06/03/2025
ನಮಸ್ಕಾರ,
ಕುಂದಾಪುರ, 01 ಮಾರ್ಚ್ 2025, ಶನಿವಾರದಂದು ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ, ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅಧ್ಯಯನ ಕೇಂದ್ರ, ಬಸ್ರೂರು ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಮಹಾರಾಷ್ಟ್ರದ ಇತಿಹಾಸ ತಜ್ಞ, ವಾಗ್ಮಿ, ಪ್ರಾಧ್ಯಾಪಕ ಶ್ರೀ ರವಿರಾಜ್ ಪರಾಡ್ಕರ್ ಅವರು *ಛತ್ರಪತಿ ಶಿವಾಜಿ ಮತ್ತು ಕರ್ನಾಟದ ನಂಟು* ಕುರಿತಾದ ವಿಶೇಷ ಉಪನ್ಯಾಸ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು, 25 ಅಧ್ಯಾಪಕರುಗಳು ಮತ್ತು ಕಾಲೇಜು ಸಿಬ್ಬಂದಿವರ್ಗ ಬಾಗವಹಿಸಿದ್ದರು. ಶ್ರೀ ರವಿರಾಜ್ ಪರಾಡ್ಕರ್ ಅವರು ಉಪನ್ಯಾಸಕ್ಕೆ ಸಂಬಂಧಿಸಿದ ತಥ್ಯಗಳನ್ನು ದಾಖಲೆಗಳ ಸಹಿತ ಪ್ರಸ್ತುತಪಡಿಸಿದರು.
ಉಪನ್ಯಾಸದ ಮುಖ್ಯಾಂಶಗಳು:
1. ಶಿವಾಜಿಯ ಪ್ರಾಥಮಿಕ ಶಿಕ್ಷಣ 1637 ರಿಂದ 1642ರವರೆಗೂ ಕರ್ನಾಟಕದ ಬೆಂಗಳೂರಿನಲ್ಲಿ ಆಯಿತು. ತಂದೆ ಶಹಾಜಿಯು ಶಿವಾಜಿಯ ಶಿಕ್ಷಣಕ್ಕೆ ವಿಶೇಷವಾಗಿ ನೇಮಿಸಿದ್ದ ಉತ್ತಮ ಸಂಸ್ಕೃತ, ಕನ್ನಡ, ಗಣಿತ, ವೇದ-ಪುರಾಣ ಇತರೆ ವಿದ್ವಾಂಸರುಗಳು ಪ್ರಾಥಮಿಕ ಶಿಕ್ಷಣವನ್ನು ಶಿವಾಜಿಗೆ ನೀಡಿದ್ದರು. ಇದೇ ಶಿಕ್ಷಣ ಶಿವಾಜಿಯ ಜೀವನದಲ್ಲಿ ಸ್ವರಾಜ್ಯ ಸ್ಥಾಪನೆಯ ಕಾರ್ಯಕ್ಕೆ ಪ್ರಮುಖ ಪಾತ್ರವಹಿಸಿತು. ಶಹಾಜಿ ಕರ್ನಾಟಕದಿಂದಲೇ ಶಿವಾಜಿಗಾಗಿ ಹಲವು ಆಡಳಿತ ತಂತ್ರಜ್ಞರನ್ನು ಪುಣೇರಿಗೆ ಕಳಿಸಿಕೊಟ್ಟಿದ್ದ. ಅವರೆಲ್ಲರೂ ಶಿವಾಜಿಯ ಆಡಳಿತದಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು. 16ನೇ ವಯಸ್ಸಿನಲ್ಲಿಯೇ ತಾನು ಕಳುಹಿಸಿದ ಮೊದಲ ಪತ್ರದಲ್ಲಿ ಬಾಲ್ಯ ಶಿಕ್ಷಣದ ಪರಿಣಾಮ ಕಾಣಬಹುದು.
