13/09/2023
ಭಾಷಣ ಅನ್ನೋದು ಕಲೆ!
ಆದ್ರೆ ಕವರ್ ಭಾಷಣ ಕಳೆ!
ಎಸ್… ಮಾತುಗಾರಿಕೆ ಒಂದು ವರ. ಎಲ್ಲರಿಗೂ ಬರಲ್ಲ. ಹಾಗಂತ ಆ ಕಲೆಯನ್ನು ಕಳೆಯಾಗಿಸಬಾರದು.. ದುಡ್ಡು ಕೊಟ್ಟವರ ಪರ ಬರೆಯುವುದಕ್ಕೆ ಅಕ್ಷರ ಹಾದರ ಅಂತ ಹೇಳ್ತಾರೆ, ಹಾಗೇ ಬಾಡಿಗೆ ಭಾಷಣ ಅಂತ ಒಂದಿದೆ, ಬೇರೆ ಬೇರೆ ಕಡೆ ಕವರ್ ತುಂಬಾ ದುಡ್ಡು ತೆಗೆದುಕೊಂಡು ಪ್ರಖರ ಧ್ವನಿ ಎತ್ತುವ ಪ್ರಕ್ರಿಯೆ…
ಪಡೆದ ದುಡ್ಡಿಗೆ ಪುಂಖಾನುಪುಂಖವಾಗಿ ಪರ್ಫಾರ್ಮೆನ್ಸ್ ಕೊಟ್ಟು ಬರೋದು !
ಇದು ಕಲೆಯಲ್ಲ… ಸ್ವರ ಹಾದರ!
ಬೇಕಿದ್ರೆ ಗಮನಿಸಿ, ಇಂತಹ ಒಂದಷ್ಟು ಭಾಷಣಕಾರರಿಗೆ ತಮ್ಮೂರಲ್ಲಿ ಯಾರು ಕಿಮ್ಮತ್ತೆ ಕೊಡಲ್ಲ. ಬರೀ ಮಾತು ಗುರೂ ಒಳಗೆ ಎಲ್ಲಾ ಹುಳುಕು ಅಂತ ಊರಲ್ಲಿ, ತಾಲೂಕಿನ ಹಲವೆಡೆ ಸುದ್ದಿ ಆಗಿರುತ್ತೆ. ಅದೇ ದೂರದ ಊರಲ್ಲಿ ಅಂತಹ ಮಂದಿಯ ಪ್ರಖರ ಮಾತಿಗೆ ಭಾರಿ ಡಿಮ್ಯಾಂಡ್!
ಯಾಕೆ ಹೇಳಿ.. ಅವ್ರಿಗೆ ಒಳ್ಳೆ ಸೌಂಡ್ ಮಾಡೋ ಒಂದು ಮಾತುಗಾರಿಕೆಯ ಅವಶ್ಯಕತೆ ಇರುತ್ತೆ. ಇದು ಒಂಥರಾ ಅನ್ನ ಹಳಸಿತ್ತು ನಾಯಿ ಹಸಿದಿತ್ತು ಪರಿಸ್ಥಿತಿ !
ಬಾಡಿಗೆ ದಿಕ್ಸೂಚಿ ಭಾಷಣಗಾರರನ್ನು ಕರೆ ತರುವ ಮಂದಿಗೆ ಜನ ಸೇರಿಸುವ, ಚಪ್ಪಾಳೆ ಸದ್ದು ಕೇಳುವ ಆಸೆ. ಆದ್ರೆ ತಮಗೆ ಆಗಲ್ಲ, ಯಾರನ್ನಾದ್ರೂ ದುಡ್ಡು ಕೊಟ್ಟು ಕರೆಸಿ ಉಗ್ರ ಭಾಷಣ ಮಾಡಿ ಕೊನೆಯಲ್ಲಿ ತಮ್ಮನ್ನೂ ಹೊಗಳಿಸಿಕೊಂಡು ದೊಡ್ಡದಾಗಿ ಪೋಸ್ ಕೊಡುವ ತೆವಲು. ಕವರ್ ತೆಗೆದುಕೊಂಡು ಭಾಷಣ ಮಾಡುವ ವ್ಯಕ್ತಿ ಬಿಡಿ, ಅವನಿಗೆ ಅದೇ ವೃತ್ತಿ, ಅದೇ ಅಭ್ಯಾಸ !
ಒಂದು ವಿಚಾರದಲ್ಲಿ ನಾವು ಸ್ಪಷ್ಟವಾಗಿ ಇರಲೇ ಬೇಕು. ಅದೇನಂದರೆ, ನಾವು ಯಾರನ್ನೇ ಸಂಪನ್ಮೂಲ ವ್ಯಕ್ತಿ, ದಿಕ್ಸೂಚಿ ಭಾಷಣಕಾರ ಅಂತ ಕರೆಸುವುದಿದ್ದರೆ ಆತನಿಗೆ ಬೇರೆ ಉದ್ಯೋಗ ಇದೆಯೇ ಎಂದು ಮೊದಲು ತಿಳಿಯಬೇಕು. ಯಾಕೆಂದರೆ ಮಾತಾಡುವುದೇ ಆತನ ಉದ್ಯೋಗ ಅಂತ ಆದ್ರೆ, ಅದು ಆತನ ದುಡಿಮೆಯ ಮೂಲ. ಆತ ದುಡ್ಡು ಕೊಟ್ಟವರ ಪರ ಮಾತನಾಡಬೇಕು. ಅಂತಹ ವ್ಯಕ್ತಿ ಹೇಳುವ ಮಾತಿನಲ್ಲಿ ಇನ್ನೆಷ್ಟು ಸಾರ ಇರಬಹುದು !? ನೀವೇ ಅಂದಾಜಿಸಿ.
