Sudha & Sandeep Manjunath

Sudha & Sandeep Manjunath S4 Naturals - Simple Sustainable Self- reliant Society Promoting Desi cow based natural farming.
(1)

ಈ ವರ್ಷದ ಮೊದಲ ಸೌಗಂಧಿಕಾ /ಸುರಳಿ ಹೂವು ಅರಳಿದೆ. ಒಳ್ಳೆಯ ಪರಿಮಳಯುಕ್ತ ಪುಷ್ಪ.
09/07/2025

ಈ ವರ್ಷದ ಮೊದಲ ಸೌಗಂಧಿಕಾ /ಸುರಳಿ ಹೂವು ಅರಳಿದೆ. ಒಳ್ಳೆಯ ಪರಿಮಳಯುಕ್ತ ಪುಷ್ಪ.

ನಾಟಿ ಕೋಳಿ ಮೊಟ್ಟೆ ಮಾರುವ ನಿಂಗಮ್ಮ ಅಜ್ಜಿಯ ಭೇಟಿಗೆ ನಾಲ್ಕು ವರ್ಷ…. ನಿಮಗೆಲ್ಲಾ ನೆನಪಿರಬಹುದು. ಇವರ ಕುರಿತು ಮಾಡಿದ ವಿಡಿಯೋ ಒಂದೆರಡು ದಿನಗಳಲ...
09/07/2025

ನಾಟಿ ಕೋಳಿ ಮೊಟ್ಟೆ ಮಾರುವ ನಿಂಗಮ್ಮ ಅಜ್ಜಿಯ ಭೇಟಿಗೆ ನಾಲ್ಕು ವರ್ಷ…. ನಿಮಗೆಲ್ಲಾ ನೆನಪಿರಬಹುದು. ಇವರ ಕುರಿತು ಮಾಡಿದ ವಿಡಿಯೋ ಒಂದೆರಡು ದಿನಗಳಲ್ಲಿ ಲಕ್ಷ ಲಕ್ಷ ವೀಕ್ಷಣೆಗೊಂಡಿತ್ತು. ನಿಂಗಮಜ್ದಿಗೆ ಸಿಗಬೇಕಿದ್ದ ಅನೇಕ ಸವಲತ್ತುಗಳು ದೊರಕುವಂತೆ ಮಾಡಿತ್ತು.
ಚಿತ್ರದಲ್ಲಿ ಬಲಕ್ಕೆ ಇರುವ ಅಜ್ಜಿಯ ಹೆಸರು ನಿಂಗಮ್ಮ. ಬಿದುರುಗುಟ್ಟೆ ಗ್ರಾಮ, ಕೋಳಾಲ ಹೋಬಳಿ, ಕೊರಟಗೆರೆ ತಾ। ಸುಮಾರು ೮೦-೮೫ ವರ್ಷವಿರಬಹುದು. ಸಣ್ಣ ಗುಡಿಸಿಲಿನಂತಹ ಮನೆ, ಮನೆಯ ಎದುರು ತುಂಡು ಭೂಮಿ, ಸುಮಾರು 20 ನಾಟಿ ಕೋಳಿಗಳಿವೆ. ವಯಸ್ಸಾದ್ದರಿಂದ ಸರಿಯಾಗಿ ಕಿವಿ ಕೇಳಿಸುವುದಿಲ್ಲ. ಆದರೆ ಸ್ವಾಭಿಮಾನಕ್ಕೆ ಏನು ಕಡಿಮೆ ಇಲ್ಲ. ನಾಟಿ ಕೋಳಿ ಮೊಟ್ಟೆಗಳನ್ನು ಮಾರಿ, ಇರುವ ಸಣ್ಣ ಜಮೀನಿನಲ್ಲಿ ಕೈಲಾದಷ್ಟು ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಒಂದು ಮೊಟ್ಟೆಯನ್ನು ೧೫ ರೂಪಾಯಿಗಳಿಗೆ ಮನೆಬಾಗಿಲಿಗೆ ಬಂದು ಹಲವರು ಖರೀದಿಸುತ್ತಿದ್ದಾರೆ. ಪ್ರತಿ ನಿತ್ಯ ೮-೧೦ ಮೊಟ್ಟೆ ಮಾರುತ್ತಾರೆ ನಿಂಗಮ್ಮ.
ವೃದ್ಧಾಪ್ಯ ವೇತನ, ವಿಧವಾ ವೇತನ ಹೀಗೆ ಹತ್ತು ಹಲವು ಭಾಗ್ಯಗಳ ನೆಪಗಳನ್ನು ಹೇಳಿ ಇಂದು ಹಳ್ಳಿಗಳಲ್ಲಿ ಸಾಕಷ್ಟು ಜನ ವ್ಯವಸಾಯ ಕಷ್ಟ ಎನ್ನುವ ಕಾರಣ ಕೊಟ್ಟು ಬೇಸಾಯವನ್ನು ಬಿಟ್ಟಿರುತ್ತಾರೆ. ಎಲ್ಲಿ ಯಾವಾಗ ಯಾರು ಉಚಿತವಾಗಿ ಏನನ್ನು ನೀಡುತ್ತಾರೆ ಎಂಬುದರ ಲೆಕ್ಕಾಚಾರದಲ್ಲೇ ಸಾಕಷ್ಟು ಜನ ಮಗ್ನರಾಗಿರುವಾಗ ನಿಂಗಮ್ಮ ನಿಜಕ್ಕೂ ಎಲ್ಲರಿಗೂ ಸ್ಫೂರ್ಥಿಯಲ್ಲವೇ? ನಿಂಗಮ್ಮನಲ್ಲವೇ ನಿಜವಾದ ಸಾಧಕಿ?

ಬಹಳ ದಿನಗಳ ನಂತರ ನಾಟಿ ಚೇಪೆ ಕಾಯಿ/ ಸೀಬೆ/ ಪೇರಲ ಹಣ್ಣು ಸವಿಯುವ ಅವಕಾಶವಾಯಿತು. ಅದರಲ್ಲೂ ಚಂದ್ರಬಿಕ್ಕೆ ಎಂದು ನಾವು ಕರೆಯುವ ಈ ಹಣ್ಣಿನ ರುಚಿ ಬ...
08/07/2025

ಬಹಳ ದಿನಗಳ ನಂತರ ನಾಟಿ ಚೇಪೆ ಕಾಯಿ/ ಸೀಬೆ/ ಪೇರಲ ಹಣ್ಣು ಸವಿಯುವ ಅವಕಾಶವಾಯಿತು. ಅದರಲ್ಲೂ ಚಂದ್ರಬಿಕ್ಕೆ ಎಂದು ನಾವು ಕರೆಯುವ ಈ ಹಣ್ಣಿನ ರುಚಿ ಬಹಳ ಚೆನ್ನಾಗಿರುತ್ತದೆ. ಈಗಿನ ತೈವಾನ್ ಪಿಂಕ್ ಗಾತ್ರದಲ್ಲಿ ದೊಡ್ಡದ್ದಾಗಿದ್ದರೂ ರುಚಿಯಿರುವುದಿಲ್ಲ. ಆದರೆ ತೋಟದಲ್ಲಿ ತಾವಾಗೇ ಬೆಳೆಯುವ ಈ ಹಣ್ಣುಗಳನ ಬಹಳ ರಸವತ್ತಾಗಿರುತ್ತದೆ.

08/07/2025

ಕಾಚಿಗಿಡದ ಎಲೆಯಿಂದ ನೀರು ಗುಳ್ಳೆ ಬಿಡುವ ಆಟ. ಬಾಲ್ಯದ ಸವಿ ನೆನಪು. ಇಂದು ಬಹುತೇಕ ಮಕ್ಕಳು ಸೋಪಿನ ನೊರೆ ಅಥವಾ ರಾಸಾಯನಿಕ ಬಳಸಿ bubbles ಬಿಡುವ ಆಟ ಆಡುತ್ತಾರೆ. ಬೇಲಿಯಲ್ಲಿ ಸಾಮಾನ್ಯವಾಗಿ ಸಿಗುವ Jatropha ಅಥವಾ ಕಾಚಿ ಗಿಡದ ಎಲೆಯಿಂದ ಈ ರೀತಿ ಗುಳ್ಳೆ ಬಿಡುವ ಆಟ ನೀವು ಆಡಿದ್ದೀರಾ?

07/07/2025

ದೇಸಿ ಹಸುವಿನ ಉಳಿವಿಗಾಗಿ ಗೋಪಾಲ್ಸ್ ತಂಡ ಶ್ರೀಮತಿ ವಿಶಾಖ ಹರಿ ಅವರಿಂದ ಹರಿಕಥೆ ಕಾರ್ಯಕ್ರಮವನ್ನು 1.8.2025 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಸಂಭಾಂಗಣದಲ್ಲಿ ಆಯೋಜಿಸಿದೆ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಹಿಸಿ ದೇಸಿ ಗೋವುಗಳ ಉಳಿವಿಗೆ ಜೊತೆಯಾಗೋಣ. ಹೆಚ್ಚಿನ ವಿವರ ಕಾಮೆಂಟ್ಸ್ ಅಲ್ಲಿದೆ.

ಐಟಿ ಯಿಂದ ಮೇಟಿಗೆ ಪುಸ್ತಕ ಖ್ಯಾತಿ ಹೊಂದಿರುವ ಮತ್ತು ಕಜೆ ವೃಕ್ಷಾಲಯದಲ್ಲಿ 1500 ಕ್ಕೂ ಹೆಚ್ಚು ಪಶ್ಚಿಮ ಘಟ್ಟದ ಅಪರೂಪದ ಸಸ್ಯ ಪ್ರಭೇಧಗಳನ್ನು ಸಂ...
07/07/2025

ಐಟಿ ಯಿಂದ ಮೇಟಿಗೆ ಪುಸ್ತಕ ಖ್ಯಾತಿ ಹೊಂದಿರುವ ಮತ್ತು ಕಜೆ ವೃಕ್ಷಾಲಯದಲ್ಲಿ 1500 ಕ್ಕೂ ಹೆಚ್ಚು ಪಶ್ಚಿಮ ಘಟ್ಟದ ಅಪರೂಪದ ಸಸ್ಯ ಪ್ರಭೇಧಗಳನ್ನು ಸಂರಕ್ಷಿಸಿ ಅವುಗಳ ನರ್ಸರಿ ಪ್ರಾರಂಭಿಸಿರುವ ಶ್ರೀ ವಸಂತ್ ಕಜೆಯವರ ಕುರಿತು ಬರೆದ ಲೇಖನ ವಿಕ್ರಮದಲ್ಲಿ ಪ್ರಕಟವಾಗಿದೆ. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಿ.
ವಸಂತ್ ರವರ ಸಂಪರ್ಕಸಂಖ್ಯೆ 9008666266

ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 8892923338

ಕಳೆದ ವರ್ಷದಿಂದ ಓದಿ ಉಳುಮೆಗೆ ಬಂದವರು ಅಂಕಣದಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಬಿಟ್ಟು ಕೃಷಿಯಲ್ಲಿ ಖುಷಿ ಕಂಡಿರುವ ಹಲವರನ್ನು ನಾಡಿಗೆ ಪರಿಚಯಿಸಲು ನಾನು ಮತ್ತು ಪತ್ನಿ ಸುಧಾ ಪ್ರಯತ್ನಿಸಿದ್ದೇವೆ‌. ಆದರೆ ವಸಂತ ಕಜೆ ಅವರು ಬೆಂಗಳೂರಿನಲ್ಲಿ ೧೨ ವರ್ಷ ಸಾಫ್ಟ್ವೇರ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ತಾವು ಮುನ್ನಡೆಯುತ್ತಿರುವ ಮಾರ್ಗ ತಮ್ಮ ಜೀವನದ ಆಯ್ಕೆಯಲ್ಲವೆಂದು ತಿಳಿದು ಕೃಷಿಯತ್ತ ಮುಖ ಮಾಡಿ ಪ್ರಸ್ತುತ ಪೂರ್ಣಾವಧಿ ಕೃಷಿಕರಾಗಿದ್ದಾರೆ.
ಕೃಷಿಯೊಂದಿಗೆ ಸಾಹಿತ್ಯಾಸಕ್ತರಾದ ವಸಂತ್ ಬೆಂಗಳೂರಿನ ಸಾಫ್ಟ್ವೇರ್ ಬದುಕು ಮತ್ತು ಇಂದಿನ ಕೃಷಿ ಜೀವನದ ಕುರಿತು “ಐಟಿಯಿಂದ ಮೇಟಿಗೆ” ಎಂಬ ಅರ್ಥಪೂರ್ಣ ಪುಸ್ತಕವನ್ನು ಬರೆದಿದ್ದಾರೆ.
ಕಳೆದ ಒಂದೆರಡು ದಶಕದಿಂದ ಸಾಫ್ಟ್ವೇರ್ ಕ್ಷೇತ್ರ ಸಾಕಾಗಿ ಕೃಷಿಯತ್ತ ಮುಖ ಮಾಡಿ ಹಲವರು ಯಶಸ್ವಿಯಾಗಿದ್ದಾರೆ ಮತ್ತು ಕೆಲವರು ಕೆಲ ತಪ್ಪು ನಿರ್ಣಯಗಳಿಂದ ವಿಫಲರಾಗುತ್ತಿದ್ದಾರೆ.
ವಸಂತ್ ಅವರು ತಾವು ಸಾಫ್ಟ್ವೇರ್ ಕ್ಷೇತ್ರವನ್ನು ಏಕೆ ಬಿಟ್ಟರು ಪೂರ್ಣಪ್ರಮಾಣದ ಕೃಷಿಯಿಂದ ಆಗುವ ಲಾಭಗಳೇನು? ಹಳ್ಳಿಗೆ ಬಂದು ಯಶ ಕಾಣಬೇಕಾದರೆ ಯಾವ ಮಾರ್ಗ ಪಾಲಿಸಬೇಕು ಎಂಬುದರ ಕುರಿತು ಪುಸ್ತಕದಲ್ಲಿ ವಿವರವಾಗಿ ವಿವರಿಸಿದ್ದಾರೆ. ಸದ್ಯ ಈ ಲೇಖನದಲ್ಲಿ ನಾನು ಪುಸ್ತಕದ ಬಗ್ಗೆ ಹೇಳುವುದಿಲ್ಲ. ಕನ್ನಡ ಪುಸ್ತಕ ಮಾರಾಟ ಮಾಡುವ ಮಳಿಗೆ ಅಥವಾ ಆನ್ಲೈನ್ ಮುಖಾಂತರ ನೀವು ಪುಸ್ತಕವನ್ನು ಕೊಂಡು ಓದಬಹುದು.

ಸಾವಯವ ಕೃಷಿ ದಿಗ್ಗಜರಾದ ಮೈಸೂರಿನ ಇಂದ್ರಪ್ರಸ್ಥದ ಎಪಿ ಚಂದ್ರಶೇಖರ್ ಅವರ ಅಳಿಯ ವಸಂತ್ ಕಜೆ ಅವರನ್ನು ಸಾಮಾಜಿಕ ಜಾಲತಾಣ ಮತ್ತು ದೂರವಾಣಿ ಮುಖಾಂತರ ಹಲವು ಸಲ
ಸಂಪರ್ಕಿಸಿದ್ದೆನಾದರೂ ಅವರ ತೋಟವನ್ನು ನೋಡಿರಲಿಲ್ಲ
ಕೆಲದಿನಗಳ ಹಿಂದೆ ಕಚೇರಿಯ ಕೆಲಸದ ನಿಮಿತ್ತ ಮಂಗಳೂರಿಗೆ ಹೋದಾಗ ಭಾನುವಾರದ ರಜೆಯೆಂದು ಅವರ ತೋಟ ನೋಡುವ ಅವಕಾಶ ದೊರೆಯಿತು
ಒಬ್ಬ ಕೃಷಿಕ ಹೇಗಿರಬೇಕೆಂದು ತಿಳಿಯಬೇಕಾದರೆ ಒಮ್ಮೆ ನಾವೆಲ್ಲಾ ಅವರನ್ನು ಅವರ ಜೀವನಶೈಲಿಯನ್ನು ನೋಡಲೇಬೇಕು.

ಬಂಟ್ವಾಳ ಸಮೀಪ ಮಂಚಿ ಗ್ರಾಮದಲ್ಲಿ ಸುಮಾರು 20 ಎಕರೆ ಪಿತ್ರಾರ್ಜಿತವಾಗಿ ಬಂದ ಕೃಷಿ ಭೂಮಿಗೆ “ಕಜೆ ವೃಕ್ಷಾಲಯ” ಎಂದು ನಾಮಕರಣ ಮಾಡಿದ್ದಾರೆ.
ಹೆಸರಿಗೆ ತಕ್ಕಂತೆ ಇಲ್ಲಿ ಸಾವಿರದ ಐನೂರಕ್ಕೂ ಹೆಚ್ಚು ಅರಣ್ಯ ಪ್ರಭೇದದ ಸಸ್ಯಗಳಿವೆ.
ಇಂಚಿಂಚು ಜಾಗವನ್ನೂ ಬಿಡದೆ ಕೃಷಿ ಅಥವಾ ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳುವ ನಮಗೆಲ್ಲರಿಗೂ ಕಜೆ ವೃಕ್ಷಾಲಯ ಒಂದು ಅಚ್ಚರಿಯಂತೆ ಕಾಣುತ್ತದೆ.
ಏಕೆಂದರೆ ತೋಟದ ಮಧ್ಯಭಾಗದಲ್ಲಿ ಸುಮಾರು ಆರು ಎಕರೆ ರಕ್ಷಿತಾರಣ್ಯವಿದೆ ಎಂದರೆ ನೀವು ನಂಬಲೇ ಬೇಕು. ಇದು ಸರ್ಕಾರದವರು ಮಾಡುವ ರಕ್ಷಿತಾರಣ್ಯವಲ್ಲ. ಬದಲಾಗಿ ವಸಂತ್ ಅವರು ತಮ್ಮ ಜಮೀನಿನ ಒಳಗೆ ಉಳಿಸಿಕೊಂಡಿರುವ ಅರಣ್ಯ. ಇದರೊಳಗೆ ಒಂದು ಸುಂದರ “ನಾಗ ಬನ” ವಿದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಇಂದಿಗೂ ಅನೇಕ ಸ್ಥಳಗಳಲ್ಲಿ ನಾಗ ಬನಗಳಿವೆಯಾದರೂ ಬಹಳಷ್ಟು ಕಡೆ ಬನ ಅಂದರೆ ಕಾಡಿಗಿಂತ ಹೆಚ್ಚಾಗಿ ಗುಡಿಯ ನಿರ್ಮಾಣವೇ ದೊಡ್ಡದಾಗಿರುತ್ತದೆ.
ವಸಂತ್ ರವರು ಪ್ರಕೃತಿಗೆ ಅತಿ ಕನಿಷ್ಠ ಹಾನಿಯುಂಟು ಮಾಡಿ ಸಣ್ಣದಾದ ನಾಗ ಮಂದಿರವನ್ನು ನಿರ್ಮಿಸಿದ್ದಾರೆ. ಅವರು ಹೇಳುವ ಹಾಗೆ ನಾಗಬನದಲ್ಲಿ ನಿಜವಾಗಲೂ ನಾಗಗಳು ಹರಿದಾಡುವಂತಿರಬೇಕು. ಇದು ಹಾಗೆಯೇ ಇದೆ.

ತೋಟವನ್ನು ಮುಖ್ಯದ್ವಾರದಿಂದ ಪ್ರವೇಶಿಸುವಾಗ ನಾವೊಂದು ಐಷಾರಾಮಿ ರೆಸಾರ್ಟ್ ಒಳಗೆ ಪ್ರವೇಶಿಸುತ್ತಿದ್ದೇವೆ ಎಂಬ ಅನುಭವ ಉಂಟಾಗುತ್ತದೆ.
ಇದಕ್ಕೆ ಕಾರಣ ವಸಂತ್ ಅವರು ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿರುವ ಚಾರ್ಮುಡಿ ಘಾಟ್ ನ ಒಂದು ಬಗೆಯ ಹುಲ್ಲು. ಇದು ಮಣ್ಣಿನ ಸವಕಳಿಯನ್ನು ತಡೆಯುವುದರೊಂದಿಗೆ ಅಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ನಿಸರ್ಗದತ್ತವಾದ ಒಂದು ದೊಡ್ಡ ಬಂಡೆಯ ಮೇಲೆ ಕಜೆ ವೃಕ್ಷಾಲಯ ಎಂಬ ನಾಮಫಲಕವಿದೆ.

ಗೇಟಿನ ಬಲಭಾಗದಲ್ಲಿ ಕೊಳವೆಬಾವಿಯಿದ್ದು ಮಳೆ ನೀರನ್ನು
ಇಂಗಿಸಲು ಒಂದು ಸಣ್ಣ ಗುಂಡಿಯಿದೆ. ಪ್ರತಿವರ್ಷ ಮಳೆನೀರು ಗುಂಡಿಯಲ್ಲಿ ಸಂಗ್ರಹಗೊಂಡು ಹೂಳು ತುಂಬಿ ನೀರಿನ ಸಂಗ್ರಹ ಕುಂಠಿತಗೊಳ್ಳುತ್ತಿದೆ ಇದಕ್ಕೆ ಪರಿಹಾರವೆಂಬಂತೆ ಪ್ರಾತಃಸ್ಮರಣೀಯರಾದ ಶಿವಾನಂದ ಕಳವೆ ಯವರು ಸೂಚಿಸಿರುವ ಟ್ರೆಂಚ್ ಕಮ್ ಬಂಡ್ ಪದ್ಧತಿಯಲ್ಲಿ ಇಳಿಜಾರಿಗೆ ಅಡ್ಡಲಾಗಿ ಬದುಗಳನ್ನು ಇತ್ತೀಚಿಗಷ್ಟೇ ನಿರ್ಮಿಸಿದ್ದಾರೆ. ಬಿದ್ದ ಮಳೆನೀರು ಈ ಕಾಲುವೆಗಳಲ್ಲಿ ಬಸಿಯುತ್ತದೆ ಹೆಚ್ಚಾದ ನೀರಷ್ಟೇ ಬೋರ್ವೆಲ್ ಸಮೀಪದ ಗುಂಡಿಗೆ ಸಾಗುತ್ತದೆ. ಈ ಗುಂಡಿಯೂ ತುಂಬಿದ ನಂತರ ತಿಳಿಯಾದ ನೀರು ಪಕ್ಕದಲ್ಲಿರುವ ಮತ್ತೊಂದು ದೊಡ್ಡ ಹಳ್ಳಕ್ಕೆ ಹರಿಯುತ್ತದೆ. ಇದಿಷ್ಟೇ ಅಲ್ಲದೆ ಪಾರಂಪರಿಕ ಪದ್ಧತಿಯಲ್ಲಿ ದೊಡ್ಡದಾದ ಮದಕ ನಿರ್ಮಿಸಿದ್ದಾರೆ ಒಟ್ಟಿನಲ್ಲಿ ಪ್ರತಿಯೊಂದು ಹನಿ ಮಳೆನೀರು ವ್ಯರ್ಥವಾಗದಂತೆ ಎಚ್ಚರವಹಿಸಿದ್ದಾರೆ.
ಕೃಷಿಯಲ್ಲಿ ಯಶಸ್ಸು ಕಾಣಲು ಇದೇ ಮೊದಲ ಹೆಜ್ಜೆ ಎನ್ನುತ್ತಾರೆ ವಸಂತ್.
ನೀರಿನ ಮಹತ್ವ ಅದರ ಸದ್ಬಳಕೆಯ ಬಗ್ಗೆ ವಿವರಿಸುತ್ತಾ ವಸಂತ್ ಅವರು ತಮ್ಮ ತೋಟವನ್ನು ಒಂದು ಸುತ್ತು ಹಾಕಿಸಿದರು. ಬಹುತೇಕ ಎಲ್ಲ ಭಾಗಗಳಿಗೂ ಹನಿ ನೀರಾವರಿ ಸಂಯೋಜಿಸಿದ್ದಾರೆ.
ಸದಾಕಾಲ ಭೂಮಿಯ ಮೇಲೆ ತರಗೆಲೆಗಳ ಹೊದಿಕೆ ಇರುವ ಕಾರಣ ಮಣ್ಣಿನಿಂದ ತೇವಾಂಶ ಅಷ್ಟು ಸುಲಭವಾಗಿ ಆವಿಯಾಗುವುದಿಲ್ಲ. ಯಾವುದೇ ರಾಸಾಯನಿಕಗಳನ್ನು ಬಳಸದಿರುವುದರ ಜೊತೆಯಲ್ಲಿ ತಿಪ್ಪೆಗೊಬ್ಬರದ ಸಮ್ಮಿಶ್ರಣದಿಂದ ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಾಗಿದೆ.
ಇದರಿಂದಾಗಿ ಹೆಚ್ಚು ದಿನ ತೇವಾಂಶ ಉಳಿಯುತ್ತಿದೆ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

ಗೇಟಿನ ಬಲಗಡೆ ಮಳೆ ನೀರು ಕೊಯ್ಲಿನ ಸಣ್ಣ ಹೊಂಡ ಮತ್ತು ದೊಡ್ಡ ಮದಕವಿದ್ದರೆ, ಎಡಭಾಗದಲ್ಲಿ ವಿಶಾಲವಾದ ಸಸ್ಯ ಕ್ಷೇತ್ರವಿದೆ.
ನೂರಾರು ಬಗೆಯ ಅರಣ್ಯ ಪ್ರಭೇದದ ಮರಗಳು ನಮ್ಮನ್ನು ವಿಸ್ಮಯಕಾರಿ ಲೋಕಕ್ಕೆ ಕೊಂಡೊಯ್ಯುತ್ತದೆ.
ಒಂದೊಂದು ಮರವು ವಿಶೇಷ ಗುಣಸ್ವಭಾವಗಳನ್ನು ಹೊಂದಿವೆ.
ಅಪರೂಪದ ಭೋಜಪತ್ರ ನಮ್ಮನ್ನು ವೇದ ಕಾಲಕ್ಕೆ ಕೊಂಡೊಯ್ಯುತ್ತದೆ. ಇದರ ಕಾಂಡದ ಚಕ್ಕೆಯು A4 ಹಾಳೆಗಳಂತೆ ಇದ್ದು ಅಂದಿನ ಜನರು ಇದರ ಮೇಲೆ ಬರೆಯುತ್ತಿದ್ದರಂತೆ.
ಇನ್ನು ಕಮಂಡಲು ಗಿಡ (ಬೆಗ್ಗರ್ಸ್ ಪಾಡ್) ಎಂಬ ಗಿಡದಲ್ಲಿ ವಿಶಿಷ್ಟವಾದ ಕಾಯಿಗಳು ಬಿಡುತ್ತವೆ. ಇದನ್ನು ಅರ್ಧಕ್ಕೆ ಸೀಳಿದರೆ ಥೇಟ್ ಬಿಕ್ಷಾಪಾತ್ರೆಯನ್ನು ಹೋಲುತ್ತದೆ. ಪರಮೇಶ್ವರನಿಗೆ ಶಾಪದಿಂದ ಕೈಯಲ್ಲಿ ಭಿಕ್ಷಾಪಾತ್ರೆ ಅಂಟಿಕೊಂಡಿರುವುದು ನಮಗೆ ಪುರಾಣಗಳಿಂದ ತಿಳಿಯುತ್ತದೆ. ಈ ಗಿಡದ ಕಾಯಿಯೇ ಅದು ಎಂಬ ನಂಬಿಕೆಯಿದೆ.
ಅದರ ಪಕ್ಕದಲ್ಲಿ ಅನೇಕ ಔಷಧೀಯ ಗುಣಗಳನ್ನು ಹೊಂದಿರುವಂತಹ ಮರಗಳಿವೆ. ಸ್ವಲ್ಪ ಮುಂದೆ ಸಾಗಿದರೆ ನಾವು ದೋಟಿ ಮಾಡಲು ಬಳಸುವ ಬಿದಿರಿನ ಪೊದೆ ಇದೆ. ಈ ಬಿದಿರಿನ ವೈಶಿಷ್ಟವೆಂದರೆ ಬೇರೆ ಬಿದಿರಿನ ಹಾಗೆ ಅಂಕುಡೊಂಕಾಗಿ ಬೆಳೆಯದೆ ನೇರವಾಗಿ ಬೆಳೆಯುತ್ತದೆ. 20 ಅಡಿ ಎತ್ತರವಿದ್ದರೂ ಗಾತ್ರದಲ್ಲಿ ಮಾತ್ರ ಕೈಯಲ್ಲಿ ಹಿಡಿಯಬಹುದಾಗಿರುತ್ತದೆ.
ಇದನ್ನು ದಾಟಿ ಹೋಗುವಾಗ ಅಲ್ಲಲ್ಲಿ ಬಳ್ಳಿಗಳು ಮರಗಳನ್ನು ಅಲಂಕರಿಸಿರುತ್ತದೆ. ಅದರಲ್ಲಿ ನನ್ನ ಮನಸ್ಸಿಗೆ ಇಷ್ಟವಾದದ್ದು ಎರಡು ಬಳ್ಳಿಗಳು. ಒಂದು ಕರಡಿ ಸೊಪ್ಪು. ಶಿವಾನಂದ ಕಳವೆ ಯವರು ಈ ಗಿಡದ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಬಜ್ಜಿ ಮಾಡಲು, ಚಟ್ನಿ ಪುಡಿ, ಚಟ್ನಿ ಮತ್ತಿತರ ಖಾದ್ಯಗಳನ್ನು ತಯಾರಿಸಲು ಈ ಸೊಪ್ಪನ್ನು ಬಳಸಬಹುದಾಗಿದೆ. ಇದರಲ್ಲಿ ಹೊಟ್ಟೆಯ ಹುಳುವನ್ನು ನಿಯಂತ್ರಿಸುವ ಅಂಶವಿದೆ. ಹಾಗಾಗಿ ತಿಂಗಳಿಗೊಮ್ಮೆ ಈ ಸೊಪ್ಪನ್ನು ತಿಂದರೆ ಮಾತ್ರೆಗಳ ಹಂಗಿಲ್ಲದೆ ಹೊಟ್ಟೆ ಹುಳುವನ್ನು ನಿಯಂತ್ರಿಸಬಹುದಾಗಿದೆ.
ಮುಂದೆ ಸಿಕ್ಕ ಬಂದನಾರಿನ ಬಳ್ಳಿಯ ಕುರಿತು ನೀವು ತಿಳಿಯಲೇಬೇಕು. ಇದರ ಒಂದೆರಡು ಹಣ್ಣುಗಳನ್ನು ಸೇವಿಸಿದರೆ ಬೇಸಿಗೆಯ ಬಿಸಿಲಿನಲ್ಲಿ ನಡೆದರೂ ಆಯಾಸವಾಗುವುದಿಲ್ಲ. ಪೂಜ್ಯ ವೆಂಕಟರಮಣ ದೈತೋಟರ ಔಷಧೀಯ ಸಸ್ಯ ಸಂಪತ್ತು ಪುಸ್ತಕದಲ್ಲಿ ಹೆರಿಗೆ ಸಮಯದಲ್ಲಿ ತಾಯಿಯ ಸಾವು ಅಥವಾ ಯಾವುದೇ ಕಾರಣಕ್ಕೆ ಮಗುವಿಗೆ ಎದೆಹಾಲು ದೊರೆಯಲಿಲ್ಲ ಎನ್ನುವ ಸಂದರ್ಭದಲ್ಲಿ ಬಂದನಾರು ಬಳ್ಳಿಯ ಎಲೆಗಳ ಕಷಾಯ ಮಾಡಿ ಹಸುವಿನ ಹಾಲಿನೊಂದಿಗೆ ಬೆರೆಸಿ ಹಸುಗೂಸಿಗೆ ನೀಡುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.

ಈ ರೀತಿಯ ನೂರಾರು ಸಸ್ಯಗಳು ಒಂದು ಸಣ್ಣ ಗುಡ್ಡದ ಮೇಲಿದೆ ಇವುಗಳನ್ನು ನೋಡಿಕೊಂಡು ಮುಂದೆ ಕೆಳಗಿಳಿದರೆ ವಸಂತ್ ಅವರ ಪಾರಂಪರಿಕ ಮನೆ ಇದೆ. ಇದನ್ನು ನೋಡಿದವರಿಗೆ ಶಿವರಾಮ ಕಾರಂತರ ಬೆಟ್ಟದ ಜೀವ ನೆನಪಾಗುವುದು ಖಚಿತ.

ಹೆಣ್ಣು ಕೊಟ್ಟ ಮಾವ ಎಪಿ ಚಂದ್ರಶೇಖರ್ ಅವರಿಂದ ಪ್ರಭಾವಿತರಾಗಿ ಸರಳ ಮತ್ತು ಸುಸ್ಥಿರ ಜೀವನಪದ್ಧತಿಯನ್ನು ಅಳವಡಿಸಿಕೊಳ್ಳುವ ಜೊತೆಗೆ ತೋಟದಲ್ಲಿ ಜೀವವೈವಿಧ್ಯತೆ ಕಾಪಾಡಿಕೊಂಡು ಬಂದಿದ್ದಾರೆ ವಸಂತ್.
ಆದರೆ ಇದಕ್ಕೂ ಮುನ್ನ ಬಾಲ್ಯದಿಂದಲೂ ತಮ್ಮೂರಿನ ಪರಿಸರವೆಂದರೆ ಪಂಚಪ್ರಾಣ.
ಮನೆಯ ಮುಂದೆ ವಿಶಾಲವಾದ ಅಂಗಳ ವಿದ್ದು ಅಡಿಕೆಯನ್ನು ಒಣಗಿಸಲು ಇದನ್ನು ಉಪಯೋಗಿಸುತ್ತಿದ್ದಾರೆ. ಇದನ್ನು ದಾಟಿಕೊಂಡು ಮುಂದೆ ಹೋದಾಗ ಬೃಹತ್ತಾದ ಕಾಡು ಮಾವಿನ ಮರ ಕಾಣಿಸುತ್ತದೆ.
ಬಾಲ್ಯದ ದಿನಗಳಲ್ಲಿ ಈ ಮರವನ್ನು ಕಡಿಯುತ್ತೇವೆ ಎಂದು ಕುಟುಂಬಸ್ಥರು ಹೇಳಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿ ಮರವನ್ನು ಉಳಿಸಿಕೊಂಡು ಬಂದಿದ್ದಾರೆ ವಸಂತ್.
ನಾವು ಇವರ ಮನೆಗೆ ಹೋದಾಗ ಈ ಮಾವಿನ ಹಣ್ಣುಗಳಿಂದ ತಯಾರಿಸಿದ ಐಸ್ ಕ್ರೀಮನ್ನು ನೀಡಿದರು. ಐಸ್ಕ್ರೀಮ್ ತಿನ್ನದ ನಾನು ಅದರ ರುಚಿಗೆ ಮನಸೋತು ಎರಡು ಸಲ ಬಡಿಸಿಕೊಂಡೆ.

ಕೇವಲ ತಾವೊಬ್ಬರೇ ಅಪರೂಪದ ಮರಗಿಡಗಳನ್ನು ಬೆಳೆಸಿದರೆ ಸಾಲದು ಇತರ ಆಸಕ್ತರಿಗೂ ಸಸಿಗಳನ್ನು ನೀಡಬೇಕು ಎಂಬ ಸದುದ್ದೇಶದಿಂದ ಈ ಮಾವಿನ ಮರದ ನೆರಳಿನಲ್ಲಿ ಪಶ್ಚಿಮಘಟ್ಟಗಳ 150ಕ್ಕೂ ಹೆಚ್ಚು ಬಗೆಯ ಅರಣ್ಯ ಸಸಿಗಳ ಸಸ್ಯಾಭಿವೃದ್ಧಿಯನ್ನು ಮಾಡುತ್ತಿದ್ದಾರೆ.
ಇವುಗಳಲ್ಲಿ ಬಹುತೇಕ ಎಲ್ಲವೂ ಅಳಿವಿನಂಚಿಗೆ ಬಂದಿರುವಂತಹ ಸಸ್ಯ ಪ್ರಭೇದಗಳಾಗಿವೆ.

ಈಗಾಗಲೇ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದವರು ವಸಂತ್ ಅವರ ಮಾರ್ಗದರ್ಶನದಲ್ಲಿ ಪುಟ್ಟದಾದ ವನ ನಿರ್ಮಿಸಲು ಸಜ್ಜಾಗಿದ್ದಾರೆ. ನಿಮಗೂ ಇಂತಹ ಅಪರೂಪದ ಸಸ್ಯಗಳನ್ನು ಬೆಳೆಸಲು ಆಸಕ್ತಿ ಇದ್ದರೆ ವಸಂತ್ ರನ್ನು ಸಂಪರ್ಕಿಸಬಹುದಾಗಿದೆ.
ಸಸ್ಯ ಕ್ಷೇತ್ರದಿಂದ ಹಾಗೆ ಮುನ್ನಡೆದರೆ ಅಡಿಕೆ ತೋಟದೊಳಗೆ ಕಾಲಿಡುತ್ತೇವೆ. ಇಲ್ಲೂ ಸಹ ಅಡಿಕೆ ಮರಗಳ ಸಾಲಿನ ನಡುವೆ ಅನೇಕ ರೀತಿಯ ಗಿಡ ಮರಗಳಿವೆ. ಅದರಲ್ಲಿ ಹೆಚ್ಚು ಆಕರ್ಷಕವಾಗಿ ಕಂಡದ್ದು ಮೇಲ್ಮುಖವಾಗಿ ಹಣ್ಣುಗಳನ್ನು ಬಿಡುವ ಬಾಳೆಯ ಪ್ರಭೇದ ಮತ್ತು ಒಲಂಪಿಕ್ ಜ್ಯೋತಿ ಯನ್ನು ಹೋಲುವ ಪಂಜಿನ ಶುಂಠಿ (ಟಾರ್ಚ್ ಜಿಂಜರ್).
ಇನ್ನೂ ಮುಂದೆ ಸಾಗಿದರೆ ಈ ಹಿಂದೆ ವಿವರಿಸಿದಂತೆ ದಟ್ಟವಾದ ಅರಣ್ಯವನ್ನು ಪ್ರವೇಶಿಸುತ್ತೇವೆ. ಸ್ವಾಭಾವಿಕವಾಗಿ ಬೆಳೆದ ಅರಣ್ಯದಲ್ಲಿ ಸಾವಿರದ ಐನೂರಕ್ಕು ಹೆಚ್ಚು ವಿವಿಧ ಸಸ್ಯ ಪ್ರಭೇದಗಳಿವೆ. ನೂರಾರು ಹಕ್ಕಿಪಕ್ಷಿಗಳು, ಹುಳಹುಪ್ಪಟೆಗಳು
ಇಲ್ಲಿ ಆಶ್ರಯ ಪಡೆದಿವೆ.
ಇಂದು ನಾವು ಅಭಯಾರಣ್ಯದೊಳಗೆ ವಾಹನದಲ್ಲಿ ಚಲಿಸಬಹುದು ಆದರೆ ಕಜೆ ವೃಕ್ಷಾಲಯದ ಅರಣ್ಯದಲ್ಲಿ ಕಾಲ್ನಡಿಗೆಯಲ್ಲೇ ಚಲಿಸಬೇಕು
ಅಷ್ಟು ದಟ್ಟವಾಗಿದೆ ಈ ಅರಣ್ಯ.
ಅರಣ್ಯವನ್ನು ಕ್ರಮಿಸಿ ಮುಂದೆ ಸಾಗಿದರೆ ನೂರಾರು ಹೆಬ್ಬಲಸು ದೀವಿಹಲಸು ಮತ್ತಿತರ ಪ್ರಭೇದಗಳು ಕಾಣಿಸುತ್ತವೆ ಇದರ ಮಧ್ಯೆ ಒಂದು ದೊಡ್ಡ ಮಳೆನೀರು ಸಂಗ್ರಹಿಸುವ ಹೊಂಡವಿದೆ. ಇದರ ಹೆಸರೇ ಮದಕ.
ಮದಕದ ಗೋಡೆಗಳು ಮಳೆನೀರಿಗೆ ಸವಿಯದಿರಲು ದಶಕದ ಹಿಂದೆ ಪ್ಲಾಸ್ಟಿಕ್ ಪೊರಕೆ ಬರುವ ಮುನ್ನ ಎಲ್ಲರ ಮನೆಯಲ್ಲಿ ಬಳಸಲಾಗುತ್ತಿದ್ದ ಬೊಂಬಾಯಿ ಪರಕೆಯ ಗಿಡಗಳಿವೆ.
ಪ್ರಸ್ತುತ ಇದರಿಂದ ಐನೂರಕ್ಕೂ ಹೆಚ್ಚು ಪೊರಕೆಗಳನ್ನು ಮಾಡಬಹುದಾಗಿದೆ. ಈ ಸಸ್ಯದ ಬೇರುಗಳು ಮಣ್ಣನ್ನು ಸವೆಯದಂತೆ ಹಿಡಿದಿಟ್ಟುಕೊಳ್ಳುವುದಲ್ಲದೆ ಮೇಲ್ಭಾಗದ ಗರಿಗಳಿಂದ ಪೊರಕೆಗಳನ್ನು ಮಾಡಬಹುದಾಗಿದೆ.