2. ಶಿವಾಜಿಯ ಸ್ವರಾಜ್ಯದ ಕಲ್ಪನಗೆ ಕರ್ನಾಟಕದ ವಿಜಯನಗರವೇ ಪ್ರಮುಖ ಪ್ರೇರಣೆ. ಆಕ್ರಮಣಕಾರಿ ಮತಾಂಧರು ಎಂದೂ ಈ ಭೂಮಿಯನ್ನು ಒಪ್ಪುವುದಿಲ್ಲ, ಇಲ್ಲಿನ ಶಾಸನ ಎನಿದ್ದರೂ ಸ್ಥಳೀಯರಿಂದಲೇ ಆಗಬೇಕು ಎಂದು ತಿಳಿಸಿ ಪ್ರಾದೇಶಿಕತೆಯು ರಾಷ್ಟ್ರೀಯತೆಗೆ ಪೂರಕ ಎಂದು ತೋರಿಸಿದ.
3. ಕರ್ನಾಟಕದ ರಾಣಿ ಮಲ್ಲಮ್ಮನ ಜೊತೆ ಶಿವಾಜಿ ಸೈನ್ಯದ ಸೇನಾಪತಿ ಅನುಚಿತವಾಗಿ ವರ್ತಿಸಿದ್ದನ್ನು ಪರಿಶೀಲಿಸಿದ ಶಿವಾಜಿ ಅದಕ್ಕೆ ಶಿಕ್ಷೆಯಾಗಿ ಸೇನಾಪತಿಯ ಕಣ್ಣನ್ನು ಕೀಳಿಸಿದ್ದ. ಇದೇ ಕಾರಣಕ್ಕಾಗಿ ರಾಣಿ ಮಲ್ಲಮ್ಮ ಶಿವಾಜಿಯ ಸಮ್ಮಾನಕ್ಕಾಗಿ ಎರಡು ಪ್ರತಿಮೆಗಳನ್ನು ಸ್ಥಾಪಿಸಿದ್ದಳು. ಮಲ್ಲಮ್ಮ ಮತ್ತು ಶಿವಾಜಿ ಇಬ್ಬರಲ್ಲೂ ಪರಸ್ಪರ ಅಣ್ಣ-ತಂಗಿ ಭಾವನೆ ಇತ್ತು.
4. ಶಿವಾಜಿಯು ಬೆಂಗಳೂರಿನಲ್ಲಿದ್ದ ತನ್ನ ಸೋದರ ವೆಂಕೋಜಿಗೆ ಬರೆದ ಎರಡು ಪತ್ರಗಳಲ್ಲಿ ಹೇಗೆ ತಾನು ಹಿಂದವೀ ಸ್ವರಾಜ್ಯಕಾಗಿ ಸಣ್ಣಸಣ್ಣ ರಾಜ್ಯಗಳನ್ನು ಒಗ್ಗೂಡಿಸುತ್ತಿದ್ದೇನೆಯೋ ಹಾಗೆಯೇ ನೀನೂ ಕೂಡ ಕರ್ನಾಟಕ, ತಮಿಳುನಾಡು ಆಂಧ್ರದಲ್ಲಿ ಎಲ್ಲಾ ಸಂಸ್ಥಾನಗಳನ್ನು ಒಗ್ಗೂಡಿಸಬೇಕು, ಅದಕ್ಕಾಗಿಯೆ ತನ್ನ ದಕ್ಷಿಣ ದಿಗ್ವಿಜಯ ಎಂದು ಸ್ಪಷ್ಟಪಡಿಸಿದ್ದ. ಇದಕ್ಕಾಗಿ ಕರ್ನಾಟಕದವರೇ ಆದ ದಕ್ಷಿಣ ಭಾಷೆಗಳ ಹಿಡಿತವಿದ್ದ ರಘುನಾಥ ನಾರಾಯಣ ಹನುಮಂತೆ ಅವರನ್ನು ಮುಖ್ಯ ಅಮಾತ್ಯರಾಗಿ ನೇಮಿಸಿದ್ದ.
