27/08/2025
20 ವರ್ಷ!
---------------
'ನಾಳೆಯೇ ಕೆಲಸಕ್ಕೆ ಜಾಯಿನ್ ಆಗ್ತೀಯಾ? ನಾಳೆ ಶನಿವಾರ. ಶನಿವಾರವೇ ಜೀವನದಲ್ಲಿ ಫಸ್ಟ್ ಜಾಬ್ಗೆ ಸೇರಬಾರದು ಅಂತೇನಾದ್ರೂ ಇದೆಯಾ?’ ತಮ್ಮ ಚೇರ್ನಲ್ಲಿ ಕುಳಿತು, ಅರ್ಧ ಸುಡುತ್ತಿದ್ದ ಸಿಗರೇಟನ್ನು ಕೈಯಲ್ಲಿ ಹಿಡಿದೇ ಕೇಳಿದ್ದರು, ನನ್ನಿಷ್ಟದ ಬರಹಗಾರ, ‘ಹಾಯ್ ಬೆಂಗಳೂರು’ ಎಂಬ ಕಪ್ಪು ಸುಂದರಿಯ ಸಾರಥಿ ರವಿ ಬೆಳಗೆರೆ.
ಆಗಸ್ಟ್ 27, 2005. ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಪತ್ರಕರ್ತನಾಗಿ ವೃತ್ತಿಜೀವನ ಆರಂಭಿಸುವ ಹಿಂದಿನ ದಿನ ಅಂದರೆ ಆಗಸ್ಟ್ 26ರ ಮಧ್ಯಾಹ್ನದ ನಂತರ ರವಿ ಬೆಳಗೆರೆಯವರು ತಮ್ಮ ಚೇಂಬರ್ಗೆ ಕರೆದು, ಕೆಲಸ ಕೊಡುವ ಬಗ್ಗೆ ಮಾತಾಡಿದ್ದರು. ಅದಕ್ಕೂ ಮುಂಚಿತವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇಂಟರ್ನ್ಶಿಪ್ ಮುಗಿಸಿದ್ದೆ. ಆಗಿನ್ನೂ ಕನ್ನಡದಲ್ಲಿ ನ್ಯೂಸ್ ಚಾನೆಲ್ಗಳು ಇಲ್ಲದೇ ಇದ್ದ ಕಾರಣದಿಂದ ಪತ್ರಿಕೆಯಲ್ಲಿ ಕೆಲಸ ಮಾಡಬೇಕು ಎಂಬುದಷ್ಟೇ ಹಳ್ಳಿಯಿಂದ ಬಂದಿದ್ದ ನನಗೆ ಗೊತ್ತಿದ್ದ ವಿಷಯ. ನಮ್ಮ ಸೀನಿಯರ್ಸ್ ಕೆಲವರು ಈಟಿವಿಯಲ್ಲಿ ಕೆಲಸ ಮಾಡುತ್ತಿದ್ದರೂ ಹೈದರಾಬಾದ್ಗೆ ಹೋಗಬೇಕು ಎಂಬ ಕಾರಣಕ್ಕೆ ಅದರ ಬಗ್ಗೆ ಆಸಕ್ತಿ ಇರಲಿಲ್ಲ. ಮೇಲಾಗಿ ರವಿ ಬೆಳಗೆರೆಯವರ ಹಾಯ್ ಬೆಂಗಳೂರು ಪತ್ರಿಕೆಯನ್ನು ಓದಲು ಶುರು ಮಾಡಿದ ಮೇಲೆಯೇ ಪತ್ರಕರ್ತನಾಗಿ ಕೆಲಸ ಮಾಡಬೇಕು ಎಂದು ಬಿಎಸ್ಸಿ ಓದುತ್ತಿದ್ದಾಗಲೇ ನಿರ್ಧರಿಸಿದ್ದೆ. ಮುಂದೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಬೆಂಗಳೂರಿನಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದಾಗ, ವಿಜಯ ಕರ್ನಾಟಕದ ಮುಖ್ಯ ವರದಿಗಾರರಾಗಿದ್ದ ಪಿ. ತ್ಯಾಗರಾಜ್ ಸರ್, ಶ್ರೀಶ್ ಸರ್ ಮತ್ತು ಅರವಿಂದ ನಾವಡ ಸರ್ ವರದಿ ಬರೆಯೋದಿಕ್ಕೆ ಪ್ರೋತ್ಸಾಹಿಸಿದ್ದರು. ‘ನೀವು ನಿನ್ನೆ ಬರೆದಿದ್ದ ವರದಿಯೊಂದು ಸ್ಟೇಟ್ ಪೇಜ್ನಲ್ಲಿ ಪ್ರಕಟ ಆಗಿದೆ. ನೋಡಿದ್ರಾ?’ ಎಂದು ಶ್ರೀಶ್ ಸರ್ ಹೇಳಿದ್ದ ಮಾತು, ಒಬ್ಬ ಇಂಟರ್ನಿಯಾಗಿ ನನಗೆ ಸಿಕ್ಕಿದ್ದ ಮೊದಲ ಮೆಡಲ್ ರೀತಿಯಲ್ಲಿತ್ತು. ಮುಂದೆ ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತಾದರೂ ಇಂಟರ್ನ್ಶಿಪ್ ಮುಗಿದ ಮೇಲೆ ಕೆಲಸ ಸಿಗಲಿಲ್ಲ. ಅದಾದ ಮೇಲೆ ಕೆಲಸಕ್ಕಾಗಿ ಆಲ್ಮೋಸ್ಟ್ ಮೂರು ತಿಂಗಳು ಅಲೆದಾಡಿದ್ದು ಬೇರೆಯೇ ಕತೆ. ಹಲವು ಆಫೀಸ್ಗಳಿಗೆ ಹೋಗಿ ರೆಸ್ಯೂಮ್ ಕೊಟ್ಟು ಬರುವುದು. ಕೆಲಸ ಸಿಕ್ಕೀತೇನೋ ಎಂದು ಕಾತರದಿಂದ ಕಾಯುವುದು, ನನ್ನಂತೆ ಕೆಲಸಕ್ಕಾಗಿ ಹುಡುಕುತ್ತಿದ್ದ ಗೆಳೆಯ ಕಬೀರ್ ಜೊತೆ ಹಂಪಿನಗರದಲ್ಲಿದ್ದ ಲೈಬ್ರೆರಿಗೆ ಹೋಗಿ ಇಡೀ ದಿನ ಓದುತ್ತಾ ಸಮಯ ಕಳೆದಿದ್ದು, ಇಷ್ಟೆಲ್ಲಾ ಆದ್ಮೇಲೆಯೇ ಹಾಯ್ ಬೆಂಗಳೂರಿನಲ್ಲಿ ಕೆಲಸ ಕೇಳಿದ್ದು. ನಿಮ್ಮಿಂದಾಗಿಯೇ ಜರ್ನಲಿಸಂ ಕಲಿತೆ, ಈಗ ನೀವೇ ಕೆಲಸ ಕೊಡಬೇಕು ಎಂದು ಕೇಳುವ ರೀತಿಯಲ್ಲೇ ಇನ್ಲ್ಯಾಂಡ್ ಲೆಟರ್ ಮೂಲಕ ರವಿ ಬೆಳಗೆರೆಯವರಿಗೊಂದು ಪತ್ರ ಬರೆದಿದ್ದೆ. ಪತ್ರ ಬರೆದ ಮೂರೇ ದಿನಕ್ಕೆ ಕರೆ ಬಂದಿತ್ತು.
