25/09/2025
ಕುಂಚಿಟಿಗರೆ ಬೇರೆ ಜಾತಿ ಬರೆಸಿ ಗಂಡಾಂತರಕ್ಕೆ ಸಿಲುಕಬೇಡಿ -ಎಸ್ ವಿ ರಂಗನಾಥ್.
------------------------------------------------------
ಹಿರಿಯೂರು :ಕರ್ನಾಟಕ ರಾಜ್ಯದ ಬಯಲು ಸೀಮೆ,ಮಲೆನಾಡು,ಕರಾವಳಿ,ಕಲ್ಯಾಣ ಕರ್ನಾಟಕ,ಹಳೆ ಮೈಸೂರು ಪ್ರಾಂತ್ಯ ಸೇರಿದಂತೆ 19 ಜಿಲ್ಲೆ 47 ತಾಲ್ಲೋಕುಗಳಲ್ಲಿ 27 ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿರುವ ಸಮಸ್ಥ ಕುಂಚಿಟಿಗರು ಒಗ್ಗಟ್ಟು ಪ್ರದರ್ಶನ ಮಾಡಿ ಇದೇ ಸೆಪ್ಟೆಂಬರ್ 22 ರಿಂದ ಪ್ರಾರಂಭ ಆಗಿರುವ ಜಾತಿ ಗಣತಿಯಲ್ಲಿ "ಕುಂಚಿಟಿಗ "ಎಂದು ಬರೆಯಿಸಬೇಕೆಂದು ಕುಂಚಿಟಿಗ ಹೋರಾಟಗಾರ ಎಸ್ ವಿ ರಂಗನಾಥ್ ಮನವಿ ಮಾಡಿದ್ದಾರೆ.
1928 ರಲ್ಲಿ ಮೈಸೂರು ಸರ್ಕಾರ ಹೊರಡಿಸಿದ ಆದೇಶ,ರಾಜ್ಯ ಸರ್ಕಾರ ನಡೆಸಿದ ಕುಲಶಾಸ್ತ್ರೀಯ ಅಧ್ಯಯನ ವರದಿ ಹಾಗೂ ವಿವಿಧ ತಾಲ್ಲೋಕಿನ ತಹಶೀಲ್ದಾರರಿಂದ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಪ್ರಕಾರ ಕುಂಚಿಟಿಗ ಯಾವುದೇ ಜಾತಿಯ ಉಪಜಾತಿ ಅಲ್ಲ.ಆದ್ದರಿಂದ ಜಾತಿ ಕಾಲಂ ನಲ್ಲಿ ಕುಂಚಿಟಿಗ ಹಾಗೂ ಉಪಜಾತಿ ಕಾಲಂನಲ್ಲಿ ಕುಂಚವಕ್ಕಲ್,ನಾಮಧಾರಿ ಕುಂಚಿಟಿಗ, ಕುಂಚಿಟಿಗ ಲಿಂಗಾಯಿತ,ರೆಡ್ಡಿ ಕುಂಚಿಟಿಗ,ಕುಂಚಿಟಿಗ ಒಕ್ಕಲಿಗ ಇತ್ಯಾದಿಯಾಗಿ ಬರೆಯಿಸಲು ಸರ್ಕಾರಿ ದಾಖಲೆಗಳ ಸಹಿತ ಮನವಿ ಮಾಡಿದ್ದಾರೆ.
ಕುಂಚಿಟಿಗ ಜಾತಿಗೆ ಕೇಂದ್ರ ಸರ್ಕಾರದ ಓ.ಬಿ. ಸಿ.ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಈಗಾಗಲೆ ಶಿಫಾರಸ್ಸು ಮಾಡಿರುವುದರಿಂದ ಎಲ್ಲರು ಕುಂಚಿಟಿಗ ಎಂದು ಬರೆಯಿಸಿದರೆ ಮುಂದೆ ಕೇಂದ್ರ ಸರ್ಕಾರದ ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ ಹಾಗೂ ಕುಂಚಿಟಿಗ ಕುಲ ಶಾಸ್ತ್ರೀಯ ಅಧ್ಯಯನ ವರದಿ ಶಿಫಾರಸ್ಸು ಪ್ರಕಾರ ರಾಜ್ಯ ಸರ್ಕಾರದಲ್ಲಿ ಪ್ರವರ್ಗ 1 ರಲ್ಲಿ ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ ಎಂದು ಎಸ್.ವಿ.ರಂಗನಾಥ್ ತಿಳಿಸಿದ್ದಾರೆ.