Sports Karnataka

Sports Karnataka ಇದು ಹವ್ಯಾಸ ಅಷ್ಟೇ. ಹಾಗಂತ ವೃತ್ತಿಪರತೆಯಂ?

ಸಿಎಂ ಕಪ್‌ 2026ರ ಜೆರ್ಸಿ ಅನಾವರಣ* ಫೆ. 21-22ರಂದು ನಡೆಯಲಿರುವ ವಿಶಿಷ್ಟ ಪರಿಕಲ್ಪನೆಯ ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ** ಸಚಿವರು, ಶಾಸಕರು, ಐ...
27/01/2026

ಸಿಎಂ ಕಪ್‌ 2026ರ ಜೆರ್ಸಿ ಅನಾವರಣ

* ಫೆ. 21-22ರಂದು ನಡೆಯಲಿರುವ ವಿಶಿಷ್ಟ ಪರಿಕಲ್ಪನೆಯ ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ
*
* ಸಚಿವರು, ಶಾಸಕರು, ಐಎಎಸ್‌, ಐಪಿಎಸ್‌, ಸರ್ಕಾರಿ ನೌಕರರು, ವೈದ್ಯರು, ಚಲನಚಿತ್ರ ನಟ-ನಟಿಯರು ಸ್ಪರ್ಧಿಗಳಾಗಿ ಕಣಕ್ಕೆ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ರೀತಿಯ ಸೇವೆ ಸಲ್ಲಿಸುತ್ತಿರುವ ಮಹನೀಯರ ಕ್ರೀಡಾಸಕ್ತಿಯನ್ನು ಪ್ರದರ್ಶಿಸಲು ವೇದಿಕೆ ರೂಪಿಸುವ ಉದ್ದೇಶದೊಂದಿಗೆ ‘9 ಡ್ರೀಮ್ಸ್‌’ ಸಂಸ್ಥೆ ‘ಸಿಎಂ ಕಪ್‌ 2026’ ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಆಯೋಜಿಸುತ್ತಿದ್ದು , ಕ್ರೀಡಾಕೂಟದ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು. ಮೀಡಿಯಾ ಕನೆಕ್ಟ್‌ ಸಹಯೋಗದಲ್ಲಿ ಕಿಡಾಕೂಟ ಆಯೋಜನೆಗೊಳ್ಳುತ್ತಿದೆ.
ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಜಿ ಮತ್ತು ಐಜಿಪಿ ಡಾ. ಎಂ. ಎ. ಸಲೀಂ, ಡಿಜಿಪಿ ಅಲೋಕ್ ಕುಮಾರ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಂಡದ ಜರ್ಸಿ ಬಿಡುಗಡೆ ಮಾಡಿದರು.
ಈ ವೇಳೆ ಸಕ್ರಾ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀಕಾಂತ್ ಶೆಟ್ಟಿ, ಹಿರಿಯ ಪತ್ರಕರ್ತ ಪೊನ್ನಪ್ಪ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಡಿಜಿ ಮತ್ತು ಐಜಿಪಿ ಡಾ. ಎಂ. ಎ. ಸಲೀಂ, ಇದು ಐಪಿಎಲ್ ಮಾದರಿಯಲ್ಲಿ ಆಯೋಜನೆ ಮಾಡಿರುವುದು ಬಹಳ ಖುಷಿ ನೀಡಿದೆ. ನಾನು ಬ್ಯಾಡ್ಮಿಂಟನ್‌ ಆಡುತ್ತೇನೆ. ಇದು ಕ್ರೀಡಾ ಸ್ಪೂರ್ತಿಯನ್ನು ತೋರಿಸುತ್ತದೆ. ನಮ್ಮ ಇಲಾಖೆಯವರು ಇದರಲ್ಲಿ ಆಡುತ್ತಿರುವುದು ಬಹಳ ಸಂತೋಷ ತಂದಿದೆ. ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.

