05/05/2026
ಹಜ್ ಯಾತ್ರಿಗರು ಮಾಡುವ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತನ್ನೂ ಬಯಸಿರಿ ಎಂದು ಕೋರುತ್ತಾ, ಹಜ್ ಯಾತ್ರೆಯು ಸುಖಕರವಾಗಿರಲೆಂದು ಹಾರೈಸುತ್ತೇನೆ.
ಇಸ್ಲಾಂ ಧರ್ಮದ ಪ್ರಮುಖ ಐದು ಆಧಾರ ಸ್ತಂಭಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಲೇಬೇಕಾಗಿದೆ. ಹಜ್ ಯಾತ್ರೆ ಮಾಡುವುದರಿಂದ ಮನುಷ್ಯನ ಹಿಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ಆತ ಮರುಜನ್ಮ ಪಡೆದ ಮಗುವಿನಂತೆ ಪರಿಶುದ್ಧನಾಗುತ್ತಾನೆ ಎಂಬ ನಂಬಿಕೆಯಿದೆ. ಯಾರಾದರೂ ಒಬ್ಬ ಮನುಷ್ಯನನ್ನು (ಅಪರಾಧ ಮಾಡದಿದ್ದರೂ) ಕೊಂದರೆ, ಅವನು ಇಡೀ ಮಾನವಕುಲವನ್ನೇ ಕೊಂದಂತೆ; ಮತ್ತು ಯಾರಾದರೂ ಒಂದು ಜೀವವನ್ನು ಉಳಿಸಿದರೆ, ಅವನು ಇಡೀ ಮಾನವಕುಲವನ್ನೇ ಉಳಿಸಿದಂತೆ ಎಂದು ಜೀವದ ಬೆಲೆಯ ಬಗ್ಗೆ ಕುರಾನ್ ನೀಡುವ ಅತ್ಯುನ್ನತ ಸಂದೇಶವಾಗಿದೆ.
ಪ್ರತಿಯೊಬ್ಬ ಹಜ್ ಯಾತ್ರಿಗನು ನಿಷ್ಕಲ್ಮಶ ಮನದಿಂದ ಯಾತ್ರೆ ಕೈಗೊಳ್ಳಬೇಕು. ಯಾತ್ರೆಯ ಸಂದರ್ಭದಲ್ಲಿ ಮಾಡುವ ಪ್ರಾರ್ಥನೆಯಲ್ಲಿ ಸರ್ಕಾರದ ಒಳಿತನ್ನೂ ಬಯಸಿರಿ ಎಂದು ಕೋರುತ್ತೇನೆ.
ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ ಮಾನವನು ಪರಸ್ಪರ ದ್ವೇಷವನ್ನು ಸಾಧಿಸುತ್ತಾನೆ. ಮಾನವೀಯತೆಯೇ ನಿಜವಾದ ಧರ್ಮ. ಪರರ ಒಳಿತನ್ನು ಬಯಸುವವರನ್ನು ದೇವರು ರಕ್ಷಿಸುತ್ತಾನೆ. ತನ್ನ ಧರ್ಮವನ್ನು ಪ್ರೀತಿಸಿ, ಆದರೆ ಇತರೆ ಧರ್ಮದ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಭ್ರಾತೃತ್ವ, ಸಮಾನತೆ ಮತ್ತು ಸೌಹಾರ್ದತೆಗಳೇ ನಮ್ಮ ಸಂವಿಧಾನದ ಮೂಲತತ್ವವಾಗಿದೆ.
2026-27ನೇ ಸಾಲಿನ ಆಯವ್ಯಯದಲ್ಲಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಹಜ್ ಯಾತ್ರಾರ್ಥಿಗಳು ಹಾಗೂ ಅವರ ಸಂಬಂಧಿಕರಿಗೆ ಸೌಲಭ್ಯ ಮತ್ತು ಸೌಕರ್ಯಗಳನ್ನು ನೀಡಲು ಅನುಕೂಲವಾಗುವಂತೆ ಹಜ್ ಭವನಗಳ ನಿರ್ಮಾಣ ಮಾಡಲಾಗುತ್ತದೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.
- ಇಂದು ಕರ್ನಾಟಕ ಹಜ್ ಸಮಿತಿ ಆಯೋಜಿಸಿದ್ದ "ಹಜ್ -2026" ಹಜ್ ಯಾತ್ರಿಕರ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದೆ