29/05/2026
ಭೂಲೋಕದ ಅದ್ಭುತ ವೈಜಯಂತಿ ಮಣಿ. ಆರೇಳು ವರ್ಷಗಳ ಹಿಂದೆ ಮೊದಲಸಲ ಈ ಜೋಗಿ ಮಣಿ ಗಿಡಗಳನ್ನು ದಿ ಕುಳ್ಳೇಗೌಡರ ತೋಟದಲ್ಲಿ ನೋಡಿದ್ದು. ಆಗಿಂದ ನಮಗೆ ಇದರ ಮೇಲೆ ವಿಶೇಷ ಆಸಕ್ತಿ. ಸಾಕಷ್ಟು ಸಲ ಗೌಡರ ಬಳಿ ಗಿಡ ತಂದು ನೆಟ್ಟರೂ ನಮ್ಮಲಿ ಚೆನ್ನಾಗಿ ಬರಲಿಲ್ಲ. ನಂತರ ತಿಳಿಯಿತು ಈ ಸಸ್ಯ ಬೆಳೆಯಬೇಕೆಂದರೆ ಹೆಚ್ಚು ನೀರು ಬೇಕೆಂದು. ನಂತರ ಅವರ ಮಾತಿನಂತೆ ನೀರು ಹರಿಯುವ ಜಾಗದಲ್ಲಿ ನಟ್ಟಗಿಡಗಳು ಚೆನ್ನಾಗಿ ಬೆಳೆದ ಸಾಕಷ್ಟು ಮಣಿಗಳನ್ನು ನೀಡಿದವು. ಇದು ಕೇವಲ ಮಣಿಗಳಿಗೆ ಮಾತ್ರವಲ್ಲ. ಇದರ ಹುಲ್ಲು ಉತ್ತಮ ಮೇವು. ಹಸುಗಳು ಇಷ್ಟಪಟ್ಟು ತಿನ್ನುತ್ತವೆ. ಇನ್ನು ಗಿಡದಿಂದ ಉದುರಿದ ಮಣಿಗಳು ಬೇಸಿಗೆ ಮಳೆಗೆ ಮೊಳಕೆಯೊಡೆದು ಚಿಗುರಿವೆ. ಇವುಗಳನ್ನು ಕಿತ್ತು ಬೇರೆ ಕಡೆ ನಾಟಿ ಮಾಡುತ್ತಿದ್ದೇವೆ. ಆಶ್ಚರ್ಯವೆಂದರೆ ಇವುಗಳು ಮೊಳಕೆಯೊಡೆದರೂ ಮಣಿ ಮಾತ್ರ ಇನ್ನೂ ಹಾಗೇ ಇದೆ. ಈ ಮಣಿಗಳು ಎಷ್ಟು ಗಟ್ಟಿ ಎಂದರೆ ಪುಡಿ ಮಾಡಲು ಕಲ್ಲು ಅಥವಾ ಸುತ್ತಿಗೆ ಬೇಕು. ಮಾಲೆ ಮಾಡಿ ಧರಿಸಿದರೆ ಅಥವಾ ಜಪ ಮಾಡಲು ಬಳಸಿದರೆ ಸಕಾರಾತ್ಮಕ ಅನುಭವವಾಗುತ್ತದೆ. ಗಿಡದಲ್ಲಿ ಈ ರೀತಿ ಮಣಿ ಬಿಡುತ್ತದೆ ಮತ್ತು ಈ ಮಣಿಗಳಿಗೆ ನೈಸರ್ಗಿಕವಾಗೇ ರಂಧ್ರವಿದ್ದು ಪೋಣಿಸಲು ಸಹಕಾರಿಯಾಗಿರುತ್ತದೆ ಎನ್ನುವ ವಿಶಯವೇ ವಿಸ್ಮಯ. ಒಟ್ಟಿನಲ್ಲಿ ಈ ರೀತಿ ಒಂದು ಗಿಡ ಪರಿಚಯಿಸಿದ ಕುಳ್ಳೇಗೌಡರಿಗೆ ಎಷ್ಟು ಅಭಿನಂದಿಸಿದರೂ ಸಾಲದು. ಅವರಿಂದ ಈ ಮಣಿ ಗಿಡ ಸಾಕಷ್ಟು ಜನರ ಮನೆ ಮತ್ತು ತೋಟಗಳಲ್ಲಿ ಇಂದು ಬೆಳೆಯುತ್ತಿದೆ ಮತ್ತಷ್ಟು ಜನರು ಬೆಳೆಯುವಂತಾಗಲಿ.