25/09/2025
ಬಹುಬೆಳೆ ಪದ್ದತಿಯಲ್ಲಿ ಬರದಲ್ಲೂ ಬಂಗಾರದ ಬೆಳೆ ಪಡೆದು, ಎಲ್ಲ ರೈತ ಮಹಿಳೆಯರಿಗೂ ಸ್ಫೂರ್ತಿಯಾದ ಮಧುಗಿರಿ ತಾ।ಲಕ್ಷ್ಮಿದೇವಿಪುರದ ಶ್ರೀಮತಿ ಸಂಧ್ಯಕ್ಕ ಅವರ ಕುರಿತು ಶ್ರೀಮತಿ ಸುಧಾ ಸಂದೀಪ್ ಎಂ.ಎಸ್ಸಿ.ಕೃಷಿ ಅವರು ಬರೆದ ಲೇಖನ ವಿಕ್ರಮ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಿ.
ಸಂಧ್ಯಕ್ಕ ಅವರ ಸಂಪರ್ಕ ಸಂಖ್ಯೆ
+91 77956 16408
ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 90350 06777
ಮೊನ್ನೆ ಬೆಂಗಳೂರಿನ ನೆಂಟರ ಮನೆಗೆ ಹೋದಾಗ ಚೀಲದ ತುಂಬ ತಾಜಾ ಸೊಪ್ಪು ತರಕಾರಿಗಳಿದ್ದವು. ಇಂತಹ ಬರದಲ್ಲೂ ಇಷ್ಟು ಒಳ್ಳೆ ತಾಜಾ ತರಕಾರಿ ಯಾರು ತಂದುಕೊಟ್ಟರಕ್ಕ ಎಂದು ನಮ್ಮ ಅತ್ತೆ ಮಗಳನ್ನು ಕೇಳಿದಾಗ ಅವರ ತಂಗಿ ಸಂಧ್ಯಾ ಊರಿನಿಂದ ನಮಗಷ್ಟೇ ಅಲ್ಲದೆ ಉಳಿದ ನಾಲ್ಕಾರು ನೆಂಟರಿಷ್ಟರ ಮನೆಗಳಿಗೆ ಪ್ರತಿ ವಾರ ಸೊಪ್ಪು ತರಕಾರಿ ಕಳುಹಿಸುತ್ತಾಳೆ ಎಂದರು. ಈಗಾಗಲೇ ಈ ಅಂಕಣದ ಹಲವು ಲೇಖನಗಳಲ್ಲಿ ಸಂಧ್ಯಕ್ಕನ ಬಗ್ಗೆ ಉಲ್ಲೇಖಿಸಿದ್ದರೂ ಅವರ ಕುರಿತಾದ ಪ್ರತ್ಯೇಕ ಲೇಖನ ಬರೆದಿರಲಿಲ್ಲ. ೧೮ನೇ ವಯಸ್ಸಿಗೆ ಮದುವೆಯಾಗಿ ಎರಡು ಮಕ್ಕಳು ಚಿಕ್ಕವರಿರುವಾಗಲೇ ಗಂಡ ತೀರಿಕೊಳ್ಳುತ್ತಾರೆ. ಆದರೂ ಧೃತಿಗೆಡದೆ ಇಬ್ಬರು ಮಕ್ಕಳನ್ನು ಇಂಜಿನಿಯರ್ ಗಳನ್ನಾಗಿ ಮಾಡಿರುವ ಸಂಧ್ಯಕ್ಕ ನಿಜವಾಗಿಯೂ ನಮಗೆಲ್ಲಾ ಸ್ಫೂರ್ತಿ.
