02/07/2025
ಸಮಸ್ಯೆಗಳ ಕಗ್ಗಂಟಿನಲ್ಲಿ ಸಿಲುಕಿದ ಕಂಗ್ರಾಳಿ ಬಿ.ಕೆ ಪಾರ್ವತಿ ನಗರ…
ಬೆಳಗಾವಿಯ ಕಂಗ್ರಾಳಿ ಬಿ.ಕೆ ಗ್ರಾಮ ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ. ಅಸ್ವಚ್ಛತೆ, ಕಾಮಗಾರಿ ವಿಳಂಬ, ಉರಿಯದ ಬೀದಿ ದೀಪ, ಅಪಾಯಕಾರಿ ನಾಲೆಯಿಂದಾಗಿ ಇಲ್ಲಿನ ಜನರಿಗೆ ಅನಾಥಪ್ರಜ್ಞೆ ಕಾಡುತ್ತಿದೆ. ಸಮಸ್ಯೆಯ ಕಗ್ಗಂಟಿನಲ್ಲಿ ಸಿಲುಕಿದ ಕಂಗ್ರಾಳಿ ಬಿ.ಕೆ. ಕುರಿತು ಇಲ್ಲಿದೆ ಒಂದು ವರದಿ.
ಅರ್ಧಕ್ಕೆ ನಿಂತ ಕಾಮಗಾರಿಗಳು, ಹದಗೆಟ್ಟು ಹೋದ ರಸ್ತೆಗಳು, ತಡೆಗೋಡೆ ಇಲ್ಲದೇ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ನಾಲೆ, ಉರಿಯದ ಬೀದಿ ದೀಪಗಳು…ವಿಲೇವಾರಿಯಾಗದ ತ್ಯಾಜ್ಯ…
ಹೌದು, ಇಷ್ಟೇಲ್ಲ ಸಮಸ್ಯೆಗಳನ್ನು ಬೆಳಗಾವಿಯ ಕಂಗ್ರಾಳಿ ಬಿ.ಕೆದ ಪಾರ್ವತಿ ನಗರದ ಜನರು ಎದುರಿಸುತ್ತಿದ್ದಾರೆ. ಕೆ.ಎಚ್. ಕಂಗ್ರಾಳಿಯಿಂದ ಶಾಹೂನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿರುವ ನಾಲೆಗೆ ಯಾವುದೇ ತರಹದ ತಡೆಗೋಡೆ ಇಲ್ಲದ ಕಾರಣ ವಾಹನ ಸವಾರರು ಇದರ ಮಾಹಿತಿಯಿಲ್ಲದೇ, ನಾಲೆಯಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇನ್ನು ವಿದ್ಯುತ್ ಕಂಬಗಳನ್ನು ವಾಲಿರುವ ದೃಶ್ಯ ಜನರಲ್ಲಿ ಭಯವನ್ನುಂಟು ಮಾಡುತ್ತದೆ. ರಾತ್ರಿಯ ವೇಳೆ ಬೀದಿ ದೀಪಗಳು ಕೆಲವೊಂದು ಬಾರಿ ಉರಿಯುತ್ತವೆ.
ಕೇಲವೊಂದು ಬಾರಿ ಉರಿಯುವುದಿಲ್ಲ. ಇದರಿಂದಾಗಿ ಜನರು ಅಪಾಯವನ್ನು ಎದುರಿಸುತ್ತಿದ್ದಾರೆ. ಇಲ್ಲಿ ಎದೆ ಎತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ, ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸ್ಥಳೀಯರೇ ಗಿಡಗಂಟಿಗಳನ್ನು ತೆರವುಗೊಳಿಸಿದ್ದರಿಂದ ಜನರಿಗೆ ನಾಲೆಯಿರುವುದಾಗಿ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಶಾಂತಾರಾಮ್ ಪಾಟೀಲ್ ಹೇಳಿದರು.
