಅಂತಿಮವಾಗಿ 2019 ರಲ್ಲಿ ಅವರನ್ನು ಬಂಧಿಸಿ ದಿಲ್ಲಿಯ ತಿಹಾರ್ ಜೈಲಿಗೆ ಅಟ್ಟಲಾಯಿತು. 50 ದಿನಗಳ ಕಾಲ ಜೈಲಿನ ಕತ್ತಲ ಕೋಣೆಯಲ್ಲಿದ್ದಾಗ ಇವರ ರಾಜಕೀಯ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಬಂಡೆಯನ್ನು ಅಷ್ಟು ಸುಲಭವಾಗಿ ಪುಡಿ ಮಾಡಲು ಸಾಧ್ಯವೇ? ಅಕ್ಟೋಬರ್ 2019 ರಲ್ಲಿ ಜೈಲಿನಿಂದ ಬೇಲ್ ಪಡೆದು ಬೆಂಗಳೂರು ಏರ್ಪೋರ್ಟ್ಗೆ ಬಂದಿಳಿದ ಶಿವಕುಮಾರ್ ಅವರನ್ನು ಸ್ವಾಗತಿಸಲು ಹತ್ತಿರಹತ್ತಿರ ಒಂದು ಲಕ್ಷ ಜನ ನೆರೆದಿದ್ದರು. ಅಂದು ಬೆಂಬಲಿಗರನ್ನು ನೋಡಿ ಕಣ್ಣೀರು ಹಾಕುತ್ತಾ "I am back" ಎಂದು ಘರ್ಜಿಸಿದ ಶಿವಕುಮಾರ್ ಅವರ ಆಕ್ರೋಶ, ಇವರ ರಾಜಕೀಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಹೈಕಮಾಂಡ್ ತಡಮಾಡದೆ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಅಧ್ಯಕ್ಷರಾದ ತಕ್ಷಣ ಪಾದಯಾತ್ರೆ, ಸಂಘಟನೆ, ಫಂಡ್ ರೈಸಿಂಗ್ ಅಂತ ಹಗಲಿರುಳು ಶ್ರಮಿಸಿದ ಶಿವಕುಮಾರ್, 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರೋಬ್ಬರಿ 135 ಸೀಟುಗಳ ಭರ್ಜರಿ ಬಹುಮತ ತಂದುಕೊಟ್ಟರು! ಸ್ವತಃ ತಾವೂ ಕನಕಪುರದಲ್ಲಿ 1.2 ಲಕ್ಷ ಮತಗಳ ಭಾರಿ ಅಂತರದಿಂದ ಗೆದ್ದು ಬೀಗಿದರು. ಕೊನೆಗೆ ಹೈಕಮಾಂಡ್ ಸೂಚನೆಯಂತೆ ರಾಜ್ಯದ ಉಪಮುಖ್ಯಮಂತ್ರಿ ಪಟ್ಟ ಅಲಂಕರಿಸಿದರು. 23ನೇ ವಯಸ್ಸಿಗೆ ಹಳ್ಳಿಯೊಂದರಿಂದ ಆರಂಭವಾದ ಆ ಯುವಕನ ಪಯಣ, ಇಂದು ಇಡೀ ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಕುರ್ಚಿಯ ಹೆಬ್ಬಾಗಿಲಿಗೆ ತಂದು ನಿಲ್ಲಿಸಿದೆ. ಸವಾಲುಗಳು ಎಷ್ಟೇ ಬರಲಿ, ಎದುರಿಸಿ ನಿಲ್ಲುವ ಆ 'ಬಂಡೆ'ಯ ಕಥೆ ಇಂದಿಗೂ ಮುಂದುವರಿಯುತ್ತಲೇ ಇದೆ...
ಮಾಹಿತಿ ಇಷ್ಟ ಆದಲ್ಲಿ ಲೈಕ್ ಶೇರ್ ಹಾಗು ಫಾಲೋ ಮಾಡಿ.