05/09/2025
ನಿಸ್ವಾರ್ಥ ಸೇವೆ ಶಿಕ್ಷಕರದ್ದು : ಶಾಸಕ ಸ್ವರೂಪ್ ಪ್ರಕಾಶ್
ಹಾಸನ ಸೆ.05 ಶಿಕ್ಷಕರ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಶಿಕ್ಷಕರು ಪವಿತ್ರ ಕೆಲಸವನ್ನು ಮಾಡುತ್ತಿದ್ದಾರೆ ಎಂದರಲ್ಲದೆ, ಎಲ್ಲರೂ ತಾವು ಓದಿದ ಶಾಲೆಗೆ, ವಿದ್ಯೆ ಕಲಿಸಿದ ಗುರುಗಳಿಗೆ ಧನ್ಯವಾದಗಳನ್ನು ತಿಳಿಸಬೇಕು ಎಂದು ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ ಅವುಗಳ ಜೀರ್ಣೋದ್ಧಾರ ಮಾಡುವ ಕೆಲಸವನ್ನು ಕೈಗೆತ್ತುಕೊಳ್ಳುತ್ತೇನೆ ಎಂದರಲ್ಲದೆ, ಚುನಾವಣೆ ವೇಳೆ ಹಾಗೂ ಮತ್ತಿತರ ಸಂದರ್ಭದಲ್ಲಿ ಶಿಕ್ಷಕರುಗಳು ತಮ್ಮ ಕಷ್ಟಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದೀರಿ ನಿಮಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದರು.
ಇತ್ತೀಚೆಗೆ ರೈತರು ಮಕ್ಕಳ ಶಾಲೆಗೆ ಕಳುಹಿಸುವ ಬದಲು ಹೊಲದ ಕೆಲಸ ಮಾಡಿಸಿ ಕೊಳ್ಳುತ್ತಿದ್ದಾರೆ. ಹಾಗೆ ಮಾಡದೇ ಶಾಲೆಗೆ ಕಳುಹಿಸಬೇಕು ಎಂದರಲ್ಲದೆ, ತಮ್ಮ ತಂದೆಯ ಹೆಸರಿನಲ್ಲಿ ಎರಡು ಶಾಲೆಗಳನ್ನು ತೆರೆೆಯುವುದಾಗಿ ತಿಳಿಸಿದರು. ಇದೇ ವೇಳೆ ಎಲ್ಲಾ ಶಿಕ್ಷಕರು ಗುರುಭವನವನದ ಕೆಲಸ ಮಾಡಿಸಿ ಕೊಡಲು ಮನವಿ ಮಾಡಿದರು. ಆ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಮುಂದಿನ ವರ್ಷದೊಳಗೆ ಕೆಲಸ ಮಾಡಿಸಿ ಕೊಡುತ್ತೇನೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಮಾತನಾಡಿ ಶಿಕ್ಷಕರು ನಮ್ಮ ಜೀವನದ ಅವಿಭಾಜ್ಯ ಅಂಗ. ಮೊದಲಿಂದಲೂ ಶಿಕ್ಷಣವೆಂದರೆ ನನಗೆ ಒಲವು, ನಾವು ಉನ್ನತ ಪದವಿ ಹೊಂದಲು ಶಿಕ್ಷಕರೇ ಕಾರಣ ಹಾಗಾಗಿ ನಮ್ಮ ಗುರುಗಳಿಗೆ ನಮನಗಳ ಹೇಳಬೇಕು. ನಿಸ್ವಾರ್ಥವಾಗಿ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು ಜೀವನ ಮಾಡುತ್ತಿರುವವರು ಶಿಕ್ಷಕರು. ಪ್ರತಿಯೊಂದು ವಿಷಯದಲ್ಲಿಯೂ ಗುರುಗಳನ್ನು ಕಾಣುವಂತಹ ಸಂಸ್ಕೃತಿ ಇರುವ ದೇಶ ನಮ್ಮದು. ಗುರುವಿನಿಂದ ಶಿಕ್ಷಣ ಕಲಿಯುವುದೇ ನಿಜವಾದ ಕಲಿಕೆ ಎಂದರು.
