05/06/2026
ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೂರು ಪ್ರದೇಶದಲ್ಲಿ ಸ್ಥಳೀಯರೊಬ್ಬರಿಗೆ ಸೇರಿದ ದನ ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಶುಕ್ರವಾರ ಸಂಭವಿಸಿದ್ದು, ಸ್ಥಳೀಯರ ಸಮಯಪ್ರಜ್ಞೆ ಮತ್ತು ಸಹಕಾರದಿಂದ ದನವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮನೆಯ ಸಮೀಪ ಮೇಯುತ್ತಿದ್ದ ದನವು ಆವರಣವಿಲ್ಲದ ಬಾವಿಯ ಬಳಿ ತೆರಳಿದ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ದನ ಬಾವಿಗೆ ಬಿದ್ದ ತಕ್ಷಣ ಅದರ ಅರಚಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸುಮಾರು ಅಡಿ ಆಳದ ಬಾವಿಯಲ್ಲಿ ದನ ಸಿಲುಕಿಕೊಂಡಿರುವುದು ಕಂಡುಬಂದ, ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ದನವನ್ನು ಮೇಲಕ್ಕೆತ್ತಲು ಮೊದಲಿಗೆ ಹಗ್ಗದ ಸಹಾಯದಿಂದ ಪ್ರಯತ್ನ ನಡೆಸಲಾಯಿತಾದರೂ, ಬಾವಿಯ ಆಳ ಮತ್ತು ದನದ ತೂಕದ ಕಾರಣ ಅದು ಸಾಧ್ಯವಾಗಲಿಲ್ಲ. ಬಳಿಕ ಕ್ರೇನ್ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರು ಮತ್ತು ಚಾಲಕರ ಸಹಕಾರದೊಂದಿಗೆ ದನದ ದೇಹಕ್ಕೆ ಸುರಕ್ಷಿತವಾಗಿ ಹಗ್ಗಗಳನ್ನು ಕಟ್ಟಿಕೊಂಡು ಅತ್ಯಂತ ಎಚ್ಚರಿಕೆಯಿಂದ ಮೇಲಕ್ಕೆ ಎತ್ತಲಾಯಿತು. ಕೆಲಕಾಲದ ಕಾರ್ಯಾಚರಣೆಯ ಬಳಿಕ ದನವನ್ನು ಯಾವುದೇ ಪ್ರಾಣಾಪಾಯವಾಗದಂತೆ ಸುರಕ್ಷಿತವಾಗಿ ಮೇಲಕ್ಕೆ ತರಲಾಯಿತು. ಬಾವಿಯಿಂದ ಹೊರಬಂದ ಬಳಿಕ ದನಕ್ಕೆ ನೀರು ಹಾಗೂ ಪ್ರಾಥಮಿಕ ಆರೈಕೆ ನೀಡಲಾಯಿತು. ಘಟನೆಯಲ್ಲಿ ದನಕ್ಕೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಘಟನೆಯ ವೇಳೆ ಸ್ಥಳೀಯ ನಿವಾಸಿಗಳು ಸೇರಿಕೊಂಡು ರಕ್ಷಣಾ ಕಾರ್ಯಾಚರಣೆಗೆ ನೆರವಾದರು...