29/07/2026
ಮಂಡ್ಯದ ಸುಪ್ರಸಿದ್ಧ ಸಾವಯವ ಮಳಿಗೆ ಮತ್ತು ಸಿರಿಧಾನ್ಯ ಹೋಟಲ್ ಆದ “ದೇಸಿ ಅಂಗಡಿ” ಸಂಸ್ಥಾಪಕರಾದ ಶ್ರೀ ಮಹೇಶ್ ಬುವಳ್ಳಿ ಮತ್ತು ಶ್ರೀಮತಿ ಸೌಮ್ಯ ರವರ
ಕುರಿತು ಬರೆದ ಲೇಖನ ನಾಲ್ಕು ವರ್ಷಗಳ ಹಿಂದೆ ವಿಕ್ರಮದಲ್ಲಿ ಪ್ರಕಟವಾಗಿತ್ತು. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಿ.
ಮಹೇಶ್ ಯವರ ಸಂಪರ್ಕಸಂಖ್ಯೆ +91 9740808010
ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 90350 06777
ಸಾಮಾನ್ಯವಾಗಿ ಅಂಗಡಿ ಎಂದರೆ ಎಲ್ಲರೂ ಮಾರಾಟ ದೃಷ್ಟಿಯಿಂದಲೇ ಪ್ರಾರಂಭಿಸಿರುತ್ತಾರೆ. ಆದರೆ ಮಂಡ್ಯದಲ್ಲಿರುವ ದೇಸಿ ಅಂಗಡಿಯಲ್ಲಿ ಹೀಗೊಂದು ಫಲಕವಿದೆ "ಜಾಗೃತಿ, ಪ್ರದರ್ಶನ ಮತ್ತು ಮಾರಾಟ.
ಅಲ್ಲಿಗೆ ಭೇಟಿ ಕೊಡುವ ಗ್ರಾಹಕರಿಗೆ ಮೊದಲು ಸಾವಯವ ಉತ್ಪನ್ನಗಳ ಕುರಿತು ಜಾಗೃತಿ, ಅಂಗಡಿಯಲ್ಲಿರುವ ವಸ್ತುಗಳ ಪ್ರದರ್ಶನ ಮತ್ತು ಕೊನೆಯದಾಗಿ ಗ್ರಾಹಕ ಇಚ್ಚಿಸಿದರೆ ಮಾತ್ರ ಮಾರಾಟ.
ಭೇಟಿಕೊಡುವ ಪ್ರತಿ ಗ್ರಾಹಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಅವರ ಅವಶ್ಯಕತೆ ಏನು ಎಂಬುದನ್ನು ತಿಳಿದುಕೊಂಡು ಅವರ ಮನಪರಿವರ್ತನೆ ಮಾಡುವಂತಹ ಕೆಲಸ ಮಾಡುತ್ತಿರುವ ಮಿತ್ರರಾದ ದೇಸಿ ಅಂಗಡಿ ಸಂಸ್ಥಾಪಕ ಮಹೇಶ್ ಬೂವಳ್ಳಿ ಮತ್ತು ಸೌಮ್ಯ ಮಹೇಶ್ ಬೂವಳ್ಳಿ ಅವರ ಕುರಿತು ಈ ಲೇಖನದಲ್ಲಿ ತಿಳಿಯುವ ಪ್ರಯತ್ನ ಮಾಡೋಣ.
ಮೂಲತಃ ಮಳವಳ್ಳಿ ಸಮೀಪದ ದೊಡ್ಡಬೂವಳ್ಳಿ ಗ್ರಾಮದವರಾದ ಮಹೇಶ್ ರವರ ತಂದೆ ಬಸವಣ್ಣನವರು ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿರುತ್ತಾರೆ ತಾಯಿ ರತ್ನಮ್ಮ ಗೃಹಿಣಿ.
ಹತ್ತನೇ ತರಗತಿವರೆಗೂ ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಓದಿರುವ ಮಹೇಶ್. ಇದೇ ಸಂದರ್ಭದಲ್ಲಿ ತಂದೆಯವರಿಗೆ ನೌಕರಿ ಖಾಯಂ ಆಗಿ ಚಿಕ್ಕನಾಯಕನಹಳ್ಳಿಗೆ ವರ್ಗಾವಣೆಯಾಗುತ್ತದೆ. ಮಹೇಶ್ ಅವರಿಗೆ ಬಾಲ್ಯದಿಂದಲೂ ತಾನೊಬ್ಬ ಶಿಕ್ಷಕನಾಗಬೇಕೆಂಬ ಆಸೆ ಇರುತ್ತದೆ. ಅದರಲ್ಲೂ ಕಲೆ ಸಾಹಿತ್ಯ ಎಂದರೆ ಅಪಾರ ಆಸಕ್ತಿ.
ಹಾಗಾಗಿ ಪಿಯುಸಿಯಲ್ಲಿ ಆರ್ಟ್ಸ್ ವಿಷಯವನ್ನು ಆಯ್ದುಕೊಳ್ಳುತ್ತಾರೆ. ಎರಡು ವರ್ಷ ಊರಿಂದ ದೂರವಿದ್ದರೂ ತಂದೆಯವರಿಗೆ ಮತ್ತೆ ವರ್ಗಾವಣೆಯಾಗಿ ಹುಟ್ಟೂರಿಗೆ ಬರುವ ಅವಕಾಶ ದೊರೆಯುತ್ತದೆ. ಪಿಯುಸಿ ಮುಗಿದ ನಂತರ ಟಿಸಿಎಚ್ ಪಡೆಯಲು ಪ್ರಯತ್ನಪಟ್ಟರೂ
ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ.
ಮಹೇಶ್ ಅವರದ್ದು ತೀರಾ ಬಡಕುಟುಂಬ ವಲ್ಲದಿದ್ದರೂ ಮಧ್ಯಮವರ್ಗದ ಕುಟುಂಬವಾಗಿತ್ತು. ತಂದೆ ದಿನಗೂಲಿ ನೌಕರರಾದ್ದರಿಂದ ಹೆಚ್ಚಿನ ಆದಾಯ ಇರಲಿಲ್ಲ.
ಹಾಗಾಗಿ ತಮ್ಮ ಶಿಕ್ಷಕರಾಗುವ ಕನಸನ್ನು ಬಿಟ್ಟು ಬೇಗನೆ ಕೆಲಸ ಸಿಗುವಂತಹ ಡಿಪ್ಲೋಮೋ ಕೋರ್ಸಿಗೆ ಸೇರಿಕೊಳ್ಳುತ್ತಾರೆ
ಮಂಡ್ಯದ ಭಾರತಿ ಕಾಲೇಜಿನಲ್ಲಿ ಡಿಪ್ಲೋಮೋ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಕೋರ್ಸ್ ಗೆ ಸೇರಿಕೊಳ್ಳುತ್ತಾರೆ.
ಮಹೇಶ್ ಅವರಿಗೆ ಹಳ್ಳಿ ಜೀವನ ಮತ್ತು ಕೃಷಿ ಎಂದರೆ ಪಂಚಪ್ರಾಣ.
ಕಾಲೇಜಿಗೆ ಹೋಗುತ್ತಲೇ ಜಮೀನಿನಲ್ಲಿ ತರಕಾರಿ ಬೆಳೆಯುವುದನ್ನು ರೂಢಿಸಿಕೊಂಡಿರುತ್ತಾರೆ.
ತಮ್ಮ ವಿದ್ಯೆಗೆ ಪೂರಕವಾಗಲೆಂದು ಒಂದು ಕಂಪ್ಯೂಟರ್ ಕೋರ್ಸ್ ಗೆ ಸೇರುತ್ತಾರೆ.
ಡಿಪ್ಲೋಮೋ ಮುಗಿದನಂತರ ತಂದೆಯವರ ಆಸೆಯಂತೆ ಬೆಂಗಳೂರಿನಲ್ಲಿ ಒಂದು ಕೆಲಸಕ್ಕೆ ಸೇರುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ ರಿಪೇರಿ ಮಾಡುವುದು ಮಹೇಶ್ ರವರ ಪ್ರಮುಖ ವೃದ್ಧಿಯಾಗುತ್ತದೆ.
ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿದ್ದರೆ ಇನ್ನು ಉನ್ನತ ಮಟ್ಟಕ್ಕೆ ಏರಬಹುದೆಂದು ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಸೇರಿಕೊಳ್ಳುತ್ತಾರೆ.
ಇದರ ಫಲವಾಗಿ ಹಾಗೂ ಸ್ನೇಹಿತರಾದ ಶ್ರೀ ಸ್ವಾಮಿ ತಿಪಟೂರು ರವರ ಸಹಾಯದಿಂದ ಯೂನಿಸಿಸ್ ಕಂಪನಿಯಲ್ಲಿ ಉನ್ನತ ಹುದ್ದೆಗೆ ಆಯ್ಕೆಯಾಗುತ್ತಾರೆ ಮಹೇಶ್ . ಸುಮಾರು 9 ವರ್ಷಗಳ ಕಾಲ ಕಂಪನಿಯಲ್ಲಿ ಕೈತುಂಬಾ ಸಂಬಳ ಗಳಿಸಿರುತ್ತಾರೆ.
ಸಾಫ್ಟ್ವೇರ್ ಕಂಪನಿ ಆದ್ದರಿಂದ ಅನಿವಾರ್ಯವಾಗಿ ಸ್ನೇಹಿತರೊಂದಿಗೆ ಔಟಿಂಗ್ ಬೇಡದ ಪಿಜ್ಜಾ ಬರ್ಗರ್ ತಿನ್ನಲೇ ಬೇಕಾದಂತಹ ಪರಿಸ್ಥಿತಿಗಳು ಎದುರಾಗುತ್ತದೆ.
ಜೀವನ ಶೈಲಿಯ ಬದಲಾವಣೆಯಿಂದ ಕ್ರಮೇಣವಾಗಿ ಮಹೇಶ ರವರ ಆರೋಗ್ಯಸ್ಥಿತಿ ಹಾಳಾಗುತ್ತದೆ ಅದರಲ್ಲೂ ಅವರ ಪಚನಕ್ರಿಯೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುತ್ತದೆ.
ಈ ಸಂದರ್ಭದಲ್ಲಿ ಸ್ನೇಹಿತರೆಲ್ಲರೂ ಒಟ್ಟಿಗೆ ಕ್ಯಾಂಟೀನ್ನಲ್ಲಿ ಊಟ ಮಾಡುತ್ತಿರುವಾಗ ಆಪ್ತಮಿತ್ರರಾದ ವಿಷ್ಣುತೀರ್ಥ ರವರ ವಾಟ್ಸಪ್ಪ್ಗೆ ಬಂದ ವಿಡಿಯೋವನ್ನು ಮಹೇಶ್ ಅವರಿಗೆ ತೋರಿಸುತ್ತಾರೆ.
ಅದು ಡಾ ಖಾದರ್ ಅವರು ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಕುರಿತು ಮಾತನಾಡಿದ ವಿಡಿಯೋ ತುಣುಕಾಗಿರುತ್ತದೆ.
ಖಾದರ್ ರವರ ವಿಡಿಯೋ ನಿಂದ ಪ್ರೇರಣೆಗೊಂಡು ತಮ್ಮ ಜೀವನಶೈಲಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಸಿರಿಧಾನ್ಯಗಳ ಸೇವನೆ, ಗಾಣದ ಎಣ್ಣೆ, ಸೈಂಧವ ಲವಣ ಹೀಗೆ ಹತ್ತು ಹಲವು ರೀತಿಯ ಬದಲಾವಣೆಗಳಾಗುತ್ತದೆ.
ಕಾಲಕ್ರಮೇಣ ಮಹೇಶ್ ರವರ ಆರೋಗ್ಯಸ್ಥಿತಿ ಉತ್ತಮಗೊಳ್ಳುತ್ತದೆ.
ಹೇಗಾದರೂ ಮಾಡಿ ಖಾದರ್ ರವರನ್ನು ಭೇಟಿ ಮಾಡಬೇಕೆಂಬ ಹಂಬಲ ದಿನೇದಿನೇ ಹೆಚ್ಚಾಗುತ್ತದೆ.
ಅಷ್ಟರಲ್ಲಿ ಮಿತ್ರರಿಂದ ಅವರ ಮೊಬೈಲ್ ನಂಬರ್ ದೊರೆಯುತ್ತದೆ.
ಕೂಡಲೇ ಅವರೊಂದಿಗೆ ಮಾತನಾಡಿ ತಮ್ಮ ಜೀವನದಲ್ಲಾದ ಬದಲಾವಣೆಯ ಕುರಿತು ವಿವರಿಸುತ್ತಾರೆ.
ನಂತರ ಖಾದರ್ ರವರ ಒಂದು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ ಮಹೇಶ್.
ಇದೇ ಬೆಳೆ ಮಹೇಶ್ ರವರಿಗೆ ಸೌಮ್ಯ ರೊಟ್ಟಿಗೆ ವಿವಾಹವಾಗುತ್ತದೆ.
ಮಹೇಶ್ ಅವರಂತೆ ಸೌಮ್ಯ ರವರು ಸಹ ಸಾವಯವ ಜೀವನ ಶೈಲಿಯ ಪ್ರತಿಪಾದಕರಾಗಿರುತ್ತಾರೆ.
ಒಂದು ದಶಕಕ್ಕೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ಮಹೇಶ್ ಅವರಿಗೆ ತಮ್ಮ ಹುಟ್ಟೂರಿಗೆ ಹಿಂದಿರುಗಿ ಕೃಷಿಯಲ್ಲಿ ನಿರತರಾಗಬೇಕೆಂಬ ಹಂಬಲ ಉಂಟಾಗುತ್ತದೆ.
ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ (ವರ್ಕ್ ಫ್ರಮ್ ಹೋಮ್ ) ಮನೆಯಿಂದಲೇ ಕೆಲಸ ಮಾಡಲು ಅನುಮತಿ ಪಡೆಯುತ್ತಾರೆ.
ಮಹೇಶ್ ರವರು ಡಾಕ್ಟರ್ ಖಾದರ್ ಡಾಕ್ಟರ್ ಬಿ ಎಂ ಹೆಗಡೆ ರಾಜೀವ್ ದೀಕ್ಷಿತ್ ಡಾಕ್ಟರ್ ಹೆಚ್ ಎಸ್ ಪ್ರೇಮ ನಾಡೋಜ ನಾರಾಯಣ ರೆಡ್ಡಿ ಅವರ ಮಾತುಗಳಿಂದ ಬಹಳ ಪ್ರಭಾವಿತರಾಗಿರುತ್ತಾರೆ ಅವರುಗಳು ಸೂಚಿಸಿರುವ ಪದ್ಧತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಿಂದ ತಮಗೆ ಒಳಿತಾದರೆ ಮತ್ತೊಬ್ಬರಿಗೆ ಇದನ್ನು ತಿಳಿಸುವ ಪ್ರಯತ್ನ ಮಾಡುತ್ತಿರುತ್ತಾರೆ.
ಸಾವಯವ ಜೀವನ ಪದ್ಧತಿಯಿಂದ ದಿನೇದಿನೇ ಮಹೇಶ್ ಅವರ ಜೀವನದಲ್ಲಿ ಉನ್ನತ ರೀತಿಯ ಬೆಳವಣಿಗೆಗಳಾಗುತ್ತವೆ.
ತನ್ನಂತೆಯೇ ಅನೇಕರು ಹಲವು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಅವರಿಗೆ ಸಾವಯವ ಜೀವನಶೈಲಿಯ ಕುರಿತು ತಿಳಿಸಬೇಕು ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬಾಲ್ಯದಿಂದಲೇ ಈ ಕುರಿತು ಅರಿವು ಮೂಡಿಸಬೇಕೆಂದು ನಿಶ್ಚಯಿಸುತ್ತಾರೆ.
