12/05/2026
ಉಡುಪಿಯ ಅನಂತೇಶ್ವರ
ಉಡುಪಿಯ ಕೃಷ್ಣಮಠದ ಎದುರೇ ಎರಡು ದೇವಸ್ಥಾನಗಳಿವೆ. ಒಂದು ಚಂದ್ರಮೌಳೀಶ್ವರನದ್ದು, ಇನ್ನೊಂದು ಅನಂತೇಶ್ವರನದ್ದು. ಈ ಎರಡೂ ದೇವಾಲಯಗಳು ಕೃಷ್ಣಮಠಕ್ಕಿಂತ ಹಳೆಯವು. ಕೃಷ್ಣಮಠ ಹದಿಮೂರನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದದ್ದು; ಅದಕ್ಕಿಂತ ೪೦೦-೫೦೦ ವರ್ಷಗಳಿಗೆ ಹಿಂದಿನವು ಚಂದ್ರಮೌಳೀಶ್ವರನ ಮತ್ತು ಅನಂತೇಶ್ವರನ ಆಲಯಗಳು. ಎರಡೂ ಕಡೆ ಲಿಂಗರೂಪದಲ್ಲಿ ಭಗವಂತನ ಅಭ್ಯರ್ಚನೆ ನಡೆಯುತ್ತದೆ. ಎರಡೂ ಕಡೆ ಮಹಾಶಿವರಾತ್ರಿ ತುಂಬಾ ಮುಖ್ಯವಾದ ಆಚರಣೆ.
ಈಶ್ವರನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ತುಂಬಾ ಮುಖ್ಯವಾದ ಆಚರಣೆ ಎಂದು ವಿಶೇಷವಾಗಿ ಹೇಳಬೇಕಾದದ್ದೇನಿದೆ ಎಂದು ಕೇಳಬಹುದು. ಒಂದು ಸಂಗತಿಯಿದೆ. ಚಂದ್ರಮೌಳೀಶ್ವರನ ಸನ್ನಿಧಿಯನ್ನೇನೋ ಶಿವಾಲಯವೆಂದು ಎಲ್ಲರೂ ಒಪ್ಪುತ್ತಾರೆ. ಅನಂತೇಶ್ವರನ ಆಲಯವನ್ನು ಮಾತ್ರ ಶಿವಾಲಯವೆಂದು ಕೆಲವರು ಒಪ್ಪರು.
ಅನಂತೇಶ್ವರನ ಆಲಯದಲ್ಲಿ ಲಿಂಗರೂಪದಲ್ಲೇ ಪೂಜೆಗೊಳ್ಳುತ್ತಿರುವ ದೇವರು ಅನಂತಾಸನನೂ ಪರಶುರಾಮನೂ ಆದ ಮಹಾವಿಷ್ಣು ಎಂದು ಕೆಲವರ ನಂಬಿಕೆ. ಈಗ ಆ ದೇವಸ್ಥಾನ ಮಾಧ್ವಮಠಗಳಲ್ಲಿ ಒಂದಾದ ಪುತ್ತಿಗೆ ಮಠಕ್ಕೆ ಸೇರಿದ್ದು, ಆ ಮಠ ತಯಾರುಮಾಡಿಸಿ ದೇವಸ್ಥಾನದ ಆವರಣದಲ್ಲಿರಿಸಿರುವ ಆಧುನಿಕ ಶಿಲಾಫಲಕಗಳೆಲ್ಲಾ ಈ ನಂಬಿಕೆಯನ್ನೇ ಸಾರುತ್ತಿವೆ.
ಲಿಂಗರೂಪದ ದೇವರು, ಮಹಾಶಿವರಾತ್ರಿ ಮುಖ್ಯವಾದ ಆಚರಣೆಯಾಗಿರುವುದು, ಆಂಜನೇಯ-ಗರುಡರು ಕಾಣದೆ ಗಣಪತಿಯ ವಿಗ್ರಹವಿರುವುದು - ಇಂತಹ ವಿವರಗಳು ಪಾಮರರ ಮನಸ್ಸಿನಲ್ಲಿಯೂ ಕೂಡ ಇದು ವಿಷ್ಣುವಿನ ದೇವಸ್ಥಾನವಲ್ಲ, ಶಿವಾಲಯವೇ ಇರಬೇಕು, ಎಂಬ ಸಂದೇಹವನ್ನು ಮೂಡಿಸುತ್ತವೆ. ಉಡುಪಿಯನ್ನು ತುಂಬಾ ಇಷ್ಟಪಡುವ ನಾನು ಮತ್ತೆ ಮತ್ತೆ ಅಲ್ಲಿಗೆ ಹೋಗಿದ್ದೇನೆ, ಹೋದಾಗಲೆಲ್ಲಾ ಅನಂತೇಶ್ವರನನ್ನು ಕುತೂಹಲದಿಂದ ಕಂಡಿದ್ದೇನೆ. ಕಂಡು ಬಂದು ಆ ದೇವರ ಬಗ್ಗೆ ಏನೇನು ಮಾಹಿತಿ ಸಿಗುತ್ತದೆಯೋ ಅದನ್ನೆಲ್ಲಾ ಕಲೆಹಾಕಲು ಯತ್ನಿಸಿದ್ದೇನೆ.
ಸರ್ಕಾರದ ಕೆಲವು ಹಳೆಯ ದಾಖಲೆಗಳಲ್ಲಿ ಅನಂತೇಶ್ವರನ ಆಲಯ ಶಿವಾಲಯವೇ ಎಂದು ಸ್ಪಷ್ಟವಾಗಿ ಇದೆ. ಅಂತೆಯೇ ಶೃಂಗೇರಿ ಮಠದ ಪರಂಪರೆಯಲ್ಲೂ ಕೂಡ ಉಡುಪಿಯು ಅನಂತೇಶ್ವರನೆಂಬ ಪರಮಶಿವನ ಆವಾಸ ಎಂಬ ನೆನಪಿದೆ. ಆದರೆ ಅದನ್ನು ಶಿವಾಲಯವೇ ಎಂದು ನಂಬುವ ಮಾಧ್ವಪರಂಪರೆಯವರೂ ಇದ್ದಾರೆಯೇ ಎಂಬ ಪ್ರಶ್ನೆಯೊಂದು ನನ್ನಲ್ಲಿತ್ತು.
ಮಾಧ್ವ ಪರಂಪರೆಯ ಬಗ್ಗೆ ಗೌರವಾದರಗಳನ್ನು ಇಟ್ಟುಕೊಂಡಿರುವ ಬಿ.ಎನ್.ಹೆಬ್ಬಾರ್ ಎಂಬ ಲೇಖಕರೊಬ್ಬರು The Sri Krishna Temple at Udupi ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಲೇಖಕರು ಪುಸ್ತಕದ ಬರವಣಿಗೆಯ ಸಂದರ್ಭದಲ್ಲಿ ಮಾಧ್ವಮಠವಾದ ಅದಮಾರು ಮಠದಲ್ಲೇ ತಂಗಿದ್ದು ಆ ಮಠದ ಸ್ವಾಮಿಗಳ ನೆರವನ್ನೂ ಪರಿಶೀಲನೆಯನ್ನೂ ತಮ್ಮ ಕಾರ್ಯದಲ್ಲಿ ಯಥೇಷ್ಟವಾಗಿ ಪಡೆದಿದ್ದರು. ಬನ್ನಂಜೆ ಗೋವಿಂದಾಚಾರ್ಯರು ಈ ಪುಸ್ತಕ ಪ್ರಕಟಣೆಗಾಗಿ ವಿಶೇಷವಾದ ಮುತುವರ್ಜಿಯನ್ನು ವಹಿಸಿದ್ದರು. ಇದನ್ನು ಕೃತಜ್ಞತೆಯಿಂದ ಸ್ಮರಿಸುವ ಲೇಖಕರು ತಮ್ಮ ಪುಸ್ತಕವನ್ನು ಬನ್ನಂಜೆಯವರಿಗೇ ಅರ್ಪಿಸಿದ್ದಾರೆ.