ಇನ್ನೂ ಅನೇಕ ವಿಸ್ಮಯಗಳನ್ನು ಕಂಡು ವಸಂತ್ ಅವರ ಮನೆಗೆ ಹಿಂದಿರುಗಿದಾಗ ದಣಿವಾರಿಸಿಕೊಳ್ಳಲು ಪಕ್ಕದಲ್ಲೇ ಇದ್ದ ತೆರೆದ ಬಾವಿಯಿಂದ ನೀರನ್ನು ಸೇದಿ ನಮಗೆ ನೀಡಿದರು. ಸದಾ ಆರ್ ಓ ವಾಟರ್ ಕುಡಿಯುವ ನಮಗೆ ಬಾವಿಯ ನೀರಿನ ರುಚಿ ಕಂಡು ಆಶ್ಚರ್ಯವಾಯಿತು. ನಮ್ಮ ಸಮೀಪದಲ್ಲೇ ವಸಂತ್ ಅವರ ಅಜ್ಜಿ ಸುಮಾರು 93 ವರ್ಷ ದವರು ಕನ್ನಡ ಪುಸ್ತಕವೊಂದನ್ನು ಓದುತ್ತಿದ್ದರು. ಬಾವಿಯ ನೀರು, ತೋಟದಲ್ಲಿ ಬೆಳೆದ ಸೊಪ್ಪು ತರಕಾರಿ, ಶುದ್ಧವಾದ ಪರಿಸರದಲ್ಲಿರುವ ಕಾರಣ 93 ವರ್ಷವಾದರೂ ಅವರಿಗೆ ಇನ್ನೂ ಓದುವ ಉತ್ಸಾಹವಿದೆ ಎಂದೆನಿಸಿತು.

ಸಾಫ್ಟ್ವೇರ್ ಉದ್ಯೋಗಿಯಾಗಿದ್ದಾಗ ಕೈಗಳಿಗೆ ಕೀಬೋರ್ಡ್ ಮತ್ತು ಮೌಸನ್ನು ಬಳಸುವುದು ಬಿಟ್ಟು ಮತ್ತೇನು ತಿಳಿಯುತ್ತಿರಲಿಲ್ಲ
ಕೃಷಿಕ ಆದಮೇಲೆ ದೇಹ ಗಟ್ಟಿಯಾಗಿದೆ. ತಾಯಿ ಮತ್ತು ಪತ್ನಿಗೆ ಹಾಲುಕರೆಯುವಲ್ಲಿ ಸಹಾಯ ಮಾಡುತ್ತೇನೆ. ಬಹುತೇಕ ತೋಟದ ಎಲ್ಲಾ ಕೆಲಸಗಳನ್ನು ನಾನೇ ಮಾಡುವುದನ್ನು ಕಲೆತಿದ್ದೇನೆ. ಬಿಡುವು ಮಾಡಿಕೊಂಡು ಪತ್ನಿ ಮತ್ತು ಮಕ್ಕಳೊಂದಿಗೆ ಸಂಸ್ಕೃತ ಅಭ್ಯಾಸವನ್ನು ಸಹ ಪ್ರಾರಂಭಿಸಿದ್ದೇವೆ. ಮಕ್ಕಳನ್ನು ಕಲ್ಲಡ್ಕದ ಶ್ರೀರಾಮ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದೇವೆ.
ತೋಟದಲ್ಲಿ ಕೆಲಸ ಮಾಡುವಾಗಲೇ ಪತ್ನಿ ಶಿಲ್ಪಾ ರೊಂದಿಗೆ, ತಂದೆ-ತಾಯಿ ರೊಟ್ಟಿಗೆ ಮನಸು ಬಿಚ್ಚಿ ಮಾತನಾಡುತ್ತೇನೆ. ಮಗ ಪ್ರಚೇತ್ ರಾಮ್ ಮತ್ತು ಮಗಳು ಪ್ರಾಂಜಲೀ ಎಳೆಯ ವಯಸಿನಲ್ಲಿ ಕೃಷಿಕೆಲಸದಲ್ಲಿ ತೊಡಗಿಸಿಕೊಳ್ಳುವ ಅವಕಾಶದೊರೆಯಿತೆಂದು
ಹೆಮ್ಮೆಯಿಂದ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ ವಸಂತ್.
ದಿನದ 24 ಗಂಟೆಯೂ ತೋಟದಲ್ಲಿ ದುಡಿದರೂ ಇನ್ನೂ ಸಾಕಷ್ಟು ಕೆಲಸಗಳು ಉಳಿದಿರುತ್ತವೆ. ಹೀಗಿರುವಾಗ ವಸಂತ್ ಅವರು ತೋಟ, ಮನೆ, ನರ್ಸರಿ, ಸಂಸ್ಕೃತ ಅಭ್ಯಾಸ ಎಲ್ಲವನ್ನು ನಿಭಾಯಿಸಿ ವಿವಿಧ ಪತ್ರಿಕೆಗಳಲ್ಲಿ ಪರಿಸರದ ಕುರಿತು ಅಂಕಣಗಳನ್ನು ಬರೆಯುತ್ತಾರೆ. ಶಾಲಾ-ಕಾಲೇಜುಗಳ ಮಕ್ಕಳಿಗೆ ನೈಸರ್ಗಿಕ ಕೃಷಿ ಮತ್ತು ಪರಿಸರ ಪ್ರಜ್ಞೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಸಂತ್ ಅವರ ಸಾಧನೆ ಬೆಟ್ಟದಷ್ಟಿದೆ ಆದರೆ ನಾನಿಲ್ಲಿ ಬರೆದಿರುವುದು ಕೇವಲ ನನ್ನ ಒಂದು ದಿನದ ಭೇಟಿಯ ನೆನಪುಗಳನ್ನು ಮಾತ್ರ. ಅವರ ಬಗ್ಗೆ ಇನ್ನಷ್ಟು ತಿಳಿಯಲು ಐಟಿಯಿಂದ ಮೇಟಿಗೆ ಪುಸ್ತಕ ಓದಬಹುದು ಮತ್ತು ಸ್ವತಹ ಕಜೆ ವೃಕ್ಷಾಲಯಕ್ಕೆ ಭೇಟಿ ಕೊಡಬಹುದು. ಲಕ್ಷಗಟ್ಟಲೆ ಸಂಬಳದ ಸಾಫ್ಟ್ವೇರ್ ಕೆಲಸ ಬಿಟ್ಟು ಪರಿಸರ ಸ್ನೇಹಿ ಮತ್ತು ನೆಮ್ಮದಿಯ ಜೀವನ ಸಾಗಿಸುತ್ತಿರುವ ವಸಂತ್ ಕಜೆಯವರೊಂದಿಗೆ ಮಾತನಾಡಲು ಸಂಪರ್ಕಿಸಿ
9008666266

ಸಂದೀಪ್ ಮಂಜುನಾಥ್
ಎಂಎಸ್ಸಿ ಕೃಷಿ
ಹುಣಸೂರ

06/07/2025

ನಾಟಿ ಹಸುವಿನ ಸಗಣಿಯಿಂದ ಎರೆಹುಳು ಅಭಿವೃದ್ದಿ. ನಾವೇನು ತಿಪ್ಪೆಗೆ ಎರೆಹುಳು ಬಿಟ್ಟಿಲ್ಲ. ಆದರೆ ನೈಸರ್ಗಿಕವಾಗಿ ಎರೆಹುಳು ಹೆಚ್ಚಾಗಿರಿವುದು ಸಂತಸತಂದಿದೆ. ಅದರಲ್ಲೂ ನಾಟಿ ಹಸುವಿನ ಸಗಣಿಗೆ ಎರೆಹುಳು ವೇಗವಾಗಿ ವೃದ್ದಿಯಾಗಿರುವುದು ಕಂಡುಬಂದಿದೆ. ನಾಟಿ ಹಸುವಿನ ಮಹಿಮೆಯನ್ನು ಎಷ್ಟು ಹೇಳಿದರೂ ಕಡಿಮೆಯೇ. ಹಾಲಿಗಾಗಿ ಅಲ್ಲದೆ ಗೊಬ್ಬರಕ್ಕಾಗಿ ನಾಟಿ ಹಸುಗಳನ್ನು ಸಾಕುವ ಪ್ರಯತ್ನಪಡೋಣ. ಭಾರತೀಯ ಗೋ ಸಂತತಿ ಉಳಿಸೋಣ ಬೆಳೆಸೋಣ. ಆಗಸ್ಟ್ 1 2025 ರಂದು ಗೋಪಾಲ್ಸ್ ತಂಡ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ದೇಸಿ ಗೋವುಗಳ ಉಳಿವಿಗಾಗಿ ವಿಶೇಷ ಹರಿ ಕಥೆ ಕಾರ್ಯಕ್ರಮ ಆಯೋಜಿಸಿದೆ. ಎಲ್ಲರೂ ತಪ್ಪದೇ ಭಾಗವಹಿಸಿ.
ಹೆಚ್ಚಿನ ಮಾಹಿತಿಗಾಗಿ 8148694359, 9742621242, 9966738644

ನಮಸ್ಕಾರ,ನಮ್ಮ ಗೋಪಾಲ್ಸ್ ಸಂಸ್ಥೆಯು ಸ್ಥಳೀಯ ಭಾರತೀಯ ಕೃಷಿ ಪದ್ಧತಿಗಳು, ಪರಿಸರದ ಸಂರಕ್ಷಣೆ ಮತ್ತು ಸಂರಕ್ಷಣೆಗಾಗಿ ಬೇಕಾದ ಜಾಗೃತಿ ಮೂಡಿಸುವ ಕಾರ...
06/07/2025

ನಮಸ್ಕಾರ,

ನಮ್ಮ ಗೋಪಾಲ್ಸ್ ಸಂಸ್ಥೆಯು ಸ್ಥಳೀಯ ಭಾರತೀಯ ಕೃಷಿ ಪದ್ಧತಿಗಳು, ಪರಿಸರದ ಸಂರಕ್ಷಣೆ ಮತ್ತು ಸಂರಕ್ಷಣೆಗಾಗಿ ಬೇಕಾದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಸ್ಥಳೀಯ ಭಾರತೀಯ ಪದ್ಧತಿಗಳನ್ನು ಅನುಮೋದಿಸಿ ಸುಸ್ಥಿರ ಜೀವನಶೈಲಿಗಾಗಿ ಕಳೆದ 11 ವರ್ಷಗಳಿಂದ ಕಾರ್ಯನಿರತವಾಗಿರುವ ವೃತ್ತಿಪರರ (IT ಉದ್ಯೋಗಿಗಳ) ಗುಂಪು ಇದು. ಗೋಪಾಲ್ಸ್ ಹಲವಾರು ರಾಜ್ಯಗಳಲ್ಲಿ ಉಪಕ್ರಮಗಳನ್ನು ನಡೆಸುತ್ತಿದೆ, ಅದರ ಮೂಲಕ ನೂರಾರು ಸಾವಯವ ರೈತರು, ಪರಿಸರ ಮತ್ತು ಪರ್ಯಾಯ ಔಷಧದ ತಜ್ಞರು ಮತ್ತು ಪ್ರಮುಖ ಸಾಮಾಜಿಕ ಕಾರ್ಯಕರ್ತರೊಂದಿಗೆ ಕೈಜೋಡಿಸಿ ಪ್ರಜ್ಞಾಪೂರ್ವಕ ವ್ಯಕ್ತಿಗಳ ದೊಡ್ಡ ಜಾಲವನ್ನು ರಚಿಸಿದ್ದೇವೆ.

ನಮ್ಮ *H.E.A.L (ಆರೋಗ್ಯ, ಪರಿಸರ, ಕೃಷಿ, ಜೀವನಶೈಲಿ)* ಉಪಕ್ರಮದ ಮೂಲಕ ಈ ಪ್ರಯಾಣವನ್ನು ಮುಂದಕ್ಕೆ ಕೊಂಡೊಯ್ಯುತ್ತಾ, ಈ ಆಗಸ್ಟ್ 1, 2025 ರಂದು (ಶುಕ್ರವಾರ) MUSIC2HEAL ಮೂಲಕ ಹರಿಕಥೆಯನ್ನು ಆಯೋಜಿಸಲು ನಾವು ಹೆಮ್ಮೆಪಡುತ್ತೇವೆ, ವಿಶ್ವಪ್ರಸಿದ್ಧ *ಕರ್ನಾಟಕ ಶಾಸ್ತ್ರೀಯ ಗಾಯಕಿ ವಿದುಷಿ ವಿಶಾಖಾ ಹರಿ* ರವರ ಹರಿಕಥಾ ಕಾರ್ಯಕ್ರವನ್ನು ಆಯೋಜಿಸಲಾಗಿದೆ. ವಿದುಷಿ ವಿಶಾಖಾ ಹರಿ ಒಬ್ಬ ಪ್ರಸಿದ್ಧ ಗಾಯಕಿ ಮತ್ತು CA ದಲ್ಲಿ ಚಿನ್ನದ ಪದಕ ಹೊಂದಿದ್ದಾರೆ. ವಿದುಷಿ ವಿಶಾಖ ಹರಿ ಅವರ ಹರಿ ಕಥಾ ಪಠಣದ ಮೂಲಕ, ಭಾರತೀಯ ಗೋವುಗಳ ಮತ್ತು ಭಾರತೀಯ ಸಾಂಪ್ರದಾಯಿಕ ಪದ್ಧತಿಗಳ ಸಂದೇಶವು ಜನಸಾಮಾನ್ಯರಲ್ಲಿ ಪ್ರತಿಧ್ವನಿಸುತ್ತದೆ. ಒಟ್ಟು 1,000 ಸಂಗೀತ ಪ್ರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಲ್ಲೇಶ್ವರಂನಲ್ಲಿರುವ ಚೌಡಯ್ಯ ಸ್ಮಾರಕ ಸಭಾಂಗಣವನ್ನು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೊಂದು ನಿಧಿಸಂಗ್ರಹ ಕಾರ್ಯಕ್ರಮ.