ನನಗೆ ೩ ವರ್ಷ ವಿರುವಾಗ ನನ್ನ ತಂದೆ ತೀರಿಕೊಳ್ಳುತ್ತಾರೆ. ತಾಯಿ ಕಮಲಮ್ಮರಿಗೆ ಮೂವರು ಸಣ್ಣ ಮಕ್ಕಳು. ಅದರಲ್ಲಿ ನಾನೇ ಕೊನೆಯವಳು. ಎಲ್ಲಾ ಮಕ್ಕಳನ್ನು ಒಬ್ಬರೇ ಸಾಕುವುದು ಕಷ್ಟವೆಂದು ಸೋದರಮಾವ ನನ್ನನು ಅವರ ಊರಾದ ಕೊರಟಗೆರೆಯ ಬುರುಗನಹಳ್ಳಿಗೆ ಕರೆದೊಯ್ದರು. ಮಾವನ ಮಕ್ಕಳೊಂದಿಗೆ ನಾನು ಹತ್ತನೇ ತರಗತಿವರೆಗೆ ಅಲ್ಲೇ ವ್ಯಾಸಂಗ ಮಾಡಿದೆ. ಅಲ್ಲೇ ನನಗೆ ಮಾವನ ಕಿರಿ ಮಗಳಾದ ಸಂಧ್ಯಕ್ಕ ಪರಿಚಯವಾಗಿದ್ದು. ಬಾಲ್ಯದಲ್ಲಿ ಉಮಕ್ಕ ನಂತರ ಸಂಧ್ಯಕ್ಕ ನನಗೆ ತಲೆಗೆ ಸ್ನಾನಮಾಡಿಸಿ, ಬಟ್ಟೆ ಸ್ವಚ್ಛ ಮಾಡಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮದ್ದು ವ್ಯವಸಾಯ ಕುಟುಂಬವಾದರೂ ಮಕ್ಕಳು ಚೆನ್ನಾಗಿ ಓದಲೆಂದು ಕೃಷಿಕಾರ್ಯಗಳಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುತಿರಲಿಲ್ಲ. ಸಂಧ್ಯಕ್ಕನಿಗೆ ಇನ್ನು ಸರಿಯಾಗಿ 18 ತುಂಬಿರಲಿಲ್ಲ ಆದರೂ ಸಂಬಂಧ ಕೂಡಿಬಂತೆಂದು ಮಧುಗಿರಿ ಸಮೀಪದ ಲಕ್ಷ್ಮೀದೇವಿಪುರಕ್ಕೆ ಮದುವೆ ಮಾಡಿಕೊಟ್ಟರು. ಕಾಂತರಾಜ್ ಅವರದ್ದು ಕೂಡು ಕುಟುಂಬ. ಅಣ್ಣ ತಮ್ಮಂದಿರೆಲ್ಲಾ ಸೇರಿ ಕೆರೆ ಪಕ್ಕದಲ್ಲಿರುವ ಹಳ್ಳದ ಜಮೀನಿನಲ್ಲಿ ಭತ್ತ ಮತ್ತು ದಿಣ್ಣೆ ಮೇಲಿರುವ ಜಮೀನಿನಲ್ಲಿ ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದರು. ಸ್ವಲ್ಪ ಭಾಗದಲ್ಲಿ ಬೆಳೆಯುತ್ತಿದ್ದ ರೇಷ್ಮೆಯಿಂದ ಬದುಕು ಸಾಗಿಸುತ್ತಿದ್ದರು. ಸಂಧ್ಯಕ್ಕನಿಗಾಗ 27 ಇರಬೇಕು. ಇಬ್ಬರು ಗಂಡುಮಕ್ಕಳನ್ನು ಇನ್ನೇನು ಶಾಲೆಗೆ ಸೇರಿಸಬೇಕೆನ್ನುವಷ್ಟರಲ್ಲಿ ಪತಿ ತೀರಿಕೊಳ್ಳುತ್ತಾರೆ. ಸಂಧ್ಯಕ್ಕನಿಗೆ ಆಗಸವೇ ತಲೆಮೇಲೆ ಬಿದ್ದಹಾಗೆ ಆಗುತ್ತದೆ. ಆದರೂ ಮಕ್ಕಳಿಗೋಸ್ಕರ ಸಂಧ್ಯಕ್ಕ ಜೀವಗಟ್ಟಿಯಾಗಿ ಹಿಡಿದುಕೊಂಡು ಏನಾದರೂ ಮಾಡಿ ಮಕ್ಕಳನ್ನು ದಡಸೇರಿಸಬೇಕೆಂದು ನಿಶ್ಚಯಿಸುತ್ತಾರೆ. ಪತಿ ತೀರಿಕೊಂಡ ನಂತರ ಕುಟುಂಬದಲ್ಲಿ ವೈಮನಸ್ಯ ಪ್ರಾರಂಭವಾಗುತ್ತದೆ. ಆದರೂ ಸಂಧ್ಯಕ್ಕ ತನ್ನ ಪಾಲಿನ ಭೂಮಿ ಕಷ್ಟಪಟ್ಟು ಪಡೆಯುತ್ತಾರೆ. ಇನ್ನು ಹರೆಯದ ಒಂಟಿ ಹೆಣ್ಣನ್ನು ಸಮಾಜ ಹೇಗೆ ನೋಡುತ್ತದೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೂ ಧೃತಿಗೆಡದೆ ಸಂಧ್ಯಕ್ಕ ಎಲ್ಲವನ್ನು ನಿಭಾಯಿಸುತ್ತಾರೆ. ಅದೇ ಸಮಯದಲ್ಲಿ ಅಂಗನವಾಡಿ ಶಿಕ್ಷಕರ ನೇಮಕಾತಿ ನಡೆಯುತಿರುತ್ತದೆ. ಸಂಧ್ಯಕ್ಕನಿಗೆ ಬೆಂಗಳೂರಿನಲ್ಲಿ ಕೆಲಸ ಸಿಗುತ್ತದೆ. ಆದರೂ ಸಂಧ್ಯಕ್ಕನ ಮನಸ್ಸು ಊರಿನಲ್ಲಿತ್ತು. ಸಾಮಾನ್ಯವಾಗಿ ಹಳ್ಳಿಯಿಂದ ಪೇಟೆಗೆ ಕೆಲಸಕ್ಕೆ ಹೋಗುತ್ತಾರೆ. ಆದರೆ ಸಂಧ್ಯಕ್ಕ ಬೆಂಗಳೂರಿನಿಂದ ಊರಿಗೆ ವರ್ಗಾವಣೆ ಬಯಸಿ ಪರಸ್ಪರ ಹೊಂದಾಣಿಕೆ ಮೇಲೆ ಊರಿನ ಹತ್ತಿರವಿರುವ ಅಂಗನವಾಡಿಗೆ ವರ್ಗಾವಣೆಗೊಳ್ಳುತ್ತಾರೆ. ತವರಿನಲ್ಲಿ ಅಷ್ಟಾಗಿ ವ್ಯವಸಾಯ ಮಾಡದಿದ್ದರೂ ಈಗ ಅವರಿವರನ್ನು ನೋಡಿ ಕೇಳಿ ತಿಳಿದು ವ್ಯವಸಾಯ ಮಾಡಲು ಪ್ರಾರಂಭಿಸುತ್ತಾರೆ. ಪ್ರತಿ ನಿತ್ಯ ಸೂರ್ಯ ಹುಟ್ಟುವ ಮೊದಲೇ ಜಮೀನಿನ ಕೆಲಸ ಮಾಡಿ ಮತ್ತೆ ಮನೆಗೆ ಬಂದು ಅಡುಗೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿ ತಾನೂ ನಾಲ್ಕಾರು ಕಿಮೀ ನಡೆದು ಅಂಗನವಾಡಿಗೆ ಹೋಗುತ್ತಿರುತ್ತಾರೆ. ಸಂಜೆ ಅಂಗನವಾಡಿ ಕೆಲಸ ಮುಗಿಸಿ ಜಮೀನಿಗೆ ಬಂದು ಕೆಲಸಮಾಡಿ ಮಕ್ಕಳನ್ನು ನೋಡಿಕೊಳ್ಳುತಿರುತ್ತಾರೆ. ಸಾಧ್ಯವಾದಷ್ಟು ಆಳುಗಳಲ್ಲಿದ್ದೆ ತಾವೇ ಎಲ್ಲ ಕೆಲಸ ಮಾಡಿಕೊಳ್ಳುತ್ತಾರೆ.
ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಬರಪೀಡಿತ ಪ್ರದೇಶ ಎನ್ನಬಹುದಾದ ಮಧುಗಿರಿ ಸಮೀಪದ ಹಳ್ಳಿಯಲ್ಲೂ ಸಂಧ್ಯಕ್ಕನ ಜಮೀನು ಕೆರೆಯ ಪಕ್ಕದಲ್ಲಿರುವ ಕಾರಣ ಬಾವಿಯಲ್ಲಿ ಸದಾ ನೀರಿರುತ್ತದೆ. ಹಳ್ಳದ ಜಮೀನಿನಲ್ಲಿ ಭತ್ತ ಮತ್ತು ಹತ್ತಿ ಬೆಳೆಯುತ್ತಾರೆ. ಮಳೆಬಾರದೆ ಬರ ಎದುರಾದರೂ ಬಯಲು ಸೀಮೆಯ ಕಲ್ಪವೃಕ್ಷ ಎನ್ನಬಹುದಾದ ಹುಣಸೇ ಹಣ್ಣು ಕೈಹಿಡಿಯುತ್ತದೆ.
ಬೇಸಿಗೆಯಲ್ಲಿ ಸಂಧ್ಯಕ್ಕ ತಮ್ಮ ಎರಡು ಹುಣಸೆ ಮರಗಳ ಜೊತೆಗೆ ಅಕ್ಕಪಕ್ಕದ ಹುಣಸೆ ಮರಗಳನ್ನು ಗುತ್ತಿಗೆ ಪಡೆದು ಹುಣಸೆ ಹಣ್ಣು ಕೊಡವಿಸುತ್ತಾರೆ. ನಂತರ ಬಿಡಿಸಿ ಹಣ್ಣನ್ನು ಮಾರುತ್ತಾರೆ. ಅಂತರ ಬೆಳೆಯಾಗಿ ಬೆಳೆದ ಹರಳಿನಿಂದ ಹರಳೆಣ್ಣೆ ಬೇಯಿಸುತ್ತಾರೆ. ಹರಳೆಣ್ಣೆ ಬೇಯಿಸುವುದೇ ಒಂದು ವಿಶೇಷ. ಊರಿನ ನಾಲ್ಕಾರು ಹೆಂಗಸರು ಒಟ್ಚಾಗಿ ತಾವು ಕೂಡಿಟ್ಚ ಹರಳು ಬೀಜಗಳನ್ನು ಒಂದೆಡೆ ಬಾಣಲೆಯಲ್ಲಿ ಹುರಿಯುತ್ತಾರೆ. ನಂತರ ಎಲ್ಲರೂ ಸರತಿಯಲ್ಲಿ ದೊಡ್ಡ ಗುಂಡುಕಲ್ಲಿನ ಸಹಾಯದಿಂದ ರುಬ್ಬುತ್ತಾರೆ. ಈ ರುಬ್ಬಿದ ಮುದ್ದೆಯನ್ನು ದೊಡ್ಡ ಹಂಡೆಗೆ ಹಾಕುತ್ತಾರೆ. ರಾತ್ರಿಯಲ್ಲಾ ಸೌದೆ ಹಾಕಿ ಹಂಡೆಯಲ್ಲಿ ನೀರಿನ ಜೊತೆ ಹರಳಿನ ಮುದ್ದೆಯನ್ನು ಐದಾರು ಗಂಟೆ ಕುದಿಸುತ್ತಾರೆ. ಹಿರಿಯ ಮತ್ತು ಅನುಭವಸ್ತರಿಗೆ ಹದ ಗೊತ್ತಾಗುತ್ತದೆ. ತಕ್ಷಣ ಒಲೆ ಆರಿಸಿ ಎಣ್ಣೆಯನ್ನು ಬಗ್ಗಿಸಿಕೊಳ್ಳಬೇಕು. ಇಷ್ಟು ಮಾಡುವುದರಲ್ಲಿ ಬೆಳಗಾಗಿರುತ್ತದೆ. ಬಹುಶಃ ಇದಕ್ಕೆ ಏನೋ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸಮಾಡಬೇಕು ಎನ್ನುವ ಮಾತು ಹುಟ್ಟಿರುವುದು. ಇಷ್ಟೆಲ್ಲಾ ಆದಮೇಲೆ ದೇಹಕ್ಕೆ ತಂಪು ನೀಡುವ ಗಮಗಮ ಹರಳೆಣ್ಣೆ ಸಿದ್ದವಾಗುತ್ತದೆ. ನಂತರ ಎಲ್ಲ ಮಹಿಳೆಯರು ತಮ್ಮ ಪಾಲಿನ ಹರಳಿಗೆ ಅನುಸಾರವಾಗಿ ಎಣ್ಣೆ ಹಂಚಿಕೊಳ್ಳುತ್ತಾರೆ. ಇಂದು ಬಹುತೇಕ ಹಳ್ಳಿಗಳಲ್ಲಿ ಇಂತಹ ಕೂಡುವಿಕೆಯ ವಾತಾವರಣವೇ ಇಲ್ಲವಾಗಿರುವುದು ಆತಂಕ ಮೂಡಿಸುತ್ತದೆ.
ನಾವು ಮದುವೆಯಾದ ಮೇಲೆ ಪತಿ ಸಂದೀಪನಿಗೆ ಸಂಧ್ಯಕ್ಕ ಪರಿಚಯವಾಗುತ್ತಾರೆ. ಸಂಧ್ಯಕ್ಕ ಎಂದರೆ ಅವರಿಗೆ ಬಹಳ ಗೌರವ. ಸುಭಾಷ್ ಪಾಳೇಕರ್ ತರಬೇತಿ ಕಾರ್ಯಕ್ರಮಕ್ಕೂ ಸಂಧ್ಯಕ್ಕನನ್ನು ಕರೆದು ಕೊಂಡು ಹೋಗಿದ್ದೆವು. ಮೊದಲಿಂದಲೂ ಅಷ್ಟಾಗಿ ಗೊಬ್ಬರ ಉಪಯೋಗಿಸುತ್ತಿರಲ್ಲಿಲವಾದರೂ ಹತ್ತಿ ಬೆಳೆಗೆ ಸ್ವಲ್ಪ ಪ್ರಮಾಣದ ರಾಸಯನಿಕ ಗೊಬ್ಬರ ಬಳಸುತ್ತಿದ್ದರು. ತರಬೇತಿಯ ನಂತರ ಹಲವು ಬಗೆಯ ಸಿರಿಧಾನ್ಯಗಳನ್ನು ಮಿಶ್ರ ಬೆಳೆಪದ್ದತಿಯಲ್ಲಿ ಬೆಳೆದರು. ಸಿದ್ದಸಣ್ಣ ಭತ್ತ ಬೆಳೆದು ನಮಗೂ ರುಚಿಹತ್ತಿಸಿದರು. ಇವತ್ತಿಗೂ ನಮ್ಮ ಮನೆಯಲ್ಲಿ ಸೋನಾಮಸೂರಿ ಬದಲಿಗೆ ಸಿದ್ದಸಣ್ಣ ಬಳಸುತ್ತಿದ್ದೇವೆ ಎಂದರೆ ಅದಕ್ಕೆ ಸಂಧ್ಯಕ್ಕನೇ ಕಾರಣ. ಭತ್ತ ಬೆಳೆದು ಸಂಧ್ಯಕ್ಕ ಮತ್ತು ಮಕ್ಕಳೇ ಕಟಾವು ಮಾಡುತ್ತಾರೆ. ಹೊರೆಕಟ್ಟಲು ಕತ್ತಾಳೆ ಎಲೆಗಳನ್ನು ಜೋಪಾನವಾಗಿ ಕತ್ತರಿಸಿ ಅದರಿಂದ ನಾರು ತೆಗೆದು