Ell kaani

Ell kaani Unveiling the art, culture, customs, news, wonders of the coast
(1)

05/06/2026

ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೂರು ಪ್ರದೇಶದಲ್ಲಿ ಸ್ಥಳೀಯರೊಬ್ಬರಿಗೆ ಸೇರಿದ ದನ ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಶುಕ್ರವಾರ ಸಂಭವಿಸಿದ್ದು, ಸ್ಥಳೀಯರ ಸಮಯಪ್ರಜ್ಞೆ ಮತ್ತು ಸಹಕಾರದಿಂದ ದನವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮನೆಯ ಸಮೀಪ ಮೇಯುತ್ತಿದ್ದ ದನವು ಆವರಣವಿಲ್ಲದ ಬಾವಿಯ ಬಳಿ ತೆರಳಿದ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ದನ ಬಾವಿಗೆ ಬಿದ್ದ ತಕ್ಷಣ ಅದರ ಅರಚಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸುಮಾರು ಅಡಿ ಆಳದ ಬಾವಿಯಲ್ಲಿ ದನ ಸಿಲುಕಿಕೊಂಡಿರುವುದು ಕಂಡುಬಂದ, ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ದನವನ್ನು ಮೇಲಕ್ಕೆತ್ತಲು ಮೊದಲಿಗೆ ಹಗ್ಗದ ಸಹಾಯದಿಂದ ಪ್ರಯತ್ನ ನಡೆಸಲಾಯಿತಾದರೂ, ಬಾವಿಯ ಆಳ ಮತ್ತು ದನದ ತೂಕದ ಕಾರಣ ಅದು ಸಾಧ್ಯವಾಗಲಿಲ್ಲ. ಬಳಿಕ ಕ್ರೇನ್ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರು ಮತ್ತು ಚಾಲಕರ ಸಹಕಾರದೊಂದಿಗೆ ದನದ ದೇಹಕ್ಕೆ ಸುರಕ್ಷಿತವಾಗಿ ಹಗ್ಗಗಳನ್ನು ಕಟ್ಟಿಕೊಂಡು ಅತ್ಯಂತ ಎಚ್ಚರಿಕೆಯಿಂದ ಮೇಲಕ್ಕೆ ಎತ್ತಲಾಯಿತು. ಕೆಲಕಾಲದ ಕಾರ್ಯಾಚರಣೆಯ ಬಳಿಕ ದನವನ್ನು ಯಾವುದೇ ಪ್ರಾಣಾಪಾಯವಾಗದಂತೆ ಸುರಕ್ಷಿತವಾಗಿ ಮೇಲಕ್ಕೆ ತರಲಾಯಿತು. ಬಾವಿಯಿಂದ ಹೊರಬಂದ ಬಳಿಕ ದನಕ್ಕೆ ನೀರು ಹಾಗೂ ಪ್ರಾಥಮಿಕ ಆರೈಕೆ ನೀಡಲಾಯಿತು. ಘಟನೆಯಲ್ಲಿ ದನಕ್ಕೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಘಟನೆಯ ವೇಳೆ ಸ್ಥಳೀಯ ನಿವಾಸಿಗಳು ಸೇರಿಕೊಂಡು ರಕ್ಷಣಾ ಕಾರ್ಯಾಚರಣೆಗೆ ನೆರವಾದರು...

04/06/2026

ಕೆಲವು ವರ್ಷಗಳ ಹಿಂದೆ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಹೋಗಿದ್ದ ಯಾತ್ರಿಕರ ಮೃತದೇಹವನ್ನು ಭಾರಿ ಮಳೆಯ ನಡುವೆಯೂ ಹರಸಾಹಸ ಪಟ್ಟು ಮೇಲಕ್ಕೆತ್ತಿ ತಂದು ರಾಜ್ಯ ಸರಕಾರದ ಗಮನ ಸೆಳೆದು ಮುಖ್ಯಮಂತ್ರಿ ಪದಕ್ಕ ಪಡೆದಿರುವ ಅಗ್ನಿಶಾಮಕ ದಳದ ಸಿಬ್ಬಂದಿ ನಾಗರಾಜ್ ಪೂಜಾರಿ ಇದೀಗ ಮತ್ತೊಂದು ಸಾಹಸ ಕಾರ್ಯದ ಮೂಲಕ ವ್ಯಕ್ತಿಯ ಜೀವ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಳ್ಯ ತಾಲೂಕಿನ ಕಸಬ ಗ್ರಾಮದ ಕಂದಡ್ಕದಲ್ಲಿ ನವೀನ್ ಕುಮಾರ್ ಎಂಬವರು ತಮ್ಮ ಮನೆಯ ಸುಮಾರು ನಲವತ್ತು ಅಡಿ ಆಳದ ಬಾವಿಯನ್ನು ಸ್ವಚ್ಛಗೊಳಿಸುವ ಸಲುವಾಗಿ ಬಾವಿಯೊಳಗೆ ಇಳಿದಿದ್ದರು. ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಬಾವಿಯೊಳಗಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದ್ದು, ಉಸಿರಾಟದ ತೊಂದರೆಯಿಂದ ಅವರು ಪ್ರಜ್ಞೆ ತಪ್ಪಿ ಬಾವಿಯಲ್ಲೇ ಕುಸಿದು ಬಿದ್ದಿದ್ದರು. ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಬಾವಿಯೊಳಗೆ ಇಳಿದ ಸಿಬ್ಬಂದಿ ನಾಗರಾಜ್ ಪೂಜಾರಿ ಅವರು ಆಮ್ಲಜನಕದ ಕೊರತೆ ಇರುವುದನ್ನು ಅರಿತು ತಕ್ಷಣವೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಬಳಿಕ ಆಮ್ಲಜನಕ ಕಿಟ್ ಧರಿಸಿ ಮತ್ತೆ ಬಾವಿಗೆ ಇಳಿದು ಪ್ರಾಣಾಪಾಯದ ಸ್ಥಿತಿಯಲ್ಲಿದ್ದ ನವೀನ್ ಕುಮಾರ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ರಕ್ಷಿಸಲ್ಪಟ್ಟ ನವೀನ್ ಕುಮಾರ್ ಅವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಸಮಯೋಚಿತ ಚಿಕಿತ್ಸೆ ಮತ್ತು ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ನಾಗರಾಜ್ ಪೂಜಾರಿ ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ಸೇವಾ ಮನೋಭಾವಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಅವರ ಸಾಹಸಮಯ ಕಾರ್ಯ ಮತ್ತೊಮ್ಮೆ ಜೀವ ರಕ್ಷಣೆಯ ಮಹತ್ವವನ್ನು ಎತ್ತಿ ತೋರಿಸಿದೆ. ಈ ಕಾರ್ಯಾಚರಣೆಯಲ್ಲಿ ಸುಳ್ಯ ಅಗ್ನಿಶಾಮಕ ಠಾಣಾಧಿಕಾರಿಯಾದ ಕಿರಣ್ ಕುಮಾರ್ ಹಾಗೂ ಸಿಬ್ಬಂದಿಯವರಾದ ನಾಗರಾಜ , ಮಹಮ್ಮದ್ ರಫಿಕ್ , ಹರ್ಷವರ್ಧನ್, ಮೋಹನ್ ಬಾಬು, ಹರೀಶ್ ಗೌಡ, ಆನಂದ್, ರಾಜೇಶ್ ಎಸ್ ಕೆ. ಭಾಗವಹಿಸಿದ್ದರು.

03/06/2026

ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರಮುಖ ಸರ್ಕಲ್‌ನಲ್ಲಿ ಜೀಪ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ಮಣೂರು ಜಟ್ಟಿಗೇಶ್ವರ ದೈವಸ್ಥಾನದ ಸಮೀಪದ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಅವರು ಕೋಟಿ ಪೂಜಾರಿ ಅವರ ಪುತ್ರರಾಗಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಸುಮಾರು 9.47ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದ ಸಂಪೂರ್ಣ ದೃಶ್ಯಾವಳಿಗಳು ರಾಷ್ಟ್ರೀಯ ಹೆದ್ದಾರಿ 66ರ ಪ್ರಮುಖ ಭಾಗದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ...