ಇದಕ್ಕಾಗಿ ಒಂದು ಉತ್ತಮ ಕ್ಯಾಮೆರಾ ಪ್ರೊಜೆಕ್ಟರ್ ಮೈಕ್ ಗಳನ್ನು ಖರೀದಿಸುತ್ತಾರೆ.
ಬಿಡುವಿನ ವೇಳೆಯಲ್ಲಿ ಮಂಡ್ಯದ ಕೆಲ ಶಾಲೆಗಳಿಗೆ ಭೇಟಿಕೊಟ್ಟು 8 9 10ನೇ ತರಗತಿಯ ಮಕ್ಕಳಿಗೆ ರಾಸಾಯನಿಕ ಕೃಷಿಯ ಅಪಾಯಗಳು ಮತ್ತು ಸಾವಯವ ಕೃಷಿಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡುತ್ತಾರೆ.
ಇಷ್ಟರಲ್ಲಾಗಲೇ ಮಂಡ್ಯದ ಸ್ವದೇಶಿ ಜಾಗರಣಾ ಮಂಚ್, ಆರ್ಗ್ಯಾನಿಕ್ ಮಂಡ್ಯ ಹಾಗೂ ಸಾವಯವ ಬಯಲು ಸೀಮೆ ಬೆಳೆಗಾರರ ಸಂಘ ಇವರೆಲ್ಲ ಸಹೋಯೋಗದೊಂದಿಗೆ ಕೃಷತಿಂಗಳಿಗೊಮ್ಮೆ ಸಾವಯವ ಕೃಷಿ ಸಂತೆಯನ್ನು ಆಯೋಜಿಸುತ್ತಾರೆ.
ಸ್ವದೇಶಿ ಜಾಗರಣ ಮಂಚ್ ನ ಜಗದೀಶ್ ಅವರು ಮಹೇಶ್ ಅವರಿಗೆ ಪ್ರೋತ್ಸಾಹಿಸಿ ಸಂತೆಯಲ್ಲಿ ಜನರೊಂದಿಗೆ ಮಾತನಾಡಲು ವೇದಿಕೆ ಕಲ್ಪಿಸಿಕೊಡುತ್ತಾರೆ.
ಮಹೇಶ್ ರವರು ತಮ್ಮ ಜೀವನದ ಅನುಭವಗಳನ್ನು ಎಲ್ಲರೊಂದಿಗೂ ಹಂಚಿಕೊಂಡು ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದಂತಹ ಜೀವನಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡುತ್ತಿರುತ್ತಾರೆ.
ಸಾವಯವ ಸಂತೆಯಲ್ಲಿ ಈಗಾಗಲೇ ಅಕ್ಕಿ, ಬೇಳೆ, ಬೆಲ್ಲ, ಗಾಣದ ಎಣ್ಣೆ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಇದರ ಜೊತೆ ಮಹೇಶ್ ರವರು ತಾವು ಬಳಸುತ್ತಿದ್ದ ಸಾವಯವ ಸಾಬೂನು, ಮೈ ಉಜ್ಜಲು ಮತ್ತು ಪಾತ್ರೆ ತೊಳೆಯಲು ತುಪ್ಪದ ಹೀರೇಕಾಯಿ ನಾರು/ ಲಾವಂಚದ ಬೇರು, ರಾಜೀವ್ ದೀಕ್ಷಿತರು ಸೂಚಿಸಿರುವಂತೆ ಅಡುಗೆ ಮಾಡಲು ಮಣ್ಣಿನ ಮಡಿಕೆಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಸಾವಯವ ಸಂತೆಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲು ಪ್ರಾರಂಭಿಸಿದರು.
ಆರಂಭದಲ್ಲಿ ಯಾವುದೇ ಉತ್ಪನ್ನ ಮಾರಾಟವಾಗುತಿರಲಿಲ್ಲವಾದರೂ ಕಾಲಕ್ರಮೇಣ ಜನರಿಗೆ ತಿಳುವಳಿಕೆ ಬಂದನಂತರ ಸಾವಯವ ಉತ್ಪನ್ನಗಳನ್ನು ಖರೀದಿಸಲು ಮುಂದಾದರು.
ಇದೇ ವೇಳೆ ಪತ್ನಿ ಸೌಮ್ಯ ರವರು ಮನೆಯಲ್ಲಿ ಖಾದರ್ ಅವರು ಸೂಚಿಸಿರುವಂತೆ ಸಿರಿಧಾನ್ಯಗಳಿಂದ ವಿವಿಧ ಬಗೆಯ ಅಡುಗೆಗಳನ್ನು ಮಾಡುತ್ತಿದ್ದರು.
ಒಮ್ಮೆ ನವಣೆ ಮತ್ತು ಸಾಮೆಯ ಹಿಟ್ಟು ಹೆಚ್ಚಾಯಿತೆಂದು ಹಪ್ಪಳದ ರೀತಿ ತೆಳುವಾಗಿ ತಟ್ಟಿ ಒಣಗಿಸಿ ಎಣ್ಣೆಯಲ್ಲಿ ಕರೆದರು. ನೋಡನೋಡುತ್ತಲೇ ರುಚಿಕರವಾದ ಸಿರಿಧಾನ್ಯಗಳ ಹಪ್ಪಳ ಸಿದ್ಧವಾಯಿತು.
ಈ ಪ್ರಯೋಗವನ್ನು ಡಾ ಖಾದರ್ ಅವರ ವಾಟ್ಸಪ್ ಗುಂಪಿನಲ್ಲಿ ಹಂಚಿಕೊಂಡಾಗ ಎಲ್ಲರೂ ಮೆಚ್ಚುಗೆ ಸೂಚಿಸಿದರು. ಅದರಲ್ಲೂ ಖಾದರ್ ಅವರು ತಮ್ಮ ಮಗಳ ಮದುವೆಗೆ ಒಂದುವರೆ ಸಾವಿರ ಸಿರಿಧಾನ್ಯಗಳ ಹಪ್ಪಳ ಬೇಕೆಂದು ಬೇಡಿಕೆಯಿಟ್ಟರು.
ಸೌಮ್ಯ ಮತ್ತು ಮಹೇಶ್ ಅವರು ಇದು ಕೇವಲ ಮನೆ ಮಟ್ಟಿಗೆ ಮಾಡಿರುವುದಾಗಿ ಮಾರಾಟದ ದೃಷ್ಟಿಯಿಂದಲ್ಲ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ.
ಕೊನೆಗೆ ಸೌಮ್ಯರವರ ತಾಯಿ ಮನೆ ಮಟ್ಟಿಗೆ ರಾಗಿಯ ಹಪ್ಪಳವನ್ನು ತಯಾರಿಸುತ್ತಿದ್ದದು ನೆನಪಾಗಿ ಅವರ ಸಹಾಯದಿಂದಲೇ ಖಾದರ್ ರವರ ಮಗಳು ಸರಳಾ ರವರ ಮದುವೆಗೆ ಒಂದುವರೆ ಸಾವಿರ ಸಿರಿಧಾನ್ಯಗಳ ಹಪ್ಪಳ ಸಿದ್ದಪಡಿಸಿದರು.
ಮಹೇಶ್ ರವರು ಉಡುಗೊರೆಯಾಗಿ ಇದನ್ನು ನೀಡಲು ಹೊರಟರೆ ಖಾದರ್ ಅವರು ಒಪ್ಪದೆ ಹಣಕೊಟ್ಟು ಖರೀದಿಸಿದರು.
ಈ ಘಟನೆ ಮಹೇಶ್ ಮತ್ತು ಸೌಮ್ಯ ದಂಪತಿಗಳ ಜೀವನದಲ್ಲಿ ದೊಡ್ಡ ತಿರುವು ನೀಡಿತು.
ಸಿರಿಧಾನ್ಯಗಳ ಹಪ್ಪಳ ತಯಾರಿಕೆಯಲ್ಲಿ ಯಶಸ್ಸು ಕಂಡ ನಂತರ ಸಾವಯವ ಸಂತೆಯಲ್ಲಿ ಸಿರಿಧಾನ್ಯಗಳಿಂದ ಮಾಡಿದ ಕುರುಕುಲು ತಿಂಡಿಗಳನ್ನು ಮಾರಲು ಪ್ರಾರಂಭಿಸಿದರು. ಇದರ ಜೊತೆಗೆ ಆಯೋಜಕರ ಬೇಡಿಕೆಯಂತೆ ಸ್ಥಳದಲ್ಲೇ ಸಿರಿಧಾನ್ಯಗಳ ಅಡುಗೆ ಮಾಡಲು ನಿಶ್ಚಯಿಸುತ್ತಾರೆ.
ಸೌಮ್ಯ ಅವರು ಸಿರಿಧಾನ್ಯಗಳ ದೋಸೆ-ಇಡ್ಲಿ ಪಲಾವ್ ಉಪ್ಪಿಟ್ಟು ಬಿಸಿಬೇಳೆ ಬಾತ್ ಸೇರಿದಂತೆ ಹಲವು ಬಗೆಯ ತಿನಿಸುಗಳನ್ನು ಸ್ಥಳದಲ್ಲೇ ಬಿಸಿಬಿಸಿಯಾಗಿ ತಯಾರಿಸಿ ಗ್ರಾಹಕರಿಗೆ ನೀಡುತ್ತಾರೆ.
ಕೇವಲ ಸಿರಿಧಾನ್ಯಗಳ ದೋಸೆ-ಇಡ್ಲಿ ಅಷ್ಟೇ ಅಲ್ಲದೆ ಚಟ್ನಿ ತಯಾರಿಕೆಯಲ್ಲೂ ತಮ್ಮ ಪ್ರಾವೀಣ್ಯತೆ ತೋರಿಸಿರುತ್ತಾರೆ. ಒಂದೆಲಗ, ದೊಡ್ಡಿಪತ್ರೆ, ಪುದಿನಾ, ನಾಟಿ ಟೊಮೆಟೊ ಗಳನ್ನು ಬಳಸಿಕೊಂಡು ಆರೋಗ್ಯಕರ ಮತ್ತು ರುಚಿಯಾದ ಚಟ್ನಿಯನ್ನು ಗ್ರಾಹಕರಿಗೆ ಪರಿಚಯಿಸುತ್ತಾರೆ.
ಪ್ರಾರಂಭದಲ್ಲಿ ತಿಂಗಳಿಗೊಮ್ಮೆ ಇದ್ದ ಸಾವಯವ ಸಂತೆ ನಂತರ ಗ್ರಾಹಕರ ಬೇಡಿಕೆಯಂತೆ ವಾರಕ್ಕೊಮ್ಮೆ ಆರಂಭವಾಗುತ್ತದೆ.
ಅದರಲ್ಲೂ ಮಹೇಶ್ ಮತ್ತು ಸೌಮ್ಯರವರ ಉತ್ಪನ್ನಗಳಿಗೆ ಭಾರಿ ಬೇಡಿಕೆ ಉಂಟಾಗುತ್ತದೆ.
ಕೆಲ ಗ್ರಾಹಕರಂತೂ ನಮಗೆ ಪ್ರತಿನಿತ್ಯ ಸಿರಿಧಾನ್ಯಗಳ ಅಡುಗೆ ಬೇಕು ಹಾಗಾಗಿ ನೀವೊಂದು ಹೋಟೆಲ್ ಪ್ರಾರಂಭಿಸಿ ಎಂದು ಸಲಹೆ ನೀಡಿತ್ತಾರೆ.
ಡಾಕ್ಟರ್ ಖಾದರ್ ಸೇರಿದಂತೆ ಅನೇಕ ಹಿರಿಯರೊಂದಿಗೆ ಚರ್ಚಿಸಿ ಮಂಡ್ಯದ ಒಂದು ಬಡಾವಣೆಯಲ್ಲಿ ದೇಸಿ ಅಂಗಡಿ ಎಂಬ ಸಾವಯವ ಮಳಿಗೆಯನ್ನು ಪ್ರಾರಂಭಿಸುತ್ತಾರೆ.
ಕೇವಲ ಮಾರಾಟದ ದೃಷ್ಟಿಯಿಂದಷ್ಟೇ ಅಲ್ಲದೆ ಜನರಿಗೆ ಸಾವಯವ ಉತ್ಪನ್ನಗಳ ಕುರಿತು ಸಾವಯವ ಜೀವನಶೈಲಿಯ ಕುರಿತು ಪರಿಚಯಿಸಲು ಅಂಗಡಿಯನ್ನು ವೇದಿಕೆಯಾಗಿಸಿಕೊಳ್ಳುತ್ತಾರೆ.
ತಮಗೆ ಪರಿಚಯವಿರುವ ಸ್ಥಳೀಯ ರೈತರಿಂದ ಉತ್ಪನ್ನಗಳನ್ನು ಖರೀದಿಸಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲು ನಿಶ್ಚಯಿಸುತ್ತಾರೆ.
ತಾವು ಯಾವ ರೈತರಿಂದ ಉತ್ಪನ್ನಗಳನ್ನು ಖರೀದಿಸುತ್ತೇವೆ ಎಂಬ ವಿವರಗಳನ್ನು ರೈತನ ಚಿತ್ರಸಮೇತ ಅಂಗಡಿಯಲ್ಲಿ ಹಾಕಿದ್ದಾರೆ.
ಯಾವುದೇ ಕಾರಣಕ್ಕೂ ರಾಸಾಯನಿಕ ಮತ್ತು ಕೆಮಿಕಲ್ ಪ್ರಿಸರ್ವೇಟಿವ್ಸ್ ಬಳಸಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡದಿರಲು ಪಣ ತೊಡುತ್ತಾರೆ.
ಖ್ಯಾತ ಆಯುರ್ವೇದ ತಜ್ಞರಾದ ಡಾಕ್ಟರ್ ಗಿರಿಧರ್ ಕಜೆಯವರ ವಿಡಿಯೋಗಳನ್ನು ನೋಡಿ ತುಳಸಿ, ಅಮೃತಬಳ್ಳಿ, ಹಿಪ್ಪಲಿ, ನೆಲನಲ್ಲಿ, ಕಾಳು ಮೆಣಸು, ಜೀರಿಗೆ, ದನಿಯಾ ಸೇರಿದಂತೆ ೨೦ ಬಗೆಯ ಗಿಡ ಮೂಲಿಕೆಗಳನ್ನು ಮತ್ತು
ಸಾವಯವ ಬೆಲ್ಲ ಗಳನ್ನು ಒಳಗೊಂಡ ಕಷಾಯವನ್ನು ಗ್ರಾಹಕರಿಗೆ ತಮ್ಮ ಅಂಗಡಿಯಲ್ಲಿ ಕಾಫಿ-ಟೀ ಬದಲಾಗಿ ನೀಡಲು ಮುಂದಾಗುತ್ತಾರೆ.
ಇದರ ಜೊತೆಗೆ ಸಾವಯವ ಸಂತೆಯಲ್ಲಿ ತಯಾರಿಸುತ್ತಿದ್ದ ಸಿರಿ ಧಾನ್ಯಗಳ ಅಡುಗೆಯನ್ನು ದೇಸಿ ಅಂಗಡಿ ಮತ್ತು ಸಾತ್ವಿಕ ಆಹಾರ ಎಂಬ ಹೆಸರಿನಡಿಯಲ್ಲಿ ಮಾರಾಟ ಮಾಡಲು ಆರಂಭಿಸುತ್ತಾರೆ.