5. ಶಿವಾಜಿಯ ಬಸ್ರೂರು ವಿಮೋಚನೆ ನೌಕಾಯಾತ್ರೆ, ಬಸ್ರೂರಿನ ಸಂಪತ್ತನ್ನು ದೋಚುವುದಕ್ಕಲ್ಲ, ಬದಲಾಗಿ ವಿದೇಶಿ ಪೋರ್ಚುಗೀಸರಿಗೆ ಕಪ್ಪಗಳನ್ನು ನೀಡಿ ಅವರನ್ನು ಆಂತರಿಕ ರಾಜಕೀಯದಲ್ಲಿ ಸೇರಿಸಿದ್ದ ಶಿವಪ್ಪನಾಯಕನ ಮಗ ಸೋಮಶೇಖರ ನಾಯಕನಿಗೆ ಬುದ್ದಿ ಕಲಿಸಿ ಬಸ್ರೂರನ್ನು ಪೋರ್ಚುಗೀಸರಿಂದ ಮುಕ್ತಿಗೊಳಿಸುವುದಕ್ಕಾಗಿ. ಬಸ್ರೂರು ಸಂಪದ್ಭರಿತ ದೊಡ್ಡ ಬಂದರು ಅಥವಾ ವ್ಯಾಪಾರಕೇಂದ್ರ ಆಗಿರಲಿಲ್ಲ, ಅಲ್ಲಿ ದೋಚುವುದಕ್ಕೆ ಅಂತಹ ಸಂಪತ್ತು ಇರಲಿಲ್ಲ. ಇತಿಹಾಸಕಾರರು ಇದನ್ನು ತಪ್ಪಾಗಿ ಅರ್ಥೈಸಿ ಶಿವಾಜಿಯನ್ನು ಲೂಟಿಕೋರ ಎಂದು ಅಪಕೀರ್ತಿಗೊಳಿಸಿದ್ದಾರೆ.
6. ದೇಶದ ಎಲ್ಲಾ ಸಂತರು ಮತ್ತು ತತ್ವಜ್ಞಾನಿಗಳು ಶಿವಾಜಿಯ ಮಹತ್ವವನ್ನು ಉಲ್ಲೇಖಿಸಿರುವುದು ಶಿವಾಜಿ ಒಬ್ಬ ಮರಾಠ ಅಲ್ಲ, ಅವನು ರಾಷ್ಟ್ರಪುರುಷ ಎಂದು ಸ್ಪಷ್ಟಪಡಿಸುತ್ತದೆ.
ಚಿಂತಕ ಹಾಗೂ ಲೇಖಕ ಶ್ರೀ ದೇವು ಹನೆಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಇತಿಹಾಸ ಸಂಕಲನದ ಸಮಿತಿ ಕಿತ್ತೂರು ಕರ್ನಾಟಕದ ಸಂಚಾಲಕ ಡಾ.ಬಸವರಾಜ ಎನ್. ಅಕ್ಕಿ ಅವರು ವಿದ್ಯಾರ್ಥಿಗಳು ಇತಿಹಾಸ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂದು ಜೀವ ರೂಪಿಸಿಕೊಳ್ಳಿ ಎಂಬ ಕಿವಿಮಾತು ಹೇಳಿದರು. ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ- ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಇತಿಹಾಸ ಸಂಕಲನ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು, ಅಭಿಜ್ಞಾ ಉಪಾಧ್ಯಾಯ ಉಪಸ್ಥಿತರಿದ್ದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ರವೀನಾ ಸಿ. ಪೂಜಾರಿ, ಸ್ವಾತಿ ರಾವ್ ಅತಿಥಿಗಳನ್ನು ಪರಿಚಯಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದೀಪಾ ವಂದಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ಸ್ಟಾಲಿನ್ ಡಿಸೋಜ ನಿರೂಪಿಸಿದರು.
ಧನ್ಯವಾದಗಳು