ಅಲೋಕ್ ಕುಮಾರ್ ಮಾತನಾಡಿ, ನಾನು ಬ್ಯಾಡ್ಮಿಂಟನ್‌ ಆಡುತ್ತೇನೆ. ಈ ಪಂದ್ಯಾವಳಿಯಲ್ಲಿ ರಾಜಕೀಯ ಮುಖಂಡರು, ಮಾಧ್ಯಮದ ಮಿತ್ರರು, ವೈದ್ಯರು, ಆಡಳಿತಾಧಿಕಾರಿಗಳು ಎಲ್ಲರ ಸಮ್ಮಿಲನ ನೋಡಿ ಬಹಳ ಖುಷಿಯಾಯಿತು. ಬಹುಶಃ ಈ ರೀತಿ ಎಲ್ಲಿಯೂ ನಡೆದಿಲ್ಲ. ಪಂದ್ಯಾವಳಿ ತುಂಬಾ ಚೆನ್ನಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಟಿವಿ9 ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಜಿ.ವೈ. ಮಂಜುನಾಥ್‌ ಅವರ ಪರಿಕಲ್ಪನೆಯಲ್ಲಿ ಸಿಎಂ ಕಪ್‌ 2026 ಆಯೋಜಿಸಲಾಗುತ್ತಿದೆ. ಅವರಿಗೆ ದಿವ್ಯ ರಂಗೇನಹಳ್ಳಿ ಸಾರಥ್ಯದ ಮೀಡಿಯಾ ಕನೆಕ್ಟ್‌ ಸಂಸ್ಥೆ, ಸಿಎಂ ಕಪ್‌ ಸಹ ಸಂಸ್ಥಾಪಕ ಮತ್ತು ಹಿರಿಯ ಪತ್ರಕರ್ತ ಸುನೀಲ್‌ ಧರ್ಮಸ್ಥಳ ಸೇರಿದಂತೆ ಇತರ ಗೆಳೆಯರು ಸಿಎಂ ಕಪ್‌ 2026ರ ಆಯೋಜನೆಗೆ ಸಹಕಾರ ನೀಡಿದ್ದಾರೆ.
ರಾಜ್ಯದಲ್ಲಿಯೇ ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಸಿಎಂ ಕಪ್‌ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿರುವ ಜನಪ್ರತಿನಿಧಿಗಳು, ಐಎಎಸ್‌, ಐಪಿಎಸ್‌, ಕೆಎಎಸ್‌, ಪೊಲೀಸ್‌, ಸಚಿವಾಲಯದ ಅಧಿಕಾರಿಗಳು ವೈದ್ಯರು, ಚಲನಚಿತ್ರ ನಟ-ನಟಿಯರು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಸ್ಪರ್ಧಿಗಳಾಗಿ ಶಟಲ್‌ ಕೋರ್ಟ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಆಮೂಲಕ ಸಿಎಂ ಕಪ್‌ ಒಂದು ಕ್ಷೇತ್ರ ಆಟಗಾರರಿಗೆ ಮಾತ್ರ ಸೀಮಿತವಾಗಿರದೆ, ಎಲ್ಲ ಕ್ಷೇತ್ರದವರನ್ನು ಕ್ರೀಡೆಯಲ್ಲಿ ತೊಡಗಿಸುವ ದೊಡ್ಡ ಸಾಹಸವಾಗಿದೆ.
8 ತಂಡಗಳ ನಡುವೆ ಹಣಾಹಣಿ:
ಸಿಎಂ ಕಪ್‌ ಶಟಲ್‌ ಬ್ಯಾಡ್ಮಿಂಟನ್‌ ಕ್ರೀಡಾಕೂಟದ ಮತ್ತೊಂದು ವಿಶೇಷವೆಂದರೆ ಪ್ರತಿ ಕ್ಷೇತ್ರದವರು ಒಂದೇ ತಂಡದಲ್ಲಿ ಆಡುತ್ತಿಲ್ಲ. ಬದಲಿಗೆ, ಎಲ್ಲರೂ ಒಂದೊಂದು ತಂಡದಿಂದ ಒಟ್ಟಾಗಿ ಕಣಕ್ಕಿಳಿಯುತ್ತಿದ್ದಾರೆ. ಒಟ್ಟು 8 ಫ್ರಾಂಚೈಸಿ ತಂಡಗಳಿರಲಿದ್ದು, ಪ್ರತಿ ತಂಡಕ್ಕೂ ಪ್ರತ್ಯೇಕ ಮಾಲೀಕರಿರಲಿದ್ದಾರೆ. ಜತೆಗೆ ಪ್ರತಿ ತಂಡದಲ್ಲೂ ಪುರುಷ ಮತ್ತು ಮಹಿಳಾ ಆಟಗಾರ್ತಿಯರಂತೆ ಒಟ್ಟು 15 ಆಟಗಾರರಿರಲಿದ್ದಾರೆ. ಹಾಗೆಯೇ, ಪ್ರತಿ ತಂಡದಲ್ಲೂ ಜನಪ್ರತಿನಿಧಿಗಳು, ಐಎಎಸ್‌, ಐಪಿಎಸ್‌, ಕೆಎಎಸ್‌, ಪೊಲೀಸ್‌, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಚಲನಚಿತ್ರ ನಟ-ನಟಿಯರು ಮತ್ತು ಪತ್ರಕರ್ತ ಆಟಗಾರರಿರಲಿದ್ದಾರೆ.
ಪ್ರತಿ ತಂಡಕ್ಕೂ ಒಬ್ಬರು ಕ್ಯಾಪ್ಟನ್‌, ಒಬ್ಬರು ವೈಸ್‌-ಕ್ಯಾಪ್ಟನ್‌ ಇರಲಿದ್ದಾರೆ. ಅವರ ಜತೆಗೆ ಚಲನಚಿತ್ರ ರಂಗದ ಒಬ್ಬರು ಐಕಾನ್‌ ಪ್ಲೇಯರ್‌ ಆಗಿರಲಿದ್ದಾರೆ. ಪ್ರತಿ ತಂಡಕ್ಕೂ ತಲಾ ಒಬ್ಬರು ಶಾಸಕರು (ಜನಪ್ರತಿನಿಧಿ), ಐಎಎಸ್‌, ಐಪಿಎಸ್‌, ಪೊಲೀಸ್‌ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿ ಹಾಗೂ ಚಲನಚಿತ್ರ ರಂಗದವರು ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ಪಂದ್ಯಾವಳಿಯು ಮೆನ್ಸ್‌ ಸಿಂಗಲ್ಸ್‌, ಮೆನ್ಸ್ ಡಬಲ್ಸ್‌, ವುಮೆನ್‌ ಸಿಂಗಲ್ಸ್‌, ವುಮೆನ್ಸ್ ಡಬಲ್ಸ್‌, ಮಿಕ್ಸೆಡ್‌ ಡಬಲ್ಸ್ ಮತ್ತು ಪವರ್‌ ಡಬಲ್ಸ್‌ ಕೆಟಗರಿಯಲ್ಲಿ ನಡೆಯಲಿದೆ. ಇದರ ಜತೆಗೆ ಗೇಮ್‌ ಚೇಂಜರ್‌ ಎನ್ನುವ ಹೊಸ ಪರಿಕಲ್ಪನೆಯನ್ನೂ ಕ್ರೀಡಾಕೂಟದಲ್ಲಿ ಪರಿಚಯಿಸಲಾಗುತ್ತಿದೆ. ಕ್ರೀಡಾಕೂಟದ ವಿಜೇತ ತಂಡಕ್ಕೆ 7 ಲಕ್ಷ ರೂಪಾಯಿ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.
ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ರಾಜ್ಯಪಾಲ ಥಾವರಚಂದ್ ಗೆಹಲೋಥ್‌, ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಸನ್ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಫೆ. 21-22ರಂದು ಕ್ರೀಡಾಕೂಟ:
ಸಿಎಂ ಕಪ್‌ 2026 ಕ್ರೀಡಾಕೂಟವು ಫೆ. 21 (ಶನಿವಾರ) ಮತ್ತು ಫೆ. 22 (ಭಾನುವಾರ)ರಂದು ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ನಲ್ಲಿ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಭಾನುವಾರ (ಜ. 25)ದಂದು ಅರಮನೆ ಮೈದಾನದ ವೈಟ್‌ಪೆಟಲ್ಸ್‌ನಲ್ಲಿ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಮಾಡಲಾಯಿತು.
ಜಿಯೋ
----
ತಂಡದ ಮಾಲೀಕರು:
ಪ್ರಸನ್ನ------ (The Elite Badminton),
ರೂಪಾ--- (Esthetic Attacker's),
ನರಸಿಂಹಮೂರ್ತಿ---- (Telicom sky Stricker), ಲಿಂಗರಾಜು----- (Inspire challenger's),
ಕೆಜಿಎಫ್‌ ಬಾಬು---- (KGF Strickers ),
ಪಳನಿ ಪ್ರಕಾಶ್‌---- (Team cafe divyyam),
ಆನಂದ್‌---- (Pro Win pancher),
ಯೋಗೀಶ್‌----(Sharadha Strickers)

20/12/2025

*ರೋಸ್ ಡೇ ದಿನ ಆರಂಭವಾಗುವ ಚುಟುಕು ವಿಶ್ವಕಪ್ ಭಾವಯಾನದ ಮುನ್ನುಡಿ ವುಮೆನ್ಸ್ ಡೇ ನಂದು ಸಂಭ್ರಮ ಸಡಗರಗಳ ಸಂಗಡ ಉಪಸಂಹಾರಗೊಳ್ಳಲಿ..*

ಫೆಬ್ರವರಿ 7.. ರೋಸ್ ಡೇ..! ಅಂದ್ರೆ ಗುಲಾಬಿ ದಿನ..!
ಇದು ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇಗೆ ಮುನ್ನಡಿಯಾಗಿ ಸೌಂದರ್ಯದ ಪ್ರತೀಕ ಗುಲಾಬಿ ಹೂ ನೀಡಿ ಪ್ರೀತಿಯನ್ನು ವ್ಯಕ್ತಪಡಿಸುವ ದಿನ ಅಂತ ಹೇಳಲಾಗುತ್ತಿದೆ. ಪ್ರೀತಿ, ಸಂಸ್ಕೃತಿ, ಅದೆಷ್ಟೋ ಇತಿಹಾಸದ ಘಟನೆಗಳಿಗೆ ಸಾಕ್ಷಿಯಾದ ದಿನದಂತೆ 2026ರ ಫೆಬ್ರವರಿ 7 ಕೂಡ ಮತ್ತೊಂದು ಐತಿಹಾಸಿಕ ಘಟನೆಗೂ ಸಾಕ್ಷಿಯಾಗಲಿದೆ.

ಹೌದು, 2026ರ ಫೆಬ್ರವರಿ 7, ರೋಸ್ ಡೇ ದಿನದಂದೇ ಟಿ-20 ವಿಶ್ವಕಪ್ ಟೂರ್ನಿಗೆ ಮುಹೂರ್ತ ನಿಗದಿಯಾಗಿದೆ. ಬಹುತೇಕ ಗೋಧೂಳಿ ಸಮಯದಲ್ಲಿ ಟೀಮ್ ಇಂಡಿಯಾ ಪ್ರತಿಷ್ಠಿತ ಟೂರ್ನಿಯ ಅಭಿಯಾನವನ್ನು ಶುರು ಮಾಡಲಿದೆ. ಗುಲಾಬಿ ದಿನದಂದು ದೊಡ್ಡಣ್ಣ ಅಮೆರಿಕಾ ವಿರುದ್ಧವೇ ಭಾರತದ ನೀಲಿ ಹುಡುಗರು ಮೊದಲ ಪಂದ್ಯವನ್ನು ಆಡಲಿದ್ದಾರೆ.

ಅಂದ ಹಾಗೇ, ಚಂಚಲ ಚೆಲುವೆಯಾಗಿರುವ ವಿಶ್ವಕಪ್ ಟ್ರೋಫಿ ಎಂಬ ಮಾಯಾಂಗನೆಯ ಪ್ರೀತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಟೀಮ್ ಇಂಡಿಯಾ ರೋಸ್ ಡೇಯಂದೇ ಕಣಕ್ಕಿಳಿಯುತ್ತಿರುವುದು ವಿಶೇಷವೇ ಸರಿ.

ಹಾಗೇ ನೋಡಿದ್ರೆ ಟೀಮ್ ಇಂಡಿಯಾ ಕಟುಮಸ್ತಾಗಿದೆ. ಅಷ್ಟೇ ಅಲ್ಲ ಗುಲಾಬಿ ಹೂವಿನಂತೆ ಕಂಗೊಳಿಸುವ ಅಂದಚೆಂದದ ತಂಡ. ಕಣ್ಣಿಗೆ ಸುಂದರವಾಗಿ ಕಾಣುವ ಗುಲಾಬಿ ಹೂವಿನ ಗಿಡದಲ್ಲಿ ಮುಳ್ಳುಗಳಿದ್ದಂತೆ ಟೀಮ್ ಇಂಡಿಯಾದಲ್ಲೂ ಸಮಸ್ಯೆಗಳು ಎಂಬ ಮುಳ್ಳುಗಳಿವೆ. ಅದು ಕೇವಲ ತಂಡದೊಳಗೆ ಮಾತ್ರವಲ್ಲ. ತಂಡದ ಹೊರಗಡೆಯೂ ಇದೆ. ಗುಲಾಬಿ ಹೂವನ್ನು ಎಚ್ಚರಿಕೆಯಿಂದ ಕೀಳುವ ಹಾಗೇ ಟೀಮ್ ಇಂಡಿಯಾದ ಆಯ್ಕೆಯನ್ನೂ ಮಾಡಬೇಕಿದೆ. ಆದ್ರೆ ಅದಕ್ಕೆ ಈಗ ಸಮಯ ಇಲ್ಲ. ಮುಳ್ಳು ಚುಚ್ಚಿದ್ರೂ ಸಹಿಸಿಕೊಳ್ಳುವ ಹಾಗೇ ಎಲ್ಲವನ್ನೂ ಸಹಿಸಿಕೊಂಡೇ ಟೀಮ್ ಇಂಡಿಯಾದ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 20ರಂದು ನಡೆಯಲಿದೆ.

ಯಾಕಂದ್ರೆ ಪ್ರತಿಷ್ಠಿತ ಟೂರ್ನಿಗೆ ಮುನ್ನವೇ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಗೊಂದಲಗಳಿವೆ. (2007ರ ಕೆರೆಬಿಯನ್ ವಿಶ್ವಕಪ್ ವೇಳೆ ಇಂತಹುದ್ದೇ ಪರಿಸ್ಥಿತಿ ಟೀಮ್ ಇಂಡಿಯಾದಲ್ಲೂ ಇತ್ತು) ಹೆಡ್ ಕೋಚ್‍ನಿಂದ ಹಿಡಿದು ತಂಡದ ಆಟಗಾರರ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ. ಎಲ್ಲರೂ ಆಕ್ರಮಣಕಾರಿ ಪ್ರವೃತ್ತಿಯವರೇ. ಒಬ್ಬರಿಗೂ ತಾಳ್ಮೆಯೇ ಇಲ್ಲ. ಕೆಲವೊಮ್ಮೆ ಮದವೇರಿದ ಸಲಗದಂತೆ ವರ್ತಿಸುತ್ತಾರೆ. ಅದಕ್ಕೆ ತಕ್ಕಂತೆ ಕ್ರಿಕೆಟ್ ಪಂಡಿತರ ಟೀಕೆಗಳು. ಒಟ್ಟಾರೆಯಾಗಿ ಟಿ-20 ವಿಶ್ವಕಪ್ ಟೂರ್ನಿಗೆ ಮುನ್ನ ಟೀಮ್ ಇಂಡಿಯಾದ ಆತ್ಮಸ್ಥೈರ್ಯ ಕುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಂತ ಖಂಡಿತವಾಗಿಯೂ ಟೀಮ್ ಇಂಡಿಯಾದ ಸಾಮರ್ಥ್ಯದ ಬಗ್ಗೆ ಯಾವ ಅಪನಂಬಿಕೆಯೂ ಇಲ್ಲ. ಈ ವಿಚಾರದಲ್ಲಿ ಸ್ಕೈ ಗ್ಯಾಂಗ್ ಒಂಥರಾ ಡೇರ್ ಡೇವಿಲ್ಸ್.

ಆದ್ರೂ ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಉಪನಾಯಕ ಶುಭ್ಮನ್ ಗಿಲ್ ಅವರ ಕಳಪೆ ಫಾರ್ಮ್ ಈ ಎಲ್ಲ ಗೊಂದಲಗಳಿಗೆ ಪ್ರಮುಖ ಕಾರಣವಾಗಿದೆ. ರನ್ ಬರ ಎದುರಿಸುತ್ತಿರುವ ಇವರಿಬ್ಬರೂ ಕೂಡ ಟೀಮ್ ಇಂಡಿಯಾದ ಪ್ರಮುಖ ಪಿಲ್ಲರ್ಸ್. ಒಂದು ಬಾರಿ ಲಯಕಂಡುಕೊಂಡ್ರೆ ಇವರಿಬ್ಬರನ್ನು ಕಟ್ಟಿಹಾಕೋದು ಕೂಡ ಕಷ್ಟವೇ. ಹಾಗಾಗಿ ಆಯ್ಕೆ ಸಮಿತಿ ಇವರಿಬ್ಬರನ್ನು ತಂಡದಿಂದ ಹೊರಗಿಡುವ ದುಸ್ಸಾಹಸಕ್ಕೆ ಕೈ ಹಾಕಲ್ಲ. ಅಷ್ಟೇ ಅಲ್ಲ, ಈಗ ತಂಡದಲ್ಲಿ ಬದಲಾವಣೆ ಮಾಡುವ ಸಮಯವೂ ಅಲ್ಲ. ಯಾಕಂದ್ರೆ ಟಿ-20 ವಿಶ್ವಕಪ್‍ಗೆ ಇನ್ನುಳಿದಿರುವುದು ಒಂದೂವರೆ ತಿಂಗಳು. ರೆಡಿಯಾಗೋಕೆ ಇರೋದು ಬರೀ ಐದು ಪಂದ್ಯ ಅಷ್ಟೇ.

ಇನ್ನು ನಾಯಕನಾಗಿ ಸೂರ್ಯಕುಮಾರ್ ಯಾದವ್ ಸಕ್ಸಸ್ ಆಗಿದ್ದಾರೆ. ಆದ್ರೆ ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. 2025ರಲ್ಲಿ ಆಡಿರುವ 21 ಪಂದ್ಯಗಳಲ್ಲಿ ಗಳಿಸಿದ್ದು ಬರೀ 218 ರನ್. ಇದರಲ್ಲಿ ಶತಕವೂ ಇಲ್ಲ. ಅರ್ಧ ಶತಕವೂ ಇಲ್ಲ. ಗರಿಷ್ಠ ಅಂದ್ರೆ ಅಜೇಯ 47 ರನ್.

ಹಾಗೇ ಶುಭ್ಮನ್ ಗಿಲ್ ಕೂಡ. ಈ ವರ್ಷ ಆಡಿರುವ 15 ಪಂದ್ಯಗಳಲ್ಲಿ ಗಳಿಸಿದ್ದು 291 ರನ್. ಇವರದ್ದು ಕೂಡ ಶತಕವೂ ಇಲ್ಲ. ಅರ್ಧಶತಕವೂ ಇಲ್ಲ. ಗರಿಷ್ಠ ರನ್ 47 ಅಷ್ಟೇ..! ಅಂದ ಮೇಲೆ ಇವರಿಬ್ಬರ ಮೇಲೆ ವಕ್ರದೃಷ್ಟಿ ಬೀಳುವುದರಲ್ಲಿ ತಪ್ಪೇನಿಲ್ಲ ಬಿಡಿ. ಆದ್ರೂ ಇವರಿಬ್ಬರು ಬಿಗ್ ಮ್ಯಾಚ್ ದಾಂಡಿಗರು ಎಂಬುದು ಕೂಡ ಅಷ್ಟೇ ಸತ್ಯ.

ಒಟ್ಟಿನಲ್ಲಿ, ಡಿಸೆಂಬರ್ 20ರಂದು ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಅಚ್ಚರಿಯ ಹೆಸರುಗಳನ್ನು ಕಾಣಲು ಸಾಧ್ಯವಿಲ್ಲ. ತಂಡದೊಳಗೆ ಯಶಸ್ವಿ ಜೈಸ್ವಾಲ್ ಅಥವಾ ರಿಂಕ್ ಸಿಂಗ್ ಹೆಸರು ಬಂದ್ರೂ ಬರಬಹುದು. ಇನ್ನುಳಿದಂತೆ
ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ) ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಜಸ್ಪ್ರಿತ್ ಬೂಮ್ರಾ, ಆರ್ಶಾದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮನ್ಸ್.

ಕೊನೆಯದಾಗಿ, ಟಿ-20 ವಿಶ್ವಕಪ್‍ನ ಫೈನಲ್ ಮ್ಯಾಚ್ ಮಾರ್ಚ್ 8ರಂದು ನಡೆಯಲಿದೆ. ಅಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ರೋಸ್ ಡೇ ಗೂ ವುಮೆನ್ಸ್ ಡೇ ಗೂ ಹತ್ತಿರದ ಸಂಬಂಧವಿದೆ. ಪ್ರೀತಿಯಲ್ಲಿ ಬಿದ್ದ ಯಾವುದೇ ಹರೆಯದ ತರುಣನ‌ ಭಾವಕೋಶದಲ್ಲಿ ಗುಲಾಬಿಯ ಅಸ್ತಿತ್ವಕ್ಕಂತೂ ಕುತ್ತಿಲ್ಲ. ತನ್ನ ಪ್ರಿಯತಮೆಯ ಕುರಿತಾದ ನವಿರಾದ ಪ್ರೇಮವೆಂಬ ಲಾಲಿತ್ಯ ಗುಲಾಬಿಯಷ್ಟೇ ಕೋಮಲ. ನೋಡಿ ಎಷ್ಟು ಸೊಗಸಾಗಿದೆ ಈ ಸಮೀಕರಣ ಗುಲಾಬಿಯ ದಿನದಂದು ಶುರುವಾಗುವ ವಿಶ್ವಕಪ್ ಚುಟುಕು ಕ್ರಿಕೆಟ್ ಅಭಿಯಾನ ಮಹಿಳಾ ದಿನದಂದು ಮುಕ್ತಾಯವಾಗುತ್ತದೆ. ಭಾರತ ಕ್ರಿಕೆಟ್ ತಂಡದ ನೀಲ ನಾಯಕರಿಗೆ ಪ್ರತಿ ಕ್ರಿಕೆಟ್ ವಿಶ್ವಕಪ್ ಎಂಬುದು ಅವರ ಮೊದಲ ಪ್ರೀತಿಯಷ್ಟೇ ಭಾವಯಾನ. ವಿಶ್ವಕಪ್ ಕ್ರಿಕೆಟ್ ಎಂಬ ಮಾಯಾಂಗನೆಗೆ ಗುಲಾಬಿಯ ಪಕಳೆಗಳ ಸುಮವೃಷ್ಟಿ ಸುರಿಸಲು ನಮ್ಮ ಹುಡುಗರು ತಯಾರಾಗಿದ್ದಾರೆ ಬಿಡಿ. ರೋಸ್ ಡೇ ದಿಂದ ಬರೆಯಲಾಗುವ ಮುನ್ನುಡಿ ವುಮೆನ್ಸ್ ಡೇನಂದು ಸಂಭ್ರಮದ ಉಪಸಂಹಾರಗೊಳ್ಳಲಿ ಎನ್ನುವುದು ನಮ್ಮಂತಹ ಕೋಟ್ಯಾನುಕೋಟಿ ಟೀಮ್ ಇಂಡಿಯಾ ಅಭಿಮಾನಿಗಳ ಹರಕೆ ಮತ್ತು ಹಾರೈಕೆ.

- ಸನತ್ ರೈ

ಕೆಎಸ್‍ಸಿಎ ನೂತನ ಸಾರಥಿ ವೆಂಕಟೇಶ್ ಪ್ರಸಾದ್‍ಗೆ ಬಹಿರಂಗ ಪತ್ರ..! ಡಿಯರ್ ವೆಂಕಿ...ಮೊದಲಿಗೆ ನಿಮಗೆ ಅಭಿನಂದನೆಗಳು. ಯಾಕಂದ್ರೆ ಈಗ ನೀವು ಕರ್ನಾಟ...
09/12/2025

ಕೆಎಸ್‍ಸಿಎ ನೂತನ ಸಾರಥಿ ವೆಂಕಟೇಶ್ ಪ್ರಸಾದ್‍ಗೆ ಬಹಿರಂಗ ಪತ್ರ..!

ಡಿಯರ್ ವೆಂಕಿ...
ಮೊದಲಿಗೆ ನಿಮಗೆ ಅಭಿನಂದನೆಗಳು. ಯಾಕಂದ್ರೆ ಈಗ ನೀವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ. ರಾಜ್ಯ ಹಾಗೂ ಟೀಮ್ ಇಂಡಿಯಾ ಆಟಗಾರನಾಗಿ ನೀವು ಹಲವು ದಾಖಲೆ, ಸಾಧನೆಗಳನ್ನು ಮಾಡಿದ್ದೀರಿ. ಅವೆಲ್ಲವೂ ವಿಶ್ವ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಈಗ ಮಹತ್ವದ ಸ್ಥಾನಮಾನ ಸಿಕ್ಕಿದೆ. ಇದು ಖುಷಿಯ ವಿಚಾರವೇ. ಆದ್ರೆ ಮುಂದಿನ ದಿನಗಳಲ್ಲಿ ಕೆಎಸ್‍ಸಿಎನಲ್ಲಿ ಹೊಸ ಶಕೆ ಆರಂಭವಾಗಬೇಕು. ಪಾರದರ್ಶಕ ಆಡಳಿತ, ದಿಟ್ಟ ನಿರ್ಧಾರಗಳಿಂದ ರಾಜ್ಯ ಕ್ರಿಕೆಟ್‍ನ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಇದು ನಿಮ್ಮ ಜವಾಬ್ದಾರಿಯೂ ಹೌದು.. ನಿಮ್ಮ ಕರ್ತವ್ಯವೂ ಹೌದು ಎಂಬುದನ್ನು ಮರೆಯಬೇಡಿ.
ಆದ್ರೆ ಯಾವುದೇ ಕಾರಣಕ್ಕೂ 12 ವರ್ಷಗಳ ಹಿಂದೆ ನೀವೂ ಹಾಗೂ ನಿಮ್ಮ ಆಪ್ತರು ಮಾಡಿರುವ ತಪ್ಪನ್ನು ಮತ್ತೆ ಮಾಡಬೇಡಿ. 2010ರಲ್ಲಿ ಉಪಾಧ್ಯಕ್ಷರಾಗಿದ್ದ ನೀವು 12 ವರ್ಷಗಳ ಬಳಿಕ ಕೆಎಸ್‍ಸಿಎ ಚಾವಡಿಗೆ ಬಂದು ಈಗ ಸಾರಥಿಯಾಗಿದ್ದೀರಿ. ಮುಂದಿನ ಮೂರು ವರ್ಷಗಳ ಕಾಲ
ಕರ್ನಾಟಕ ಕ್ರಿಕೆಟ್ ಅನ್ನು ಮುನ್ನಡೆಸಿಕೊಂಡು ಹೋಗಬೇಕಿದೆ. ಹಾಗಂತ ಈ ಹಿಂದಿನಂತೆ ಕೇವಲ ಮೂರು ವರ್ಷಕ್ಕೆ ಸೀಮಿತವಾಗಬೇಡಿ. ದೂರದೃಷ್ಟಿಯನ್ನಿಟ್ಟುಕೊಂಡು ಕೆಎಸ್‍ಸಿಎಗೆ ಆಧುನಿಕತೆ ಸ್ಪರ್ಶವನ್ನು ನೀಡುತ್ತೀರಿ ಎಂಬ ನಂಬಿಕೆ ಇದೆ.
ಹೌದು, ನಿಮಗೆ ಚೆನ್ನಾಗಿ ಗೊತ್ತಿದೆ.. ಕೆಎಸ್‍ಸಿಎ ಗದ್ದುಗೆಯಲ್ಲಿ ಕುಳಿತುಕೊಂಡು ಕೆಲಸ ಸುಲಭದ ಸಂಗತಿಯಲ್ಲ ಅಂತ. ಇಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕು. ನೂರಾರು ಸಮಸ್ಯೆಗಳನ್ನು ಬಗೆಹರಿಸಬೇಕು. ಕೆಎಸ್‍ಸಿಎಗೆ ಅಂಟಿಕೊಂಡಿರುವ ಕಲೆಗಳನ್ನು ಕಿತ್ತು ಹಾಕಬೇಕು. ಕರ್ನಾಟಕ ಕ್ರಿಕೆಟ್‍ನ ಪರಂಪರೆ, ಗೌರವ, ಪ್ರತಿಷ್ಠೆಯನ್ನು ಮತ್ತೆ ಪಡೆಯಬೇಕು. ಇದು ನಿಮ್ಮ ಧ್ಯೇಯವೂ ಹೌದು..ಇದನ್ನು ಕಾರ್ಯರೂಪಕ್ಕೆ ತರೋದು ನಿಮ್ಮ ಕರ್ತವ್ಯವೂ ಹೌದು.
ಮುಖ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ದೂರವಾಗಿರುವ ಚಿನ್ನಸ್ವಾಮಿಯಲ್ಲಿ ಮತ್ತೆ ಪಂದ್ಯಗಳನ್ನು ಆಡಿಸಬೇಕು. ಕಳೆದ ವರ್ಷ ಆರ್‍ಸಿಬಿ ವಿಜಯೋತ್ಸದ ವೇಳೆ ಆಗಿದ್ದ ಕಾಲ್ತುಳಿತದಂತಹ ಅನಾಹುತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಆದ್ರೆ ದಯವಿಟ್ಟು ಕರ್ನಾಟಕ ಪ್ರೀಮಿಯರ್ ಲೀಗ್ ಅನ್ನು ರದ್ದು ಮಾಡಬೇಡಿ. ಈ ಹಿಂದೆ ನಿಮ್ಮದೇ ಟೀಮ್‍ನವರು ಕೆಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿದ್ದರು. ಆ ಪ್ರಮಾದವನ್ನು ಮತ್ತೆ ಮಾಡಬೇಡಿ. ಅದರ ಬದಲು ಕೆಪಿಎಲ್ ಟೂರ್ನಿಗೆ ಹೊಸ ಸ್ವರೂಪವನ್ನು ನೀಡಿ. ಐಪಿಎಲ್ ಮಾದರಿಯಲ್ಲೇ ಕೆಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಿ. ಯಾವುದೇ ಕಾರಣಕ್ಕೂ ತಟಸ್ಥ ತಾಣ ಹಾಗೂ ಬೆಂಗಳೂರು, ಹುಬ್ಬಳ್ಳಿ ಮೈಸೂರಿಗೆ ಮಾತ್ರ ಸೀಮಿತಗೊಳಿಸಬೇಡಿ. ಆಯಾ ಫ್ರಾಂಚೈಸಿಗಳ ತವರಿನಲ್ಲೇ ಪಂದ್ಯಗಳನ್ನು ಆಯೋಜಿಸಿ. ಯಾಕಂದ್ರೆ ಸ್ಥಳೀಯ ಕ್ರಿಕೆಟ್ ಪಂದ್ಯಗಳನ್ನು ನೋಡಲು ಸಾವಿರಾರು ಜನ ಸೇರ್ತಾರೆ ಅಂದ ಮೇಲೆ ಕೆಪಿಎಲ್ ಫ್ರಾಂಚೈಸಿಗಳ ತವರಿನಲ್ಲಿ ಪಂದ್ಯಗಳನ್ನು ಸಂಘಟಿಸಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಂದ್ಯವನ್ನು ನೋಡಬಹುದು. ಹೀಗಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ಕೆಎಸ್‍ಸಿಎ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡುವ ಪ್ರಯತ್ನ ಮಾಡಬೇಕಿದೆ. ಅಲ್ಲದೆ ಇದೇ ಮೈದಾನದಲ್ಲಿ ಕೆಎಸ್‍ಸಿಎ ಕ್ರಿಕೆಟ್ ಅಕಾಡೆಮಿಯನ್ನು ಆರಂಭಿಸಿದ್ರೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ.
ಇನ್ನು ಕರ್ನಾಟಕ ಕ್ರಿಕೆಟ್ ಅಕಾಡೆಮಿಗೆ ಮರುಜೀವ ನೀಡಬೇಕು. ವಿವಿಧ ವಯೋಮಿತಿ, ಕ್ಲಬ್ ಕ್ರಿಕೆಟ್, ರಣಜಿ ಟೂರ್ನಿ ಸೇರಿದಂತೆ ಪ್ರತಿಯೊಂದು ಆಯ್ಕೆಯಲ್ಲೂ ಪಾರದರ್ಶಕತೆಯನ್ನು ತರಬೇಕು. ಹಾಗೇ ಶಿಸ್ತು, ಕಠಿಣ ನಿಯಮಗಳನ್ನು ರೂಪಿಸಬೇಕು. ಯುವ ಪ್ರತಿಭಾವಂತ ಆಟಗಾರರಿಗೆ ಅನ್ಯಾಯವಾಗಬಾರದು. ಹಾಗೇ ಖಾಸಗಿ ಕ್ಲಬ್‍ಗಳ ಪ್ರಭಾವಕ್ಕೂ ಕಡಿವಾಣ ಹಾಕಬೇಕಿದೆ.
ಹಾಗೇ ಕೆಎಸ್‍ಸಿಎಯನ್ನು ಕ್ಲೀನ್ ಮಾಡೋದು ನಿಮ್ಮ ಮೊದಲ ಕೆಲಸವಾಗಲಿದೆ. ನೆನೆಗುದಿಗೆ ಬಿದ್ದಿರುವ ಕ್ರೀಡಾಂಗಣಗಳ ಕಾಮಗಾರಿಗಳಿಗೆ ವೇಗವನ್ನು ನೀಡಬೇಕಿದೆ. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ, ಕಾರ್ಪೋರೇಟ್ ಸಂಸ್ಥೆಗಳ ಸಹಾಯದಿಂದ ಕೆಎಸ್‍ಸಿಎ ಮೈದಾನಗಳನ್ನು ನೀವು ಮನಸು ಮಾಡಿದ್ರೆ ನಿರ್ಮಾಣ ಮಾಡಬಹುದು. ಇನ್ನೊಂದೆಡೆ, ಕೆಎಸ್‍ಸಿಎನಲ್ಲಿ ಈ ಹಿಂದೆ ಆಗಿರುವ ಲೋಪದೋಷಗಳು, ಅವ್ಯವಹಾರಗಳನ್ನು ಬಯಲಿಗೆ ತರಬೇಕು. ಇಲ್ಲಿ, ನಿಮ್ಮ ಸ್ವಾರ್ಥ, ಅಹಂ, ಪ್ರತಿಷ್ಠೆ ಎಲ್ಲವನ್ನೂ ಬಿಡಬೇಕಿದೆ. ರಾಜ್ಯದ ಹಿರಿಯ ಹಾಗೂ ಅನುಭವಿ ಕ್ರಿಕೆಟಿಗರ ಅಭಿಪ್ರಾಯಗಳನ್ನು ಪಡೆದುಕೊಂಡು ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಬೇಕು.
ಮತ್ತೊಂದು ಮನವಿ.. ಕೆಎಸ್‍ಸಿಎನಲ್ಲಿ ಕನ್ನಡ ಪರ್ತಕರ್ತರು, ಕನ್ನಡ ಮಾಧ್ಯಮಗಳಿಗೂ ಆದ್ಯತೆ ನೀಡಿ. ಕೇವಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕನ್ನಡ ಮಾಧ್ಯಮಗಳನ್ನು ಬಳಸಿಕೊಳ್ಳಬೇಡಿ. ಯಾವುದೇ ವಿಚಾರದಲ್ಲೂ ತಾರತಮ್ಯ, ಸರ್ವಾಧಿಕಾರಿ ಧೋರಣೆಯನ್ನು ಯಾವತ್ತೂ ಮಾಡಬೇಡಿ.
ಕೊನೆಂiÀiದಾಗಿ ವೆಂಕಿ.. ಗೇಮ್ ಚೇಂಜರ್ಸ್ ಅಂತ ಟೀಮ್ ಕಟ್ಟಿಕೊಂಡು ಕೆಎಸ್‍ಸಿಎ ಪಟ್ಟಕ್ಕೇರಿದ್ದಿರಿ. ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳಿವೆ. ಕರ್ನಾಟಕ ಕ್ರಿಕೆಟ್ ಇನ್ನಷ್ಟು ಎತ್ತರಕ್ಕೇರುತ್ತದೆ ಎಂಬ ಭರವಸೆ ಇದೆ. ಸ್ಥಳೀಯ ಪ್ರತಿಭೆಗಳನ್ನು ಬೆಳೆಸಿ.. ಕರ್ನಾಟಕದ ಹೆಸರನ್ನು ಉಳಿಸಿ.. ಆಗ ನೀವು ಕೆಎಸ್‍ಸಿಎ ಅಧ್ಯಕ್ಷನಾಗಿರುವುದಕ್ಕೂ ಸಾರ್ಥಕತೆ ಇರುತ್ತೆ. ಈ ನಂಬಿಕೆಯನ್ನು ಹುಸಿಗೊಳಿಸಬೇಡಿ..!

ಸನತ್ ರೈ

07/12/2025

ಕೆಎಸ್‍ಸಿಎ ಚುನಾವಣೆ - ಪಟೇಲರಿಗೆ ಮಹಾ ಮಂಗಳಾರತಿ.. ವೆಂಕಟೇಶನಿಗೆ ಪ್ರಸಾದ

ಅಂತು.. ಇಂತು.. ಕೆಎಸ್‍ಸಿಎನಲ್ಲಿ ಪಟೇಲರ ಒಡ್ಡೋಲಗಕ್ಕೆ ಬ್ರೇಕ್ ಬಿದ್ದಿದೆ. 22ವರ್ಷಗಳ ಕಾಲ ಕೆಎಸ್‍ಸಿಎ ಆಡಳಿತವನ್ನು ಕೈ ಬೆರಳಿನಲ್ಲೇ ಆಡಿಸುತ್ತಿದ್ದ ಬ್ರಿಜೇಶ್ ಪಟೇಲರು 2025ರ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ. ಕುಂಬ್ಲೆಯ ಗೂಗ್ಲಿ, ಶ್ರೀನಾಥ್ ಬೌನ್ಸರ್ ಹಾಗೂ ವೆಂಕಿಯ ಸ್ವಿಂಗ್‍ಗೆ ಬ್ರಿಜೇಶ್ ಪಟೇಲರ ಬ್ಯಾಟ್ ಮುರಿದು ಹೋಗಿದೆ.
ಈ ಹಿಂದೆ ಐದು ಬಾರಿ ಕೆಎಸ್‍ಸಿಎನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪಟೇಲರು ಕಳೆದ ಎಂಟು ವರ್ಷಗಳಿಂದ ಕೆಎಸ್‍ಸಿಎನಲ್ಲಿ ಪಟೇಲರ ಪ್ರಭುತ್ವಕ್ಕೆ ಯಾವುದೇ ರೀತಿಯ ಅಡೆತಡೆಗಳಿರಲಿಲ್ಲ.
ಕಾರಣ 2010ರಲ್ಲಿ ಕೆಎಸ್‍ಸಿಎ ಚುಕ್ಕಾಣಿ ಹಿಡಿದ್ದ ಕುಂಬ್ಳೆ ಒಂದೇ ಅವಧಿಗೆ ಕೆಎಸ್‍ಸಿಎ ಸಹವಾಸ ಸಾಕು ಅಂತ ದೂರ ಸರಿದಿದ್ದರು. ನಂತರ 12 ವರ್ಷಗಳ ಕಾಲ ಕುಂಬ್ಳೆ - ಶ್ರೀನಾಥ್ ಟೀಮ್ ಕೆಎಸ್‍ಸಿಎ ಚಾವಡಿಗೆ ಎಂಟ್ರಿಯಾಗುವ ಮನಸ್ಸು ಮಾಡಲಿಲ್ಲ ಎಂಬುದು ಬೇರೆ ವಿಚಾರ. ಕೊನೆಗೂ ಕರ್ನಾಟಕ ಕ್ರಿಕೆಟ್ ಅರ್ಧಪತನದತ್ತ ಸಾಗುತ್ತಿದೆ ಎಂಬುದು ಜ್ಞಾನೋದಯವಾಗಿದ್ದು ಮಾತ್ರ ಒಳ್ಳೆಯ ವಿಚಾರ.
ಹೀಗಾಗಿ ಈ ಬಾರಿ ಕುಂಬ್ಳೆ - ಶ್ರೀನಾಥ್ ಟೀಮ್ ಕೆಎಸ್‍ಸಿಎ ಅಖಾಡಕ್ಕೆ ವೆಂಕಿ ತಂಡನ್ನು ಕಣಕ್ಕಿಳಿಸಿತ್ತು. ಇನ್ನೊಂದೆಡೆ ಪಟೇಲರು ಈ ಬಾರಿಯ ಚುನಾವಣೆಯಲ್ಲಿ ಕುಂಬ್ಳೆ - ಶ್ರೀನಾಥ್ ಟೀಮ್‍ಗೆ ನೇರವಾಗಿ ಪಂಥಾಹ್ವಾನವನ್ನು ನೀಡಿದ್ದರು. 2010ರಲ್ಲಿ ಒಲ್ಲದ ಮನಸ್ಸಿನಿಂದಲೇ ಕುಂಬ್ಳೆ ಟೀಮ್‍ಗೆ ಬೆಂಬಲ ನೀಡಿ ಮಹಾರಾಜರ ವಿರುದ್ಧ ಸೇಡು ತೀರಿಸಿಕೊಂಡಿದ್ದ ಪಟೇಲರು 2013ರಲ್ಲಿ ಅದೇ ಮಹಾರಾಜರ ಜೊತೆ ಸೇರಿಕೊಂಡು ಮತ್ತೆ ಕೆಎಸ್‍ಸಿಎಯನ್ನು ಕೈವಶಮಾಡಿಕೊಂಡಿದ್ದರು.
ಆದ್ರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿತ್ತು. ಹೇಗಾದ್ರೂ ಪಟೇಲರ ಕಾರುಬಾರುಗೆ ಅಂತ್ಯ ಹಾಡಲೇಬೇಕು ಅಂತ ಕುಂಬ್ಳೆ - ಶ್ರೀನಾಥ್ ಟೀಮ್ ನಿರ್ಧಾರ ಮಾಡಿದ್ರು. ತಡವಾಗಿ ಬಂದ್ರೂ
ವೆಂಕಟೇಶ್ ಪ್ರಸಾದ್ ಈಗ ಕೆಎಸ್‍ಸಿಎ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಸುಜೀತ್ ಸೋಮಸಂದರ್. ಕಾರ್ಯದರ್ಶಿಯಾಗಿ ಸಂತೋಷ್ ಮೇನನ್ ಗೆದ್ರೆ, ಸಹಕಾರ್ಯದರ್ಶಿಯಾಗಿ ಬ್ರಿಜೇಶ್ ಟೀಮ್ ನ ಬಿ.ಕೆ. ರವಿ ಜಯ ಗಳಿಸಿದ್ದಾರೆ. ]
ಅಚ್ಚರಿ ಅಂದ್ರೆ, ಕಾರ್ಯದರ್ಶಿ ಸಂತೋಷ್ ಮೇನನ್ ಒಂದು ಕಾಲದಲ್ಲಿ ಪಟೇಲರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ ಈ ಬಾರಿ ಪಟೇಲರಿಗೆ ತಿರುಗಿಬಿದ್ದಿರೋದು ನಂಬಲು ಅಸಾಧ್ಯವಾಗಿದೆ. 2007ರಲ್ಲಿ ಬ್ರಿಜೇಶ್ ಪಟೇಲರ ವಿರುದ್ಧ ಕೆಂಡಕಾರುತ್ತಿದ್ದ ಬಿ.ಕೆ. ರವಿ ಅವರು ಈ ಸಲ ಪಟೇಲರ ಬಣದಲ್ಲಿ ಗುರುತಿಸಿಕೊಂಡು ಗೆಲುವಿನ ನಗೆ ಚೆಲ್ಲಿದ್ದಾರೆ.
ಆದ್ರೆ ಇಲ್ಲಿ ಹರಕೆಯ ಕುರಿಯಾಗಿದ್ದು ಪತ್ರಿಕೋಧ್ಯಮಿ ಶಾಂತಕುಮಾರ್ ಅವರು. ಬ್ರಿಜೇಶ್ ಟೀಮ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಾಂತಕುಮಾರ್ ಅವರನ್ನು ಗೆಲ್ಲಿಸಲು ಪಟೇಲರು ಯಶಸ್ವಿಯಾಗಲಿಲ್ಲ. ಪಟೇಲರ ವೋಟ್ ಬ್ಯಾಂಕ್ ಶಾಂತ ಕುಮಾರ್ ಅವರ ಕೈ ಹಿಡಿಯಲಿಲ್ಲ. ಉತ್ತಮ ಆಡಳಿತಗಾರ ಎಂಬ ಖ್ಯಾತಿ ಪಡೆದಿದ್ದ ಶಾಂತಕುಮಾರ್ ತಪ್ಪು ನಿರ್ಧಾರ ತೆಗೆದುಕೊಂಡ್ರು ಎಂಬ ಮಾತು ಕೇಳಿಬಂದಿದ್ದು ಸುಳ್ಳಾಗಲಿಲ್ಲ. ಹೆಸರಿಗೆ ತಕ್ಕಂತೆ ಶಾಂತ ವರ್ಚಸ್ಸು ಹೊಂದಿದ್ದ ಶಾಂತಕುಮಾರ್ ಅವರಿಗೆ ಪಟೇಲರ ಬಣದಲ್ಲಿ ಗುರುತಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದ್ರೆ ಪಟೇಲರ ತಂತ್ರವೇ ಬೇರೇನೇ ಇತ್ತು. ತನ್ನ ಆಪ್ತರು ಎಲ್ಲಾ ಬಿಟ್ಟು ಹೋದಾಗ ವರ್ಚಸ್ಸಿನ ಅಭ್ಯರ್ಥಿ ಬೇಕಾಗಿತ್ತು. ಅಲ್ಲದೆ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದ್ದ ಪಟೇಲರು ವೆಂಕಿ ಟೀಮ್‍ಗೆ ಸಡ್ಡು ಹೊಡೆಯುವ ಲೆಕ್ಕಚಾರದಲ್ಲಿದ್ರು. ಆದ್ರೆ ಅದು ಈ ಬಾರಿ ವರ್ಕ್ ಆಗಲಿಲ್ಲ.
ಯಾರು ಏನೇ ಹೇಳಲಿ, ಪಟೇಲರ ಚಾಣಕ್ಷತನವನ್ನು ಯಾರು ಕೂಡ ಲಘುವಾಗಿ ಪರಿಗಣಿಸುವ ಹಾಗಿಲ್ಲ. ಯಾಕಂದ್ರೆ, ಕೆಎಸ್‍ಸಿಎನಲ್ಲಿ ಪಟೇಲರ ಮಾತೇ ಅಂತಿಮ. ಯಾರು ಎಷ್ಟೇ ಟೀಕೆ, ಆರೋಪಗಳನ್ನು ಮಾಡಿದ್ರೂ ಬ್ರಿಜೇಶ್ ಕ್ಯಾರ್ ಮಾಡ್ತಾ ಇರಲಿಲ್ಲ. ಅದಕ್ಕೂ ಕಾರಣವಿದೆ. ಈ ಹಿಂದೆ ನಾಗರಾಜ್‍ನಂತವರನ್ನೇ ಮಕಾಡೆ ಮಲಗಿಸಿ ಕೆಎಸ್‍ಸಿಎ ಅಧಿಕಾರವನ್ನು ಗಿಟ್ಟಿಸಿಕೊಂಡ ಪಟೇಲರು, ಕೆಎಸ್‍ಸಿಎನಲ್ಲಿ ಅಷ್ಟೊಂದು ಪವರ್‍ಫುಲ್ ವ್ಯಕ್ತಿ. ಒಂದು ರೀತಿಯಲ್ಲಿ ಕೆಎಸ್‍ಸಿಎ ಆಡಳಿತವನ್ನು ಫೆವಿಕಾಲ್ ಗಮ್‍ನಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದರು. ಹಾಗಾಗಿ ಕೆಎಸ್‍ಸಿಎಗೆ ಬೇರೆಯವರು ಎಂಟ್ರಿಯಾಗೋದು ಅಷ್ಟೊಂದು ಇಝಿ ಇರಲಿಲ್ಲ.
ಹೌದು, ವೆಂಕಿ ಟೀಮ್ ಗೆಲುವಿನ ಹಿಂದೆ ಕುಂಬ್ಳೆ, ಶ್ರೀನಾಥ್, ರಾಹುಲ್ ಪ್ರಭಾವ ಇತ್ತು ಎಂಬುದು ಬಹುತೇಕರ ಭಾವನೆ. ಆದ್ರೆ ಈ ಗೆಲುವಿನ ಹಿಂದಿರುವ ಶಕ್ತಿ ವಿನಯ್ ಮೃತ್ಯುಂಜಯ ಎಂಬ ಲೆಕ್ಕಪರಿಶೋಧಕ. ಮಹಾರಾಜರ ಕಾಲದಲ್ಲೂ ಗೆಲುವಿನ ಹಿಂದೆ ಇದ್ದದ್ದು ಇದೇ ವಿನಯ್ ಮೃತ್ಯುಂಜಯ್. ಬಳಿಕ ವಿನಯ್ ಮೃತ್ಯುಂಜಯ್ ಕೂಡ ಪಟೇಲರ ಬಣ ಸೇರಿಕೊಂಡಿದ್ದರು ಎಂಬುದು ಬೇರೆ ಮಾತು.
ಆದ್ರೆ ಈ ಬಾರಿ ಕೆಎಸ್‍ಸಿಎಯನ್ನು ಪಟೇಲರ ಕೈಯಿಂದ ವಶಪಡಿಸಿಕೊಳ್ಳಬೇಕು ಎಂದು ವಿನಯ್ ಮೃತ್ಯುಂಜಯ್ ವೆಂಕಿ ಟೀಮ್‍ಗೆ ಬಹಿರಂಗವಾಗಿ ಬೆಂಬಲ ನೀಡುವ ಮೂಲಕ ಪಟೇಲರ ದರ್ಬಾರ್‍ಗೆ ಅಂತ್ಯಹಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಇದೀಗ ಕೆಎಸ್‍ಸಿಎನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ವೆಂಕಿ ಟೀಮ್‍ಗೆ ಸಾಕಷ್ಟು ಸವಾಲುಗಳಿವೆ. ಕಳೆದು ಹೋಗಿರುವ ಕರ್ನಾಟಕ ಕ್ರಿಕೆಟ್‍ನ ಘನತೆಯನ್ನು ಮತ್ತೆ ಪಡೆದುಕೊಳ್ಳಲು ವೆಂಕಿ ಟೀಮ್ ಸಾಕಷ್ಟು ಹೋಮ್ ವರ್ಕ್ ಮಾಡಬೇಕಿದೆ.
ನೆನಪಿಡಿ, ವೆಂಕಿ.. ಕೆಎಸ್‍ಸಿಎ ಕ್ಲಬ್‍ನ ಸದಸ್ಯರು ನಿಮ್ಮನ್ನು ನಂಬಿಕೊಂಡು ನಿಮ್ಮನ್ನು ಗೆಲ್ಲಿಸಿದ್ದಾರೆ. ಕರ್ನಾಟಕ ಕ್ರಿಕೆಟ್‍ಗೆ ವಿನೂತನ ಸ್ವರೂಪ ನೀಡ್ತೀರಿ ಎಂಬ ನಂಬಿಕೆಯ ಮೇಲೆ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ, ನಿಮ್ಮ ಟೀಮ್ ಮೇಲೆ ಸಾಕಷ್ಟು ಭರವಸೆಗಳಿವೆ. ಅದನ್ನು ಹುಸಿಗೊಳಿಸಬೇಡಿ. ನಿಮ್ಮ ಗಾಡ್ ಫಾದರ್‍ಗಳು ಈ ಹಿಂದೆ ಮಾಡಿರುವ ಪ್ರಮಾದವನ್ನು ಮತ್ತೆ ಮಾಡಬೇಡಿ. ನಿಮ್ಮ ಪ್ರತಿಷ್ಠೆ, ಸ್ಥಾನಮಾನವನ್ನು ಬದಿಗಿಟ್ಟು ಕರ್ನಾಟಕ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡುವುದು ನಿಮ್ಮ ಆದ್ಯ ಕರ್ತವ್ಯ. ಇದನ್ನು ಮಾತ್ರ ಮರೆಯಬೇಡಿ.
ಸನತ್ ರೈ

03/12/2024

Address

Banglore

Alerts

Be the first to know and let us send you an email when Sports Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Sports Karnataka:

Share