*ಪೇಜಾವರ ಮಠದ ಆಚಾರ್ಯ ವಿಶ್ವಪ್ರಸನ್ನ ತೀರ್ಥ, ಶ್ರೀ ಶ್ರೀಧರ್ ವೆಂಬು (ಜೋಹೊ ಗ್ರೂಪ್)*, ಪ್ರೊ. ಆರ್ ವೈದ್ಯನಾಥನ್ (ಐ.ಐ.ಎಂ.ಬಿ), ಡಾ. ಜಿ ಜಿ ಗಂಗಾಧರನ್ (ಆಯುರ್ವೇದ ವಿಭಾಗದ ಮುಖ್ಯಸ್ಥರು, ರಾಮಯ್ಯ ಆಸ್ಪತ್ರೆ) ಮತ್ತು ಇನ್ನೂ ಅನೇಕ ಗೌರವಾನ್ವಿತ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಭಾರತೀಯ ಕೃಷಿ ಮತ್ತು ಸಾಂಸ್ಕೃತಿಕ ಪದ್ಧತಿಗಳ ಸಂದೇಶವನ್ನು ಪ್ರಚಾರ ಮಾಡಲಾಗುವುದು.

*ನಿಮ್ಮ ಗೌರವಾನ್ವಿತ ಮಾಧ್ಯಮ ಸಂಸ್ಥೆಯು ಈ ಕಾರ್ಯಕ್ರಮದ ಭಾಗವಾಗಲು ಮತ್ತು ಅದನ್ನು ಪ್ರಕಟಿಸಲು ನಾವು ವಿನಂತಿಸುತ್ತೇವೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು MUSIC2HEAL-2025 ಸಹ ಪ್ರಾಯೋಜಕತ್ವವನ್ನು ಸ್ವೀಕರಿಸುತ್ತಿದೆ.*

*ಬುಕ್ ಮೈ ಶೋ* ನಲ್ಲಿ ಟಿಕೆಟ್ ಬುಕಿಂಗ್ ಕೆಳಗಿನ ಲಿಂಕ್‌ನಲ್ಲಿ ಪ್ರಾರಂಭವಾಗಿದೆ:
https://in.bookmyshow.com/events/smt-vishaka-hari-7gs-for-a-successful-life/ET00449675

*ದಯವಿಟ್ಟು ನೇರ ಪಾಸ್‌ಗಳಿಗಾಗಿ ಸಂಪರ್ಕ ಸಂಖ್ಯೆಗಳು:*
8148694359
9742621242
9966738644

*ಪೇಜಾವರ ಮಠ ಸ್ವಾಮಿ ಅವರಿಂದ MUSIC2HEAL 2025 ಕನ್ನಡ:*
https://www.youtube.com/watch?v=lSr5YuX8f6E

*ಯೋಗ ಗುರು ಸುಬ್ಬು ಜಿ ಅವರಿಂದ MUSIC2HEAL 2025 ಇಂಗ್ಲಿಷ್:*
https://www.youtube.com/watch?v=bsnA2GaH3XI

ದಯವಿಟ್ಟು ನಮ್ಮ ವೆಬ್‌ಸೈಟ್ ಅನ್ನು ನೋಡಿ *ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://www.wegopals.com/* ಸಂಪರ್ಕಿಸಿ.

ಅಭಿನಂದನೆಗಳು

ಮಳೆಗಾಲದಲ್ಲಿ ತೋಟದಲ್ಲಿ ಓಡಾಡುವಾಗ ಬಹಳ ಎಚ್ಚರವಾಗಿರಬೇಕು. ಅದರಲ್ಲೂ ಚೀಲ, ಹಳೆಯ ಡಬ್ಬಿ ಇತ್ಯಾದಿಗಳ ಅಡಿಯಲ್ಲಿ ಏನು ಬೇಕಾದರೂ ಇರಬಹುದು. ಇಂದು ನ...
06/07/2025

ಮಳೆಗಾಲದಲ್ಲಿ ತೋಟದಲ್ಲಿ ಓಡಾಡುವಾಗ ಬಹಳ ಎಚ್ಚರವಾಗಿರಬೇಕು. ಅದರಲ್ಲೂ ಚೀಲ, ಹಳೆಯ ಡಬ್ಬಿ ಇತ್ಯಾದಿಗಳ ಅಡಿಯಲ್ಲಿ ಏನು ಬೇಕಾದರೂ ಇರಬಹುದು. ಇಂದು ನಮ್ಮ ತೋಟದಲ್ಲಿ ಕಾಣಿಸಿದ ಕೀಲ್ ಬ್ಯಾಕ್ ಹಾವು. ನಿರುಪದ್ರವಿಯಾದರೂ ನೋಡಿದಾಕ್ಷಣಕ್ಕೆ ಗಾಬರಿಯಾಗುವುದು ಸಹಜ.

06/07/2025

ಮರ ಕಡಿಯದೆ ಪೇಪರ್ ತಯಾರಿಸಬಹುದು. ಕಾಂಗ್ರೆಸ್ ಕಸ (ಪಾರ್ಥೇನಿಯಮ್) ಈರುಳ್ಳಿ ಬೆಳ್ಳುಳ್ಳಿ ಸಿಪ್ಪೆಯಿಂದಲೂ ಪೇಪರ್ ತಯಾರಿ. ಹಸಿಕಸ ಮನೆಯಿಂದ ಹೊರಹೋಗುವುದೇ ಇಲ್ಲ. ಎಲ್ಲದರಿಂದಲೂ ಪರಿಸರ ಸ್ನೇಹಿ ಪೇಪರ್ - ಶ್ರೀ ಲಕ್ಷ್ಮಣ ರಾವ್ ಪವಾರ್

ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಎದುರಿಸಿ ಏಕಾಂಗಿಯಾಗಿ ಸಾವಯವ ರೀತಿ ತೋಟಕಟ್ಟಿ ಹಸು, ಕೋಳಿ ಮತ್ತು ವಿಶೇಷವಾಗಿ ಹಂದಿ ಸಾಕಾಣಿಕೆಯೂ ಮಾಡಿ, ದೇಶವ...
06/07/2025

ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಎದುರಿಸಿ ಏಕಾಂಗಿಯಾಗಿ ಸಾವಯವ ರೀತಿ ತೋಟಕಟ್ಟಿ ಹಸು, ಕೋಳಿ ಮತ್ತು ವಿಶೇಷವಾಗಿ ಹಂದಿ ಸಾಕಾಣಿಕೆಯೂ ಮಾಡಿ, ದೇಶವಿದೇಶಗಳ ಸಾವಿರಾರು ಪ್ರಭೇದಗಳ ಸಸ್ಯಗಳನ್ನು ಬೆಳೆಸುವ ಜೊತೆಗ ಮಕ್ಕಳಿಗೂ ಉತ್ತಮ ಭವಿಷ್ಯ ರೂಪಿಸುವಲ್ಲಿ ಯಶ್ವಿಯಾಗಿರುವ ಮೈಸೂರಿನ ಶ್ರೀಮತಿ ನಳಿನಿ ಅವರ ಕುರಿತು ಶ್ರೀಮತಿ ಸುಧಾ ಸಂದೀಪ್ ಎಂ.ಎಸ್ಸಿ ಕೃಷಿ ಬರೆದ ಲೇಖನ ಈ ವಾರದ ವಿಕ್ರಮ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಬಹುದು.

ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 88929 23338

ಮೈಸೂರಿನ ಇನ್ಫೋಸಿಸ್ ಸಂಸ್ಥೆಯ ಹಿಂಭಾಗದಲ್ಲಿ ನಾವೆಲ್ಲರೂ ನಿಬ್ಬೆರಗಾಗುವಂತೆ ಮಲೆನಾಡಿನಂತಹ ತೋಟ ಕಟ್ಟಿರುವ ಶ್ರೀಮತಿ ನಳಿನಿಯವರ ಸಾಧನೆ ಅಮೋಘವಾದದ್ದು.

ನಮಗೆ ಪರಿಚಯವಿರುವ ಮೈಸೂರು ಸಮೀಪದ ನಾಗನಹಳ್ಳಿಯ ಶ್ರೀಮತಿ ದೇವಕಿ ಅವರು ಬಹಳ ದಿನಗಳಿಂದ ನೀವು ಒಮ್ಮೆ ನನ್ನ ಸ್ನೇಹಿತೆಯಾದ ಶ್ರೀಮತಿ ನಳಿನಿ ಅವರ ತೋಟ ನೋಡಬೇಕು. ತೆಂಗು ಅಡಿಕೆಯಷ್ಟೇ ಅಲ್ಲದೆ ಸಾವಿರಾರು ಪ್ರಭೇದದ ಗಿಡ ಮರಬೆಳೆಸಿದ್ದಾರೆ. ಸಮಗ್ರ ಕೃಷಿ ಪದ್ದತಿಯಲ್ಲಿ ಹಸು, ಕೋಳಿ, ಬಾತು ಕೋಳಿ ಮತ್ತು ವಿಶೇಷವಾಗಿ ಹಂದಿಗಳನ್ನು ಸಾಕುತ್ತಿದ್ದಾರೆ ಎಂದು ಹೇಳಿದ್ದರು. ಅದರಂತೆ ಕಳೆದವಾರ ಬಿಡುವು ಮಾಡಿಕೊಂಡು ಶ್ರೀಮತಿ ನಳಿನಿ ಅವರ ತೋಟಕ್ಕೆ ಭೇಟಿಕೊಟ್ಟೆವು.

ತುಂತುರು ಮಳೆಯಲ್ಲಿ ನಮಗಾಗಿ ಕಾದಿದ್ದ ಅವರು ಕೈಯಲ್ಲಿ ಗಿಡ ಕತ್ತರಿಸುವ ಕಟರ್ ಹಿಡಿದೇ ನಮ್ಮನ್ನು ಸ್ವಾಗತಿಸಿದರು. ಮೈಸೂರಿನ ಇನ್ಫೋಸಿಸ್ ಹಿಂಭಾಗದಲ್ಲಿದ್ದರೂ ಅವರ ಜಮೀನು ಮಂಡ್ಯ ಜಿಲ್ಲೆಗೆ ಸೇರುತ್ತದೆ. ಸುಮಾರು 7.5 ಎಕರೆ ಹಚ್ಚಹಸುರಿನ ತೋಟದ ಪ್ರಾರಂಭದಲ್ಲಿರುವ ಸಣ್ಣ ಗುಡ್ಡದ ಮೇಲೆ ಮನೆ. ಮನೆಯ ಸುತ್ತಾ ಹಲವಾರು ರೀತಿಯ ಹೂವಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಬೋನ್ಸಾಯ್ ಗಳು ಕಣ್ಮನ ಸೆಳೆಯುತ್ತಿದ್ದವು. ಸಂಜೆಯಾಗುತ್ತಿದ್ದರಿಂದ ಮೊದಲು ತೋಟ ನೋಡಿ ನಂತರ ಮನೆಯೊಳಗೆ ಬರುತ್ತೇವೆ ಎಂದೆವು. ಸಂತೋಷ ಮತ್ತು ಉತ್ಸಾಹದಿಂದ ಒಂದೊಂದೇ ಗಿಡಗಳನ್ನು ತೋರಿಸುತ್ತಾ ಇದು ನಿಮ್ಮಲ್ಲಿ ಇದೆಯೇ? ಇಲ್ಲವಾದಲ್ಲಿ ನಾನೊಂದು ಕಡ್ಡಿ ಕೊಡುವೆ ನೀವು ಬೆಳೆಸಿ ಎಂದು ಬಗೆ ಬಗೆಯ ಬಣ್ಣದ ದಾಸವಾಳ ಮತ್ತಿತ್ತರ ಅಲಂಕಾರಿಕ ಸಸ್ಯಗಳ ಗೆಲ್ಲುಗಳನ್ನು ಕಟರ್ ಸಹಾಯದಿಂದ ನಯವಾಗಿ ಕತ್ತರಿಸಿ ಕೊಟ್ಟರು. ತೋಟ ತೋರಿಸುತ್ತಾ ನಳಿನಿ ಅವರು ತಮ್ಮ ಅನುಭವ ಹಂಚಿಕೊಂಡರು.

ಬಾಲ್ಯದಿಂದಲೂ ನನಗೆ ಗಿಡಗಳಂದರೆ ವಿಪರೀತ ಪ್ರೀತಿ. ತಂದೆಯವರು ಸರ್ಕಾರಿ ನೌಕರಿಯಲ್ಲಿದ್ದ ಕಾರಣ ಬೇರೆ ಬೇರೆ ಊರುಗಳಲ್ಲಿರಬೇಕಾಯಿತು. ನಾವಿದ್ದ ಸರ್ಕಾರಿ ಕ್ವಾರ್ಟರ್ಸ್ ಗಳಲ್ಲಿ ವಿಶಾಲವಾದ ಹಿತ್ತಲು ಇರುತಿತ್ತು. ತಾಯಿಯವರು ಮನೆಗೆ ಬೇಕಾದ ಸೊಪ್ಪು ತರಕಾರಿ ಹಣ್ಣು ಹಂಪಲು ಬೆಳೆಯುತ್ತಿದ್ದರು. ನಮಗೆ ಬೇಕಾದಾಗ ಹಿತ್ತಲಿಗೆ ಹೋಗಿ ಬದನೆಕಾಯಿ ಮೆಣಸಿನಕಾಯಿ ನುಗ್ಗೆ ಬಾಳೆ ಇತ್ಯಾದಿ ತಂದು ಅಡಿಗೆ ಮಾಡಿ ಖುಷಿಯಿಂದ ತಿನ್ನುತ್ತಿದ್ದೆವು. ಶಾಲೆಯ ಮುಂದೆ ತಿಳಿ ನೇರಳೆ ಬಣ್ಣದ ಹೂವುಗಳಿರುವ ಒಂದು ಅಲಂಕಾರಿಕ ಮರವಿತ್ತು. ಸಂಜೆಯಾದರೆ ಅನೇಕ ಮಕ್ಕಳು ಅದರ ಅಡಿಯಲ್ಲಿ ಆಟವಾಡಿ ಕೆಲವರು ಅಲ್ಲೇ ಮಲಗುತ್ತಿದ್ದರು. ಅದನ್ನು ನೋಡಿದಾಗೆಲ್ಲಾ ನಾನು ಸಹ ಮರವಾಗಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನಿಸುತ್ತಿತ್ತು. ಹೀಗೆ ಮರಗಿಡಗಳೆಂದರೆ ನನಗೆ ಅಷ್ಟೋಂದು ಇಷ್ಟ. ಮದುವೆಯಾದ ನಂತರ ಈ ಜಾಗಕ್ಕೆ ಬಂದೆವು. ನನ್ನ ದುರಾದೃಷ್ಟಕ್ಕೆ ಸಾಂಸಾರಿಕ ಜೀವನ ಅಷ್ಟಾಗಿ ಸರಿಯಾಗಲಿಲ್ಲ. ಇಬ್ಬರು ಮುದ್ದಾದ ಮಕ್ಕಳಿದ್ದರೂ ಪತಿಗಿದ್ದ ದುಶ್ಚಟಗಳ ಪರಿಣಾಮ ಆರ್ಥಿಕವಾಗಿ ದೊಡ್ಡ ಸಂಕಷ್ಟ ಎದುರಾಯಿತು. 1996ರಲ್ಲಿ ನಮ್ಮ ಅಜ್ಜಿಯ ಊರಾದ ಕೃಷ್ಣರಾಜಪೇಟೆ ಸಮೀಪದ ಕಟ್ಟೆಕ್ಯಾತನಹಳ್ಳಿ ಹಳ್ಳಿಯಿಂದ ಸುಮಾರು 400 ತೆಂಗು ಮತ್ತು ನಾಟನಹಳ್ಳಿಯಿಂದ 850 ಅಡಿಕೆ ಗಿಡಗಳನ್ನು ತಂದು ನೆಟ್ಟೆ. ಇಲವಾಲ ಸಮೀಪವಿರುವ ತೋಟಗಾರಿಕಾ ಕಾಲೇಜಿನಿಂದ ಹದಿನೈದು ಬೇರ ಬೇರೆ ತಳಿಗಳ ಮಾವನ್ನು ಅಂತರ ಬೆಳೆಯಾಗಿ ತೆಂಗಿನ ತೋಟದಲ್ಲಿ ಬೆಳೆಸುವ ಪ್ರಯತ್ನ ಮಾಡಿದೆ. ಆದರೆ ತೆಂಗಿನೊಳಗೆ ಮಾವು ಸರಿಯಾಗಿ ಬರುವುದಿಲ್ಲವೆಂದು ನಂತರ ತಿಳಿಯಿತು.

ನಿತ್ಯ ಆದಾಯಕ್ಕೆ ಹೈನುಗಾರಿಕೆ : ಪತಿಯಿಂದ ಯಾವುದೇ ಆದಾಯ ನಿರೀಕ್ಷಿಸದ ನಾನು ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಮನೆ ಖರ್ಚಿಗೆ ಹೈನುಗಾರಿಕೆ ಪ್ರಾರಂಭಿಸಿದೆ. ಹೆಚ್ಚು ಹಾಲು ನೀಡುವ ಮತ್ತು ಕಡಿಮೆ ರೋಗಭಾದೆಯಿರುವ ಜೆರ್ಸಿ ಮತ್ತು ಗೀರ್ ಸಂಕರಣ ತಳಿ, ನಾಟಿ ಕ್ರಾಸ್ ಮಿಶ್ರತಳಿ ಹಸುಗಳನ್ನು ಸಾಕಲು ಪ್ರಾರಂಭಿಸಿದೆ. ಸಾವಯವದ ಮೇಲಿರುವ ಒಲವಿನಿಂದ ಮತ್ತು ಕಡಿಮೆ ಖರ್ಚಿನ ದೃಷ್ಠಿಯಿಂದ ಯಾವುದೇ ಕೃತಕ ರಾಸಾಯನಿಕ ಒಳಸುರಿಗಳನ್ನು ತೋಟಕ್ಕಾಗಲೀ ಹಸುಗಳಿಗಾಗಲಿ ನೀಡುವುದಿಲ್ಲ. ಗ್ರಾಹಕರು ಒಮ್ಮೆ ಈ ಹಾಲಿನ ರುಚಿ ನೋಡಿದಮೇಲೆ ಮತ್ತಾವ ಹಾಲನ್ನು ಒಪ್ಪುವುದಿಲ್ಲ. ಹಾಗಾಗಿ ಹಾಲಿಗೆ ಖಾಯಂ ಗ್ರಾಹಕರಿದ್ದಾರೆ. ನಿತ್ಯ ಹಾಲು ಕರೆದು ನಾನೇ ವಾಹನ ಚಲಾಯಿಸಿಕೊಂಡು ಅವರಿಗೆ ತಲುಪಿಸುತ್ತೇನೆ. ಹೆಚ್ಚಾದ ಹಾಲನ್ನು ಡೈರಿಗೆ ಹಾಕುವೆ. ಹಸುಗಳಿಗೆ ರೋಗ ಬಂದರೆ ನನ್ನ ಸಂಭಂದಿಕರೊಬ್ಬರು ಪಶುವೈದ್ಯರಾದ ಕಾರಣ ಅವರ ಸಲಹೆಮೇರೆಗೆ ಕೆಲ ಮನೆ ಮದ್ದು, ಹೋಮಿಯೋಪತಿ ಮತ್ತಿತ್ತರೆ ಪರ್ಯಾಯ ಔಷಧಗಳನ್ನು ನೀಡುತ್ತೇವೆ. ತೆಂಗಿನ ತೋಟದಲ್ಲಿ ಮೇಯಲು ಕೆಲಕಾಲ ಬಿಟ್ಟರೂ ಕೊಟ್ಟಿಗೆಯಲ್ಲಿ ಕಟ್ಟಿದಾಗ ಮೆಲ್ಲಲ್ಲು ಕೆಲ ಬಗೆಯ ನೇಪಿಯರ್ ಹುಲ್ಲು ಬೆಳೆಸಿದ್ದೇವೆ.
ಹಸುಗಳ ಜೊತೆ ನಾಟಿ ಕೋಳಿಗಳನ್ನು ಸಾಕಿ ಮೊಟ್ಟೆ ಮಾರುತ್ತೇವೆ. ಆದರೆ ಕೇವಲ ಇಷ್ಟರಿಂದ ನಮ್ಮ ಆರ್ಥಿಕಮಟ್ಟ ಸುಧಾರಿಸಲಿಲ್ಲ.

ಕಸದಿಂದ ರಸ ಮತ್ತು ಆರ್ಥಿಕ ಭದ್ರತೆ ನೀಡಿದ ಹಂದಿ ಸಾಕಾಣಿಕೆ:
ಮಗ ಈಶ್ವರ್ ನ ಸಲಹೆಯಂತೆ ಕಡಿಮೆ ಖರ್ಚು ಹೆಚ್ಚು ಆದಾಯ ತರುವ ಹಂದಿ ಸಾಕಾಣಿಕೆ ಮಾಡಲು ಮುಂದಾದೆವು. ಯಾರ್ಕಶೈರ್, ಡ್ಯೂರಿಕ್, ಲ್ಯಾಂಡ್ ರೇಸ್ ಮಿಶ್ರತಳಿಗಳ ಹಂದಿ ಮರಿಗಳನ್ನು ತಂದೆವು. ಅವುಗಳಿಗೆ ಸರಿಯಾದ ಗೂಡಿನ ವ್ಯವಸ್ಥೆಯಾಯಿತು. ಆದರೆ ಇವುಗಳಿಗೆ ಮೇವು ಒದಗಿಸುವುದೇ ಸವಾಲಾಯಿತು. ಪ್ರಾರಂಭದಲ್ಲಿ ಬೆಮೆಲ್ ಸಂಸ್ಥೆಯ ಕ್ಯಾಂಟೀನ್ ನಿಂದ ಅಡುಗೆ ತ್ಯಾಜ್ಯ ಸಂಗ್ರಹದ ಟೆಂಡರ್ ಪಡೆದೆವಾದರೂ ನಂತರ ತ್ಯಾಜ್ಯಕ್ಕೂ ಬೇಡಿಕೆ ಹೆಚ್ಚಾದ್ದರಿಂದ ಇದು ದುಬಾರಿಯಾಯಿತು. ಹಾಗಾಗಿ ಹತ್ತಿರದ ಕೆಲ ಹೋಟೆಲ್ ನವರ ಸಂಪರ್ಕ ಸಾಧಿಸಿ ತ್ಯಾಜ್ಯ ಶೇಕರಿಸಿಕೊಂಡು ತಂದು ಹಂದಿಗಳಿಗೆ ಮೇವಾಗಿ ನೀಡುತ್ತಿದ್ದೇವೆ. ಒಂದು ವೇಳೆ ಈ ರೀತಿ ತ್ಯಾಜ್ಯ ಸಿಗದಿದ್ದ ಪಕ್ಷದಲ್ಲಿ ಪಾಲೀಶ್ ತೌಡು ಮತ್ತು ಹಿಂಡಿ ಹಾಕಿ ಮೇವು ನಿರ್ವಹಿಸುತ್ತೇವೆ. ಹಂದಿಗಳು ಬಹು ಬೇಗ ಸಂತಾನಾಭಿವೃದ್ದಿ ಮಾಡುತ್ತವೆ. ಗಂಡು ಹೆಣ್ಣುಗಳಿಗೆ ಪ್ರತ್ಯೇಕ ಕೋಣೆಗಳಿವೆ. ಗರ್ಭಧರಿಸುವ ವರೆಗೆ ಗಂಡು ಹೆಣ್ಣುಗಳನ್ನು ಒಟ್ಟಿಗೆ ಒಂದೇ ಕೋಣೆಯಲ್ಲಿ ಬಿಡುತ್ತೇವೆ. ನಂತರ ಹೆಣ್ಣು ಹಂದಿಯನ್ನು ಪ್ರತ್ಯೇಕ ಕೋಣೆಯಲ್ಲಿ ಬಿಡುತ್ತೇವೆ. ಮರಿಹಾಕಿದ ಮೇಲೆ 45ದಿನ ಅಮ್ಮನ ಹಾಲನ್ನು ಮರಿಗಳು ಸಂತೃಪ್ತವಾಗಿ ಕುಡಿದು ಬೆಳೆಯುತ್ತವೆ. ನಂತರ ಮರಿಗಳನ್ನು ಪ್ರತ್ಯೇಕಿಸಿ ಅವುಗಳಿಗೆ ಬೇರೆ ಆಹಾರ ನೀಡಿ ಹಾಲು ಬಿಡಿಸುತ್ತೇವೆ.
ಪ್ರತಿ ಮೂರು ತಿಂಗಳಿಗೆ ನಮ್ಮಲ್ಲಿ 60-70ಮರಿಗಳಾಗುತ್ತವೆ. ಉತ್ತಮ ಗುಣಮಟ್ಟದ ಮರಿಗಳನ್ನು ಸಾಕುವವರಿಗೆ ಮಾರುತ್ತೇವೆ. ಪ್ರತಿನಿತ್ಯ ಎರಡು ಸಲ ಜೋರಾಗಿ ನೀರು ಹಾಕಿ ಗೂಡು ತೊಳೆಯುತ್ತೇವೆ. ಹಂದಿ ತ್ಯಾಜ್ಯ ಒಂದೆಡೆ ಸಂಗ್ರಹವಾಗಿ ಉತ್ಕೃಷ್ಟ ಗೊಬ್ಬರವಾಗುತ್ತದೆ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ಹಸುವಿನ ಸಗಣಿ ಗೊಬ್ಬರದೊಂದಿಗೆ ತೋಟಕ್ಕೆ ನೀಡಿದೆರೆ ಭರಪೂರ ಫಸಲು ತೆಗೆಯಬಹುದು ಎಂಬುದು ನಮ್ಮ ವೈಯಕ್ತಿಕ ಅನುಭವ.

ಈ ರೀತಿ ಸಮಗ್ರ ಕೃಷಿಯಿಂದ ದೊರೆಯುತ್ತಿದ್ದ ಆದಾಯದಲ್ಲಿ ಮಗ ಈಶ್ವರ್ ಮೆಕಾನಿಕಲ್ ಇಂಜಿನಿಯರ್ ಪದವಿ ಪಡೆದು ಭಾರತೀಯ ವಾಯು ಸೇವೆಯಲ್ಲಿದ್ದರೆ, ಮಗಳು ಸಮೀಕ್ಷ ಮೆಕಾಟ್ರಾನಿಕ್ಸ್ ಸ್ನಾತಕೋತ್ತರ ಪದವಿ ಪಡೆದು ಲಂಡನ್ ನಗರದ ಪ್ರತಿಷ್ಠತಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತಿದ್ದಾಳೆ. ಸಮಗ್ರ ಸಾವಯವ ಕೃಷಿಯಿಂದ ಮಕ್ಕಳನ್ನು ಓದಿಸುವ ಜೊತೆಗ ನನಗಿಷ್ಟದ ಗಿಡಗಳನ್ನು ಖರೀದಿಸಿ ಸಂತಸ ಪಡುವಹಾಗಾಗಿದೆ
ಎನ್ನುತ್ತಾರೆ ನಳಿನಿಯವರು.

