19/10/2025
ವಿಜಯಪುರ: ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಹಿಂದೂ ಜಾಗೃತ ವೇದಿಕೆ ನೇತೃತ್ವದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹಲವು ಮುಖಂಡರು ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಕನ್ಹೇರಿ ಶ್ರೀಗಳ ಜಿಲ್ಲಾ ಪ್ರವೇಶ ನಿರ್ಬಂಧದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರೇ ಕಾರಣ, ಈ ಹಿಂದೆಯೂ ರಂಭಾಪೂರಿ, ಶ್ರೀಶೈಲ ಜಗದ್ಗುರುಗಳ ಬಗ್ಗೆ ಅತ್ಯಂತ ಅಗೌರವಯುತವಾಗಿ ಅವರು ನಡೆದುಕೊಂಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ದಿನಗಳಲ್ಲಿ ಶ್ರೀಗಳ ನಿಷೇಧ ಆದೇಶ ವಾಪಾಸ್ಸು ಪಡೆಯದೇ ಹೋದರೆ ಬಬಲೇಶ್ವರ ಮತಕ್ಷೇತ್ರದಿಂದಲೇ ಹೋರಾಟ ಆರಂಭಿಸುವೆ ಎಂದು ನಡಹಳ್ಳಿ ಗುಡುಗಿದರು.
ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ರಂಭಾಪುರಿ, ಶ್ರೀಶೈಲ ಮತ್ತಿತರ ಜಗದ್ಗುರುಗಳ ಬಗ್ಗೆ ನಡೆದುಕೊಂಡ ರೀತಿ ಇಡೀ ಜನರಿಗೆ ಗೊತ್ತಿದೆ, ಈಗಲೂ ಅವರೇ ಕನ್ಹೇರಿ ಶ್ರೀಗಳ ಪ್ರವೇಶ ನಿರ್ಬಂಧದ ಹಿಂದೆ ಇದ್ದಾರೆ ಎಂದು ದೂರಿದರು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆಸಿದ ನೀವು ಹಿಂದೂ ಅಲ್ಲ ಎನ್ನುತ್ತೀರಿ, ಆದರೆ ಮನೆಯಲ್ಲಿ ಕೃಷ್ಣನ ಪೂಜೆ ಮಾಡುತ್ತೀರಿ, ಹಾಗಾದರೆ ನೀವು ಹಿಂದೂ ಎಂಬುದನ್ನು ಒಪ್ಪಿಕೊಳ್ಳಿ, ಆಡುವ ಮಾತು ಒಂದು, ನಡೆದುಕೊಳ್ಳುವುದು ಇನ್ನೊಂದು, ಈ ರೀತಿ ಒಡೆದಾಳುವ ಬಗ್ಗೆ ಲಿಂಗಾಯತ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು. ಧರ್ಮ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಿ, ಲಿಂಗಾಯತ ಎಂದು ಬರೆಯಿಸಿ ಎಂದು ಹೇಳುವುದು ಒಡೆದಾಳುವ ಪ್ರಯತ್ನ, ಈ ಪ್ರಯತ್ನಕ್ಕೆ ಬಲಿಯಾಗಬೇಡಿ ಎಂದರು.
ಸಾವಯವ ಬೀಜ ಪ್ರಮಾಣ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಕನ್ಹೇರಿ ಶ್ರೀಗಳು ಸಿದ್ಧೇಶ್ವರ ಸ್ವಾಮೀಜಿಗಳ ಅಪ್ಪಟ ಶಿಷ್ಯರು. ಅವರಿಗೆ ಮಾಡಿರುವ ಅಪಮಾನ ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿಗಳಿಗೆ ಮಾಡಿದ ಅಪಮಾನವಾಗಿದೆ. ಇದನ್ನು ನಾವು ಸಹಿಸುವುದಿಲ್ಲ, ನಿರ್ಬಂಧ ಆದೇಶ ಹಿಂಪಡೆಯದಿದ್ದರೆ ದೊಡ್ಡ ಹೋರಾಟಕ್ಕೆ ಅಣಿಯಾಗಲಾಗುವುದು ಎಂದರು.
ಸಹಕಾರಿ ಧುರೀಣ ರಮೇಶ ಬಿದನೂರ ಮಾತನಾಡಿ, ಕನ್ಹೇರಿ ಶ್ರೀಗಳ ಪೂರ್ವಾಶ್ರಮ ವಿಜಯಪುರ, ಇಲ್ಲಿಯೇ ಅವರಿಗೆ ಪ್ರವೇಶ ನಿರ್ಬಂಧಿಸಿರುವುದು ಅತ್ಯಂತ ನೋವು ತರುವ ಸಂಗತಿಯಾಗಿದೆ. ಇಡೀ ವಿಜಯಪುರ ಅಷ್ಟೇ ಅಲ್ಲ ಇಡೀ ಕರ್ನಾಟಕ ಅವರ ನಿಷೇಧ ವಾಪಾಸ್ಸು ಪಡೆಯುವಂತೆ ಒತ್ತಾಯಿಸುತ್ತಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಮುಖಂಡರಾದ ಉಮೇಶ ಕಾರಜೋಳ, ಗುರುಲಿಂಗಪ್ಪ ಅಂಗಡಿ, ಉಮೇಶ ವಂದಾಲ, ರಾಘವ ಅಣ್ಣಿಗೇರಿ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ವಿಜಯಕುಮಾರ ಕುಡಿಗನೂರ, ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಮಖಣಾಪೂರ ಇದ್ದರು | TV NEWS KARNATAKA OCT 19 2025