30/05/2026

ಕನ್ನಡ ಚಿತ್ರರಂಗದ ಜನಪ್ರಿಯ ನಟ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಶನಿವಾರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ತಾರಾ ದಂಪತಿಯ ಆಗಮನ ಮಠಕ್ಕೆ ಭೇಟಿ ನೀಡಿದ್ದ ಭಕ್ತರಲ್ಲಿ ವಿಶೇಷ ಕುತೂಹಲ ಮೂಡಿಸಿತು. ಬೆಳಿಗ್ಗೆ ಮಠಕ್ಕೆ ಆಗಮಿಸಿದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಮೊದಲು ಮಠದ ಸಂಪ್ರದಾಯದಂತೆ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕುಟುಂಬದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಬೇಡಿಕೊಂಡರು. ದರ್ಶನದ ಬಳಿಕ ಪರ್ಯಾಯ ಶಿರೂರು ಮಠದ ವೇದ ವರ್ಧನ ಶ್ರೀ ಗಳನ್ನು ಭೇಟಿಯಾದ ತಾರಾ ದಂಪತಿ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ದಂಪತಿ ಹಾಗೂ ಅವರ ಮಗುವಿಗೆ ಶುಭ ಹಾರೈಕೆ ಸಲ್ಲಿಸಿ ಪ್ರಸಾದ ವಿತರಿಸಿದರು. ಮಠದ ಆಧ್ಯಾತ್ಮಿಕ ಪರಂಪರೆ ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಕೆಲಕಾಲ ಮಠದ ವಾತಾವರಣದಲ್ಲಿ ಕಾಲ ಕಳೆದರು.ನಂತರ ಶ್ರೀಕೃಷ್ಣ ಮಠದ ಭೋಜನಗೃಹಕ್ಕೆ ತೆರಳಿದ ದಂಪತಿ, ಇತರ ಭಕ್ತರೊಂದಿಗೆ ನೆಲದ ಮೇಲೆ ಕುಳಿತು ಶ್ರೀಕೃಷ್ಣ ದೇವರ ಅನ್ನಪ್ರಸಾದ ಸ್ವೀಕರಿಸಿದರು...

24/05/2026

ಕೊಲ್ಲೂರು ಸಮೀಪ ದಳಿಯಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಮೃತರನ್ನೂ ಬಿಡದ ಕಳ್ಳರ ಅಮಾನವೀಯ ಕೃತ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೇ 17ರಂದು ಕೇರಳ ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಜೀಪಿಗೆ ಮೀನು ಸಾಗಾಟದ ಇನ್ಸುಲೇಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದರು. ಅಪಘಾತದಲ್ಲಿ ಕೇರಳ ಮೂಲದ ಜ್ಯೋತಿ ಹಾಗೂ ಅರಿಯಾ ಅನೂಫ್ ಮೃತಪಟ್ಟಿದ್ದರು. ಇದೀಗ ಮೃತಪಟ್ಟ ಜ್ಯೋತಿ ಅವರ ಮೈಮೇಲಿದ್ದ ಸುಮಾರು 18 ಗ್ರಾಂ ತೂಕದ ಚಿನ್ನಾಭರಣಗಳು ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳದಲ್ಲೇ ಮೃತಳ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಒಂದು ವಾರದ ಬಳಿಕ ಕುಟುಂಬಸ್ಥರು ದೂರು ದಾಖಲಿಸಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದುರಂತದಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ನೋವಿನ ನಡುವೆಯೇ ಇಂತಹ ಅಮಾನವೀಯ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ತೀವ್ರ ಬೇಸರ ಮೂಡಿಸಿದೆ. ಅಪಘಾತದಲ್ಲಿ ಮೃತಪಟ್ಟವರನ್ನೂ ಬಿಡದ ಮಟ್ಟಿಗೆ ಮಾನವೀಯತೆ ಕುಸಿದಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ...