ಹತ್ತಾರು ಬಗೆಯ ದಾಸವಾಳ, ಮಲ್ಲಿಗೆ, ಜಾಜಿ, ಅಲಮೆಂಡಾ ರೀತಿಯ ಹೂವುಗಳು, ಟಾರ್ಚ್ ಜಿಂಜರ್ ಹೆಲಿಕೋನಿಯಾ ಪ್ರಭೇದಗಳು, ಕೇದಿಗೆ, ಸಂಪಿಗೆ, ಪಾರಿಜಾತ ಪುಷ್ಪಗಳು, ಹತ್ತಾರು ಆಲದ ಜಾತೀಯ ಬೋನ್ಸಾಯ್ಗಳು, ಲೆಕ್ಕವಿಲ್ಲದಷ್ಟು ಕ್ಯಾಕಟ್ಸ್ ಸಕ್ಯುಲೆಂಟ್ಸ್ ಗಿಡಗಳು, ಹಲಸು, ಜೀಗುಜ್ಜೆ, ಬೆಣ್ಣೆಹಣ್ಣು, ದೊಡ್ಡ ಗಾತ್ರದ ಚಳ್ಳೆ ಹಣ್ಣು, ಸೀತಾಫಲ, ರಾಮ ಫಲ ವಾಟರ್ ಆಪಲ್ ಪೀನಟ್ ಬಟರ್, ಕಮಲದ್ರಾಕ್ಷಿ ರೀತಿಯ ಹಣ್ಣುಗಳು, ನಿಂಬೆಹಿಲ್ಲು, ಹಿಂಗು, ಬರ್ಸೆರಾ, ಚಕ್ಕೆ, ಸರ್ವಸಾಂಬಾರ ರೀತಿಯ ಸುಗಂಧ ಮತ್ತು ಸಾಂಬಾರ ಪ್ರಭೇದಗಳು, ದೊಡ್ಡ ಪತ್ರೆ, ಶಂಕಪುಷ್ಪ, ಟಿಂಚರ್ ಗಿಡ, ಅಮೃತಬಳ್ಳಿ, ಮಂಗನ ಬಳ್ಳಿ, ಒಂದೆಲಗ ರೀತಿಯ ಹತ್ತಾರು ಔಷಧಿಯ ಸಸ್ಯಗಳು ಸೇರಿ ದೇಶ ವಿದೇಶಗಳ ಅಪರೂಪದ ಸಾವಿರಾರು ಪ್ರಭೇದದ ಗಿಡಗಳ ಸಂಗ್ರಹ ಇವರ ಬಳಿಯಿದೆ. ಏಕಾಂಗಿಯಾಗಿ ಇಷ್ಟು ವರ್ಷಗಳ ಕಾಲ ತೋಟ ನಿಭಾಯಿಸುವುದೆಂದರೆ ಸುಲಭವಲ್ಲ. ಜೀವನದಲ್ಲಿ ನೊಂದು ಬೆಂದು ಮಕ್ಕಳಿಗಾಗಿ ಉಸಿರಿಡುಕೊಂಡು ಈ ಮಟ್ಟಿನ ಸಾಧನೆ ಮೆಚ್ಚುವಂತಹದ್ದು.

ತೋಟ ಕಟ್ಟಿರುವುದಷ್ಟೇ ಅಲ್ಲದೆ ಮಕ್ಕಳಿಗೆ ಸಂಸ್ಕಾರ ತುಂಬಿದ್ದಾರೆ. ಹಾಲು ಕರೆಯುವಾಗ ಮಕ್ಕಳೊಂದಿಗೆ ರಾಮಾಯಣ, ಮಹಾಭಾರತ ಮತ್ತಿತರ ಪುರಾಣ ಇತಿಹಾಸಗಳ ಕುರಿತು ಚರ್ಚೆ ಮಾಡುತ್ತಿರುತ್ತಾರೆ. ವಿಶೇಷವಾಗಿ ನಮ್ಮ ಹಿರಿಯರಿಗಿದ್ದ ಪ್ರಕೃತಿ ಪ್ರೇಮ ಎಂತಹದ್ದು ಎಂಬುದರ ಬಗ್ಗೆ ಸದಾ ಚರ್ಚಿಸಿರುತ್ತಾರೆ.
ಉದಾಹರಣೆಗೆ ಶ್ರಾವಣದಲ್ಲಿ ಬಹುತೇಕ ಎಲ್ಲ ಪ್ರಾಣಿಗಳು ಗರ್ಭದರಿಸುತ್ತವೆ. ಹಾಗಾಗಿ ಆ ಸಮಯದಲ್ಲಿ ಮಾಂಸಾಹಾರ ವರ್ಜ್ಯ ಎಂದು ನಮ್ಮ ಹಿರಿಕರು ನಿಯಮ ರೂಡಿಸಿರುತ್ತಾರೆ. ಅವರ ಎಷ್ಟೋ ಆಚರಣೆಗಳಲ್ಲಿ ವೈಜ್ಞಾನಿಕ ಸತ್ಯವಿದೆ ಎಂಬುದು ಇವರ ಅನುಭವಕ್ಕೆ ಬಂದಿರುತ್ತದೆ.

ಕೃಷಿಯಲ್ಲಿನ ತಮ್ಮ ಶ್ರಮಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಕೇವಲ ಕೃಷಿಯಷ್ಟೇ ಅಲ್ಲದೆ ಚಿತ್ರಕಲೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮನೆಯೊಳಗಿನ ವಿನ್ಯಾಸವನ್ನು ಕಾಡು ಮರಗಳ ರೆಂಬೆಗಳಿಂದ ಚಿತ್ತಾಕರ್ಶಕವಾಗಿ ವಿನ್ಯಾಸಗೊಳಿಸಿದ್ದಾರೆ. ಒಟ್ಟಿನಲ್ಲಿ ಸಕಲಾಕಲಾವಲ್ಲಭೆಯಾಗಿ ನಮ್ಮೆಲ್ಲಿರಿಗೂ ಸ್ಫೂರ್ತಿಯಾಗಿದ್ದಾರೆ ಶ್ರೀಮತಿ ನಳಿನಿಯವರು.
- ಸುಧಾ ಸಂದೀಪ್ ಎಂ.ಎಸ್ಸಿ ಕೃಷಿ ಹುಣಸೂರು.

ಸಣ್ಣ ಜಾಗದಲ್ಲಿ ತೋಟ, ಗದ್ದೆ, ಜೇನು ಕೃಷಿ, ಹೈನುಗಾರಿಕೆ, ಎರೆಹುಳು ಗೊಬ್ಬರ ಘಟಕ ಸೇರಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡಿರುವ ಶ್ರೀ ಗಣಪತಿ ಅವ...
05/07/2025

ಸಣ್ಣ ಜಾಗದಲ್ಲಿ ತೋಟ, ಗದ್ದೆ, ಜೇನು ಕೃಷಿ, ಹೈನುಗಾರಿಕೆ, ಎರೆಹುಳು ಗೊಬ್ಬರ ಘಟಕ ಸೇರಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡಿರುವ ಶ್ರೀ ಗಣಪತಿ ಅವರ ಕುರಿತು ಶ್ರೀ ಸಂದೀಪ್ ಮಂಜುನಾಥ್ ಎಂ.ಎಸ್ಸಿ ಕೃಷಿ ಹುಣಸೂರು ಅವರ ಬರೆದ ಲೇಖನ ಈ ವಾರದ ವಿಕ್ರಮ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತರು ಓದಿ ಇತರರೊಂದಿಗೆ ಹಂಚಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 99453 73007

ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 8892923338

ಮೈಸೂರು ಜಿಲ್ಲೆ ಹುಣಸೂರು ತಾ ಕುಡಿನೀರ್ ಮುದ್ದನಹಳ್ಳಿ ಗ್ರಾಮದ ಕೃಷಿಕ ಶ್ರೀ ಗಣಪತಿ ಅವರು ಸಣ್ಣ ಜಾಗದಲ್ಲಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಮಾದರಿ ಕೃಷಿಕರಾಗಿದ್ದಾರೆ. ಕೇವಲ 1.5 ಎಕರೆ ಜಾಗದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಲವು ಉಪಕಸುಬುಗಳನ್ನು ಜೋಡಿಸಿಕೊಂಡಿರುತ್ತಾರೆ. ಮುಂದೆ ಅವರಿಂದಲೇ ಅವರ ಕೃಷಿ ಬದುಕಿನ ಕುರಿತು ತಿಳಿಯೋಣ.

ಮೂಲತಃ ನಾವು ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದವರು. ಆದರೆ ತಂದೆಯವರು ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಮೈಸೂರಿನಲ್ಲಿ ಬಾಲ್ಯವನ್ನು ಕಳೆದೆವು. ಪೋಲೀಸ್ ಇಲಾಖೆಯಿಂದ ನಿವೃತ್ತಿಯಾದ ಮೇಲೆ ಸುಮಾರು 2೦ ವರ್ಷಗಳ ಹಿಂದೆ ಗದ್ದಿಗೆ ಸಮೀಪದ ಕುಡಿನೀರ್ ಮುದ್ದನಹಳ್ಳಿಯಲ್ಲಿ 3 ಎಕರೆ ಜಮೀನು ಖರೀದಿಸಿ ತೋಟ ಕಟ್ಟಲು ಪ್ರಾರಂಭಿಸಿದೆವು. ವಿಧ್ಯಾಬ್ಯಾಸದ ನಂತರ ಸ್ವರಾಜ್ ಮಾಸ್ಡಾ ಕಂಪೆನಿ ಸೇರಿ ಪುಣೆ, ಮುಂಬೈ,ಚಂಡೀಘಡ ಸೇರಿ ಹಲವು ನಗರಗಳಲ್ಲಿ ಕೆಲ ಕಾಲ ಉದ್ಯೋಗ ಮಾಡಿದೆ. ಮದುವೆಯಾದ ಮೇಲೆ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುವ ಬದಲು ನಮ್ಮೂರಿನಲ್ಲೇ ಸ್ವಂತವಾಗಿ ಕೃಷಿ ಮಾಡಲು ನಿರ್ಧರಿಸಿದೆ.

3 ಎಕರೆಯ ಜೊತೆ ಇನ್ನೂ 3 ಎಕರೆ ಗದ್ದೆ, 2 ಎಕರೆ ಹೊಲ ತಂದೆಯವರು ಖರೀದಿಸಿದರು. ಆದರೆ ನನ್ನ ಪಾಲಿಗೆ ಬಂದದ್ದು 1.5 ಎಕರೆ ಮನೆ ಹಿಂದಿನ ತೋಟ ಮತ್ತು ಎರಡು ಎಕರೆ ಗದ್ದೆ. ಗದ್ದೆಯಲ್ಲಿ ಭತ್ತ ಬೆಳೆದು ನಂತರ ತರಕಾರಿ ಕೃಷಿ ಮಾಡುತ್ತಿದ್ದೆವು. ಇತ್ತ ತೋಟದಲ್ಲಿ ಅಡಿಕೆ ಕಾಫೀ ಬಟರ್ ಫ್ರೂಟ್ ಕಾಳು ಮೆಣಸು ಸೇರಿ ಕೆಲ ಅಂತರ ಬೆಳೆ ಬೆಳೆಯುತ್ತಿದ್ದೆವು. ಬಹುತೇಕ ಎಲ್ಲದಕ್ಕೂ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದೆವು. ಆದರೆ ದಿನೇ ದಿನೇ ಎಷ್ಟೇ ಗೊಬ್ಬರ ಬಳಸಿದರೂ ಇಳುವರಿ ಹೆಚ್ಚು ಸಿಗುತ್ತಿರಲಿಲ್ಲ. ಜೊತೆಗೆ ಖರ್ಚು ಹೆಚ್ಚಾಗುತ್ತಿತ್ತು. ಬೆಳೆದ ಬೆಳೆಗೆ ಸರಿಯಾದ ಬೆಲೆಯೂ ಸಿಗದೆ ನಷ್ಠ ಅನುಭವಿಸಿದೆವು. ಹಾಗಾಗಿ ಇದಕ್ಕೆ ಪರ್ಯಾಯ ಏನು ಎಂಬ ಆಲೋಚನೆಯಲ್ಲಿದ್ದಾಗ ತಿಳಿದದ್ದೇ ಸಾವಯವ ಕೃಷಿ. ಸಾಮಾಜಿಕ ಜಾಲತಾಣ ಮತ್ತು ಕೆಲ ಸ್ನೇಹಿತರ ತೋಟಗಳಿಗೆ ಭೇಟಿಕೊಟ್ಟು ಸಾವಯವ ಕೃಷಿಯ ಕುರಿತು ತಿಳಿಯುವ ಪ್ರಯತ್ನವಾಯಿತು. ಕಳೆದ 6 ವರ್ಷಗಳಿಂದ ಯಾವುದೇ ರಾಸಾಯನಿಕ ಬಳಸುತ್ತಿಲ್ಲ. ಪ್ರಸ್ತುತ ನನ್ನ ಪಾಲಿಗೆ ಬಂದಿರುವ 1.5 ಎಕರೆಯಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಸುಸ್ಥಿರ ಜೀವನ ಸಾಗಿಸುತ್ತಿದ್ದೇವೆ.

ಅಡಿಕೆಯಲ್ಲಿ ಅಂತರ ಬೆಳೆಗಳು : 6 ವರ್ಷದ ಅಡಿಕೆ ಮರಗಳಿದ್ದು ಅದರ ಜೊತೆ ಬಗೆ ಬಗೆಯ ಬಾಳೆ, ಕಾಫೀ, ಜೊತೆ ಜಾಯಿಕಾಯಿ, ಕಾಳು ಮೆಣಸು, ಏಲಕ್ಕಿ, ಬಟರ್ ಫ್ರೂಟ್, ನಿಂಬೆ, ವಾಟರ್ ಆಪಲ್ ಗಿಡಗಳನ್ನು ಬೆಳೆಸಿದ್ದೇವೆ. ಅದರಲ್ಲೂ ಬಾಳೆಯನ್ನು ಗುಂಪು ಪದ್ದತಿ ಅಂದರೆ ಹೊಸ ಕಂದುಗಳನ್ನು ತೆಗೆಯದೆ ಸಹಜವಾಗಿ ಬೆಳೆಯಲು ಬಿಟ್ಟಿದ್ದೇವೆ.

