02/10/2025
#ಗುರುವಿನ_ದಾರಿದೀಪದಿಂದ_ಶಿಷ್ಯನ_ಶ್ರಮವರೆಗೂ – ಕುದ್ರೋಳಿ_ ದಸರಾ_ವೈಭವ
🖊️ಚೈತ್ರ ಕಬ್ಬಿನಾಲೆ
ಮಂಗಳೂರು ನಗರದ ಹೃದಯಭಾಗದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ನಡೆಯುವ ದಸರಾ ಹಬ್ಬ ಕೇವಲ ಒಂದು ಹಬ್ಬವಲ್ಲ, ಸಾವಿರಾರು ಭಕ್ತರ ನಂಬಿಕೆಯ ಜ್ಯೋತಿ, ಸಂಸ್ಕೃತಿಯ ಹರಿಕಾರ, ಜನಮನಗಳ ಏಕತೆಯ ಶೃಂಗಾರ. ಈ ದಸರಾ ಹಬ್ಬದ ಬೆಳಕಿನಲ್ಲಿ ಮೂಡಿದ ಪ್ರತಿಯೊಂದು ದೀಪವೂ, ನಗುಮುಖಗಳಿಂದ ತುಂಬಿದ ಪ್ರತಿಯೊಂದು ಬೀದಿಯೂ, ಬಿ ಜನಾರ್ದನ ಪೂಜಾರಿಯವರ ಕನಸು, ಪರಿಶ್ರಮ ಮತ್ತು ದೃಷ್ಟಿಯ ಪ್ರತಿಬಿಂಬವೇ ಸರಿ.
ಈ ಹಬ್ಬದ ಬೆಳವಣಿಗೆ, ಅದರ ಶ್ರೇಷ್ಠತೆ ಮತ್ತು ಮಹತ್ವದ ಹಿಂದೆ ಅಸಂಖ್ಯಾತ ಜನರ ಶ್ರಮವಿದ್ದರೂ, ಇದನ್ನು ಜನಮನದ ಹೃದಯಕ್ಕೆ ತಂದು ನಿಲ್ಲಿಸಿದವರು ಮಾಜಿ ಕೇಂದ್ರ ಸಚಿವರಾದ ಬಿ. ಜನಾರ್ದನ ಪೂಜಾರಿ.
ನಡೆದಾಡುವ ದೇವರೆಂದೇ ಕರೆಯಲ್ಪಡುವ ಜನಾರ್ದನ ಪೂಜಾರಿಯವರ ಹೆಸರು ಕೇವಲ ಪರಿಚಯಕ್ಕಷ್ಟೇ ಅಲ್ಲ. ಅದೊಂದು ದೀಪಸ್ತಂಭ. ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಸ್ಥಾನಗಳನ್ನು ಅಲಂಕರಿಸಿದರೂ, ಅವರ ಹೃದಯದ ದಾರಿ ಸದಾ ದೇವಾಲಯದತ್ತವೇ ಹರಿಯುತ್ತಿತ್ತು. ಕುದ್ರೋಳಿಯ ದೇವಾಲಯದ ಪುನರ್ನಿರ್ಮಾಣದಿಂದ ಹಿಡಿದು ದಸರಾ ಹಬ್ಬದ ವೈಭವದವರೆಗೂ ಅವರ ಕೈಚಳಕ ಜೀವಂತವಾಗಿದೆ. ಭಕ್ತಿ ಮತ್ತು ಶ್ರದ್ಧೆಯನ್ನು ಶಕ್ತಿಯನ್ನಾಗಿ ಮಾಡಿ, ಉತ್ಸವವನ್ನು ವಿಶ್ವದ ಕಣ್ಣಿಗೆ ತರುವ ಸಾಧನೆಯ ಹಿಂದೆ ಅವರ ದೀರ್ಘ ದೃಷ್ಟಿ, ತಾಳ್ಮೆ ಮತ್ತು ನಿರಂತರ ಸೇವಾಭಾವ ನಿಂತಿದೆ.