ಹೊರೆಕಟ್ಟುತ್ತಾರೆ. ಕತ್ತಾಳೆ ಎಲೆ ಕತ್ತರಿಸುವುದು ಅಷ್ಟು ಸುಲಭವಲ್ಲ. ಒಂದಿಷ್ಚು ಯಾಮಾರಿದರೂ ಅದರಿಂದ ಬರುವ ರಸದಿಂದ ಚರ್ಮ ತುರಿಸುತ್ತದೆ. ಸುಲಭವಾಗಿ ನೈಲಾನ್ ದಾರ ಸಿಗುವ ಈ ಸಮಯದಲ್ಲಿ ಇಂತಹ ನೈಸರ್ಗಿಕ ನಾರು ತೆಗೆಯುವ ಕಲೆ ಅಳಿವಿನಂಚಿನಲ್ಲಿರುವುದು ನೋವಿನ ಸಂಗತಿಯಾಗಿದೆ.
ಮೊದಲ ಮಳೆಗೆ ಭೂಮಿ ಹದ ಮಾಡಿ ನೆಲಗಡಲೆ, ಅದರ ಮಧ್ಯೆ ಅಲಸಂದೆ, ಹೆಸರು, ಉದ್ದು, ತೊಗರಿ, ಹರಳು, ಜೋಳ, ಬೆಂಡೆ, ಬದನೆ, ಮೆಣಸಿನಕಾಯಿ ಮತ್ತಿತ್ತರ ಸೊಪ್ಪು ತರಕಾರಿಗಳನ್ನು ಅಕ್ಕಡಿಸಾಲಿನಲ್ಲಿ ಬಿತ್ತನೆ ಮಾಡುತ್ತಾರೆ. ಮುಂಗಾರು ಪ್ರಾರಂಭವಾಗುವ ಹೊತ್ತಿಗೆ ಬಹುತೇಕ ತರಕಾರಿಗಳು ಕಟಾವಿಗೆ ಸಿದ್ದವಾಗುತ್ತದೆ.
ಉಪ್ಪು, ಸೋಪು, ಬಟ್ಟೆಯಂತಹ ವಸ್ತುಗಳು ಬಿಟ್ಟರೆ ಸಂಧ್ಯಕ್ಕ ಯಾವುದನ್ನು ಕೊಂಡುಕೊಳ್ಳುವುದಿಲ್ಲ. ಗಂಡನಿಲ್ಲವೆಂಬ ಕೊರಗನ್ನು ಮೀರಿ ಸದಾ ನಗುತ್ತಲೇ ಎಲ್ಲರೊಂದಿಗೆ ಬೆರೆಯುತ್ತಾರೆ. ಯಾರ ಮನೆಯಲ್ಲಾದರೂ ಶುಭಕಾರ್ಯಗಳಿದ್ದರೆ ಎರಡು ದಿನ ಮುಂಚಿತವಾಗಿ ಹೋಗಿ ಎಲ್ಲ ಕೆಲಸ ಮಾಡಿಕೊಡುತ್ತಾರೆ. ತವರು ಮನೆಯ ಹಬ್ಬಗಳಲ್ಲೂ ತಾಯಿಗೆ ಎಲ್ಲರೀತಿ ಸಹಾಯ ಮಾಡುತ್ತಾರೆ. ತಾವು ಬೆಳೆದ ಸೊಪ್ಪು ತರಕಾರಿಗಳನ್ನು ನೆಂಟರಿಷ್ಚರಿಗೆಲ್ಲಾ ನೀಡುತ್ತಾರೆ. ಈಗಲೂ ಅಪರೂಪದ ಮಿಣಕೆ ಹಣ್ಣು, ಬಿಳಿ ಬೆಂಡೆ, ಹುಳಿ ಸೊಪ್ಪು, ಸಣ್ಣ ಕಾಳಿನ ನಾಟಿ ತೊಗರಿ ಮತ್ತು ರಾಗಿ ಬೀಜಗಳ ಸಂಗ್ರಹ ಸಂಧ್ಯಕ್ಕನಲ್ಲಿವೆ. ಹೈಸ್ಕೂಲ್ ವರೆಗೆ ಮಕ್ಕಳಿಬ್ಬರೂ ಮೊರಾರ್ಜಿ ಶಾಲೆಯಲ್ಲಿ ಓದಿದರು. ರಜೆಯಿದ್ದಾಗಲೆಲ್ಲಾ ಹೊಲದ ಕೆಲಸದಲ್ಲಿ ಅಮ್ಮನಿಗೆ ಸಹಾಯಮಾಡುತ್ತಿದ್ದರು. ಹಿರಿಮಗ ತೇಜು ಪ್ರತಿಷ್ಠಿತ ಬಸವನಗುಡಿಯ ಬಿಎಮ್ಎಸ್ ಕಾಲೇಜಿನಲ್ಲಿ ಎಲಿಕ್ಟ್ರಿಕಲ್ ಇಂಜಿನಿಯರಿಂಗ್ ಮುಗಿಸಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ ಕಿರಿಮಗ ರಂಜಿತ್ ಸಹ ಅದೇ ಕಾಲೇಜಿನಲ್ಲಿ ಇನ್ನೇನು ಇಂಜಿನಿಯರಿಂಗ್ ಪದವಿಧರನಾಗಲಿದ್ದಾನೆ. ಒಟ್ಟಿನಲ್ಲಿ ಮಕ್ಕಳಿಗೆ ಅಪ್ಪನಿಲ್ಲವೆಂಬ ಕೊರಗನ್ನು ಒಂದು ದಿನಕ್ಕೂ ನೆನಪಿಸಲಿಲ್ಲ ಸಂಧ್ಯಕ್ಕ.
ಈಗ ಮಕ್ಕಳು ದಿಣ್ಣೆ ಜಮೀನಿಗೆ ಬೋರ್ ಕೊರಿಸಿ ಒಂದು ಎಕರೆಯಲ್ಲಿ ಅಡಿಕೆ ತೋಟಮಾಡಿದ್ದಾರೆ. ಗಿಡಗಳು ಸಣ್ಣದಿರುವ ಕಾರಣ ಅಂತರ ಬೆಳೆಯಾಗಿ ತೊಗರಿ, ನೆರಳಿಗಾಗಿ ಹರಳು ಮತ್ತು ಅಗಸೆ, ಬದುಗಳಲ್ಲಿ ಅರಣ್ಯ ಪ್ರಭೇದಗಳಾದ ತೇಗ, ಸಿಲ್ವರ್, ನುಗ್ಗೆ ನಿಂಬೆ ಮತ್ತಿತ್ತರ ಮರಗಳಾಗುವ ಗಿಡಗಳನ್ನು ನೆಟ್ಟಿದ್ದಾರೆ. ಅಗಸೆ ಸೊಪ್ಪನ್ನು ಕುರಿ - ಮೇಕೆ ಸಾಕುವವರಿಗೆ ಮಾರುತ್ತಾರೆ. ಸ್ವಲ್ಪ ಜಾಗದಲ್ಲಿ ಕನಕಾಂಬರ ಅದರೊಟ್ಟಿಗೆ ಸಬ್ಸಿಗೆ, ದಂಟು, ಟಮೋಟ ಬೆಳೆದಿದ್ದಾರೆ. ಸದಾ ಚಟುವಟಿಕೆಯಿಂದಿದ್ದು ಯಾರ ಬಗ್ಗೆಯೂ ಯಾರೊಂದಿಗೂ ಮಾತನಾಡದೆ ಎಲ್ಲರೊಡನೆ ಪ್ರೀತಿಯಿಂದಿರುತ್ತಾರೆ ಸಂಧ್ಯಕ್ಕ. ವ್ಯವಸಾಯದಿಂದ ಬಂದ ಆದಾಯದಿಂದಲೇ ಹಳೆ ಮನೆಯನ್ನು ನವೀಕರಿಸಿ ದವಸ ಧಾನ್ಯ ಶೇಖರಿಸಲು ಅನುವು ಮಾಡಿಕೊಂಡಿದ್ದಾರೆ.