ಗೊಬ್ಬರಕ್ಕಾಗಿ ಹಸು ಸಾಕಾಣಿಕೆ : ಎರಡು ಹಸುಗಳು ಮತ್ತು ಕರುಗಳಿದ್ದು ಇದರ ಸಗಣಿ ಬಳಸಿ ಎರೆಹುಳು ಗೊಬ್ಬರ ತಯಾರಿಸುತ್ತೇವೆ.
ಬಾಳೆ ಗೊನೆ ಕತ್ತರಿಸಿದ ನಂತರ ಉಳಿಯುವ ಎಲೆ ಕಾಂಡ ಮತ್ತು ಅಡಿಕೆ ಎಲೆಗಳನ್ನು ಮುಚ್ಚಿಗೆಯಾಗಿ ಬಳಸಿ ನಂತರ ಕರಗಿ ಗೊಬ್ಬರವಾಗಲು ಬಿಡುತ್ತೇವೆ. ಉಳಿಮೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ ಪರಿಣಾಮ ಮಣ್ಣಿನಲ್ಲಿ ಸಾಕಷ್ಟು ಎರೆಹುಳುಗಳಿವೆ.
ಇದೇ ಹುಳುಗಳಿಂದ ಎರೆಹುಳು ಗೊಬ್ಬರ ತಯಾರಿಸುತ್ತಿದ್ದೇವೆ. ನಮ್ಮ ತೋಟದಲ್ಲಿ ಒಂದು ಪ್ಲಾಸ್ಟಿಕ್ ಎರೆಹುಳು ತೊಟ್ಟಿಯಿದೆ. ಕೃಷಿ ತ್ಯಾಜ್ಯ ಮತ್ತು ಸಗಣಿಯನ್ನು ಪದರ ಪದರವಾಗಿ ತುಂಬಿಸಿ ನಂತರ ಎರೆಹುಳು ಬಿಡುತ್ತೇವೆ. ಈ ಘಟಕದಿಂದ ಎರೆಹುಳು ಗೊಬ್ಬರ ಮತ್ತು ಎರೆ ಜಲ ದೊರೆಯುತ್ತಿದೆ. ಹೆಚ್ಚಾದ ಸಗಣಿಯನ್ನು ತೋಟದ ಎರಡು ಮೂರು ಕಡೆ ತಿಪ್ಪೆಗುಂಡಿಯಲ್ಲಿ ಸುರಿಯುತ್ತೇವೆ. ಗುಂಡಿ ಸಂಪೂರ್ಣ ತುಂಬಿದ ಮೇಲೆ ಗರಿಗಳಿಂದ ಮುಚ್ಚಲಾಗುತ್ತದೆ. 15-20 ದಿನಗಳ ನಂತರ ಎರೆಹುಳು ಬಿಡುವ ಕಾರಣ ಗೊಬ್ಬರವಾಗುವ ಪ್ರಕ್ರಿಯೆ ವೇಗಪಡೆಯುತ್ತದೆ. ವರ್ಷಕ್ಕೆ ಎರಡು ಸಲ ಇದೇ ಗೊಬ್ಬರವನ್ನು ಗಿಡಗಿಳಿಗೆ ನೀಡುತ್ತೇವೆ.

ಹನಿ ಮತ್ತು ತುಂತುರು ನಿರಾವರಿ ವ್ಯವಸ್ಥೆ: ಗಿಡಗಳಿಗೆ ನೀರು ನೀಡಲು ಹನಿ ನಿರಾವರಿ ಮತ್ತು ತುಂತುರು ನೀರಾವರಿ ಪದ್ದತಿ ಅಳವಡಿಸಿದ್ದೇವೆ. ಜೀವಾಮೃತ, ಗೋ ನಂದಾ ಜಲ, ವೇಸ್ಟ್ ಡಿಕಾಂಪೋಸರ್, ಮೀನಿನ ದ್ರಾವಣಗಳನ್ನು ಹನಿ ನೀರಾವರಿ ಮೂಲಕ ಪೂರೈಸುತ್ತೇವೆ.

ನಾಟಿ ಕೋಳಿ ಸಾಕಾಣಿಕೆ : ಸಮಗ್ರ ಕೃಷಿಯ ಭಾಗವಾದ ಹಸು ಸಾಕಾಣಿಕೆಯ ಜೊತೆ ನಾಟಿ ಕೋಳಿಗಳನ್ನು ಸಹ ಸಾಕುತ್ತಿದ್ದೇವೆ. ರೈತನಿಗೆ ಆಪತ್ಕಾಲದಲ್ಲಿ ಸಣ್ಣ ಪುಟ್ಟ ಖರ್ಚುಗಳಿಗೆ ಇವುಗಳು ಅತ್ಯಂತ ಸಹಕಾರಿಯಾಗುತ್ತದೆ.

ಮನೆ ಬಳಕೆಗೆ ಕೈ ತೋಟ : ಮನೆಯ ಸುತ್ತ ಗಾಂಧಾರಿ ಮೆಣೆಸು, ಬೀನ್ಸ್, ತೊಂಡೆ, ಕೆಸು, ಬಸಳೆ, ಬೆಂಡೆ ಇತ್ಯಾದಿ ಸೊಪ್ಪು ತರಕಾರಿ ಬೆಳೆಯುತ್ತೇವೆ.

ಜೇನು ತುಪ್ಪಕ್ಕಾಗಿ ಅಲ್ಲ ಜೇನು ಹುಳು ಸಂವರ್ಧನೆಗೆ ಜೇನು ಕೃಷಿ : ಕರಾವಳಿ ಮಲೆನಾಡಿನಲ್ಲಿ ಜೇನು ತುಪ್ಪ ಪಡೆಯಲೆಂದೇ ಜೇನು ಹುಳು ಸಾಕಾಣಿಕೆ ಮಾಡುವವರು ಹಲವರಿದ್ದಾರೆ. ರಾಜ್ಯದ ನಂಬರ್ ಒನ್ ಜೇನು ಕೃಷಿಕರಾದ ಮನಮೋಹನ್ ಇರ್ದೆ ರೀತಿಯ ದೊಡ್ಡ ಜೇನು ಕೃಷಿಕರನ್ನು ಭೇಟಿಯಾಗಿರುವೆ. ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಜೇನು ಕೃಷಿ ತರಬೇತಿ ಪಡೆದು ಕಳೆದ ಒಂದು ವರ್ಷದಿಂದ ಜೇನು ಸಾಕಾಣಿಕೆ ಮಾಡುತ್ತಿರುವೆ. ಮೈಸೂರು ಸೇರಿದಂತೆ ಬಯಲು ಸೀಮೆ ಪ್ರದೇಶದಲ್ಲಿ ಜೇನು ತುಪ್ಪದ ಇಳುವರಿ ಕಡಿಮೆ. ಇದರ ಜೊತೆಗೆ ನನಗೆ ತುಪ್ಪಕ್ಕಿಂತ ಹೆಚ್ಚಾಗಿ ಹುಳುಗಳ ಸಂವರ್ಧನೆ ಮುಖ್ಯ. ಪ್ರಾರಂಭದಲ್ಲಿ 2-3 ಪೆಟ್ಟಿಗೆಗಳನ್ನು ಖರೀದಿಸಿದ ನಾನು ಅವುಗಳಿಂದಲೇ 25-30 ಪೆಟ್ಟಿಗೆಗಳನ್ನು ಮಾಡಿರುವೆ. ಆಸಕ್ತರಿಗೆ 7 ಫ್ರೇಮ್ ತುಂಬಾ ಹುಳುಗಳಿರುವ ಪೆಟ್ಟಿಗೆ ಮಾರಾಟ ಮಾಡುತ್ತೇನೆ. ಇದರಿಂದ ಹೊಸ ಜಾಗದಲ್ಲಿ ಹುಳುಗಳು ಪೆಟ್ಟಿಗೆ ಬಿಟ್ಟು ಹೋಗುವ ಸಂಭವ ಕಡಿಮೆ. ತುಪ್ಪಕ್ಕಾಗೇ ಜೇನು ಸಾಕುವವರಿಗೂ ಇದರಿಂದ ಅನುಕೂಲವಾಗುತ್ತದೆ. ಆಸಕ್ತರಿಗೆ ತಪಬೇತಿ ಸಹ ನೀಡುತ್ತೇವೆ. ಅಕ್ಕ ಪಕ್ಕದ ಊರುಗಳಲ್ಲಿ ಕೆಲವೊಮ್ಮೆ ತೋಟ ಮನೆ, ಸ್ಟಾಟರ್ ಬಾಕ್ಸ್ ಹಳೆಯ ಕಟ್ಟಡಗಳಲ್ಲಿ ತುಡವೆ ಜೇನು ಗೂಡುಗಳಿದ್ದರೆ ಅವುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತೇನೆ. ಮನೆಯ ಸುತ್ತ ಹತ್ತಕ್ಕೂ ಹೆಚ್ಚು ಮಿಶ್ರಿ ಜೇನು ಪಡೆಗಳಿವೆ. ಇವುಗಳು ಚುಚ್ಚುವುದಿಲ್ಲವಾದ್ದರಿಂದ ಯಾರು ಬೇಕಾದರೂ ಸುಲಭವಾಗಿ ಇದನ್ನು ಸಾಕಬಹುದು. ತುಡವೆ ಜೇನು ನೀಡುವಷ್ಟು ತುಪ್ಪ ಸಿಗದಿದ್ದರೂ ಸಿಗುವ ಸ್ವಲ್ಪ ತುಪ್ಪವೇ ಬಹಳ ಪರಿಣಾಮಕಾರಿ. ಸಾಕಷ್ಟು ಔಷಧೀಯ ಅಂಶಗಳಿರುತ್ತದೆ. ಇವೆಲ್ಲದಕ್ಕಿಂತ ಮಿಗಿಲಾಗಿ ಸುತ್ತಮುತ್ತ ಮೂರು ಕಿಮೀ ದೂರದಲ್ಲಿರುವ ತೋಟದ ಗಿಡ ಮರಗಳಿಗೆ ಉತ್ತಮ ಪರಾಗಸ್ಪರ್ಶವಾಗುತ್ತದೆ.
ಪಕ್ಕದ ಊರಿನ ಸ್ನೇಹಿತರೊಬ್ಬರು ಇಷ್ಟುದಿನ ನಮ್ಮಲ್ಲಿ ಅಷ್ಟಾಗಿ ಜೇನು ಹುಳು ಕಾಣಿಸುತ್ತಿರಲಿಲ್ಲ ನೀವು ಜೇನು ಕೃಷಿ ಪ್ರಾರಂಭಿಸಿದ ಮೇಲೆ ನಮ್ಮ ತೋಟಕ್ಕೆ ಸಾಕಷ್ಟು ಜೇನು ಹುಳುಗಳು ಆಗಮಿಸುತ್ತಿದ್ದು ಇಳುವರಿಯೂ ಸುಧಾರಿಸುತ್ತಿದೆ ಎನ್ನುವಾಗ ನಮ್ಮ ಕಾರ್ಯ ಸಾರ್ಥಕವಾಯಿತು ಎನಿಸುತ್ತದೆ. ಪರಿಸರ ವಿಜ್ಞಾನಿಗಳ ಅನ್ವಯ ಜೇನು ಸಂತತಿ ನಾಶವಾದ ನಾಲ್ಕೇ ವರ್ಷಗಳಲ್ಲಿ ಮಾನವನ ಸಂತತಿ ಕೂಡ ನಾಶವಾಗುತ್ತದೆ. ಜೇನು ಹುಳುಗಳಿಲ್ಲವಾದರೆ ಪರಾಗ ಸ್ಪರ್ಶವಿಲ್ಲ ನಮಗೆ ತಿನ್ನಲು ಆಹಾರ ಸಿಗುವುದಿಲ್ಲ. ಹಾಗಾಗಿ ವಿಷ ರಾಸಾಯನಿಕಗಳ ಬಳಕೆ ಕಡಿಮೆ ಮಾಡಬೇಕು. ಹೆಚ್ಚು ಹೆಚ್ಚು ಹೂವು ಬಿಡುವಂತ ಗಿಡ ಮರಗಳನ್ನು ಬೆಳೆಸಬೇಕು. ಇದರಿಂದ ಜೇನು ಹುಳುಗಳಿಗೆ ಮಕರಂದ ಮತ್ತು ಪರಾಗ ಸದಾ ಲಭಿಸುತ್ತದೆ.
ಸರಳವಾದ ತರಬೇತಿ ಪಡೆದು ಸಣ್ಣ ಜಾಗದಲ್ಲೂ ಪ್ರತಿಯೊಬ್ಬ ರೈತ ಕನಿಷ್ಟ ಎರಡು ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ಕೃಷಿ ಪ್ರಾರಂಬಿಸಬಹುದು ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ ಗಣಪತಿ ಅವರು. ಹೀಗೆ ಪುಟ್ಟ ಜಾಗದಲ್ಲಿ ಸಮಗ್ರ ಕೃಷಿ ಪದ್ದತಿಯಿಂದ ಸುಸ್ಥಿರ ಜೀವನ ಸಾಗಿಸುತ್ತಿದ್ದಾರೆ ಗಣಪತಿ. ಇವರಿಗೆ ಜೊತೆಯಾಗಿ ಪತ್ನಿ ಶ್ರೀಮತಿ ಯಮುನಾ ಮತ್ತು ಪತ್ರಿಯರಾದ ಟೀನಾ ಮತ್ತು ರೀನಾ ಸಹಕಾರ ನೀಡುತ್ತಿದ್ದಾರೆ.
ನಿಮಗೂ ಜೇನು ಕೃಷಿ ತರಬೇತಿ ಮತ್ತು ಜೇನು ಪೆಟ್ಟಿಗೆಗಳು ಬೇಕಿದ್ದರೆ ಸಂಪರ್ಕಿಸಿ +91 99453 73007

ಸಂದೀಪ್ ಮಂಜುನಾಥ್ ಎಂ.ಎಸ್ಸಿ ಕೃಷಿ ಹುಣಸೂರು.

Address

S4 Naturals. Opposite Hunsur Plywood Factory BM Road Hunsur
Hunsur
571105

Alerts

Be the first to know and let us send you an email when Sudha & Sandeep Manjunath posts news and promotions. Your email address will not be used for any other purpose, and you can unsubscribe at any time.

Contact The Business

Send a message to Sudha & Sandeep Manjunath:

Share