17/08/2026
ನಾನು ಒಂದು ಕಾಲದಲ್ಲಿ ರಾಜಕೀಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದವನು. ಕರ್ನಾಟಕದಲ್ಲಿ ಒಂದು ಪಕ್ಷದ ದೊಡ್ಡ ಅಭಿಮಾನಿ ಮತ್ತು ಬೆಂಬಲಿಗನಾಗಿದ್ದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ರಾಜಕೀಯ ವಿಚಾರದಲ್ಲಿ ನಾನು ತಟಸ್ಥನಾಗಿದ್ದೇನೆ.
ನಾನು ಬೆಂಬಲಿಸುತ್ತಿದ್ದ ಪಕ್ಷವು ಅನೇಕ ಸಮರ್ಥ ನಾಯಕರನ್ನು ಕಡೆಗಣಿಸಿದೆ. ಇಂದು ಆ ಪಕ್ಷದಲ್ಲಿ ಬೆರಳೆಣಿಕೆಯಷ್ಟು ಮಾತ್ರ ನಿಜವಾಗಿಯೂ ಸಮರ್ಥ ನಾಯಕರು ಉಳಿದಿದ್ದಾರೆ ಅನ್ನಿಸುತ್ತದೆ. ಮತ್ತೊಂದೆಡೆ, ನಾನು ಬಹಳ ವರ್ಷಗಳಿಂದ ವಿರೋಧಿಸುತ್ತಿದ್ದ, ನನ್ನ ಧರ್ಮ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದ ಪಕ್ಷದಲ್ಲಿಯೂ ಕೆಲವು ಉತ್ತಮ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಿರುವ ನಾಯಕರು ಇದ್ದಾರೆ.
ಅವರನ್ನು “Right people in the wrong party” ಎಂದು ಜನ ಕರೆಯುವುದಾದರೆ, ನಾನು ಕೂಡ ಹೇಳುತ್ತೇನೆ — “Wrong people in the right party” ಕೂಡ ಸಾಕಷ್ಟು ಇದ್ದಾರೆ.
ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಅಭಿವೃದ್ಧಿ ಆಗಬೇಕಾದರೆ ಆಡಳಿತ ಪಕ್ಷದಷ್ಟೇ ಬಲಿಷ್ಠವಾದ ವಿರೋಧ ಪಕ್ಷವೂ ಬೇಕು. ಸರ್ಕಾರವನ್ನು ಪ್ರಶ್ನಿಸುವ, ತಪ್ಪುಗಳನ್ನು ಎತ್ತಿ ತೋರಿಸುವ ಮತ್ತು ಜನರ ಕೆಲಸಗಳನ್ನು ಮಾಡಿಸಿಕೊಳ್ಳುವಷ್ಟು ಬಲವಾದ ವಿರೋಧ ಪಕ್ಷ ಇರಬೇಕು. ಆದರೆ ಕರ್ನಾಟಕದ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ವಿರೋಧ ಪಕ್ಷದ ಸ್ಥಿತಿ ಏನು ಅನ್ನೋದು ನಮಗೆಲ್ಲ ಗೊತ್ತಿದೆ.
ನಿನ್ನೆ ನಾನು ಒಬ್ಬ ಚಿಕ್ಕ ಹುಡುಗನನ್ನು ಕೇಳಿದೆ —
“ಕರ್ನಾಟಕದ ವಿರೋಧ ಪಕ್ಷದ ನಾಯಕ ಯಾರು?”
ಅವನು ಸ್ವಲ್ಪ ಅನುಮಾನದಿಂದ, “HD ಕುಮಾರಸ್ವಾಮಿ ಅವ್ರಾ?” ಎಂದು ಕೇಳಿದ.
ನಿಜ ಹೇಳಬೇಕೆಂದರೆ, ಅವನನ್ನು ತಪ್ಪು ಎಂದು ಹೇಳಲು ನನಗೆ ಸಾಧ್ಯವಿಲ್ಲ. ಏಕೆಂದರೆ ಅನೇಕ ಸಂದರ್ಭಗಳಲ್ಲಿ, ವಿರೋಧ ಪಕ್ಷದ ನಾಯಕರಿಗಿಂತ HDK ಅವರೇ ಹೆಚ್ಚು ಪರಿಣಾಮಕಾರಿಯಾಗಿ ಸರ್ಕಾರವನ್ನು ಪ್ರಶ್ನಿಸುತ್ತಿರುವಂತೆ ಕಾಣುತ್ತಿದೆ.
ನನ್ನ ಮಟ್ಟಿಗೆ, ಇನ್ನು ಮುಂದೆ ಕರ್ನಾಟಕದಲ್ಲಿ BJP, Congress ಅಥವಾ JD(S) ಎಂಬ ಪಕ್ಷದ ಹೆಸರಿಗಿಂತ, ನಾಯಕ ಹೇಗಿದ್ದಾನೆ ಎಂಬುದೇ ಮುಖ್ಯ.
ನಾಯಕ ಒಳ್ಳೆಯವರಾಗಿದ್ದರೆ, ಜನರಿಗೆ ಸ್ಪಂದಿಸುತ್ತಿದ್ದರೆ, ತನ್ನ ಕ್ಷೇತ್ರಕ್ಕೆ ಅಭಿವೃದ್ಧಿ ತರುತ್ತಿದ್ದರೆ, ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದರೆ ಮತ್ತು ನಿಜವಾಗಿಯೂ ಕೆಲಸ ಮಾಡುತ್ತಿದ್ದರೆ — ಅವರು ಯಾವ ಪಕ್ಷದಲ್ಲಿದ್ದರೂ ನಾನು ಬೆಂಬಲಿಸುತ್ತೇನೆ.
ಮಾತನಾಡುವ, ಆದರೆ ಕೆಲಸ ಮಾಡದ ನಾಯಕರಿಗೆ ನನ್ನ ಬೆಂಬಲವಿಲ್ಲ.
ಧರ್ಮದ ಹೆಸರಿನಲ್ಲಿ ನಿರಂತರ ರಾಜಕೀಯ ಮಾಡುವ, ಆದರೆ ಅಭಿವೃದ್ಧಿಯ ವಿಚಾರದಲ್ಲಿ ಶೂನ್ಯವಾಗಿರುವ ನಾಯಕರಿಗೂ ನನ್ನ ಬೆಂಬಲವಿಲ್ಲ.
ಹಾಗೆಯೇ, ನನ್ನ ಧರ್ಮವನ್ನು ಅವಮಾನಿಸುವ ಯಾರನ್ನೂ ನಾನು ಗೌರವಿಸುವುದಿಲ್ಲ. ಇದು ಸ್ಪಷ್ಟ.
ನನ್ನ ಮಟ್ಟಿಗೆ ರಾಜಕೀಯ ಎಂದರೆ ಪಕ್ಷದ ಬಣ್ಣವಲ್ಲ.
ಜನರು, ಅಭಿವೃದ್ಧಿ, ಪ್ರಶ್ನಿಸುವ ಧೈರ್ಯ, ಜವಾಬ್ದಾರಿ ಮತ್ತು ಫಲಿತಾಂಶ — ಇವೇ ಮುಖ್ಯ.