ಪ್ರತಿಯೊಬ್ಬನೂ ತನ್ನ ವೃತ್ತಿಯಲ್ಲಿ ಅಭಿವೃದ್ಧಿಗೆ ಪ್ರಯತ್ನ ಮಾಡ್ತಾನೆ, Next ಲೆವೆಲ್ ಗೆ ಪ್ರಯತ್ನ ಮಾಡ್ತಾನೆ, ಅಂತಹ ಹೊತ್ತಲ್ಲಿ ದುಡ್ಡು ಮಾಡೋಕೆ ಬೇರೆ ಬೇರೆ ಅಡ್ಡ ದಾರಿ ಸಹ ಕಾಣೋಕೆ ಶುರು ಆಗುತ್ತೆ. ತನ್ನನ್ನು ದುಡ್ಡು ಕೊಟ್ಟು ಕರೆಸುವ ಮಂದಿಗೂ ಏನೋ ಅಜೆಂಡಾ ಇರುತ್ತೆ ಅನ್ನೋದೂ ಈ ಬಾಡಿಗೆ ಭಾಷಣಕಾರ/ಭಾಷಣಗಾರ್ತಿಗೂ ತಿಳಿದಿರುತ್ತದೆ. ಅಂತಹ ಹೊತ್ತಲ್ಲೇ ಈ ಎಲೆಕ್ಷನ್ ಟಿಕೇಟ್ ಕೊಡು ಕೊಳ್ಳುವ ವ್ಯವಹಾರದ ಪೀಠಿಕೆ ಆಗೋದು, ಅವ್ಯವಹಾರದ/ ವಂಚನೆಯ ಅಕೌಂಟ್ ತೆರೆದುಕೊಳ್ಳವುದು. ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಣ್ಣ ದೊಡ್ಡ ಹಗರಣಗಳು ಆಗುತ್ತವೆ. ಕೆಲವು ಹೊರಬರುತ್ತವೆ. ಇನ್ನೆಷ್ಟೋ ಅಲ್ಲಲ್ಲೇ ಮುಚ್ಚಿ ಹೋಗುತ್ತವೆ.
ಈಗಿನ ಕಾಲಮಾನ ಹೇಗೆ ಅಂದ್ರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ, ಭಾಷಣ ಅಥವಾ ಸೇವೆ ಮಾಡುವ ಮಂದಿ ಕಡಿಮೆ. ಇಲ್ವೇ ಇಲ್ಲ ಅಂತೇನಿಲ್ಲ.. ಆದ್ರೆ ಅಂತಹ ಮಂದಿ ಎಲೆಮರೆ ಕಾಯಿಯಂತೆ ಕೆಲಸ ಮಾಡ್ತಾ ಇರ್ತಾರೆ. ಆದ್ರೆ ಪ್ರಚಾರದ ಹಿಂದೆ ಬೀಳುವ ಮಂದಿ, ಹೆಚ್ಚು ಸೌಂಡ್ ಮಾಡುವ ಮಂದಿ ಇದ್ರೆ, ಅವರ ಮನದ ಆಳದಲ್ಲಿ ಹೆಚ್ಚಾಗಿ ಹಿಡನ್ ಅಜೆಂಡಾ ಒಂದು ಇದ್ದೇ ಇರುತ್ತೆ ಅನ್ನೋದು ಸಹ ಅಷ್ಟೇ ಸತ್ಯ.
ಜನ ಸೇರಿದಲ್ಲಿ ಚಪ್ಪಾಳೆಯ ಸದ್ದಿಗಾಗಿ ಯಾರನ್ನೋ ಕರೆಸುವ ಬದಲು, ತಮ್ಮ ಕೆಲಸದ ಮೂಲಕ ಸಾಧಿಸಿ ತೋರಿಸಿದವರ ಗುರುತಿಸುವ ಕಾರ್ಯ ಆದ್ರೆ ಉತ್ತಮ.
ತಮ್ಮ ಊರಿನ ಸಭೆ ಸಮಾರಂಭಕ್ಕೇ ಅತಿಥಿಗಳನ್ನು ಕರೆಸಿ,, ಆದ್ರೆ ಬಾಡಿಗೆ ಭಾಷಣ ಮಾಡೊ ಮಂದಿಯನ್ನು ಕರೆಸದಿರಿ…!! ಇಲ್ಲವಾದಲ್ಲಿ ಇನ್ನಷ್ಟು ಕವರ್ ಭಾಷಣ, ಕವರ್ ಹೋರಾಟಗಾರರು, ಕವರ್ ಪತ್ರಕರ್ತ, ಕವರ್ ಮಾಧ್ಯಮ ಇಂತಹ ನೂರೆಂಟು ಅಪಾಯಗಳು ಹುಟ್ಟಿಕೊಳ್ಳುತ್ತವೆ. ಊರು ತುಂಬಾ ಕೊಳೆಯಾಗಿ, ಸತ್ಯದ ಕೊಲೆಯಾಗಿ, ಕೊನೆಗೆ ಕಳೆಯಾಗಿ ನಿಮ್ಮ ನಮ್ಮ ಮನೆ ಸೇರೋದು ಖಚಿತ !
ಮತ್ತೆ ಹೇಳ್ತಿದೀನಿ..
ಭಾಷಣ ಅನ್ನೋದು ಕಲೆ, ಆದ್ರೆ ಕವರ್ ಭಾಷಣ ಕಳೆ !
ಅದು ಸ್ವರ ಹಾದರ!
- ವರುಣ್ ಕಂಜರ್ಪಣೆ