ಹೆಬ್ಬಾರ್ ಅವರ ಪುಸ್ತಕದಲ್ಲಿ ಸ್ಪಷ್ಟವಾಗಿ ಬಂದಿದೆ: ಅನಂತೇಶ್ವರ ವಸ್ತುತಃ ಶಿವನೇ. ಆ ದೇವಸ್ಥಾನದಲ್ಲಿ ಸ್ಮಾರ್ತ-ಶಿವಪಂಚಾಯತನ ಪದ್ಧತಿಯಲ್ಲಿ ಪೂಜೆಗಳು ನಡೆಯುತ್ತಿದ್ದವಂತೆ. ೧೬ ನೇ ಶತಮಾನದಲ್ಲಿದ್ದ ವಾದಿರಾಜ ಸ್ವಾಮಿಗಳ ಪ್ರಭಾವದಿಂದ ಆ ಹಳೆಯ ಪದ್ಧತಿ ಹೋಗಿ ಮಾಧ್ವ ಸಂಪ್ರದಾಯದ ಪೂಜಾಕ್ರಮಗಳು ಅಲ್ಲಿ ಶುರುವಾದುವಂತೆ. ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಅನಂತೇಶ್ವರನನ್ನು “ಶೈವೀಂ ಶಿಲಾಮಾಶ್ರಿತಃ” ಅಂದರೆ ಶಿವನ ಶಿಲೆಯನ್ನು ಹೊಕ್ಕಿರುವ ವಿಷ್ಣು ಎಂದು ಸ್ತುತಿಸುತ್ತಾರೆ! ಶಿವನು ಮೊದಲು ಶೇಷನಾಗಿ ವಿಷ್ಣುವಿಗೆ ಆಸನನಾಗಿ ಅನಂತರ ಮುಕ್ತನಾಗುತ್ತಾನೆಂಬುದು ಮಾಧ್ವರ ನಂಬಿಕೆ. ಇದನ್ನು ಸೂಚಿಸಲು ಶೇಷಶಾಯಿಯಾದ ವಿಷ್ಣುವು ಅನಂತೇಶ್ವರ ಲಿಂಗದಲ್ಲಿ ನೆಲೆಸಿದ ಎಂದು ವಿವರಿಸುತ್ತಾರೆ. (ಅನಂತ=ಶೇಷ)
ಶಿವಕ್ಷೇತ್ರವನ್ನು ವಿಷ್ಣುಕ್ಷೇತ್ರವನ್ನಾಗಿಸಿ, ಸ್ಮಾರ್ತ ಪೂಜಾಪದ್ಧತಿಯನ್ನು ಹೋಗಲಾಡಿಸಿ ವೈಷ್ಣವ ಪದ್ಧತಿಯನ್ನು ಏರ್ಪಡಿಸಿದ ಈ ಸಂಗತಿಯ ಸತ್ಯಾಸತ್ಯತೆಯ ಬಗ್ಗೆ ಸಿದ್ಧಾಂತವಾಗಿ ಹೇಳುವುದು ಕಷ್ಟ. ಆದರೆ ಮೇಲೆ ಹೇಳಿದ ರೀತಿಯಲ್ಲೇ ಬದಲಾವಣೆಯೊಂದು ಘಟಿಸಿರಬಹುದು ಎಂದು ತೋರುತ್ತದೆ.
ಇಡೀ ಪ್ರಕರಣ ಕೆಲವರಿಗೆ - ವಿಶೇಷವಾಗಿ ಸ್ಮಾರ್ತರಿಗೆ ಮತ್ತು ಶೈವರಿಗೆ - ಬೇಸರವನ್ನುಂಟು ಮಾಡಬಹುದು. ಆದರೆ ಸ್ಮಾರ್ತನೇ ಆಗಿರುವ ನನಗೆ ವೈಯಕ್ತಿಕವಾಗಿ ಇಂತಹ ವಿಚಾರಗಳಿಂದ ಅಷ್ಟೇನೂ ಕಳವಳವಿಲ್ಲ. ಚರಿತ್ರೆಯಲ್ಲಿ ಇಂತಹ ಘಟನೆಗಳು ಬೇಕಾದಷ್ಟು ಆಗಿಹೋಗಿವೆ, ಮುಂದೆಯೂ ಆಗುತ್ತವೆ. ಇವನ್ನೆಲ್ಲಾ ದೊಡ್ಡದು ಮಾಡಿಕೊಂಡು ಈ ಹೊತ್ತಿನ ಸ್ಮಾರ್ತ-ಮಾಧ್ವ ಸಾಮರಸ್ಯಕ್ಕೆ ಭಂಗ ತಂದುಕೊಳ್ಳುವುದು ಅವಿವೇಕ.