23/05/2026

ಕಾರ್ಕಳ–ಮೂಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ–ಬೆಳವಾಯಿ ಮಾರ್ಗದಲ್ಲಿ ಬೈಕ್ ಸವಾರನೊಬ್ಬ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿ ಸಾರ್ವಜನಿಕರ ಆತಂಕಕ್ಕೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ದ್ವಿಚಕ್ರ ವಾಹನ ಸವಾರನು ಬೈಕ್‌ನ ಹ್ಯಾಂಡಲ್ ಬಾರ್ ಬಿಟ್ಟು ವಿವಿಧ ಸನ್ನೆಗಳು ಮಾಡುತ್ತಾ, ರಸ್ತೆ ಮಧ್ಯೆ ಸರ್ಕಸ್ ಪ್ರದರ್ಶನ ನಡೆಸಿದಂತೆ ಯದ್ವಾತದ್ವವಾಗಿ ವಾಹನ ಚಲಾಯಿಸಿರುವುದು ಕಂಡುಬಂದಿದೆ. ಈಗಾಗಲೇ ಅಪಘಾತ ವಲಯವಾಗಿ ಗುರುತಿಸಿಕೊಂಡಿರುವ ಈ ರಸ್ತೆಯಲ್ಲಿ ನಡೆದ ಈ ಹುಚ್ಚಾಟ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯನ್ನು ಅದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಕೆಲ ಯುವಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ವಿಡಿಯೋದಲ್ಲಿ ಸವಾರನು ನಿರ್ಲಕ್ಷ್ಯವಾಗಿ ಬೈಕ್ ಚಲಾಯಿಸುತ್ತಾ ಜೀವದ ಹಂಗಿಲ್ಲದ ರೀತಿಯಲ್ಲಿ ವರ್ತಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ. ಬಳಿಕ ಬೈಕ್‌ನ್ನು ತಡೆದ ಯುವಕರು ಸವಾರನನ್ನು ತರಾಟೆಗೆ ತೆಗೆದುಕೊಂಡು, ಇಂತಹ ಬೇಜವಾಬ್ದಾರಿ ವರ್ತನೆಯಿಂದ ಇತರ ವಾಹನ ಸವಾರರ ಜೀವಕ್ಕೂ ಅಪಾಯ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ...

22/05/2026

ಕೊಡವೂರು ಸಮೀಪದ ಗರಡಿಮಜಲು ಪ್ರದೇಶದಲ್ಲಿ ನೂತನ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಮೃತರನ್ನು ಕೊಪ್ಪಳ ಮೂಲದ ರಮೇಶ್ ಎಂದು ಗುರುತಿಸಲಾಗಿದೆ. ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಮರಳು ಹಾಗೂ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಅವರಲ್ಲಿ ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಮತ್ತೋರ್ವ ಕಾರ್ಮಿಕ ರಮೇಶ್ ಮಣ್ಣಿನಡಿ ಸಿಲುಕಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ...

21/05/2026

ಅಕಸ್ಮಾತ್ ವೈಮಾನಿಕ ದಾಳಿ ಸಂಭವಿಸಿದರೆ ಯಾವ ರೀತಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಬೇಕು ಎಂಬುದರ ಕುರಿತು ನಗರದ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಅಣಕು ಪ್ರದರ್ಶನ ನಡೆಸಲಾಯಿತು. ಅಣಕು ಕಾರ್ಯಾಚರಣೆಯಲ್ಲಿ ದಾಳಿಯಿಂದ ವಿದ್ಯಾರ್ಥಿಗಳು ಗಾಯಗೊಂಡು ಮೂರ್ಛೆ ಬಿದ್ದ ದೃಶ್ಯ, ಗಾಯಾಳುಗಳಿಗೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ರೀತಿ, ಗೃಹರಕ್ಷಕ ದಳದ ಸಿಬ್ಬಂದಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ ಕಾರ್ಯಾಚರಣೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ ದೃಶ್ಯಗಳು ಗಮನ ಸೆಳೆದವು..