ಸAಪೂರ್ಣ ವ್ಯಕ್ತಿತ್ವ ರೂಪಿಸಲು ಗುರುವಿನ ಶಿಕ್ಷಣದಿಂದ ಮಾತ್ರ ಸಾಧ್ಯ. ಯಾವುದೇ ತಂತ್ರಜ್ಞಾನ ಮುಂದುವರೆದರು, ಕೃತಕ ಬುದ್ಧಿಮತ್ತೆ ಬಂದರು ಶಿಕ್ಷಕರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದ ಅವರು ಶಿಕ್ಷಕರಿಂದ ಮಾತ್ರ ಕಲಿಯುವಂತಹದಿಲ್ಲ ಅದರ ಜೊತೆಗೆ ಪ್ರತಿಯೊಬ್ಬರಿಂದಲೂ ಪ್ರತಿಕ್ಷಣವು ಕಲಿಯುವಂತಹದ್ದು ಇದೆ. ನಿಜವಾಗಿಯೂ ಸಂತೋಷವಾಗಿರುವ ಶಿಕ್ಷಕನೇ ಒಳ್ಳೆಯ ಉತ್ತಮ ಶಿಕ್ಷಕರು ಅವರೇ ಒಳ್ಳೆಯ ಶಿಕ್ಷಣ ನೀಡಲಿಕ್ಕೆ ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಂದ್ರಕುಮಾರ್ ಎಂಬುವವರು ಉತ್ತರ ಬಡಾವಣೆ ಶಾಲೆಗೆ ಹತ್ತು ಸಾವಿರ ದೇಣಿಗೆಯನ್ನು ಆ ಶಾಲೆಯ ಮುಖ್ಯ ಶಿಕ್ಷಕರಿಗೆ ಜಿಲ್ಲಾಧಿಕಾರಿ ಅವರ ಮೂಲಕ ನೀಡಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಅವರು ಪ್ರತಿಯೊಬ್ಬರು ಅವರವರ ಸಾಮರ್ಥ್ಯದ ಮೇರೆಗೆ ಸರ್ಕಾರಿ ಶಾಲೆ ಉಳಿಸಲು ಪ್ರಯತ್ನಿಸಬೇಕು ಎಂದರು.
ಶಿಕ್ಷಣಕ್ಕೆ ಸಾವಿತ್ರಿ ಭಾಪುಲೆ, ಜ್ಯೋತಿ ಭಾಪುಲೆ, ರಾಧಾಕೃಷ್ಣ ಅವರಿಂದ ಎಲ್ಲರ ಕೊಡುಗೆ ಅಪಾರ. ಸರ್ಕಾರಿ ಶಾಲೆ ಉಳಿಸಿ ಅಭಿವೃದ್ಧಿ ಪಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ನೀವೆಲ್ಲರೂ ಮನಸ್ಸು ಮಾಡಿದ್ದೀರಿ. ಆ ಕನಸು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಮಹಾನಗರ ಪಾಲಿಕೆಯ ಮಹಾಪೌರರಾದ ಹೇಮಾಲತ ಕಮಲಕುಮಾರ್ ಎಂ.ಕೆ ಅವರು ಮಾತನಾಡಿ ಶಿಕ್ಷಕರನ್ನು ವಿದ್ಯಾರ್ಥಿಗಳು ಪೂಜ್ಯ ಭಾವನೆಯಲ್ಲಿ ನೋಡಿದರೆ ಉನ್ನತ ಸ್ಥಾನ ಹೊಂದುತ್ತಾರೆ. ಅವರಿಗೆ ದೇವರು ಒಳ್ಳೆಯ ಪ್ರತಿಫಲ ಕೊಡುತ್ತಾನೆ. ತಾಯಿಯೇ ಮೊದಲ ಗುರುವು ಆದರೂ ಕ್ರಮಬದ್ಧವಾಗಿ ಶಿಕ್ಷಣ ಕಲಿಯಲು ಗುರುಗಳು ಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ ಕೃಷ್ಣೇಗೌಡ ಅವರು ಮಾತನಾಡಿ ಓದುವ ಹಂತದಲ್ಲಿಯೇ ಪ್ರಶ್ನಿಸುವ ಮನೋಭಾವ ಬೆಳೆಸಿ ಕೊಂಡಿದ್ದವರು ರಾಧಕೃಷ್ಣನ್ ಅವರು ಶಿಕ್ಷಣಕ್ಕೆ ನೀಡಿರುವ ಕೊಡುಗೆ ಅಪಾರ ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಜಾನಪದ ವಿದ್ವಾಂಸರು ಮತ್ತು ವಿಶ್ರಾಂತ ಪ್ರಾಧ್ಯಾಪಕರಾದ ಹಂಪನಹಳ್ಳಿ ತಿಮ್ಮೇಗೌಡ ಅವರು ಮಾತನಾಡಿ ಗುರುವಿಗೆ ಬಹಳಷ್ಟು ಸ್ಥಾನಮಾನಗಳಿವೆ, ರಾಧಾಕೃಷ್ಣನ್ ಯಾವ ಪ್ರಶಸ್ತಿಗೂ ಅವಲಂಬಿಸಿ ಹೋಗಲಿಲ್ಲ ಬದಲಿಗೆ ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬಂದಿವೆ. ಕಾರಣ ಅವರು ಸಮಾಜದ ಬದಲಾವಣೆಗೆ ತೊಡಗಿಸಿ ಕೊಂಡಿದ್ದರಿAದ ಹಾಗಾಗಿ ಪ್ರತಿಯೊಬ್ಬ ಶಿಕ್ಷಕರು ಜನಪ್ರಿಯ ಶಿಕ್ಷಕರಾಗುವುದಕ್ಕಿಂತ ಪರಿಣಾಮಕಾರಿ ಶಿಕ್ಷಕರಾಗಿ ಎಂದು ಹೇಳಿದರು.
ಶಿಕ್ಷಕರನ್ನು ಗುರುತಿಸಿ ವಿದ್ಯೆ ಕಲಿತ ವಿದ್ಯಾರ್ಥಿಗಳು, ಸಮಾಜ ಈ ದಿನವನ್ನು ಆಚರಿಸಬೇಕು ಎಂದರಲ್ಲದೆ, ಶಿಕ್ಷಕರಿಗೆ ಸಮಾಜದಲ್ಲಿರುವ ಗೌರವ ಸಮಾಜದಲ್ಲಿ ಬೇರೆಯವರಿಗಿಲ್ಲ. ಶಿಕ್ಷಕರ ಹುದ್ದೆ ನಿಷ್ಕಳಂಕವಾದುದು, ಶಿಕ್ಷಕರು ಆತ್ಮ ವಿಶ್ವಾಸ, ಆತ್ಮ ವಿಮರ್ಶೆ, ಬದ್ಧತೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ಶಿಕ್ಷಣ ಇಂದು ಜ್ಞಾನದಿಂದ, ಅರಿವಿನಿಂದ, ವಿವೇಕದಿಂದ ದೂರ ಆಗುತ್ತಿದೆ ಅದನ್ನು ಉಳಿಸುವ ಕೆಲಸ ನೀವು ಮಾಡಬೇಕು ಎಂದು ರಾಧಕೃಷ್ಣನ್ ಅವರ ಕುರಿತು ಸವಿವರವಾಗಿ ಉಪನ್ಯಾಸ ಮಾಡಿದರು.
ಇದೇ ವೇಳೆ ಸಂಸದರಾದ ಶ್ರೇಯಸ್ ಎಂ.ಪಟೇಲ್ ಅವರ ಅನುಪಸ್ಥಿತಿಯಲ್ಲಿ ಅವರು ಕಳುಹಿಸಿದ ಸಂದೇಶವನ್ನು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಲರಾಮ ಅವರು ಪ್ರಸ್ತುತ ಪಡಿಸಿದರು. ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಮತ್ತು ಜಿಲ್ಲೆಯ ಎಲ್ಲಾ ಶಾಲೆಯ ಶಿಕ್ಷಕರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*******