ಹಾಗೆ ರವಿ ಬೆಳಗೆರೆಯವರ ಎದುರು ಕುಳಿತಾಗ ಮಾತೇ ಹೊರಟಿರಲಿಲ್ಲ. ಸಂಬಳವನ್ನೂ ಅವರೇ ಫಿಕ್ಸ್ ಮಾಡಿದ್ದರು. ‘ನಾನು ಊಟದಲ್ಲಿ ಮಾತ್ರ ಬ್ರಾಹ್ಮಣ’ ಎಂದು ಹೇಳಿ ನಕ್ಕಿದ್ದರು. ಎಲ್ಲರಿಗಿಂತ ಜಾಸ್ತಿ ಕೆಲಸ ಮಾಡುವವರು ಮಾತ್ರ ಕಾರ್ಮಿಕರ ಸಂಘದ ಅಧ್ಯಕ್ಷನಾಗಬೇಕು. ಹಾಗಾಗಿ ಇಲ್ಲೇನಾದ್ರೂ ಕಾರ್ಮಿಕರ ಸಂಘ ಕಟ್ಟೋದಿದ್ದರೆ ನಾನೇ ಅದಕ್ಕೆ ಅಧ್ಯಕ್ಷ ಆಗ್ಬೇಕಾಗುತ್ತೆ ಎಂದು ತಮಾಷೆ ಮಾಡಿದ್ದರು. ಅದು ರವಿ ಬೆಳಗೆರೆಯವರ ಶೈಲಿ. ಅವರದ್ದು ಭರಪೂರ ನಗುವಿನೊಂದಿಗೆ ಪ್ರೀತಿಯ ಮಳೆಗರೆಯುವ ವ್ಯಕ್ತಿತ್ವ. ಮುಂದೆ ಅವರನ್ನು ‘ಬಾಸ್’ (ಉಳಿದ ಸಹೋದ್ಯೋಗಿಗಳು ಹಾಗೆ ಕರೀತಾ ಇದ್ದಿದ್ದರಿಂದ ಹಾಗೆಯೇ ಕರೆಯಲಾರಂಭಿಸಿದೆ) ಅಂತ ಕರೆಯೋದಿಕ್ಕೆ ಮುಂಚೆ, ಕೆಲಸ ಕೇಳಿ ಪತ್ರ ಬರೆದಾಗ ‘ರವೀ’ ಅಂತಲೇ ಕರೆದಿದ್ದೆ. ಯಾಕಂದ್ರೆ ಓದುಗನಾಗಿ ಸಿಕ್ಕಿದ್ದ ಸ್ವಾತಂತ್ರ್ಯ ಅದು. ರವಿ ಬೆಳಗೆರೆಯವರು ಅವರ ಓದುಗರನ್ನು ಆವರಿಸಿಕೊಂಡಿದ್ದ ರೀತಿಯೂ ಅಂತದ್ದೇ.
ಮುಂದೆ ಆರು ತಿಂಗಳು ಹಾಯ್ ಬೆಂಗಳೂರಿನಲ್ಲಿ ಕೆಲಸ ಮಾಡಿ, ನ್ಯೂಸ್ ಚಾನೆಲ್ ಲೋಕದ ಕಡೆಗೆ ಹೊರಳಿದ್ದು ಈಗ ಇತಿಹಾಸ.
ವೃತ್ತಿ ಜೀವನ ಆರಂಭಿಸಿ 20 ವರ್ಷಗಳು ಆಯ್ತಲ್ಲ ಅಂತ ಖುಷಿಯಿದೆ. ಡಿಗ್ರಿ ಓದುತ್ತಿದ್ದಾಗ ಸ್ನೇಹಿತರಿಗೆ ಆಟೋಗ್ರಾಫ್ ಬರೆಯೋವಾಗ, ‘ಉತ್ತಮ ಪತ್ರಕರ್ತ’ ಆಗುವುದು ಜೀವನದ ಗುರಿ ಎಂದು ಬರೆಯುತ್ತಿದ್ದೆ. ಆ ಗುರಿ ಈಡೇರಿಸಿಕೊಳ್ಳುವ ಹಾದಿಯಲ್ಲಿ ಈಗಲೂ ಸಾಗುತ್ತಿದ್ದೇನೆ ಎನ್ನುವುದಷ್ಟೇ ಸಮಾಧಾನ.
ಕನ್ನಡಿಗರ ಪ್ರೀತಿ ಸಿಕ್ಕಿದ್ದು ಅತಿದೊಡ್ಡ ಬೋನಸ್.
ಥ್ಯಾಂಕ್ಸ್ ಟು ಜರ್ನಲಿಸಂ!