22/08/2026
ವಿಜಯಪುರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸಂಚಾರಿ, ಅರೆ ಸಂಚಾರಿ ಹಾಗೂ ಕುರಿಗಾರರ ಸಮಸ್ಯೆಗಳ ಕುರಿತು ಐತಿಹಾಸಿಕ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ, ಜಿಲ್ಲೆಯ ಕುರಿಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ನೇರವಾಗಿ ಆಲಿಸಲಿದ್ದಾರೆ.
ಆಗಸ್ಟ್ 24ರ ಸೋಮವಾರ ಸಂಜೆ 4 ಗಂಟೆಗೆ, ವಿಜಯಪುರ ತಾಲೂಕಿನ ಇಂಡಿ ರಸ್ತೆಯ ಬಳಿಯ ಪಾಂಗರುನದೊಡ್ಡಿ ಬಾಳುಮಾಮಾ ದೇವಸ್ಥಾನದ ಸಮೀಪ ಈ ಸಂವಾದ ಕಾರ್ಯಕ್ರಮ ನಡೆಯಲಿದೆ.
ಕುರಿಗಾರರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕುರಿ ಕಳ್ಳತನ, ಅಪಘಾತ ಪ್ರಕರಣಗಳು, ಕುರಿಗಾರರ ಮಕ್ಕಳ ಶಿಕ್ಷಣ ಹಾಗೂ ಹಾಸ್ಟೆಲ್ ಸೌಲಭ್ಯ, ಬರಗಾಲದ ಸಂದರ್ಭದಲ್ಲಿ ಕುರಿ-ಮೇಕೆಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕಾರ್ಯಕ್ರಮದಲ್ಲಿ ಆಗ್ರಹಿಸಲಾಗುವುದು.
ಇದರ ಜೊತೆಗೆ ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ, ಕಾಲಕಾಲಕ್ಕೆ ಪಶುವೈದ್ಯಕೀಯ ಚಿಕಿತ್ಸೆ, ರಕ್ಷಣಾ ವ್ಯವಸ್ಥೆ ಹಾಗೂ ಅಗತ್ಯವಿರುವವರಿಗೆ ಬಂದೂಕು ಪರವಾನಗಿ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗುವುದು.
ಕುರಿಗಾರರು ಬೇರೆ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ವಲಸೆ ಹೋಗುವ ಸಂದರ್ಭದಲ್ಲಿ ಟೆಂಟ್, ಗ್ಯಾಸ್ ಒಲೆ ಮತ್ತು ವಾಹನ ಸೌಲಭ್ಯ ಕಲ್ಪಿಸಬೇಕು. ಗೋಮಾಳ ಹಾಗೂ ಹುಲ್ಲುಗಾವಲು ಪ್ರದೇಶಗಳ ಒತ್ತುವರಿಯನ್ನು ತೆರವುಗೊಳಿಸಿ, ಕುರಿ-ಮೇಕೆಗಳಿಗೆ ಮೇಯಲು ಸೂಕ್ತ ಜಾಗ ಒದಗಿಸಬೇಕು ಎಂಬ ಒತ್ತಾಯವೂ ಇರಲಿದೆ.
ಅಲ್ಲದೆ ಕುರಿಗಾರರಿಗೆ ವೈಜ್ಞಾನಿಕ ತರಬೇತಿ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಸರ್ಕಾರ ರೂಪಿಸಿರುವ ಕುರಿಗಾರರ ರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು.
ಕುರಿಗಾರರ ಹಟ್ಟಿಗಳಲ್ಲಿ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ, ರೋಗ, ಅಪಘಾತ ಮತ್ತು ಕಳ್ಳತನದಿಂದ ಕುರಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಉದ್ಯೋಗಾವಕಾಶ ಕಲ್ಪಿಸುವಂತೆಯೂ ಆಗ್ರಹಿಸಲಾಗುವುದು.
ಈ ಸಂವಾದ ಕಾರ್ಯಕ್ರಮದಲ್ಲಿ ಕುರಿಗಾರರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಹಾಗೂ ಡಾ. ನಾಗಲಕ್ಷ್ಮಿ ಚೌಧರಿ ಅವರ ಮುಂದೆ ನೇರವಾಗಿ ಮಂಡಿಸಲು ಅವಕಾಶವಿದೆ. ಸರ್ಕಾರದ ವಿವಿಧ ಸೌಲಭ್ಯಗಳ ಬಗ್ಗೆಯೂ ಸ್ಥಳದಲ್ಲೇ ಮಾಹಿತಿ ಪಡೆಯಬಹುದಾಗಿದೆ.
ಹೀಗಾಗಿ ವಿಜಯಪುರ ಜಿಲ್ಲೆಯ ಎಲ್ಲಾ ಸಂಚಾರಿ, ಅರೆ ಸಂಚಾರಿ ಹಾಗೂ ಕುರಿಗಾರ ಬಂಧುಗಳು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕುರಿಗಾರರ ಸಂಘ ಮನವಿ ಮಾಡಿದೆ. | TV NEWS KARNATAKA AUG 22 2026