ಅಂಗಡಿ ಪ್ರಾರಂಭವಾಗಿ ನಾಲ್ಕೈದು ತಿಂಗಳುಗಳಾದರೂ ಗ್ರಾಹಕರಿಂದ ಅಷ್ಟಾಗಿ ಪ್ರತಿಕ್ರಿಯೆ ಬರುವುದಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಇದೇ ಸಮಯದಲ್ಲಿ ಕರೋನಾ ಮಹಾಮಾರಿ ಇಂದ ಲಾಕ್ಡೌನ್ ಎದುರಾಯಿತು.
ಸುಮಾರು 4-5 ತಿಂಗಳು ಮಹೇಶ್ ತಮ್ಮ ಸಂಬಳದ ಹಣದಿಂದ ಅಂಗಡಿಯ ಬಾಡಿಗೆಯನ್ನು ನಿರ್ವಹಿಸುತ್ತಾರೆ.
ಇಷ್ಟಾದರೂ ಧೃತಿಗೆಡದೆ ಲಾಕ್ಡೌನ್ ಸಡಿಲಿಕೆ ನಂತರ ಮತ್ತೆ ಅಂಗಡಿಯನ್ನು ತೆರೆದಾಗ ಆಶ್ಚರ್ಯವಾಗುವ ರೀತಿಯಲ್ಲಿ ಗ್ರಾಹಕರು ಕಷಾಯವನ್ನು ಕುಡಿಯಲು ಮುಗಿಬೀಳುತ್ತಾರೆ.
ಕಷಾಯ ಮತ್ತು ಅಡುಗೆಯನ್ನು ತಯಾರಿಸಲು ಅಲುಮಿನಿಯಂ ಪಾತ್ರೆಗಳನ್ನು, ಮೈದಾಹಿಟ್ಟನ್ನು ಬಳಸುವುದಿಲ್ಲ.
ತಮ್ಮ ಪರಿಚಯಸ್ಥ ಸಾವಯವ ಕೃಷಿಕರು ಬೆಳೆಯುವ ಸೊಪ್ಪು ತರಕಾರಿಗಳನ್ನು ಖರೀದಿಸಿ ಅಡುಗೆಯಲ್ಲಿ ಬಳಸಲಾಗುತ್ತದೆ.
ಗ್ರಾಹಕರ ವಾಟ್ಸಾಪ್ ಗುಂಪನ್ನು ರಚಿಸಿ ಮರುದಿನ ಯಾವ ಸಿರಿಧಾನ್ಯದ ಅಡುಗೆಯನ್ನು ಮಾಡಲಾಗುತ್ತದೆ ಎಂಬ ಸಂದೇಶವನ್ನು ಸಂಜೆ ಕಳಿಸಲಾಗುತ್ತದೆ.
ಒಂದು ವೇಳೆ ಗ್ರಾಹಕರು ಪಾರ್ಸಲ್ ಕೊಂಡೊಯ್ಯಲು ಬಯಸಿದರೆ ತಾವೇ ಡಬ್ಬಿಯನ್ನು ಮನೆಯಿಂದ ತರಬೇಕು ಎಂದು ಮಹೇಶ್ ರವರು ತಾಕೀತು ಮಾಡಿರುತ್ತಾರೆ.
ಮಹೇಶ್ ರವರ ಈ ನಡವಳಿಕೆ ಜನರಿಗೂ ಹಿಡಿಸುತ್ತದೆ. ಸಾಮಾನ್ಯ ಜನರಲ್ಲದೆ ಸರ್ಕಾರಿ ನೌಕರರು, ಶಾಲಾ ಕಾಲೇಜಿನ ಶಿಕ್ಷಕರು, ಲಾಯರ್ ಗಳು, ತಾಶೀಲ್ದಾರ್ ಮತ್ತು ನ್ಯಾಯಾಧೀಶರು ಸಹ ಮಹೇಶ್ ಅವರ ದೇಸಿ ಅಂಗಡಿಯ ಗ್ರಾಹಕರಾಗುತ್ತಾರೆ.
ಜನಸಂದಣಿ ಹೆಚ್ಚಾದ್ದರಿಂದ ಪ್ರಸ್ತುತವಿರುವ ಅಂಗಡಿ ನಿವೇಶನ ಸರಿಹೋಗದೆಂದು ಆಲೋಚಿಸಿ ಮಂಡ್ಯದ ಅಶೋಕನಗರದ ಪ್ರಮುಖ ರಸ್ತೆಯಲ್ಲಿ ದೊಡ್ಡದಾದ ಮಳಿಗೆಯನ್ನು ಬಾಡಿಗೆಗೆ ಪಡೆದು ಒಂದು ಭಾಗದಲ್ಲಿ ದೇಸಿ ಅಂಗಡಿ ಮತ್ತೊಂದು ಭಾಗದಲ್ಲಿ ಸಿರಿಧಾನ್ಯ ಸಾತ್ವಿಕ ಆಹಾರದ ಹೋಟೆಲ್ ಪ್ರಾರಂಭಿಸುತ್ತಾರೆ.
ಅಂಗಡಿ ಪ್ರಾರಂಭಿಸುವ ಮುನ್ನ ಸೌಮ್ಯ ರವರು ಖಾಸಗಿ ಶಾಲೆಯ ಶಿಕ್ಷಕಿಯಾಗಿ ಮತ್ತು ಮಹೇಶ್ ರವರು ಒಂದು ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಮಾಡುತ್ತಿರುತ್ತಾರೆ.