18ನೇ ಶತಮಾನದಲ್ಲಿ ಹಿಂದುಳಿದ ವರ್ಗಗಳಿಗೆ ದೇವಾಲಯ ಪ್ರವೇಶ ನಿಷೇಧಿತವಾಗಿದ್ದಾಗ, ಸಮಾನ ಹಕ್ಕಿಗಾಗಿ ಬಿಲ್ಲವ ಸಮುದಾಯದ ಮುಖಂಡರೆಲ್ಲಾ ಆಧ್ಯಾತ್ಮಿಕ ದೈವ ಬ್ರಹ್ಮಶ್ರೀ ನಾರಾಯಣ ಗುರು ಅವರನ್ನು ಸಂಪರ್ಕಿಸಿದರು. “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಸಂದೇಶ ಸಾರಿದ ಗುರುಗಳು, 1912ರಲ್ಲಿ ಮಂಗಳೂರಿನ ಕುದ್ರೋಳಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಈ ದೇವಸ್ಥಾನವನ್ನು ಸ್ಥಾಪಿಸಿದರು.
ಮೂಲತಃ ಕೇರಳ ಶೈಲಿಯಲ್ಲಿದ್ದ ಈ ದೇವಸ್ಥಾನವನ್ನು ನಂತರ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನವೀಕರಿಸಿ ಚೋಳ ಶೈಲಿಯಲ್ಲಿ ಪುನರ್ನಿರ್ಮಿಸಲಾಯಿತು. ಈ ದೊಡ್ಡ ಮಟ್ಟದ ಯೋಜನೆಗೆ ಆರ್ಥಿಕ ಹಾಗೂ ರಾಜಕೀಯ ಬೆಂಬಲ ನೀಡಿದವರು ಪ್ರಥಮ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ.
ಜನಾರ್ದನ ಪೂಜಾರಿ ಅವರು ರಾಜಕಾರಣದ ಅಂಗಳದಲ್ಲಿ ಎಷ್ಟೇ ದೊಡ್ಡ ಹೆಸರು ಗಳಿಸಿದರೂ, ಅವರ ಹೃದಯ ದೇವಾಲಯದ ಸೇವೆಯಲ್ಲಿಯೇ ನೆಲೆಸಿತ್ತು. ಕುದ್ರೋಳಿ ದೇವಾಲಯದ ಸೇವೆಯನ್ನು 1989ರಲ್ಲಿ ಆರಂಭಿಸಿ, ಭವ್ಯವಾದ ಗೋಪುರ ನಿರ್ಮಾಣದಿಂದ ಹಿಡಿದು ದಸರಾ ಹಬ್ಬವನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಮಾಡಿದ್ದಾರೆ. 1991ರಲ್ಲಿ ರಾಜೀವ್ ಗಾಂಧಿಯವರಿಂದ ಗೋಪುರ ಉದ್ಘಾಟನೆ ಮಾಡಿಸಿ, ದೇವಸ್ಥಾನದ ಗೌರವವನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರಥಮ ಬಾರಿಗೆ ತೋರಿಸಿದರು. ಇಂದಿನ ಕುದ್ರೋಳಿ ದಸರಾದ ಆರ್ಭಟ, ಮೆರವಣಿಗೆ, ಸಾಂಸ್ಕೃತಿಕ ವೈವಿಧ್ಯಗಳು ಅವರ ದೃಷ್ಟಿಯಿಂದಲೇ ಸಾಧ್ಯವಾಯಿತು..