ಇನ್ನು ಪಾರ್ವತಿ ನಗರದಲ್ಲಿ ನಿರ್ವಹಣೆಯಿಲ್ಲದೇ ಹಾಳು ಕೊಂಪೆಯಾಗಿರುವ ನಾಲೆಯ ಮಾಹಿತಿಯಿಲ್ಲದೇ, ಆಟವಾಡಲು ಬಂದ ಚಿಕ್ಕ ಮಕ್ಕಳು ಬಿದ್ದು, ಗಾಯಗೊಂಡ ಉದಾಹರಣೆಗಳಿವೆ. ವಾಹನ ಸವಾರರು ಇದರ ಮಾಹಿತಿ ಸಿಗದೇ, ಪೇಚಿಗೆ ಸಿಲುಕುತ್ತಿದ್ದಾರೆ. ಈ ನಾಲೆಯೂ ತ್ಯಾಜ್ಯ ವಿಲೇವಾರಿ ಘಟಕವಾಗಿ ಪರಿಣಮಿಸಿದೆ. ಇದನ್ನು ಸ್ವಚ್ಛಗೊಳಿಸುವವರು ಯಾರಿಲ್ಲದಂತಾಗಿದೆ. ಗ್ರಾಮ ಪಂಚಾಯಿತಿಯೂ ಇತ್ತ ಗಮನಹರಿಸಿ, ತಡೆಗೋಡೆಯನ್ನು ನಿರ್ಮಿಸಬೇಕು. ಪ್ರಖರವಾದ ಪ್ರಕಾಶ ಬೀರುವ ಬೀದಿ ದೀಪಗಳನ್ನು ಅಳವಡಿಸಬೇಕೆಂದು ಸ್ಥಳೀಯ ರಹಿವಾಸಿ ಜ್ಞಾನೇಶ್ವರ್ ರಜಪೂತ್ ಹೇಳಿದ್ದು ಹೀಗೆ. ಬೈಟ್
ಇನ್ನು ಕಂಗ್ರಾಳಿ ಬಿ.ಕೆ ಪಾರ್ವತಿ ನಗರದಲ್ಲಿ ನೀರಿನ ಪೈಪಲೈನ್ ಅಳವಡಿಕೆಗೆ ಕಾರ್ಯ ಕೂಡ ಆಮೆಗತಿಯಲ್ಲಿ ನಡೆಯುತ್ತಿದೆ. ಕಳೆದ 2 ತಿಂಗಳ ಹಿಂದೆ ಕಾಮಗಾರಿಗಾಗಿ ಗುಂಡಿಗಳನ್ನು ಅಗೆಯಲಾಗಿದೆ. ಅತ್ತ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣವೂ ಗೊಳಿಸುತ್ತಿಲ್ಲ. ಇತ್ತ ಗುಂಡಿಗಳನ್ನು ಮುಚ್ಚುತ್ತಿಲ್ಲ. ಅಗೆದ ಗುಂಡಿಗಳನ್ನು ಹಾಗೆಯೇ ಬಿಡಲಾಗಿದ್ದು, ವಾಹನ ಸವಾರರು ಅಡ್ಡರಸ್ತೆಯನ್ನು ದಾಟಲು ಹೋಗಿ ಬೀಳುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರರಂತೂ ಫೋನ್ ಕರೆಯನ್ನು ಸ್ವೀಕರಿಸುವುದಿಲ್ಲ. ಸ್ಥಳೀಯರೇ ಕೆಲ ಗುಂಡಿಗಳನ್ನು ಮುಚ್ಚಿಕೊಂಡಿದ್ದಾರೆ ಎಂದು ದೂರಿದರು.
ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಾಲೆಗೆ ತಡೆಗೋಡೆ ನಿರ್ಮಿಸಿ, ಬೀದಿ ದೀಪಗಳನ್ನು ಅಳವಡಿಸಿ, ತ್ಯಾಜ್ಯ ವಿಲೇವಾರಿಯನ್ನು ಮಾಡಿ ಜನಹಿತವನ್ನು ಕಾಪಾಡಬೇಕೆಂಬುದು ಕಂಗ್ರಾಳಿ ಬಿ.ಕೆ ಪಾರ್ವತಿ ನಗರದ ಜನರ ಆಗ್ರಹವಾಗಿದೆ.