ತಮ್ಮ ಆರೋಗ್ಯ ಮತ್ತು ಸಮಾಜದ ಆರೋಗ್ಯವೂ ಸುಧಾರಿಸಬೇಕೆಂದು ಇಬ್ಬರೂ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಪ್ರಮಾಣದ ಸಾವಯವ ಕೃಷಿಯ ಕುರಿತು ಜಾಗೃತಿ ಮತ್ತು ಅಂಗಡಿಯನ್ನು ನಿರ್ವಹಿಸುತ್ತಿದ್ದಾರೆ.
ಕೇವಲ ಸಾವಯವ ಉತ್ಪನ್ನಗಳ ಸೇವನೆಯಿಂದ ಆರೋಗ್ಯ ಸುಧಾರಿಸುವುದಿಲ್ಲ.
ನಮ್ಮ ಭಾರತೀಯ ಜೀವನಶೈಲಿ ಅಳವಡಿಸಿಕೊಂಡು ಪ್ರತಿನಿತ್ಯ ಹಿತಮಿತವಾದ ಯೋಗ-ಧ್ಯಾನ, ದೇವರ ಪೂಜೆ, ಗುರುಹಿರಿಯರಿಗೆ ಗೌರವ ಸಮರ್ಪಣೆ, ಏಕಾದಶಿಯ ಉಪವಾಸ, ಸಜ್ಜನರ ಸಹವಾಸ, ಮತ್ತು ಸದಾ ಗುಣಾತ್ಮಕ ಚಿಂತನೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಎಲ್ಲಾ ಗ್ರಾಹಕರಿಗೆ ಮನವರಿಕೆ ಮಾಡಿಕೊಡುತ್ತಾರೆ.
ಊಟ ಮಾಡುವಾಗ ಮೊಬೈಲ್, ಟಿವಿ ಇತ್ಯಾದಿ ನೋಡಬಾರದು. ಊಟಕ್ಕೆ ಮುನ್ನ ಅನ್ನಪೂರ್ಣೆ ಸದಾಪೂರ್ಣೆ ಶ್ಲೋಕವನ್ನು ಹೇಳಬೇಕು, ಊಟವಾದನಂತರ ಅನ್ನದಾತ ಸುಖಿಭವ ಎಂದು ಸಾವಯವ ಕೃಷಿಕರನ್ನು ನೆನಪಿಸಿಕೊಂಡು ಅವರಿಗೆ ಧನ್ಯವಾದ ಸಮರ್ಪಿಸಬೇಕು ಎಂಬ ಫಲಕವನ್ನು ತಮ್ಮ ಹೋಟೆಲಿನಲ್ಲಿ ಲಗತ್ತಿಸಿದಾರೆ.
ರೈತರಿಗೆ ನೆರವಾಗಲೆಂದು ಸಿರಿಧಾನ್ಯ ಮತ್ತು ತರಕಾರಿ ಬೀಜಗಳನ್ನು ಸಹ ತಮ್ಮ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ನಾವು ವೃತ್ತಿಯಲ್ಲಿ ವೈದ್ಯರಲ್ಲದಿದ್ದರೂ ರಾಜೀವ್ ಧೀಕ್ಷಿತ್, ಡಾ ಬಿಎಂ ಹೆಗಡೆ, ಖಾದರ್, ಎಚ್ಎಸ್ ಪ್ರೇಮ, ಗಿರಿಧರ್ ಕಾಜೆ ಮತ್ತಿತರ ಮಹನೀಯರ ಮಾತುಗಳನ್ನು ಕೇಳಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮಗೆ ಉಪಯೋಗವಾದ ನಂತರ ಅಂಗಡಿಗೆ ಬರುವವರಿಗೆ ಕೆಲ ಸಲಹೆಗಳನ್ನು ನೀಡುತ್ತೇವೆ.
ಜೀವನಶೈಲಿಯನ್ನು ಬದಲಾಯಿಸಿಕೊಂಡ ನಂತರ ಗ್ರಾಹಕರೇ ಹಿಂದಿರುಗಿ ನಿಮ್ಮ ಅಂಗಡಿಗೆ ಬಂದ ನಂತರ ನನಗೆ ಸಕ್ಕರೆ ಕಾಯಿಲೆ ಕಡಿಮೆಯಾಗಿದೆ, ರಕ್ತದೊತ್ತಡ ನಿಯಂತ್ರಣದಲ್ಲಿದೆ, ಬೊಜ್ಜು ಕರಗಿ ದೇಹ ಹಗುರವಾಗಿದೆ, ಕ್ಯಾನ್ಸರ್ನಂತಹ ಕಾಯಿಲೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಗ್ರಾಹಕರು ಹೇಳುವಾಗ ಸಾರ್ಥಕ ಭಾವ ಮೂಡುತ್ತದೆ ಎಂದು ಮಹೇಶ್ ಮತ್ತು ಸೌಮ್ಯ ದಂಪತಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಅವರ ಈ ಮಹತ್ಕಾರ್ಯ ಹೀಗೆ ಮುಂದುವರೆಯಲಿ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಒಳಿತಾಗಲಿ ಎಂದು ಆಶಿಸೋಣ.
ಇಂತಹ ಅಪರೂಪದ ದಂಪತಿಗಳೊಂದಿಗೆ ಮಾತನಾಡಲು ಸಂಪರ್ಕಿಸಿ
9845382600 / 9845382630
ದೇಸಿ ಅಂಗಡಿ ಮಂಡ್ಯ - Desi Shop Mandya