Ell kaani

Ell kaani Unveiling the art, culture, customs, news, wonders of the coast

07/09/2026

ಕೇರಳದ ರಾಜ್ಯಸಭಾ ಸದಸ್ಯ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸಿ. ಸದಾನಂದನ್ ಮಾಸ್ಟರ್ ಅವರು ಸೋಮವಾರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ಸದಾನಂದನ್ ಮಾಸ್ಟರ್ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಅವರು ಪ್ರಸಾದ ನೀಡಿ ಗೌರವಿಸಿದರು. ಕೇರಳದ ನಿವೃತ್ತ ಶಿಕ್ಷಕರಾಗಿರುವ ಸದಾನಂದನ್ ಮಾಸ್ಟರ್ ಅವರು ಹಲವು ವರ್ಷಗಳಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2025ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು, ಸಾಮಾಜಿಕ ಸೇವಾ ಕ್ಷೇತ್ರವನ್ನು ಪ್ರತಿನಿಧಿಸುವ ನಾಮನಿರ್ದೇಶಿತ ಸದಸ್ಯರಾಗಿ ಅವರು ಸಂಸತ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ...

05/09/2026

ಕೃಷ್ಣನಗರಿ ಉಡುಪಿ ಶನಿವಾರ ಶ್ರೀಕೃಷ್ಣನ ಲೀಲೋತ್ಸವದ ಸಂಭ್ರಮದಲ್ಲಿ ಮಿಂದೆದ್ದಿತು. ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ವಿಟ್ಲಪಿಂಡಿ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರೆ, ರಥಬೀದಿಯುದ್ದಕ್ಕೂ ಕಂಡುಬಂದ ವೈವಿಧ್ಯಮಯ ವೇಷಧಾರಿಗಳು ಉತ್ಸವದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದರು. ಉಡುಪಿಯ ವಿಟ್ಲಪಿಂಡಿ ಉತ್ಸವದ ಪ್ರಮುಖ ವೈಶಿಷ್ಟ್ಯವೆಂದರೆ ಸಾಂಪ್ರದಾಯಿಕ ಮೊಸರು ಕುಡಿಕೆ. ಶ್ರೀಕೃಷ್ಣ ಮೂಲವಿಗ್ರಹವು ಯೋಗನಿದ್ರೆಯಲ್ಲಿರುವ ಕಾರಣ ಉತ್ಸವ ಮೂರ್ತಿಯನ್ನು ಹೊರಗೆ ತರಲಾಗುವುದಿಲ್ಲ. ಬದಲಾಗಿ ವಿಟ್ಲಪಿಂಡಿಗಾಗಿ ವಿಶೇಷವಾಗಿ ತಯಾರಿಸಲಾದ ಶ್ರೀಕೃಷ್ಣನ ಮೃಣ್ಮಯ ವಿಗ್ರಹವನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯಲ್ಲಿ ಮೆರವಣಿಗೆ ಮಾಡುವುದು ಇಲ್ಲಿನ ವಿಶಿಷ್ಟ ಸಂಪ್ರದಾಯ. ಚಿನ್ನದ ರಥದಲ್ಲಿ ವಿರಾಜಮಾನನಾದ ಮಣ್ಣಿನ ಕೃಷ್ಣನ ಮೆರವಣಿಗೆ ಸಾಗುತ್ತಿದ್ದಂತೆ, ಸಾಂಪ್ರದಾಯಿಕ ವೇಷಧಾರಿ ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಂಭ್ರಮಿಸಿದರು. ತಾಸೆ–ವಾದ್ಯಗಳ ಸದ್ದು, ಭಕ್ತರ ಜೈಕಾರ ಹಾಗೂ ಮೊಸರು ಕುಡಿಕೆಯ ಉತ್ಸಾಹದ ನಡುವೆ ರಥಬೀದಿ ಸಂಪೂರ್ಣ ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು. ವಿಟ್ಲಪಿಂಡಿ ಉತ್ಸವದ ಮತ್ತೊಂದು ಪ್ರಮುಖ ಆಕರ್ಷಣೆಯೇ ವಿವಿಧ ಬಗೆಯ ವೇಷಧಾರಿಗಳು. ಹುಲಿವೇಷ ಸೇರಿದಂತೆ ಹಲವು ವಿಶಿಷ್ಟ ವೇಷಗಳಲ್ಲಿ ಕಲಾವಿದರು ರಥಬೀದಿಯಲ್ಲಿ ಸಂಚರಿಸಿ ಜನರನ್ನು ರಂಜಿಸಿದರು. ಬಣ್ಣಬಣ್ಣದ ವೇಷಗಳು, ವಿಶಿಷ್ಟ ಮುಖವರ್ಣಿಕೆ ಹಾಗೂ ಕಲಾವಿದರ ಅಭಿನಯ ಉತ್ಸವಕ್ಕೆ ಜನಪದ ಸೊಬಗನ್ನು ನೀಡಿತು....

05/09/2026

: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣನಗರಿ ಉಡುಪಿಯಲ್ಲಿ ಭಕ್ತಿಯ ಸಂಭ್ರಮ ಕಳೆಗಟ್ಟಿತು. ಚಂದ್ರೋದಯದ ವೇಳೆಯಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ಹಾಗೂ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಕೃಷ್ಣಾರ್ಘ್ಯ ಸಮರ್ಪಿಸುವ ಮೂಲಕ ಜನ್ಮಾಷ್ಟಮಿ ಆಚರಣೆಗೆ ವಿಶೇಷ ಮೆರುಗು ನೀಡಿದರು. ದಿನವಿಡೀ ಉಪವಾಸವಿದ್ದ ಶ್ರೀಗಳು ಮಧ್ಯರಾತ್ರಿ ನೀರು ಹಾಗೂ ಹಾಲಿನ ಮೂಲಕ ಶ್ರೀಕೃಷ್ಣನಿಗೆ ಅರ್ಘ್ಯ ಸಮರ್ಪಿಸಿದರು. ಬಳಿಕ ಮಠದ ಹೊರಭಾಗದಲ್ಲಿರುವ ತುಳಸಿಗೆ ಅರ್ಘ್ಯ ನೀಡಿ, ತುಳಸಿ ಮೂಲಕ ಚಂದ್ರನಿಗೂ ಅರ್ಘ್ಯ ಅರ್ಪಿಸಿದರು. ಅರ್ಘ್ಯ ಸಮರ್ಪಣೆಯ ಬಳಿಕ ಮಹಾಪೂಜೆ ಹಾಗೂ ಉಂಡೆ–ಚಕ್ಕುಲಿ ನೈವೇದ್ಯ ಸಮರ್ಪಿಸಲಾಯಿತು. ಶ್ರೀಗಳ ಕೃಷ್ಣಾರ್ಘ್ಯ ಪೂಜೆ ಪೂರ್ಣಗೊಂಡ ಬಳಿಕ ಭಕ್ತರು ಸರತಿಸಾಲಿನಲ್ಲಿ ನಿಂತು ಸಾಮೂಹಿಕವಾಗಿ ಅರ್ಘ್ಯ ಸಮರ್ಪಿಸಿದರು. ಕೃಷ್ಣನಾಮ ಸ್ಮರಣೆ, ಭಕ್ತರ ಜೈಕಾರ ಹಾಗೂ ಗಂಟೆ–ವಾದ್ಯಗಳ ನಾದದಿಂದ ಶ್ರೀಕೃಷ್ಣ ಮಠದ ಪರಿಸರ ಸಂಪೂರ್ಣ ಭಕ್ತಿಮಯವಾಗಿತ್ತು. ಜನ್ಮಾಷ್ಟಮಿಯ ಧಾರ್ಮಿಕ ಸಂಭ್ರಮದ ಬೆನ್ನಲ್ಲೇ ಉಡುಪಿಯ ವಿಟ್ಲಪಿಂಡಿ ಮಹೋತ್ಸವಕ್ಕೂ ಭರ್ಜರಿ ಸಿದ್ಧತೆ ನಡೆದಿದೆ. ಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ, ಹುಲಿವೇಷ ಕುಣಿತ ಹಾಗೂ ಕರಾವಳಿಯ ಸಾಂಪ್ರದಾಯಿಕ ಜನಪದ ಕಲಾ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ರಂಗು ತುಂಬಲಿವೆ. ಹೀಗೆ ಕೃಷ್ಣಾರ್ಘ್ಯದ ಭಕ್ತಿಭಾವದಿಂದ ವಿಟ್ಲಪಿಂಡಿಯ ಜನಪದ ಸಂಭ್ರಮದವರೆಗೆ ಉಡುಪಿಯ ಜನ್ಮಾಷ್ಟಮಿ ಆಚರಣೆ ಧಾರ್ಮಿಕತೆ, ಸಂಪ್ರದಾಯ ಮತ್ತು ಕರಾವಳಿಯ ಸಾಂಸ್ಕೃತಿಕ ವೈಭವದ ಅಪೂರ್ವ ಸಂಗಮವಾಗಿ ಕಂಗೊಳಿಸಿತು...

04/09/2026

ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಸಂಭ್ರಮದ ಅಂಗವಾಗಿ ರಾಜಾಂಗಣದಲ್ಲಿ ನಡೆದ ಹುಲಿವೇಷ ಕುಣಿತ ಸ್ಪರ್ಧೆ ಭರ್ಜರಿ ಜನಾಕರ್ಷಣೆಗೆ ಪಾತ್ರವಾಯಿತು. ತಾಸೆ–ಬ್ಯಾಂಡ್‌ಗಳ ಭರ್ಜರಿ ಸದ್ದಿಗೆ ಹುಲಿವೇಷಧಾರಿಗಳು ಹೆಜ್ಜೆ ಹಾಕಿ, ಕರಾವಳಿಯ ಜನಪದ ಕಲೆಯ ವೈಭವವನ್ನು ಅನಾವರಣಗೊಳಿಸಿದರು. ಹುಲಿವೇಷಧಾರಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪರ್ಯಾಯ ಮಠದ ವತಿಯಿಂದ ಪ್ರತಿ ಹುಲಿವೇಷಧಾರಿಗೆ ತಲಾ 500ರ ಮಾಲೆ ಹಾಗೂ ಸಂಭಾವನೆ ನೀಡಲಾಯಿತು. ಇದಕ್ಕಾಗಿ 100, 50, 20 ಹಾಗೂ 10 ಮುಖಬೆಲೆಯ ನೋಟುಗಳನ್ನು ಒಳಗೊಂಡ ಒಟ್ಟು 1,000 ಮಾಲೆಗಳನ್ನು ಸಿದ್ಧಪಡಿಸಲಾಗಿತ್ತು. ಹುಲಿವೇಷದ ಕುಣಿತಕ್ಕೆ ತಾಳ–ಲಯ ನೀಡಿದ ತಾಸೆ ಹಾಗೂ ಬ್ಯಾಂಡ್‌ ವಾದಕರಿಗೂ ಗೌರವ ಸಲ್ಲಿಸಲಾಯಿತು. ಇದರಿಂದ ಕಲಾವಿದರ ಉತ್ಸಾಹ ಮತ್ತಷ್ಟು ಹೆಚ್ಚಾಯಿತು. ಸ್ಪರ್ಧೆಯಲ್ಲಿ ತಂಡಗಳ ಅತ್ಯುತ್ತಮ ಪ್ರದರ್ಶನಕ್ಕೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗಿದ್ದು, ಪ್ರಥಮ 1 ಲಕ್ಷ, ದ್ವಿತೀಯ 75 ಸಾವಿರ ಹಾಗೂ ತೃತೀಯ 50 ಸಾವಿರ ನಗದು ಬಹುಮಾನ ವಿತರಿಸಲಾಯಿತು...

03/09/2026

ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಚಡ ರೈಲು ಹಳಿಗಳ ಬಳಿ ಹಿರಿಯ ವ್ಯಕ್ತಿಯೊಬ್ಬರು ವಿವಸ್ತ್ರ ಸ್ಥಿತಿಯಲ್ಲಿ ಅಸ್ವಸ್ಥರಾಗಿ ಪತ್ತೆಯಾಗಿದ್ದು, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಕಾಪು ಪೊಲೀಸ್ ಸಿಬ್ಬಂದಿ ಮಂಜುನಾಥ ಶೆಟ್ಟಿ ಅವರ ನೆರವಿನಿಂದ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡು ಮೂಲದ ಶಶಿ ಶೇಖರ್ ಠಾಕೂರ್ (67) ಅವರು ರೈಲು ಹಳಿ ಸಮೀಪ ನಡೆಯಲೂ ಸಾಧ್ಯವಾಗದೆ ದಣಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೇಲ್ನೋಟಕ್ಕೆ ಅವರು ಮರೆವಿನ ಸಮಸ್ಯೆ ಅಥವಾ ಖಿನ್ನತೆಯಿಂದ ಬಳಲುತ್ತಿರುವಂತೆ ಕಂಡುಬಂದಿದ್ದು, ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಪೊಲೀಸರ ಸಹಾಯದಿಂದ ಅವರನ್ನು ರಕ್ಷಿಸಿದ್ದಾರೆ. ವ್ಯಕ್ತಿಯ ಬಳಿಯಿದ್ದ ಗುರುತಿನ ಚೀಟಿಗಳನ್ನು ಪರಿಶೀಲಿಸಿದಾಗ ಅವರು ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವುದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅವರ ಬ್ಯಾಗ್‌ನಲ್ಲಿ ಸುಮಾರು 47 ಸಾವಿರ ನಗದು, ಬಟ್ಟೆ ಹಾಗೂ ಗುರುತಿನ ಚೀಟಿಗಳು ಪತ್ತೆಯಾಗಿವೆ. ಮಾಹಿತಿ ತಿಳಿದಿರುವವರು ಅಥವಾ ಅವರ ಸಂಬಂಧಿಕರು ಕಾಪು ಪೊಲೀಸ್ ಠಾಣೆ ಅಥವಾ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ...

02/09/2026

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ಅವರ ಕಚೇರಿಗೆ ಸ್ಟಿಕರ್ ಅಂಟಿಸುವುದಾಗಿ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಯಿತು. ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕಚೇರಿಗೆ ಸ್ಟಿಕರ್ ಅಂಟಿಸಲು ಮುಂದಾದ ಹಿನ್ನೆಲೆಯಲ್ಲಿ ಕಚೇರಿ ಎದುರು ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಕಚೇರಿಗೆ ನುಗ್ಗದಂತೆ ತಡೆಯುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದು, ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಸುನಿಲ್ ಕುಮಾರ್ ಅವರ ಕಾರ್ಯವೈಖರಿಯನ್ನು ಸಹಿಸಲಾಗದೆ ಕಾಂಗ್ರೆಸ್ ಈ ರೀತಿಯ ಕೃತ್ಯಕ್ಕೆ ಮುಂದಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಶಾಸಕರ ಕುರಿತು ಅಪಪ್ರಚಾರ ನಡೆಸುವ ಉದ್ದೇಶದಿಂದ ಸ್ಟಿಕರ್ ಅಂಟಿಸಲು ಮುಂದಾಗಿರುವುದು ಕಾಂಗ್ರೆಸ್ ಪಕ್ಷದ ಹತಾಶೆಯನ್ನು ತೋರಿಸುತ್ತದೆ ಎಂದು ಟೀಕಿಸಿದರು. ಶಾಸಕರ ವಿರುದ್ಧ ಯಾವುದೇ ರೀತಿಯ ಅಪಪ್ರಚಾರಕ್ಕೆ ಅವಕಾಶ ನೀಡಬಾರದು. ಅಪಪ್ರಚಾರ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು. ಈ ಸಂಬಂಧ ತಹಶೀಲ್ದಾರ್ ಕಚೇರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಶಾಸಕರ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ತಡೆಯೊಡ್ಡುವಂತೆ ಒತ್ತಾಯಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮುಖಾಮುಖಿಯಾಗಿದ್ದರಿಂದ ಶಾಸಕ ಕಚೇರಿ ಸುತ್ತಮುತ್ತ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು...

02/09/2026

ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಶಾಸಕ ಕಚೇರಿ ಮುಂದೆ ಕೆ ಪ್ರತಿಭಟನೆ ನಡೆಸಿದರು. ಕಳಂಕಿತ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದಿರುವ ಬೆನ್ನಲ್ಲಿ ಪ್ರತಿಕ್ರಿಯೆ ಎನ್ನುವಂತೆ ಕಾರ್ಕಳದಲ್ಲೂ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಪರಶುರಾಮ ಥೀಂ ಪಾರ್ಕ್ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಶಾಸಕ ಸುನಿಲ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ಶಾಸಕ ಸುನಿಲ್ ಕುಮಾರ್ ಅವರ ಕಚೇರಿ ಹಾಗೂ ನಿವಾಸಕ್ಕೆ ಪೋಸ್ಟರ್ ಮತ್ತು ಸ್ಟಿಕರ್ ಅಂಟಿಸಲು ಮುಂದಾದರು. ಬಳಿಕ ಕಚೇರಿಗೆ ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ತಡೆದರು. ರಸ್ತೆಯಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಶಾಸಕ ಕಚೇರಿ ಮುಂಭಾಗದಲ್ಲಿ ಪರ-ವಿರೋಧ ಘೋಷಣೆಗಳು ಮೊಳಗಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಾರ್ಕಳದಲ್ಲಿ ನಿರ್ಮಿಸಲಾಗಿರುವ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಈ ಹಿಂದಿನಿಂದಲೂ ಕೇಳಿಬರುತ್ತಿವೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ರಾಜೀನಾಮೆಗೆ ಒತ್ತಾಯಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಸಕ ಕಚೇರಿ ಸುತ್ತಮುತ್ತ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು...

02/09/2026

ಕಡಲ ಅಬ್ಬರ, ಬಿರುಸಿನ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ಬೋಟೊಂದು ಮುಳುಗಡೆಯಾದ ಘಟನೆ ನಡೆದಿದೆ. ಬೋಟಿನಲ್ಲಿ ಏಳು ಮಂದಿ ಮೀನುಗಾರರು ಇದ್ದರು ಎನ್ನಲಾಗಿದ್ದು, ಕಡಲ ಅಬ್ಬರದಿಂದ ಬೋಟು ಮುಳುಗಡೆಯಾಗುತ್ತಿದ್ದಂತೆ ಮೀನುಗಾರರು ಸಮುದ್ರ ಪಾಲಾಗಿದ್ದರು. ಅಪಾಯದ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ, ಸಮುದ್ರದಲ್ಲಿ ಸಿಲುಕಿದ್ದ ತಮ್ಮ ಸಹೋದ್ಯೋಗಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ಥಳೀಯ ಮೀನುಗಾರರ ಸಕಾಲಿಕ ಸ್ಪಂದನೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ಆದರೆ ಘಟನೆ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆ ಪೊಲೀಸರಿಂದ ನಿರೀಕ್ಷಿತ ಮಟ್ಟದ ಸ್ಪಂದನೆ ದೊರೆಯಲಿಲ್ಲ ಎಂಬ ಆರೋಪ ಕೇಳಿಬಂದಿದೆ...

01/09/2026

ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ರಾಹುಲ್ ಗಾಂಧಿ ವಿರುದ್ಧದ ಪ್ರಕರಣವನ್ನು ರಾಜಕೀಯ ದುರುದ್ದೇಶದಿಂದ ದಾಖಲಿಸಲಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕರನ್ನು ಅವಹೇಳನ ಮಾಡುವ ಹಾಗೂ ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ಕ್ರಮ ಕೈಗೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು. ರಾಹುಲ್ ಗಾಂಧಿ ಅವರ ವಿರುದ್ಧದ ಪ್ರಕರಣದ ಹಿನ್ನೆಲೆಯಲ್ಲಿ ಗಂಗಾಜಲ ತಂದು ಶುದ್ಧೀಕರಣ ಮಾಡಿರುವುದು ಖಂಡನೀಯ. ಇಂತಹ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಪ್ರತಿಪಕ್ಷ ನಾಯಕರಿಗೆ ಅಗೌರವ ತೋರುವ ಪ್ರಯತ್ನವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. ದೇಶದ ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವ ನೀಡುವ ರೀತಿಯಲ್ಲಿ ನಡೆದುಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಗೌರವದಿಂದ ಬದುಕುವ ಹಕ್ಕಿದೆ. ಸಮಾಜದಲ್ಲಿ ಗಲಭೆ ಹಾಗೂ ಅಶಾಂತಿ ಸೃಷ್ಟಿಸುವಂತಹ ಚಟುವಟಿಕೆಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್‌ ಹಿಂಪಡೆಯುವಂತೆ ಒತ್ತಾಯಿಸಿದರು....

Address

Kundapura
Kundapur
576201

Alerts

Be the first to know and let us send you an email when Ell kaani posts news and promotions. Your email address will not be used for any other purpose, and you can unsubscribe at any time.

Contact The Business

Send a message to Ell kaani:

Shortcuts

Share