ಆ ದೀಪದಿಂದ ಬೆಳಗಿದ ಮತ್ತೊಂದು ದೀಪವೇ ಪದ್ಮರಾಜ್ ಆರ್ ಪೂಜಾರಿ. ಇವರೊಂದು ಯುವ ಶಕ್ತಿ, ನವಚೈತನ್ಯ. ಹೃದಯದಲ್ಲಿ ಸಮಾಜ ಸೇವೆಯ ಕನಸು. ತಮ್ಮ ಗುರುವಾದ ಜನಾರ್ಧನ ಪೂಜಾರಿಯವರ ನೆರಳಿನ ಜೊತೆ ಜೊತೆಗೆ ಹೆಜ್ಜೆಹಾಕುತ್ತಿದ್ದ ವಕೀಲರು ತಮ್ಮ ವೃತ್ತಿಜೀವನದ ಆರಂಭದಿಂದಲೇ ಜನಾರ್ಧನ ಪೂಜಾರಿಯವರ ಮಾರ್ಗದರ್ಶನ ಪಡೆದವರು. ದೇವಾಲಯದ ನಿರ್ವಹಣೆ, ಹಬ್ಬದ ಆಯೋಜನೆ, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅವರು ತೋರಿದ ಶ್ರಮದಿಂದ, ಇಂದು ಜನಾರ್ದನ ಪೂಜಾರಿಯವರ ನಂಬಿಗಸ್ತ ಶಿಷ್ಯ, ಸಹಯೋಗಿಯಾಗಿ ತಲೆ ಎತ್ತಿದ್ದಾರೆ. ದೇವಸ್ಥಾನದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಪ್ರತಿ ವರ್ಷದ ದಸರಾ ಹಬ್ಬವನ್ನು ಯಶಸ್ವಿಯಾಗಿ ನಿರ್ವಹಿಸಲು ತೊಡಗಿಸಿಕೊಂಡಿದ್ದಾರೆ.
ಪದ್ಮರಾಜ್ ಅವರ ವೈಯಕ್ತಿಕ ಜೀವನವೂ ಸಮಾಜಮುಖಿಯೇ. “ಗುರು ಬೆಳದಿಂಗಳು ಫೌಂಡೇಶನ್” ಮೂಲಕ ಅನಾಥರು, ಬಡವರು, ಹಿಂದುಳಿದವರಿಗೆ ಸಹಾಯ ಹಸ್ತ ಚಾಚಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯ ಅಂಗಳದಲ್ಲೂ ಅವರು ಕಾಂಗ್ರೆಸ್ನ ಮುಖಂಡರಾಗಿ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದಾರೆ. 2024ರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ, ಅವರ ಬದ್ಧತೆ, ಸಜ್ಜನಿಕೆ, ಶ್ರಮ ಅವರನ್ನು ಮುಂದಿನ ದಿನಗಳಲ್ಲಿ ದೊಡ್ಡ ನಾಯಕತ್ವಕ್ಕೆ ತಯಾರಾಗಿಸುತ್ತಿದೆ.
ಅವರ ಕೈಯಲ್ಲಿ ಕೇವಲ ದೇವಾಲಯದ ಖಜಾನೆ ಮಾತ್ರವಲ್ಲ, ಭಕ್ತರ ವಿಶ್ವಾಸವೂ ಇದೆ. ಅವರ ಹೃದಯದಲ್ಲಿ ಕೇವಲ ರಾಜಕೀಯ ಕನಸು ಮಾತ್ರವಲ್ಲ, ಜನಸೇವೆಯ ಬದ್ಧತೆಯೂ ಇದೆ.
ಜನಾರ್ದನ ಪೂಜಾರಿ ಮತ್ತು ಪದ್ಮರಾಜ್ ಪೂಜಾರಿಯವರ ಸಂಬಂಧ ಕೇವಲ ರಾಜಕೀಯ ಅಥವಾ ಧಾರ್ಮಿಕ ಕ್ಷೇತ್ರದಲ್ಲಿ ಸೀಮಿತವಲ್ಲ. ಅದು ಗುರು-ಶಿಷ್ಯರ ನಂಟಾಗಿದೆ. ಹಿರಿಯರ ಅನುಭವ, ತತ್ವ, ಶಿಸ್ತಿನ ಮೇಲೆ ಯುವಕರ ಶ್ರಮ, ಉತ್ಸಾಹ ಮತ್ತು ಕಾರ್ಯಪಟುತ್ವ ಬೆರೆತು ಬಂದಾಗ ಏನಾಗಬಹುದು ಎಂಬುದಕ್ಕೆ ಇವರಿಬ್ಬರ ಜೊತೆಯೇ ಸಾಕ್ಷಿ. ಜನಾರ್ದನ ಪೂಜಾರಿಯವರ ಶಾಂತ ಚಿಂತನೆ ಮತ್ತು ತಾಳ್ಮೆಯೊಂದಿಗೆ ಪದ್ಮರಾಜ್ ಅವರ ಶ್ರಮ, ಚಟುವಟಿಕೆ, ಸಂಘಟನಾ ಕೌಶಲ್ಯ ಬೆರೆತು, ಕುದ್ರೋಳಿ ದಸರಾವನ್ನು ನೂತನ ದಿಕ್ಕುಗಳಿಗೆ ಕೊಂಡೊಯ್ಯುತ್ತಿದೆ.
