02/06/2026
ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘ (ರಿ.), ಸುಳ್ಯ ವತಿಯಿಂದ ಗ್ಯಾರೇಜ್ ಮಾಲಕರ ಮತ್ತು ಕಾರ್ಮಿಕರ ಸಮುದಾಯ ಭವನದ ನವೀಕೃತ ಕಟ್ಟಡ ಉದ್ಘಾಟನೆ ಹಾಗೂ ಮಹಾಸಭೆಯು ವಿಷ್ಣು ಸರ್ಕಲ್, ಸುಳ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಗಿರೀಶ್ ಭಾರದ್ವಾಜ್, ಬಾಲಕೃಷ್ಣ ಭಟ್ ಕೋಡಂಕೇರಿ (ನಿವೃತ್ತ ಪ್ರಾಂಶುಪಾಲರು ಹಾಗೂ ಅಧ್ಯಕ್ಷರು, ದೃಷ್ಠಿ ಚಾರಿಟೇಬಲ್ ಟ್ರಸ್ಟ್ (ರಿ.), ಬೆಂಗಳೂರು), ವೆಂಕಪ್ಪಗೌಡ (ವಕೀಲರು), ಡಾ. ರಾಮ್ ಮೋಹನ್ (ಅಧ್ಯಕ್ಷರು, ರೋಟರಿ ಕ್ಲಬ್ ಸುಳ್ಯ), ದಿನಕರ ಕುಲಾಲ್ (ಅಧ್ಯಕ್ಷರು, ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ (ರಿ.), ಮಂಗಳೂರು) ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವಲಯದ ಸಂಘಗಳ ಅಧ್ಯಕ್ಷರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲೇಶ್ ಬೆಟ್ಟಪಾಡಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ 22 ಸದಸ್ಯರು ಹಾಗೂ ಕಾರ್ಮಿಕರ ಮಕ್ಕಳಲ್ಲಿ 7ನೇ, 10ನೇ ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 80% ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ 90% ಅಂಕ ಗಳಿಸಿದ ಮಕ್ಕಳಿಗೆ ಒಟ್ಟು ₹1,06,000/- (ಒಂದು ಲಕ್ಷ ಆರು ಸಾವಿರ ರೂ.) ಪ್ರೋತ್ಸಾಹಧನವನ್ನು ದೃಷ್ಠಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಾಲಕೃಷ್ಣ ಭಟ್ ಕೊಡೆಂಕೇರಿ ವಿತರಿಸಿದರು.
ಇದೇ ವೇಳೆ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಆರೋಗ್ಯ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಕೊಡುಗೈ ದಾನಿಗಳನ್ನು ಗೌರವಿಸಲಾಯಿತು.
ಸುಮಾರು 400ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಗೊಂಡಿತು.