13/09/2025
ಚಿಂಚಲಿ ಮಾಯಕ್ಕ ಉತ್ತರ ಕರ್ನಾಟಕ ಪಶ್ಚಿಮ ಮಹಾರಾಷ್ಟ್ರದ ಚಾಮುಂಡಿ ಮಹಿಷಾಸುರ ಮರ್ದಿನಿ ಶಿಷ್ಟ ರಕ್ಷಕಿ ದುಷ್ಟ ಸಂಹಾರಿಣಿ
ಚಿಂಚಲಿ ಮಾಯಕ್ಕ ಉತ್ತರ ಕರ್ನಾಟಕ ಪಶ್ಚಿಮ ಮಹಾರಾಷ್ಟ್ರದ ಚಾಮುಂಡಿ ಮಹಿಷಾಸುರ ಮರ್ದಿನಿ ಶಿಷ್ಟ ರಕ್ಷಕಿ ದುಷ್ಟ ಸಂಹಾರಿಣಿ
* ನಮಸ್ಕಾರ ವೀಕ್ಷಕರೆ
ನಾನು ರಾಜು ಉಸ್ತಾದ್
"ನೆರ ಹೊಡೆತ" ಹೆಸರಿನ ಸಮೂಹ ಜಾಲತಾಣಕ್ಕೆ ನಿಮಗೆ ಸ್ವಾಗತ..
ನಾನೀಗ ಶಕ್ತಿ ದೇವತೆಗಳ ಬಗ್ಗೆ ಮಾತನಾಡುತ್ತಿದ್ದೇನೆ...
'ಚಿಂಚಲಿ ಮಾಯಕ್ಕ' ದುರುಳರಿಗೆ ದುಸ್ವಪ್ನ. ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದವರಿಗೆ ಚಾಮುಂಡಿ, ಮಹಿಷಾಸುರ ಮರ್ದಿನಿ.
ಇತರೆ ಶಕ್ತಿ ದೇವತೆಗಳಂತೆ ಈಕೆಯೂ ಶಿಷ್ಟ ರಕ್ಷಕಿ ದುಷ್ಟ ಸಂಹಾರಕಿ. ಸುಜನರಿಗೆ ಅಭಯ ನೀಡುತ್ತಿದ್ದ ಮಾಯಕ್ಕ ಇವರಿಗೆ ಕಂಟಕರಾದ ಕುಜನರನ್ನು ಸದೆಬಡಿಯುತ್ತಿದ್ದಳು.
ಇದೇ ಕಾರ್ಯದಲ್ಲಿ ಶಸ್ತ್ರ ಸಜ್ಜಿತ ಯೋಧೆ ಹಾಗೂ ಶ್ವೇತಾಶ್ವರೂಢಳಾಗಿ ಕಿಲ್ ಮತ್ತು ಕಟ್ಟ ಎನ್ನುವ ಹೆಸರಿನ ಇಬ್ಬರು ರಾಕ್ಷಸರನ್ನು ಬೆನ್ನಟ್ಟಿಕೊಂಡು ಈಗಿನ ಮಹಾರಾಷ್ಟ್ರದ ಕೊಂಕಣದ ಕಡೆಯಿಂದ ಈಗಿನ ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪ್ರದೇಶಕ್ಕೆ ಬಂದವಳು. ಇಲ್ಲಿ ಆ ಕಾರ್ಯ ಪೂರ್ಣಗೊಳಿಸಿ ಶಾಂತವಾದವಳು. ಈ ಕೆಲಸಕ್ಕೆ ಇಲ್ಲಿನ ವೀರರು ಶ್ರೀದೇವಿಗೆ ನೆರವಾದರು ಎನ್ನುವ ಪ್ರತೀತಿಯೂ ಇದೆ.
ರಾಕ್ಷಸ ಸಂಹಾರದ ನಂತರ ಮಾಯಕ್ಕ ತನ್ನ ಮೂಲಸ್ಥಾನವಾದ ಕೊಂಕಣದ ಕಡೆಗೆ ಹೋಗಲಿಲ್ಲ. ಇಲ್ಲಿಯೇ ನೆಲೆಸಲು ಮನಸ್ಸು ಮಾಡಿದಳು. ಅದಕ್ಕಾಗಿ ಸೂಕ್ತ ಸ್ಥಳದ ಅನ್ವೇಷಣೆ ಮಾಡಿದಳು. ಚಿಂಚಲಿ ಕೇಂದ್ರಿತ ಸುತ್ತಲಿನ ಹಳ್ಳಿಗಳಲ್ಲಿ ಸಂಚರಿಸಿದಳು. ಕೊನೆಗೆ ಚಿಂಚಲಿಯನ್ನೇ ಆಯ್ದುಕೊಂಡಳು.
ಆದರೆ ಇಲ್ಲಿ ಒಂದು ಸಮಸ್ಯೆ ಇತ್ತು. ಚಿಂಚಲಿಯಲ್ಲಿ ಆಗಲೇ ಹಿರಿದೇವಿಯ ದೇವಸ್ಥಾನ ಇತ್ತು. ಅದು ಮಣ್ಣಿನ ಗುಡ್ಡದ ತ್ಯಾಜ್ಯದಲ್ಲಿ ಕಳೆದು ಹೋದ ಸ್ಥಿತಿಯಲ್ಲಿತ್ತು. ಇದನ್ನೆಲ್ಲ ಗಮನಿಸಿದ ಮಾಯಕ್ಕ ಹಿರಿದೇವಿಯ ಬಳಿಗೆ ಹೋಗಿ ತನಗೆ ಆಶ್ರಯ ಸ್ಥಾನ ನೀಡಬೇಕೆಂದು ಕೇಳಿಕೊಂಡಳು.
ಈ ಕೋರಿಕೆ ಮನ್ನಿಸಿದ ಹಿರಿದೇವಿ ಕೆಲವು ಷರತ್ತುಗಳನ್ನು ಹಾಕಿದಳು. ಮೊದಲ ಗೌರವ, ಮೊದಲ ದರ್ಶನ ಮತ್ತು ಮೊದಲ ನೈವೇದ್ಯ ತನಗೆ ಸಲ್ಲಬೇಕೆಂದು ತಿಳಿಸಿದಳು. ಮಾಯಕ್ಕ ಇದಕ್ಕೊಪ್ಪಿಕೊಂಡು ಅಲ್ಲಿಯೇ ನೆಲೆಸಿದಳು. ಇಬ್ಬರು ದೇವಿಯರು ಒಂದೇ ಸ್ಥಳದಲ್ಲಿ ಒಂದೇ ಗುಡಿ ಪರಿಸರದಲ್ಲಿ ಪ್ರತ್ಯೇಕ ದಿಕ್ಕಿನಲ್ಲಿ ನೆಲೆಸಿರುವುದು ವಿಶೇಷವಾಗಿದೆ.
ಹಿರಿದೇವಿ ವಿಧಿಸಿದ್ದ ಷರತ್ತುಗಳು ಇಂದಿಗೂ ರೂಢಿ, ಆಚರಣೆಯಲ್ಲಿವೆ. ಭಕ್ತರು ಇದನ್ನು ಅನುಸರಿಸುತ್ತಾರೆ. ಹಿರಿದೇವಿ ಈಗಲೂ ಗ್ರಾಮ ದೇವತೆಯಾಗಿದ್ದಾಳೆ. ಆ ಗೌರವ ಆಕೆಗೆ ಸಿಕ್ಕುತ್ತದೆ. ಮಾಯಕ್ಕ ಗ್ರಾಮ ವ್ಯಾಪ್ತಿ ಮೀರಿ ಭಕ್ತರ ಬಳಗ ಹೊಂದಿದ್ದಾಳೆ.
ಇದು ಒಂದು ರೀತಿಯಲ್ಲಿ ಶ್ರೀ ಗುರು ರಾಘವೇಂದ್ರ ರಾಯರ ಮಂತ್ರಾಲಯ ನಿರ್ಮಾಣವಾಗುವ ಪೂರ್ವದ ಸನ್ನಿವೇಶದ ನೆನಪು ಮಾಡುತ್ತದೆ.
ಅದೋನಿಯ ನವಾಬ ಸಿದ್ಧಿ ಮಸೂದ್ ಖಾನ್ ನಿಂದ ದಾನವಾಗಿ ಪಡೆದ ತುಂಗಭದ್ರಾ ನದಿ ತಟದ ಮಂಚಲೆ ಗ್ರಾಮ ಪ್ರದೇಶದಲ್ಲಿ ಶಿಷ್ಯರೊಂದಿಗೆ ನೆಲೆಸಲು ಶ್ರೀ ರಾಘವೇಂದ್ರ ರಾಯರು ಹೊರಟಾಗ, ಅಲ್ಲಿನ ಗ್ರಾಮ ಹಾಗೂ ಅಧಿದೇವತೆ ಮಂಚಾಲಮ್ಮ ತಡೆಯೊಡ್ಡುತ್ತಾಳೆ. ಅದು ತನ್ನ ಕ್ಷೇತ್ರ ವ್ಯಾಪ್ತಿಯಂದು ಹೇಳುತ್ತಾಳೆ. ಆಗ ರಾಘವೇಂದ್ರ ರಾಯರು ಶ್ರೀಹರಿ ದೇವರು ತಮ್ಮನ್ನು ಕಳುಹಿಸಿ ಕೊಟ್ಟಿದ್ದು ಇಲ್ಲಿ ನೆಲೆಸಲು ತಿಳಿಸಿರುವುದಾಗಿ ಆಕೆಗೆ ಹೇಳುತ್ತಾರೆ.
ರಾಯರ ಮಾತನ್ನು ಆಲಿಸಿದ ಮಂಚಾಲಮ್ಮ ಅದನ್ನು ಮನ್ನಿಸಿ ಚಿಂಚಲಿಯ ಗ್ರಾಮ ದೇವಿಯಂತೆ ಆಕೆಯೂ ಭಕ್ತರು ಮೊದಲು ತನ್ನ ದರ್ಶನ ಮಾಡಬೇಕು ಎನ್ನುವುದರ ಜತೆಗೆ ಇತರೆ ಗೌರವಗಳು ಮೊದಲು ತನಗೆ ಸಲ್ಲಬೇಕೆನ್ನುವ ಷರತ್ತು ವಿಧಿಸುತ್ತಾಳೆ. ರಾಯರು ಇದಕ್ಕೆ ಒಪ್ಪಿಕೊಂಡು ಅಲ್ಲಿ ನೆಲೆಸಿದ್ದಾರೆ. ಮಂಚಾಲೆ ಗ್ರಾಮದ ಹೊರ ಜಗತ್ತಿನಲ್ಲೂ ದೊಡ್ಡ ಪ್ರಮಾಣದಲ್ಲಿ ಭಕ್ತ ಸಮೂಹವನ್ನು ಹೊಂದಿದ್ದಾರೆ. ಈಗದು ಶ್ರೀ ಕ್ಷೇತ್ರ ಮಂತ್ರಾಲಯವಾಗಿ ಬೆಳೆದು ನಿಂತಿದೆ. ಹರಿ ಭಕ್ತಿಗೆ ಹೆಸರಾದ ಪ್ರಹ್ಲಾದರಾಜರು ಈ ಸ್ಥಳದಲ್ಲಿ ಬಹುದೊಡ್ಡ ಯಜ್ಞ ಮಾಡಿದ್ದರು. ಪೌರಾಣೇತಿಹಾಸ ಕಾಲದ ಮಹತ್ವದ ಅನೇಕ ಘಟನಾವಳಿಗಳು ಇಲ್ಲಿ ನಡೆದಿದ್ದವು. ಹೀಗಾಗಿ ಆ ಸ್ಥಳ ಪವಿತ್ರ ಮತ್ತು ಮಹತ್ವದ್ದೆಂದು ರಾಯರಿಗೆ ಗೊತ್ತಿತ್ತು. ನೆಲೆ ನಿಲ್ಲಲು ಅದರ ಆಯ್ಕೆ ಮಾಡಿದ್ದರು.
ಇದೇನೇ ಇರಲಿ ಈಗ ಮತ್ತೆ ನಾವು ಚಿಂಚಲಿ ಮಾಯಕ್ಕನ ಬಳಿಗೆ ಬರೋಣ. ಈಕೆ ಪೌರಾಣೇತಿಹಾಸ ಕಾಲದ ಯಾವ ಶಕ್ತಿ ದೇವತೆಯ ಅವತಾರ ಎನ್ನುವ ಬಗ್ಗೆ ಶಾಸ್ತ್ರೀಯವಾಗಿ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಕಥೆ, ದಂತಕಥೆಗಳು ಇವೆ. ಭಕ್ತರು ಈಕೆಯಲ್ಲಿ ಆದಿಶಕ್ತಿ, ಪರಾಶಕ್ತಿ, ಕಾಳಿ, ಮಹಾಕಾಳಿ, ಮಾಯವ್ವನ ಅವತಾರಗಳನ್ನು ಕಾಣುತ್ತಾರೆ. ಕೆಲ ಕಥೆಗಳು ಆಕೆ ರಾಕ್ಷಸರ ಸಂಹಾರಕ್ಕೆ ಅರ್ಧನಾರೀಶ್ವ ರೂಪದಲ್ಲಿ ಧರೆಗಿಳಿದಳು ಎನ್ನುತ್ತವೆ.
ಇಲ್ಲಿರುವ ಇಬ್ಬರು ದೇವತೆಯರಿಗಾಗಿ ಭಕ್ತರು ಕಾಲಾಂತರದಲ್ಲಿ ಆಕರ್ಷಕವಾದ ದೇವಾಲಯದ ನಿರ್ಮಾಣ ಮಾಡಿದ್ದಾರೆ. ಟ್ರಸ್ಟ್ ರಚನೆ ಮಾಡಿ ಅಭಿವೃದ್ಧಿ ನಡೆಸಿದ್ದಾರೆ. ನಂಬಿಕೆಯ ಪ್ರಕಾರ ಈಕೆಯ ಮೂಲ ಕೊಂಕಣವಾಗಿರುವುದರಿಂದ ಅಲ್ಲಿಂದಲೂ ಭಕ್ತರ ದಂಡು ದೊಡ್ಡ ಪ್ರಮಾಣದಲ್ಲಿ ಬಂದು ಹೋಗುತ್ತದೆ.
ದೇವಸ್ಥಾನ ಕರ್ನಾಟಕದಲ್ಲಿ ಇರುವುದರಿಂದ ಉತ್ತರ ಕರ್ನಾಟಕದ ಜನ ಸವದತ್ತಿ ಯಲ್ಲಮ್ಮನ ಗುಡ್ಡದಂತೆ ಇಲ್ಲಿಗೂ ಭಾವುಕ ಭಕ್ತಿಯಲ್ಲಿ ಬಂದು ಹೋಗುತ್ತಾರೆ.
ವಿಠ್ಠಲನ ಮೂಲ ಕರ್ನಾಟಕದ ನೆಲವಾದರೂ ಆತ ಹೋಗಿ ಮಹಾರಾಷ್ಟ್ರದ ಭೀಮಾನದಿ ತಟದ ಪಂಢರಪುರದಲ್ಲಿ ನೆಲೆಸಿದ್ದಾನೆ. ಹಾಗೆಯೇ ಮಾಯಕ್ಕ ಮಹಾರಾಷ್ಟ್ರದ ನೆಲದವಳಾದರೂ ಕರ್ನಾಟಕಕ್ಕೆ ಬಂದು ನೆಲೆಸಿದ್ದಾಳೆ. ಎಲ್ಲ ಧರ್ಮೀಯರಿಗೂ ಸಲ್ಲಿದ್ದಾಳೆ.
ಸೀಮೆ ಎಂಬುದು ನಮ್ಮ ಅರಿವಿನ ಸೀಮಿತತೆ ಅಥವಾ ಪರಿಧಿ ಮಾತ್ರ. ಆದರೆ ದೇವರಿಗೆ ಇದ್ಯಾವುದೂ ಇಲ್ಲ. ಅವರಿಗೆ ಎಲ್ಲವೂ ಒಂದೇ. ಎಲ್ಲವೂ ಅವರದ್ದೆ.
ಮಾಯಕ್ಕನ ದೇವಾಲಯ ಕೃಷ್ಣಾ ನದಿಗೆ ಕೇವಲ 2.5 ಕಿ.ಮಿ. ದೂರದಲ್ಲಿದೆ. ದಂತಕಥೆಗಳಲ್ಲಿ ಈ ದೇವಿಯ ಕೃಪೆ ಪಡೆದಿರುವ ಹಾಲಹಳ್ಳ 1 ಕಿ.ಮಿ. ಅಂತರದಲ್ಲಿದೆ. ಸವದತ್ತಿಯ ಯಲ್ಲಮ್ಮನ ದರ್ಶನಕ್ಕೆ ಎಣ್ಣೆ ಹೊಂಡ ಇಲ್ಲವೆ ಸಮೀಪದ ಮಲಪ್ರಭಾ ನದಿಯಲ್ಲಿ ಮಿಂದು ಹೊದಂತೆ ಮಾಯಕ್ಕನ ದರ್ಶನಕ್ಕೆ ಭಕ್ತರು ಹಾಲಹಳ್ಳದಲ್ಲಿ ಸ್ನಾನಮಾಡಿ ಹೋಗುತ್ತಾರೆ.
ಯಾವುದೇ ಆಕರಗಳನ್ನು ಮುಂದಿಟ್ಟುಕೊಂಡರೂ ಮಾಯಕ್ಕನ ಮೂಲದ ಸ್ಪಷ್ಟತೆ ಪಡೆಯುವುದು ಕಷ್ಟದ ಕೆಲಸ. ಶಕ್ತಿ ದೇವತೆಗಳ ಆರಾಧನೆಯಲ್ಲಿ ಸಾಮಾನ್ಯವಾಗಿ ಅನುಸರಿಸಲಾಗುವ ವಿಧಿವಿಧಾನಗಳನ್ನು ಅವಲೋಕಿಸಿದರೆ, ಮಾಯಕ್ಕನ ವಿಧಿವಿಧಾನಗಳಲ್ಲಿ ಕೆಲವಷ್ಟು ವ್ಯತ್ಯಾಸಗಳು ಕಂಡು ಬರುತ್ತವೆ.
ಇತರೆ ಶಕ್ತಿ ದೇವತೆಗಳ ಹೆಸರಲ್ಲಿ ವ್ರತಾಚರಣೆಗಳು ಹೆಚ್ಚಾಗಿ ಶುಕ್ರವಾರ ಮತ್ತು ಮಂಗಳವಾರಗಳಂದು ಜರುಗುತ್ತವೆ. ಆದರೆ ಮಾಯಕ್ಕನ ಹೆಸರಲ್ಲಿ ವ್ರತ ಮತ್ತು ಉಪವಾಸಗಳು ಭಾನುವಾದಂದು ನಡೆಯುತ್ತವೆ. ಇದು ಆಕೆಗೆ ಪ್ರಿಯವಾದ ದಿನವಾಗಿದೆ.
ಇತರೆ ಶಕ್ತಿ ದೇವತೆಗಳು ಹುಲಿ, ಸಿಂಹಾರೂಢಿಣಿಯರಾಗಿದ್ದರೆ ಮಾಯಕ್ಕ ಶ್ವೇತಾಶ್ವರೂಢಿಣಿಯಾಗಿದ್ದು ಅದು ಆಕೆಯ ಪ್ರೀತಿಯ ವಾಹನವಾಗಿದೆ. ಹೀಗಾಗಿ ಅದು ಭಕ್ತರಿಗೂ ಪೂಜ್ಯವಾಗಿದೆ.
ಭಾರತ ಹುಣ್ಣಿಮೆಯ ದಿನ ಜಾತ್ರೆ ನಡೆಯುತ್ತದೆ. ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಂದ ಭಕ್ತರು ಸೇರುತ್ತಾರೆ. ಕಾರಹುಣ್ಣಿಮೆ ಮತ್ತು ನೂಲಹುಣ್ಣಿಮೆಗಳು ಈ ದೇವಿಗೆ ಪ್ರಿಯವಾಗಿವೆ. ನವರಾತ್ರಿ ಉತ್ಸವವೂ ಸಂಭ್ರಮದಲ್ಲಿ ನಡೆಯುತ್ತದೆ. ನವದುರ್ಗೆಯರ ಶೃಂಗಾರ ಮನ ಸೆಳೆಯುತ್ತದೆ.
ಮಾಯಕ್ಕನ ಚಿಂಚಲಿ ಜಿಲ್ಲಾ ಕೇಂದ್ರ ಬೆಳಗಾವಿಗೆ ಕೇವಲ 110 ಕಿ.ಮಿ. ದೂರದಲ್ಲಿದೆ. ಇಲ್ಲಿಂದ ರಾಯಬಾಗ ಪಟ್ಟಣ 100 ಕಿ.ಮಿ. ಅಲ್ಲಿಂದ ಚಿಂಚಲಿ ಬರೀ 10 ಕಿ.ಮಿ. ಮಾತ್ರ. ಜಾಗೃತ ಸ್ಥಳವಾಗಿರುವುದರಿಂದ ಭಕ್ತರ ಸಂಖ್ಯೆ ದೇವಾಲಯದ ಆವರಣದಲ್ಲಿ ನಿತ್ಯ ಇದ್ದೇ ಇರುತ್ತದೆ.
ಪ್ರಯಾಣಕ್ಕೆ ರೈಲು, ಬಸ್ ಸೇರಿದಂತೆ ಇತರೆ ಸಾರಿಗೆ ಅನುಕೂಲ, ಹೋಟೆಲ್ ಮತ್ತು ವಸತಿ ಗೃಹಗಳ ವ್ಯವಸ್ಥೆ ಇದೆ. ಶ್ರೀ ದೇವಿಯ ದರ್ಶನಾಕಾಂಕ್ಷಿಗಳು ಆರಾಮವಾಗಿ ಹೋಗಿ ಬರಬಹುದು.
ನಮಸ್ಕಾರ...
ಈ ವೀಡಿಯೋ 2023ನೇ ಸಾಲಿನ ದಸರಾ ಹಬ್ಬದ ಸಂದರ್ಭದ್ದಾಗಿದೆ.