ಕುದ್ರೋಳಿ ದಸರಾ ಈಗ ಮೈಸೂರಿನ ದಸರಾ ನಂತರ ರಾಜ್ಯದ ಪ್ರಮುಖ ಉತ್ಸವವಾಗಿ ಹೊರಹೊಮ್ಮಿದೆ. ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೀಪಾಲಂಕಾರ, ಜನಸಮೂಹದ ಭಕ್ತಿ ಇವೆಲ್ಲದರ ನಡುವೆ ಶಿಸ್ತು, ನಿರ್ವಹಣೆ ಮತ್ತು ಜನಸಂಪರ್ಕ ಅತ್ಯಂತ ಮುಖ್ಯ. ಈ ಜವಾಬ್ದಾರಿಯನ್ನು ತಲೆಮಾರುಗಳಿಂದ ಸಾಗಿಸುವ ಪರಂಪರೆಯಲ್ಲಿ, ಜನಾರ್ದನ ಪೂಜಾರಿ ಅವರು ಬುನಾದಿ ಹಾಕಿದ್ದರೆ, ಅದನ್ನು ಪೋಷಿಸಿ ವಿಸ್ತರಿಸುತ್ತಿರುವುದು ಪದ್ಮರಾಜ್ ಪೂಜಾರಿ.
ದೇವರ ಮುಂದೆ ತಲೆಬಾಗಿ ಬರುವ ಜನಸಮುದಾಯದ ಅಲೆಗಳಲ್ಲಿ ಹರಿಯುತ್ತಿರುವ ಶ್ರದ್ಧೆಯೇ ಅತಿ ದೊಡ್ಡ ಶಕ್ತಿ. ಆ ಶಕ್ತಿಯನ್ನು ಸಂಯೋಜಿಸಿ, ನಿರ್ವಹಿಸಿ, ವೈಭವಕ್ಕೆ ತಂದು ನಿಲ್ಲಿಸುವ ಕೈಗಳು ಸನ್ಮಾನ್ಯ ಮಾಜಿ ವಿತ್ತ ಸಚಿವರು ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಮತ್ತು ಅವರ ಜೊತೆಗೆ ಮಗನಂತೆ ನಿಂತು ಶ್ರಮಿಸುವ ಪದ್ಮರಾಜ್ ಪೂಜಾರಿಯವರು.
ದಸರಾ ಹಬ್ಬವನ್ನು ಯಶಸ್ವಿಯಾಗಿ ನಡೆಸಲು ಬೇಕಾಗುವ ಹಣಕಾಸು, ಭದ್ರತಾ ವ್ಯವಸ್ಥೆ, ಜನಸಂಪರ್ಕ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜನೆ ಇವೆಲ್ಲವೂ ನಿಜಕ್ಕೂ ದೊಡ್ಡ ಸವಾಲು. ಆದರೆ ಇವರಿಬ್ಬರ ಸಹಕಾರದಿಂದಲೇ ಈ ಸವಾಲುಗಳು ಅವಕಾಶಗಳಾಗಿ ಮಾರ್ಪಟ್ಟಿವೆ. ಹಿರಿಯರ ಅನುಭವದ ಜೊತೆಗೆ ಯುವಕರ ಶಕ್ತಿ ಬೆರೆತಾಗ ದಸರಾ ಇನ್ನಷ್ಟು ವೈಭವದಿಂದ ಕಂಗೊಳಿಸುತ್ತಿದೆ.
ಈ ಹಬ್ಬದ ಹೃದಯದಲ್ಲಿ ಬಿ. ಜನಾರ್ದನ ಪೂಜಾರಿಯವರ ದೃಷ್ಟಿಯಿದ್ದರೆ, ಅದರ ನಾಳಿಯಲ್ಲಿ ಹರಿಯುತ್ತಿರುವ ಶಕ್ತಿಯೇ ಪದ್ಮರಾಜ್ ಪೂಜಾರಿ. ಇವರು ಇಬ್ಬರು ಸೇರಿ ದಸರಾ ಹಬ್ಬವನ್ನು ಕೇವಲ ಉತ್ಸವವಲ್ಲ, ಜನಸಮುದಾಯದ ಏಕತೆ, ಭಕ್ತಿ ಮತ್ತು ಸಂಸ್ಕೃತಿಯ ಜಾತ್ರೆಯನ್ನಾಗಿ ಮಾಡಿದ್ದಾರೆ.
ಗುರು-ಶಿಷ್ಯರ ಈ ನಂಟು, ಮಳೆಯ ನಂತರ ಬೆಳೆಯುವ ನವಸಸ್ಯದಂತೆ. ಜನಾರ್ದನ ಪೂಜಾರಿಯವರ ಅನುಭವವೇ ಬೇರು, ಪದ್ಮರಾಜ್ ಅವರ ಶ್ರಮವೇ ಎಲೆ, ಜನಮನಗಳ ಪ್ರೀತಿಯೇ ಹೂವು, ಕುದ್ರೋಳಿ ದಸರಾವೇ ಫಲ. ಹೀಗಾಗಿ ಈ ಇಬ್ಬರ ಬಾಂಧವ್ಯವು ಹಬ್ಬದ ಉತ್ಸವಕ್ಕೆ ಜೀವ ತುಂಬಿದೆ.
ಇಂದಿನ ದಿನಗಳಲ್ಲಿ ದಸರಾ ಕೇವಲ ಭಕ್ತಿಯ ಹಬ್ಬವಾಗಿಲ್ಲ, ಅದು ಸಮಾಜದ ಏಕತೆಯ ಸಂದೇಶ. ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲರೂ ಸೇರಿ ಬೆಳಕಿನ ಹಬ್ಬವನ್ನು ಹಂಚಿಕೊಳ್ಳುವ ಕ್ಷಣವೇ ಕುದ್ರೋಳಿ ದಸರಾದ ವಿಶೇಷತೆ. ಇಲ್ಲಿ ಜನರ ಹೃದಯಗಳನ್ನು ಸೇರ್ಪಡೆ ಮಾಡುತ್ತಿರುವ ಸೇತುವಯೇ ಜನಾರ್ದನ ಪೂಜಾರಿಯವರು ಕಟ್ಟಿದ ಕನಸು. ಅದನ್ನು ಸಾಗಿಸುತ್ತಿರುವ ದಾರಿ ಪದ್ಮರಾಜ್ ಪೂಜಾರಿಯವರ ಶ್ರಮ.
ಕುದ್ರೋಳಿ ದಸರಾ ಪ್ರತಿವರ್ಷವೂ ಮೆರೆಯುತ್ತದೆ, ಬೆಳಗುತ್ತದೆ, ಜೀವಂತವಾಗುತ್ತದೆ. ಆದರೆ ಅದರ ನಿಜವಾದ ವೈಭವ ಜನಾರ್ದನ ಪೂಜಾರಿಯವರ ಕನಸಿನಲ್ಲಿ, ಪದ್ಮರಾಜ್ ಪೂಜಾರಿಯವರ ಹೃದಯದಲ್ಲಿ, ಹಾಗೂ ಜನಸಮುದಾಯದ ಪ್ರೀತಿಯಲ್ಲಿ ಅಡಗಿದೆ. ಹೀಗಾಗಿ, ಈ ಹಬ್ಬದ ಪ್ರತಿಯೊಂದು ದೀಪವೂ ಹೇಳುತ್ತದೆ “ಗುರು” ವಿನ ದಾರಿದೀಪದ ಬೆನ್ನಲ್ಲೇ ಬೆಳಗುತ್ತಿರುವುದು,ಜನಾರ್ದನ ಪೂಜಾರಿ ಅವರ ಬೆಳದಿಂಗಳು.” ಎಂದು.
🖊️ಚೈತ್ರ ಕಬ್ಬಿನಾಲೆ