ನಾಡಿನ ಹೆಸರಾಂತ ಗಾಣದ ಎಣ್ಣೆ ತಯಾರಕರಾದ ದೇಸಿರಿ ನವೀನ್ ರವರು ಗಾಣ ಪ್ರಾರಂಭಿಸಿದಾಗ ಮೊದಲು ನೆಲಗಡಲೆ ಖರೀದಿಸಿದ್ದು ಸಂಧ್ಯಕ್ಕರವರಿಂದ. ಯಾವುದೇ ರಾಸಾಯನಿಕ ಬಳಸದಿದ್ದರಿಂದ ನವೀನ್ ರವರು ಅಂದಿನ ಮಾರುಕಟ್ಟೆ ದರಕ್ಕಿಂತ ಹೆಚ್ಚು ಹಣಕೊಟ್ಟು ನೆಲಗಡಲೆ ಖರೀದಿಸಿದರು. ಮರು ವರ್ಷ ನೆಲಗಡಲೆ ಬೆಲ ಕುಸಿದಾಗಲೂ ಕೇವಲ ಸಂಧ್ಯಕ್ಕ ಅಷ್ಟೇ ಅಲ್ಲದೆ ಇಡೀ ಗ್ರಾಮದವರಿಂದ ಉತ್ತಮ ದರಕ್ಕೆ ನೆಲಗಡಲೆ ಖರೀದಿಸಿದರು ನವೀನ್. ಲಕ್ಷ್ಮೀದೇವಿಪುರದಲ್ಲಿ ಅಂದಿನಿಂದ ಬಹಳಷ್ಟು ಮಂದಿ ರಾಸಯನಿಕ ಗೊಬ್ಬರ ಬಳಸುವುದನ್ನು ಕಡಿತಗೊಳಿಸಿದ್ದಾರೆಂದರೆ ಸಂಧ್ಯಕ್ಕನ ಪ್ರಭಾವ ಎಷ್ಚಿದೆ ಎಂದು ನಿಮಗೆ ಅರಿವಾಗಬಹುದು. ಇದರ ಜೊತೆಗೆ ತನ್ನಂತೆ ಯಾವ ಹೆಂಗಸರು ಕಷ್ಟ ಪಡಬಾರದೆಂದು ಸ್ತ್ರೀ ಶಕ್ತಿ ಸಂಘ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡುತ್ತಿದ್ದಾರೆ. ಹೇಳಲು ಇನ್ನು ಸಾಕಷ್ಟಿದೆ. ಸಣ್ಣ ಸಣ್ಣ ಕಾರಣಗಳಿಗೆ ಖಿನ್ನತೆ / ಆತ್ಮಹತ್ಯೆಗೆ ಮೊರೆಹೋಗುವ ಈ ದಿನಗಳಲ್ಲಿ ಸಂಧ್ಯಕ್ಕ ಆದರ್ಶವಾಗುತ್ತಾರಲ್ಲವೇ? ಸಂಧ್ಯಕ್ಕನೊಡನೆ ಮಾತನಾಡಲು ಸಂಪರ್ಕಿಸಿ 7795616408
ಸುಧಾ ಸಂದೀಪ್ ಎಂ.ಎಸ್ಸಿ ಕೃಷಿ
ಹುಣಸೂರು.