ಹಾಗಾದರೆ ಇಂತಹ ವಿಷಯಗಳನ್ನು ಸಾರ್ವಜನಿಕವಾಗಿ ಗಮನಿಸಲೇಬಾರದು ಎಂಬ ಸೋಮಾರಿತನದ ಉಪದೇಶ ಮಾತ್ರ ಸರ್ವಥಾ ಅಗ್ರಾಹ್ಯ. ಎಲ್ಲವನ್ನೂ ಸತ್ಯಪ್ರೀತಿಯಿಂದ ಅಭ್ಯಸಿಸಬೇಕು, ಗ್ರಹಿಸಬೇಕು. ಮಾನುಷಚರ್ಯೆಯ ಸಣ್ಣತನ ದೊಡ್ಡತನಗಳನ್ನು ಚೆನ್ನಾಗಿ ಗಮನಿಸಬೇಕು. ಅಂತಹ ಗಮನಿಸುವಿಕೆಯಿಂದಲೇ ಒಂದು ಸಮಗ್ರದೃಷ್ಟಿ ಸಿದ್ಧಿಸುವುದು. ಸಮಗ್ರದೃಷ್ಟಿಯೇ ವ್ಯಕ್ತಿ-ವ್ಯಕ್ತಿಗಳ ನಡುವೆ, ಸಮುದಾಯಗಳ ನಡುವೆ, ಉಚ್ಛೋಹಂ ನೀಚಸ್ತ್ವಂ ಎಂಬ ಭಾವಗಳನ್ನು ಹೋಗಲಾಡಿಸಿ ಸಾಮರಸ್ಯವನ್ನು ತರುವುದು. ಪರಮಶಿವನಾದ ಅನಂತೇಶ್ವರನು ಅಂತಹ ವಿವೇಕದಿಂದ ಪುಷ್ಟವಾದ ಸಾಮರಸ್ಯವನ್ನು ಅನುಗ್ರಹಿಸಲಿ.
ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ
ಶಿವಸ್ಯ ಹೃದಯಂ ವಿಷ್ಣುರ್ವಿಷ್ಣೋಶ್ಚ ಹೃದಯಂ ಶಿವಃ
ಚಿತ್ರಗಳು:
೧. ಅನಂತೇಶ್ವರ ಲಿಂಗ
೨. ಅನಂತೇಶ್ವರ ದೇವಸ್ಥಾನ
೩. ಸರ್ಕಾರದ Udupi District Gazeteer ನ ಭಾಗ
೪. ವಾದಿರಾಜರ ತೀರ್ಥಪ್ರಬಂಧದಲ್ಲಿ ಅನಂತೇಶ್ವರನ ಸ್ತುತಿ
೫. ಹೆಬ್ಬಾರ್ ಅವರ ಪುಸ್ತಕದ ಆಯ್ದ ಭಾಗ
ಸರ್ಕಾರದ ದಾಖಲೆ: Udupi District Gazette
https://statearchives.karnataka.gov.in/gazetteer/public/storage/pdf-files/Udupi%202012%20Chapter%20(16).pdf
ಹೆಬ್ಬಾರಾರ ಪುಸ್ತಕ: The Sri Krishna Temple at Udupi
https://drive.google.com/file/d/1VGC6-fI30TdxGqQV-iFLN3PcLlV8fBdM/view
ಶೃಂಗೇರಿ ಮಠದ ಪರಂಪರೆಯಲ್ಲಿ ಅನಂತೇಶ್ವರ ಶಿವನ ಕ್ಷೇತ್ರವಾಗಿ ಉಡುಪಿಯ ಸ್ಮರಣೆ
https://www.youtube.com/live/Uk--cmOgmNA?si=e6kudxK6_57pOaVD&t=3854
ಮೂಲ ಲೇಖನನ G L Krishna 🙏🙏