20/05/2026

ಆನ್‌ಲೈನ್ ಔಷಧಿ ಮಾರಾಟ ಹಾಗೂ ಇ-ಕಾಮರ್ಸ್ ಸಂಸ್ಥೆಗಳ ಅನಿಯಂತ್ರಿತ ವ್ಯವಹಾರವನ್ನು ವಿರೋಧಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ ನೀಡಿದ ಕರೆಯಂತೆ ಉಡುಪಿ ಜಿಲ್ಲೆಯಾದ್ಯಂತ ಬುಧವಾರ ನೂರಾರು ಫಾರ್ಮಸಿಗಳು ಬಂದ್ ಆಚರಿಸಿತು. ಈ ಹೋರಾಟಕ್ಕೆ ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಬೆಂಬಲ ಸೂಚಿಸಿದ್ದ ಹಿನ್ನೆಲೆಯಲ್ಲಿ ಮೇ 19ರ ಮಧ್ಯರಾತ್ರಿ 12 ಗಂಟೆಯಿಂದ ಮೇ 20ರ ರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಅನೇಕ ಔಷಧ ಮಳಿಗೆಗಳು ಬಾಗಿಲು ಮುಚ್ಚಿದವು...

17/05/2026

ಕಾಪು ಸಮೀಪದ ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನ ದಲ್ಲಿ ದೈವಾರ್ಷಿಕವಾಗಿ ನಡೆಯುವ ಐತಿಹಾಸಿಕ ಪಿಲಿಕೋಲ ಶನಿವಾರ ಸಂಜೆ ಭಕ್ತಿಭಾವ ಹಾಗೂ ಸಂಭ್ರಮದ ನಡುವೆ ಸಂಪನ್ನಗೊಂಡಿತು. ಸಂಪ್ರದಾಯದಂತೆ ಹುಲಿ ವೇಷ ಧರಿಸುವ ದೈವ ನರ್ತಕನಿಗೆ ಸ್ನಾನ ಮಾಡಿಸಿ, ಬಣ್ಣಗಾರಿಕೆಗಾಗಿ ತೆಂಗಿನ ಗರಿಯಿಂದ ನಿರ್ಮಿಸಲಾದ ಪಂಜರದೊಳಗೆ ಕಳುಹಿಸಲಾಯಿತು. ಬಣ್ಣ ಬಳಿದ ಬಳಿಕ ಪಟೇಲರ ಅನುಮತಿ ಪಡೆದು, ಪಿಲಿಚಂಡಿ ಮನೆಯವರು ತೀರ್ಥ ಚಿಮುಕಿಸಿದ ನಂತರ ಪಂಜರದಿಂದ ಹೊರಬಂದು ಪಿಲಿಕೋಲ ಆರಂಭವಾಯಿತು. ಪಿಲಿ ದೈವವು ಬ್ರಹ್ಮರಗುಂಡಕ್ಕೆ ಮೂರು ಸುತ್ತು ಬಂದು ಬಳಿಕ ಮಾರಿಯಮ್ಮ ಗುಡಿಯ ಬಳಿ ನೆಟ್ಟಿದ್ದ ಕಂಬವನ್ನೇರಿ ಅದಕ್ಕೆ ಕಟ್ಟಿದ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಬೇಟೆಗೆ ತೆರಳುವ ಸಂಪ್ರದಾಯ ನೆರವೇರಿತು. ಬಳಿಕ ವಿವಿಧೆಡೆ ತೆರಳಿ ಹಾಲು ಹಾಗೂ ಸೀಯಾಳ ಸ್ವೀಕರಿಸುವ ಆಚರಣೆ ನಡೆಯಿತು. ಈ ವೇಳೆ ಪಿಲಿ ವೇಷಧಾರಿ ಮುಟ್ಟಿದರೆ ಕಂಟಕ ಉಂಟಾಗುತ್ತದೆ ಎಂಬ ನಂಬಿಕೆಯಿಂದ ಜನರು ತಪ್ಪಿಸಿಕೊಳ್ಳಲು ಓಡಾಡಿದ ದೃಶ್ಯ ವಿಶೇಷ ಗಮನಸೆಳೆಯಿತು...

Address

Kundapura
Kundapur
576201

Alerts

Be the first to know and let us send you an email when Ell kaani posts news and promotions. Your email address will not be used for any other purpose, and you can unsubscribe at any time.

Contact The Business

Send a message to Ell kaani:

Share